ಎರಡು ಹೆದ್ದಾರಿಗಳಲ್ಲಿ ಸಾಲು ಸಾಲು ಅವಾಂತರ
Team Udayavani, Jul 1, 2018, 10:10 AM IST
ವಿಟ್ಲ : ಮಾಣಿ-ಮೈಸೂರು ಹೆದ್ದಾರಿ ಮತ್ತು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಸ್ಯೆಗಳ ಸರಮಾಲೆ ಉದ್ಭವಿಸುತ್ತಿವೆ. ಮಂಗಳೂರು – ಬೆಂಗಳೂರು
ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿಸುವ ತರಾತುರಿಯಲ್ಲಿ ಸಾಲು ಸಾಲು ಅವಾಂತರಗಳಾಗುತ್ತಿವೆ.
ಮಾಣಿ-ಮೈಸೂರು ಹೆದ್ದಾರಿ
ಮಾಣಿ-ಮೈಸೂರು ಹೆದ್ದಾರಿ ಕಾಮಗಾರಿ ಕೆಲವೊಂದು ಕಡೆ ಅವೈಜ್ಞಾನಿಕವಾಗಿಯೇ ಇದೆ. ಕೊಡಾಜೆಯ ತಿರುವಿನಲ್ಲಿ ಅನೇಕ ಬಾರಿ ಅಪಘಾತಗಳು ಸಂಭವಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲಿ ಈಗಾಗಲೇ ನಾಲ್ಕಾರು ಬಸ್ ಅಪಘಾತಗಳು ಸಂಭವಿಸಿವೆ. ಅದನ್ನು ಸರಿಪಡಿಸದೇ ಇದ್ದರೆ ಭೀಕರ ದುರಂತ ಸಂಭವಿಸುವ ಸಾಧ್ಯತೆಯಿದೆ. ಚರಂಡಿ ಕಾಮಗಾರಿ ಕಳಪೆಯಾಗಿದ್ದು, ಹಲವು ಕಡೆಗಳಲ್ಲಿ ಚರಂಡಿಗಳು ಮುಚ್ಚಿ ಹೋಗಿವೆ. ಕೆಲವು ಕಡೆಗಳಲ್ಲಿ ಕಾಮಗಾರಿಯನ್ನು ಅರ್ಧಕ್ಕೇ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಜನಸಾಮಾನ್ಯರು ದೂರುತ್ತಿದ್ದಾರೆ.
ಕಾಮಗಾರಿ ಪೂರ್ತಿಯಾದ ಬಳಿಕ ನಿರ್ವಹಣೆಯನ್ನು ನಡೆಸದೇ ಇದ್ದುದರಿಂದ ಡಾಮರು ಹಲವು ಕಡೆಯಲ್ಲಿ ಕಿತ್ತುಹೋಗಿದೆ. ಬೃಹತ್ ಹೊಂಡಗಳು ನಿರ್ಮಾಣವಾಗಿವೆ. ಮಳೆ ನೀರು ರಸ್ತೆಯ ಹೊಂಡದಲ್ಲಿ ತುಂಬಿಕೊಂಡಿರುವುದರಿಂದ ವಾಹನ ಸವಾರರ ಗಮನಕ್ಕೆ ಬರುವುದೇ ಇಲ್ಲ. ಹೊಂಡಕ್ಕಿಳಿದ ಮೇಲೆ ಚಾಲಕರನ್ನು ಧೃತಿಗೆಡಿಸುತ್ತದೆ. ಶಿರಾಡಿ ಘಾಟಿ ಮುಚ್ಚಿರುವುದರಿಂದ ಮಾಣಿ ಮೈಸೂರು ರಸ್ತೆಯನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಹೊರ ಜಿಲ್ಲೆ, ಹೊರ ರಾಜ್ಯದ ಪ್ರವಾಸಿಗರು ಇದೇ ರಸ್ತೆಯನ್ನು ಹೆಚ್ಚಾಗಿ ಬಳಸುತ್ತಿದ್ದು, ನಿತ್ಯ ಅಪಘಾತಗಳು ನಡೆಯುತ್ತಿವೆ.
ಭೀಕರ ಅಪಘಾತವಾಗಿತ್ತು
ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಹೋಗುವ ರಸ್ತೆ ಬಳಿ ಬೃಹತ್ ಹೊಂಡವಿದ್ದು, ವಾಹನಗಳು ದಾರಿಯನ್ನು ಬದಲಾಯಿಸುವಂತಿದೆ. ಆಗ ಎದುರಿನಿಂದ ವೇಗವಾಗಿ ವಾಹನ ಬಂದರೆ ಅಪಘಾತ ಖಚಿತ. ಇದೇ ಜಾಗದಲ್ಲಿ ಬಸ್ ಹಾಗೂ ಆಮ್ನಿ ಢಿಕ್ಕಿಯಾಗಿ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೆಲವು ಸಮಯ ಹಿಂದೆ ಸಂಭವಿಸಿತ್ತು. ಈ ಬಗ್ಗೆ ಇಲಾಖೆ ಗಮನಹರಿಸಿ, ತತ್ಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿತ್ಯ ಸಂಚಾರಿಗಳು ಆಗ್ರಹಿಸಿದ್ದಾರೆ.
ರಸ್ತೆ ಸ್ಥಿತಿ ಶೋಚನೀಯ
ಮಂಗಳೂರು – ಬೆಂಗಳೂರು ರಾ.ಹೆ.ಯನ್ನು ಚತುಷ್ಪಥಗೊಳಿಸುತ್ತಿರುವುದರಿಂದ ರಸ್ತೆಯ ಇಕ್ಕೆಲಗಳ ಚರಂಡಿ ಬಂದ್ ಆಗಿದೆ. ಕೆಲವು ಕಡೆಗಳಲ್ಲಿ ಪಕ್ಕದ ಕೃಷಿ ಭೂಮಿಗೆ ನೀರು ನುಗ್ಗುತ್ತಿದೆ. ಅನೇಕ ಕೃಷಿಕರ ತೋಟಗಳಲ್ಲಿ ಒಂದೆರಡು ಅಡಿ ಎತ್ತರ ನೀರು ತುಂಬಿದೆ. ಈ ರಸ್ತೆಯಲ್ಲಿರುವ ಯಾವುದೇ ಹೊಂಡಗಳು ದುರಸ್ತಿ ಕಾಣುವ ಲಕ್ಷಣಗಳಿಲ್ಲ. ರಸ್ತೆಗಳಲ್ಲೇ ನೀರು ಹರಿಯುತ್ತಿದ್ದು, ಭಾರೀ ವಾಹನಗಳ ಸಂಚಾರದಿಂದ ರಸ್ತೆ ಅಸ್ತವ್ಯಸ್ತಗೊಂಡಿದೆ. ಪಾಣೆಮಂಗಳೂರು, ಕುದ್ರೆಬೆಟ್ಟು, ಸೂರಿಕುಮೇರು, ಮಾಣಿ, ಬುಡೋಳಿವರೆಗೂ ರಸ್ತೆ ಸ್ಥಿತಿ ಶೋಚನೀಯವಾಗಿದೆ.
ನಿತ್ಯ ಸಮಸ್ಯೆ
ಕೆಆರ್ಡಿಸಿಎಲ್ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಟ್ಟು, ರಾ.ಹೆ. ಪ್ರಾಧಿಕಾರಕ್ಕೆ ಮಾಣಿ-ಮೈಸೂರು ರಸ್ತೆಯನ್ನು ಹಸ್ತಾಂತರ ಮಾಡಿದೆ. ತಡೆ ಬೇಲಿಗಳ, ಮೋರಿಗಳ ಕಾಮಗಾರಿ ಹಲವು ಕಡೆಗಳಲ್ಲಿ ಆಗಲೇ ಇಲ್ಲ. ದ್ವಿಚಕ್ರ ವಾಹನ ಸವಾರರು ನಿತ್ಯ ಸಮಸ್ಯೆಗೆ ಈಡಾಗುತ್ತಿದ್ದು, ಸೂಕ್ತ ಪರಿಹಾರಕ್ಕಾಗಿ ನ್ಯಾಯಾಲಯಕ್ಕೆ ಮೊರೆ ಅನಿವಾರ್ಯತೆ ಇದೆ.
- ಸಂಜೀವ, ಕಬಕ
ಉದಯಶಂಕರ್ ನೀರ್ಪಾಜೆ