5ಜಿ ಯುಗದಲ್ಲೂ ಫೈವ್ಸ್ಟಾರ್ ವಿವೇಕಾನಂದರು
Team Udayavani, Jan 9, 2018, 1:18 PM IST
ಒಂದು ದೇಶದ ಅತಿದೊಡ್ಡ ಸಂಪತ್ತು, ಅಲ್ಲಿನ ಯುವಶಕ್ತಿ. ಆ ಶಕ್ತಿಯ ಮೇಲೆ ಅಪಾರ ನಂಬಿಕೆ ಇಟ್ಟವರು ಸ್ವಾಮಿ ವಿವೇಕಾನಂದರು. ದೇಶ ಬದಲಾಗಬೇಕಾದ್ರೆ, ಯುವಕರು ಸದೃಢರಾಗಿರಬೇಕು ಅಂತ ಸ್ವಾಮೀಜಿ ನಂಬಿದ್ದರು. ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಮಂಡಲ, ಸಿಡಿಲಿನಂಥ ಮನಸ್ಸು- ಇವು ಯುವಕರಲ್ಲಿ ಇರಬೇಕಾದ ಮೂರು ಮುಖ್ಯ ಗುಣಗಳು ಎಂದಿದ್ದರು. ಜ.12ರಂದು ಸ್ವಾಮಿ ವಿವೇಕಾನಂದರ 155ನೇ ಜನ್ಮದಿನ. ಅಂದು ರಾಷ್ಟ್ರೀಯ ಯುವ ದಿನಾಚರಣೆಯೂ ಹೌದು. ಆ ನಿಮಿತ್ತ, ವಿವೇಕಾನಂದರು ಹೇಳಿದ ಈ ಮಾತುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಆಚರಣೆ ಅರ್ಥಪೂರ್ಣ…
1. “ನಿಮ್ಮಲ್ಲಿ ನಿಮಗೆ ನಂಬಿಕೆ ಹುಟ್ಟುವವರೆಗೆ, ದೇವರಲ್ಲಿ ನಂಬಿಕೆ ಹುಟ್ಟುವುದಿಲ್ಲ’.
ನಾವೆಲ್ಲರೂ ದೇವರನ್ನು ನಂಬುತ್ತೇವೆ, ಕಷ್ಟಗಳು ಬಂದಾಗ “ಕಾಪಾಡಪ್ಪ ತಂದೆ’ ಎಂದು ಪ್ರಾರ್ಥಿಸುತ್ತೇವೆ. ಆದರೆ, ದೇವರ ಮೇಲಿರುವ ನಂಬಿಕೆ, ಕೆಲವೊಮ್ಮೆ ನಮ್ಮ ಮೇಲೆ ನಮಗೆ ಮೂಡುವುದಿಲ್ಲ. ಸ್ವಸಾಮರ್ಥ್ಯದಲ್ಲಿ ನಂಬಿಕೆ ಇಲ್ಲದಿದ್ದರೆ, ಯಾರನ್ನು ನಂಬಿಯೂ ಪ್ರಯೋಜನವಿಲ್ಲ ಅಲ್ಲವೆ?
2. “ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’
ಹೊಸ ವರ್ಷ ಬಂದು ವಾರವಾಯ್ತು. ಬೇಗ ಏಳಬೇಕು, ಅವತ್ತಿನ ಕೆಲಸ ಅವತ್ತೇ ಮಾಡಿ ಮುಗಿಸಬೇಕು, ಈ ವರ್ಷ ಇಷ್ಟು ಪುಸ್ತಕ ಓದೆºàಕು… ಅಂತೆಲ್ಲಾ ನಾವು ಮಾಡಿಕೊಂಡ ಸಂಕಲ್ಪಗಳ ಕಥೆ ಏನಾಯ್ತು? ಬದುಕಿನ ಈ ಪುಟ್ಟ ಪುಟ್ಟ ಗುರಿಗಳನ್ನು ಸಾಧಿಸೋಕೆ ಈ ವಾರ ಮೊದಲ ಹೆಜ್ಜೆ ಇಟ್ಟಿದ್ದೇವಾ? ಇಲ್ಲವಾದರೆ, ವಿವೇಕಾನಂದರ ಈ ಮಾತುಗಳನ್ನು ದಿನಾ ಬೆಳಗ್ಗೆ ಗುನುಗಿಕೊಳ್ಳೋಣ.
3. “ಹೃದಯ ಮತ್ತು ಮೆದುಳಿನ ಸಂಘರ್ಷದಲ್ಲಿ, ಹೃದಯದ ಮಾತನ್ನು ಕೇಳಿ’
ಯಾವುದೋ ಒಂದು ಕೆಲಸಕ್ಕೆ ಕೈ ಹಾಕಬೇಕು. ಹೃದಯ ಹೇಳುತ್ತೆ, “ಏನಾದ್ರೂ ಆಗ್ಲಿ, ಅಂದುಕೊಂಡಿದ್ದನ್ನ ಮಾಡಿಬಿಡು’. ಆಗ ಮೆದುಳು “ಬೇಡ ಬೇಡ’ ಅಂತ ತಡೆ ಹಿಡಿಯುತ್ತೆ. ಹೀಗೆ ಬುದ್ಧಿ-ಹೃದಯ ಎರಡೂ ತದ್ವಿರುದ್ಧ ದಿಕ್ಕಿನಲ್ಲಿ, ತಾಳಮೇಳವಿಲ್ಲದೆ ಚಲಿಸುವಾಗ ಹೃದಯದ ಮಾತನ್ನು ಕೇಳಬೇಕು.
4. “ಕೇಳಬೇಡ, ನಿರಾಕರಿಸಲೂ ಬೇಡ, ಏನು ಬರುತ್ತದೋ ಅದನ್ನು ಸ್ವೀಕರಿಸು’
ಬದುಕಿನಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ. ನಾವು ಏನೋ ಬಯಸುತ್ತೇವೆ, ಅದು ಇನ್ನೇನೋ ಆಗಿಬಿಡುತ್ತೆ. ಬಂದದ್ದನ್ನು, ಬಂದ ಹಾಗೆಯೇ ಸ್ವೀಕರಿಸುವ ಮನಸ್ಥಿತಿಯನ್ನು ಚೂರಾದರೂ ಅಳವಡಿಸಿಕೊಳ್ಳೋಣ. ಆಗ ಹತಾಶೆ- ನಿರಾಶೆಗಳು ಸ್ವಲ್ಪ ಕಡಿಮೆಯಾಗಬಹುದು.
5. “ನಮ್ಮನ್ನು ಬೆಚ್ಚಗಿರಿಸುವ ಬೆಂಕಿ ನಮ್ಮನ್ನು ಸುಡಲೂಬಹುದು. ಅದು ಬೆಂಕಿಯ ತಪ್ಪಲ್ಲ’
ಬೆಂಕಿ ಬೆಚ್ಚಗಾಗಿಸುತ್ತೆ ಅಂತ ಜಾಸ್ತಿ ಹತ್ತಿರ ಹೋದರೆ, ಮೈ ಸುಟ್ಟು ಹೋಗುತ್ತದೆ. ವಸ್ತು, ವ್ಯಕ್ತಿ, ತಂತ್ರಜ್ಞಾನ ಯಾವುದೇ ಆಗಲಿ, ಹೇಗೆ, ಎಷ್ಟರ ಮಟ್ಟಿಗೆ ಉಪಯೋಗಿಸಬೇಕೋ, ಅಷ್ಟೇ ಉಪಯೋಗಿಸಿದರೆ ಒಳ್ಳೆಯದು. ಅಮೃತವೂ ಅತಿಯಾದರೆ, ವಿಷವಾಗಿ ಬಿಡುತ್ತದೆ.
6. “ಒಮ್ಮೆ ಒಂದು ಕೆಲಸವನ್ನು ಮಾತ್ರ ಮಾಡು. ಮನಸ್ಸನ್ನು ಸಂಪೂರ್ಣವಾಗಿ ಅದರಲ್ಲಿ ಕೇಂದ್ರೀಕರಿಸು’
ಎರಡು ದೋಣಿ ಮೇಲೆ ಕಾಲಿಟ್ಟು ಮುಳುಗುವುದಕ್ಕಿಂತ, ನೀಟಾಗಿ ಒಂದು ದೋಣಿಯಲ್ಲಿ ಹೋಗಬಹುದಲ್ವಾ? ಯಾವುದೇ ಕೆಲಸವನ್ನು ಮಾಡಿದರೂ ಏಕಾಗ್ರತೆ ಮತ್ತು ಶ್ರದ್ಧೆಯಿಂದ ಮಾಡಿದರೆ, ಫಲಿತಾಂಶ ಅಂದುಕೊಂಡಂತೆ ಬರುತ್ತದೆ. ಒಂದೇ ಬಾರಿಗೆ ಎರಡು ಕೆಲಸ ಮಾಡೋಕೆ ಆಗದಿದ್ದರೂ ಪರವಾಗಿಲ್ಲ, ಮಾಡುವ ಒಂದು ಕೆಲಸವನ್ನೇ ನೂರರ ಶ್ರದ್ಧೆಯಿಟ್ಟು ಮಾಡೋಣ.
7. “ಯಾರನ್ನೂ ಕಾಯಬೇಡಿ. ನಿಮ್ಮ ಕೈಯಲ್ಲಿ ಏನು ಸಾಧ್ಯವೋ, ಅದನ್ನು ಮಾಡಿ’
ಯಾವುದೋ ಕೆಲಸ ಮಾಡಬೇಕಿರುತ್ತದೆ. ಅವರು ಸಹಾಯ ಮಾಡಲಿ, ಇವರು ಜೊತೆಗೆ ಬರಲಿ ಅಂತ ಕಾಯುತ್ತೇವೆ. ಆಗ ಒಂದು ವಾರದಲ್ಲಿ ಆಗುವ ಕೆಲಸಕ್ಕೆ ಒಂದು ತಿಂಗಳು ಬೇಕಾಗುತ್ತದೆ. ಆಮೇಲೆ ಅನ್ನಿಸುತ್ತೆ, ಅಯ್ಯೋ, ನಾವೇ ಮಾಡಿ ಮುಗಿಸಬಹುದಿತ್ತು ಅಂತ. ಕೆಲವೊಮ್ಮೆ ಯಾರಿಂದ ಸಹಾಯ ನಿರೀಕ್ಷಿಸಿರುತ್ತೇವೋ ಅವರು ಕೈ ಜೋಡಿಸುವುದೇ ಇಲ್ಲ. ಅದರ ಬದಲು, ನಮ್ಮ ಕೈಯಲ್ಲಿ ಏನು ಸಾಧ್ಯವೋ, ಅದನ್ನು ಮೊದಲು ಮಾಡೋಣ. ಬೇರೆಯವರಿಂದ ನಿರೀಕ್ಷಿಸುವುದನ್ನು ಕಡಿಮೆ ಮಾಡೋಣ.
8. “ದಿನಕ್ಕೆ ಒಮ್ಮೆಯಾದರೂ, ನಿನ್ನೊಂದಿಗೆ ನೀನು ಮಾತನಾಡು. ಇಲ್ಲದಿದ್ದರೆ ಜಗತ್ತಿನ ಒಬ್ಬ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶ ಕಳೆದುಕೊಳ್ತೀಯ’
ದಿನದಲ್ಲಿ ನಾವು ಎಷ್ಟೊಂದು ಮಾತಾಡುತ್ತೇವೆ, ಯಾರ್ಯಾರೊಂದಿಗೆಲ್ಲಾ ಮಾತಾಡುತ್ತೇವೆ. ಆದರೆ, ನಮ್ಮ ಜೊತೆ ನಾವು ಮಾತಾಡುತ್ತೇವೆಯಾ, ನಮಗಾಗಿ ಸಮಯ ಮೀಸಲಿಡುತ್ತೇವೆಯಾ ಅನ್ನೋದು ಬಹಳ ಮುಖ್ಯ. ಇಲ್ಲದಿದ್ದರೆ, ವಿವೇಕಾನಂದರು ಮಾತಿನಂತೆ ನಮಗೆ ನಮ್ಮ ಪರಿಚಯವೇ ಸರಿಯಾಗಿ ಆಗೋದಿಲ್ಲ. ಇನ್ಮೆàಲಾದ್ರೂ ನಮ್ಮೊಂದಿಗೆ ನಾವು ಮಾತಾಡೋಣ. ನಮಗೆ ನಾವೇ ಸ್ನೇಹಿತರಾಗೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…