ತಂಬುಳಿ ಸ್ಪೆಶಲ್
Team Udayavani, Dec 13, 2017, 1:35 PM IST
ಘಮ್ಮೆನ್ನುವ ಒಗ್ಗರಣೆಗೆ ಮಜ್ಜಿಗೆ ಸುರಿದರೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿದರೆ ಸಿದ್ಧವಾಗುವುದೇ ತಂಬುಳಿ. ಬೇಸಿಗೆ, ಮಳೆ, ಚಳಿ- ಈ ಮೂರು ಕಾಲಕ್ಕೂ ಸಲ್ಲುವಂತಿರುವುದು ತಂಬುಳಿಯ ಸ್ಪೆಶಾಲಿಟಿ. ಒಗ್ಗರಣೆಯನ್ನು ಒಂದೆರಡು ಬಗೆಯಲ್ಲಲ್ಲ, ಹತ್ತು ಥರದಲ್ಲೂ ಹಾಕಬಹುದು, ಆ ಮೂಲಕ ತಂಬುಳಿಗೆ ಹಲವು ಬಗೆಯ ರುಚಿ ಪಡೆಯಬಹುದು ಎಂಬ ಪಾಕಶಾಸ್ತ್ರದ ಗುಟ್ಟು ತಿಳಿದುಬರುವುದೂ ತಂಬುಳಿ ಸ್ಪೆಶಲ್ ಮಾಡಲು ಹೊರಟಾಗಲೇ…
1. ದಾಸವಾಳದ ಹೂವಿನ ತಂಬುಳಿ
ಬೇಕಾಗುವ ಸಾಮಗ್ರಿ:
ಕೆಂಪು ಅಥವಾ ಬಿಳಿ ದಾಸವಾಳದ ಹೂವು ಹತ್ತು, ಮಜ್ಜಿಗೆ 2-3 ಕಪ್, ಇಂಗು- ಚಿಟಿಕೆ, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ 3 ಒಣಮೆಣಸಿನಕಾಯಿ, ಉದ್ದಿನ ಬೇಳೆ 1 ಚಮಚ, ತುಪ್ಪ 1 ಚಮಚ.
ಮಾಡುವ ವಿಧಾನ:
ದಾಸವಾಳದ ಹೂಗಳನ್ನು ಚಿಕ್ಕದಾಗಿ ಕತ್ತರಿಸಿ. ಮಜ್ಜಿಗೆಗೆ ಇಂಗು ಮತ್ತು ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಮಿಶ್ರಣಕ್ಕೆ ದಾಸವಾಳದ ಹೂವುಗಳನ್ನು ಹಾಕಿ. ಬೇಕಿದ್ದರೆ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಸಾಸಿವೆ, ಒಣಮೆಣಸಿನಕಾಯಿ, ಉದ್ದಿನಬೇಳೆ ಹಾಕಿ ತುಪ್ಪದಲ್ಲಿ ಒಗ್ಗರಣೆ ಕೊಡಿ.
2. ದಾಳಿಂಬೆ ಚಿಗುರೆಲೆ ತಂಬುಳಿ
ಬೇಕಾಗುವ ಸಾಮಗ್ರಿ:
ದಾಳಿಂಬೆ ಚಿಗುರೆಲೆ ಒಂದು ಹಿಡಿ, ಜೀರಿಗೆ 2 ಚಮಚ, ತುಪ್ಪ 1 ಚಮಚ, ಕಾಳು ಮೆಣಸು 10, ಮೊಸರು 2 ಕಪ್, ಉಪ್ಪು, ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಒಣಮೆಣಸಿನಕಾಯಿ, ಸಾಸಿವೆ.
ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಅರ್ಧ ಟೀ ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಅದರಲ್ಲಿ ದಾಳಿಂಬೆ ಚಿಗುರೆಲೆ ಹಾಕಿ ಹುರಿದುಕೊಳ್ಳಿ. ಹುರಿದ ಸೊಪ್ಪನ್ನು ತೆಗೆದು, ಅದೇ ಬಾಣಲೆಯಲ್ಲಿ ಅರ್ಧ ಟೀ ಚಮಚ ತುಪ್ಪ ಹಾಕಿ ಕಾಳು ಮೆಣಸು, ಜೀರಿಗೆ ಹಾಕಿ ಹುರಿದುಕೊಳ್ಳಿ. ಹುರಿದ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಆ ಮಿಶ್ರಣಕ್ಕೆ ಒಂದು ಟೀ ಚಮಚ ತುಪ್ಪ ಹಾಕಿ, ಸಾಸಿವೆ ಮತ್ತು ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ.
3. ಮೆಂತೆ ತಂಬುಳಿ
ಬೇಕಾಗುವ ಸಾಮಗ್ರಿ:
ಮೆಂತೆ 1/2 ಚಮಚ, ತುಪ್ಪ 1/2 ಚಮಚ, ತೆಂಗಿನ ತುರಿ 1/4 ಕಪ್, ಮಜ್ಜಿಗೆ 2 ಕಪ್, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ ಸಾಸಿವೆ, ಒಣ ಮೆಣಸಿನಕಾಯಿ, ಎಣ್ಣೆ ಅಥವಾ ತುಪ್ಪ 1 ಚಮಚ, ಇಂಗು ಚಿಟಿಕೆ
ಮಾಡುವ ವಿಧಾನ:
ಬಾಣಲೆಗೆ ಮೆಂತೆ ಹಾಕಿ ತುಪ್ಪದಲ್ಲಿ ಹುರಿಯಿರಿ. ಅದನ್ನು ಕಾಯಿ ತುರಿಯೊಂದಿಗೆ ನುಣ್ಣಗೆ ರುಬ್ಬಿ ಮಜ್ಜಿಗೆ, ಉಪ್ಪು ಹಾಕಿ. ಅದಕ್ಕೆ ಸಾಸಿವೆ, ಇಂಗು ಒಗ್ಗರಣೆ ಹಾಕಿ.
4. ಚಿಗುರೆಲೆ ತಂಬುಳಿ
ಬೇಕಾಗುವ ಸಾಮಗ್ರಿ:
ಕಾಕಿಸೊಪ್ಪಿನ ಚಿಗುರೆಲೆ, ಮೆಣಸಿನ ಸೊಪ್ಪಿನ ಚಿಗುರೆಲೆ, ದಾಳಿಂಬೆ ಸೊಪ್ಪಿನ ಚಿಗುರೆಲೆ, ಲಿಂಬೆ ಚಿಗುರೆಲೆ, ಬ್ರಾಹ್ಮಿ ಅಥವಾ ಒಂದೆಲಗ ಸೊಪ್ಪು, ಹತ್ತಿ ಸೊಪ್ಪಿನ ಚಿಗುರೆಲೆ ಹೀಗೆ ಎಲ್ಲ ಸೇರಿಸಿ 20-30 ಎಲೆಗಳು, ತೆಂಗಿನ ತುರಿ 1/4 ಕಪ್, ಜೀರಿಗೆ 1 ಚಮಚ, ಕಾಳು ಮೆಣಸು 1 ಚಮಚ, ಮಜ್ಜಿಗೆ 2 ಕಪ್, ತುಪ್ಪ 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಸಾಸಿವೆ, ಒಣಮೆಣಸಿನ ಕಾಯಿ, ಎಣ್ಣೆ ಅಥವಾ ತುಪ್ಪ.
ಮಾಡುವ ವಿಧಾನ:
ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಅದರಲ್ಲಿ ಕಾಳುಮೆಣಸು, ಜೀರಿಗೆ ಹಾಕಿ ಹುರಿಯಿರಿ. ನಂತರ ಸೊಪ್ಪುಗಳನ್ನು ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ ಕಾಯಿತುರಿ, ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಆ ಮಿಶ್ರಣಕ್ಕೆ ಮಜ್ಜಿಗೆ ಬೆರೆಸಿ ನಂತರ ಸಾಸಿವೆ, ಒಣಮೆಣಸಿನಕಾಯಿಯ ಒಗ್ಗರಣೆ ಹಾಕಿ.
ವೇದಾವತಿ ಹೆಚ್. ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ