ಶಾಲೆ ತಲುಪಿಸಿದ ಟ್ರಾಕ್ಟರ್ ಅಜ್ಜ
Team Udayavani, Dec 11, 2018, 11:55 AM IST
ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯ ದಿನ. ಅವತ್ತೇ ಜೋರು ಮಳೆ ಬೇರೆ. ನಿಗದಿತ ಸಮಯಕ್ಕಿಂತ ಮುನ್ನ ಬಸ್ ನಿಲ್ದಾಣದಲ್ಲಿ ಕಾದು ಕುಳಿತ್ತಿದ್ದೆವು. ಸರಿಯಾದ ಸಮಯಕ್ಕೆ ಬಸ್ಸೂ ಬರಲಿಲ್ಲ. ವಿದ್ಯಾರ್ಥಿಗಳಿಗೆ ಕೋಪ ನೆತ್ತಿಗೇರಿತ್ತು. ಕೊನೆಗೂ ಬಸ್ಸು ಬಂತಾದರೂ, ಮಾರ್ಗ ಮಧ್ಯದಲ್ಲೇ ಕೈಕೊಟ್ಟಿತು. ಭವಿಷ್ಯವೇ ಅತಂತ್ರವಾಗುವ ಭಯ ಎಲ್ಲರ ಕಂಗಳಲ್ಲೂ ಇಣುಕುತ್ತಿತ್ತು.
ಅಷ್ಟರಲ್ಲೇ, ಆಪತ್ಬಾಂಧವನೆಂಬಂತೆ ಅಜ್ಜನೊಬ್ಬ ಟ್ರ್ಯಾಕ್ಟರ್ ಬಿಟ್ಟುಕೊಂಡು ಬಂದ. ಎಲ್ಲೋ ಕೃಷಿ ಕೆಲಸಕ್ಕೆ ಹೊರಟಿದ್ದ. ನಮ್ಮ ಕಷ್ಟ ನೋಡಿ, ಅವನ ಕೆಲಸಗಳನ್ನು ಬದಿಗೊತ್ತಿ, ನಮ್ಮನ್ನೆಲ್ಲ ತನ್ನ ಅಕ್ಕಪಕ್ಕದ ಸೀಟಿನಲ್ಲಿ ತುಂಬಿಕೊಂಡು, ಮಳೆಯಲ್ಲಿ ನಾವು ನೆನೆಯದಂತೆ ನೋಡಿಕೊಂಡು, ಧೈರ್ಯ ತುಂಬಿ, ಶಾಲೆಗೆ ತಲುಪಿಸಿದ.
ಆತ ನಗುಮೊಗದೊಂದಿಗೆ ನಮ್ಮತ್ತ ಕೈಬೀಸಿ ಹೊರಟಾಗ, ಭಗವಂತನೇ ಬಂದು, ನಮ್ಮ ಕಷ್ಟ ಪಾರು ಮಾಡಿದ ಹಾಗನ್ನಿಸಿತು. ಅಂದಿನ ಪರೀಕ್ಷೆಯಲ್ಲಿ ನಾನು ಪ್ರಥಮ ದರ್ಜೆಯಲ್ಲಿ ಪಾಸಾದೆ. ಬಹುಶಃ ಅವತ್ತು ಟ್ರಾಕ್ಟರ್ ಅಜ್ಜ ಬರದಿದ್ದರೆ, ನನ್ನ ಭವಿಷ್ಯವೇ ಅತಂತ್ರವಾಗಿರುತ್ತಿತ್ತು. ಇಂದು ಕೂಡ ಮಾರ್ಗ ಮಧ್ಯದಲ್ಲಿ ಶಾಲಾ ಮಕ್ಕಳು ಕಂಡರೆ, ಅವರನ್ನು ಶಾಲೆಗೆ ತಲುಪಿಸುವ ಅಭ್ಯಾಸ ರೂಢಿಸಿಕೊಂಡಿದ್ದೇನೆ. ಇದು ಆ ಅಪರಿಚಿತ ಅಜ್ಜ ಕಲಿಸಿದ ಸಂಸ್ಕಾರ.
* ಶಾಂತರಾಜು, ಮೈಸೂರು