ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು
ಊರಿನಲ್ಲಿ ತೀವ್ರ ಸಂಕಷ್ಟಕ್ಕೆ ಈಡಾಗಿದ್ದ ಮಕ್ಕಳು, ಹಿರಿಯರು
Team Udayavani, May 5, 2024, 11:50 PM IST
ಕೊಳ್ಳೇಗಾಲ: ಮತಗಟ್ಟೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗುವ ಭೀತಿಯಿಂದ ಕಾಡಿನಲ್ಲಿ ಅವಿತಿದ್ದ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮಸ್ಥರಿಗೆ ಅಧಿಕಾರಿಗಳು ಧೈರ್ಯ ತುಂಬಿ ರವಿವಾರ ಊರಿಗೆ ಕರೆ ತಂದರು.
ಎ.26ರ ಮತದಾನ ದಿನದಂದು ಇಂಡಿಗನತ್ತ ಗ್ರಾಮಸ್ಥರು ಮೂಲ ಸೌಕರ್ಯಕ್ಕೆ ಆಗ್ರಹಿಸಿ ಮತಗಟ್ಟೆ ಧ್ವಂಸ ಮಾಡಿ, ಚುನಾವಣ ಸಿಬಂದಿ ಹಾಗೂ ಮತ ಚಲಾಯಿಸಲು ಬಂದಿದ್ದ ಮೆಂದಾರೆ ಗ್ರಾಮದ ಜನರ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಬಂಧನ ಭೀತಿಯಿಂದ ಚಿಕ್ಕಮಕ್ಕಳು, ವಯಸ್ಸಾದವರನ್ನು ಹೊರತುಪಡಿಸಿ ಉಳಿದವರು ಕಾಡಿನಲ್ಲಿ ಅವಿತಿದ್ದರು.
ಗ್ರಾಮದಲ್ಲಿ ಚಿಕ್ಕಮಕ್ಕಳು ಹಾಗೂ ಹಿರಿಯರು ಮತ್ತು ಜಾನುವಾರುಗಳನ್ನು ಆರೈಕೆ ಮಾಡು ವವರೇ ಇಲ್ಲದಂತಾಗಿ ಶೂನ್ಯ ಭಾವ ಆವರಿಸಿತ್ತು. ಇದನ್ನು ಮನಗಂಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಗ್ರಾಮಸ್ಥರನ್ನು ಮರಳಿ ಊರಿಗೆ ಕರೆತರಲು ಮನವೊಲಿಸುವಂತೆ ಕಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಉಪ ವಿಭಾಗಾಧಿಕಾರಿ ಶಿವಮೂರ್ತಿ ಹಾಗೂ ಡಿವೈಎಸ್ಪಿ ಧರ್ಮೇಂದ್ರ ಮತ್ತು ಇತರ ಪೊಲೀಸ್ ಅಧಿಕಾರಿಗಳು, ಗ್ರಾಮಸ್ಥರನ್ನು ಊರಿಗೆ ಕರೆತಂದು ಶಾಂತಿಸಭೆ ನಡೆಸಿದರು.