ಬದಿಯಡ್ಕ: ಗುಡ್ಡ ಕುಸಿತದ ಭೀತಿ ; ಸಂಚಾರ ನಿಷೇಧ
ಪ್ರಮುಖ ಸಂಪರ್ಕ ರಸ್ತೆಗೆ ಕುಸಿಯುತ್ತಿರುವ ಗುಡ್ಡದ ಮಣ್ಣು
Team Udayavani, Jul 24, 2019, 1:54 PM IST
ಬದಿಯಡ್ಕ: ಕಾಸರಗೋಡು ಜಿಲ್ಲೆಯ ಬದಿಯಡ್ಕ ಕರಿಂಬಿಲ ಬಳಿ ಅಂತರ್ ರಾಜ್ಯ ರಸ್ತೆ ಇದೀಗ ಕುಸಿಯುವ ಭೀತಿಯಲ್ಲಿದೆ. ಈ ರಸ್ತೆಯು ಸಾಧಾರಣ ಎರಡು ಅಡಿಯಷ್ಟು ಕುಸಿದಿದ್ದು ಅಲ್ಲಲ್ಲಿ ಬಿರುಕು ಬಿಟ್ಟಿದೆ.
ಇದರ ಒಂದು ಬದಿಯಲ್ಲಿರುವ ಮಣ್ಣಿನ ಗುಡ್ಡವು ಜರಿದು ಬೀಳುತ್ತಿದ್ದು ಯಾವುದೇ ಕ್ಷಣದಲ್ಲಿ ಸಂಪೂರ್ಣವಾಗಿ ಕುಸಿದು ಬೀಳುವ ಭೀತಿ ಎದುರಾಗಿದೆ. ಒಂದುವೇಳೆ ಈ ಗುಡ್ಡ ಕುಸಿದಲ್ಲಿ ರಸ್ತೆಯು ಸಂಪೂರ್ಣ ಕುಸಿದು ಹೋಗಲಿದೆ. ಇದೀಗ ಮುಂಜಾಗರುಕತಾ ಕ್ರಮವಾಗಿ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿಯಿತ್ತು ಈ ರಸ್ತೆಯಲ್ಲಿ ಎಲ್ಲಾ ವಿಧದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.
ಬದಲೀ ಮಾರ್ಗವಾಗಿ ಈ ರಸ್ತೆಯ ಮೂಲಕ ಹಾದುಹೋಗುವ ವಾಹನಗಳನ್ನು ಕನ್ಯಪಾಡಿ –ಯೇಳ್ಕಾನ – ಬಣ್ಪುತ್ತಡ್ಕ- ಉಕ್ಕಿನಡ್ಕ ರಸ್ತೆಯ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.
ಉಕ್ಕಿನಡ್ಕದಿಂದ ಕರಿಂಬಿಲವರೆಗೂ ಸಂಚಾರ ನಿಷೇಧಿಸಿರುವುದರಿಂದ ಈ ಭಾಗದ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಜನರು ಕಿಲೋಮೀಟರುಗಳಷ್ಟು ನಡೆದು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.