ಬದಲಾಗುತ್ತಿದ್ದಾಳೆ, ಭಾರತದ “ಆಂಟಿ’!


Team Udayavani, Aug 22, 2018, 6:00 AM IST

9.jpg

ಬಹಳಷ್ಟು ಹೆಣ್ಣುಮಕ್ಕಳು ತಾವು ಮೊದಲ ಬಾರಿ “ಆಂಟಿ’ ಎಂದು ಕರೆಸಿಕೊಂಡ ಘಟನೆಯನ್ನು ನೆನಪಿಟ್ಟುಕೊಂಡಿರುತ್ತಾರೆ! ಅವರಲ್ಲಿ ಹೆಚ್ಚಿನವರಿಗೆ ತುಂಬಾ ವಯಸ್ಸೂ ಆಗಿರುವುದಿಲ್ಲ ಅನ್ನೋದು ಬೇರೆ ವಿಷಯ! ಹುಡುಗರಿಗೆ ತಾವು ಅಂಕಲ್‌ ಎಂದು ಕರೆಸಿಕೊಂಡಾಗ ಆಗದಷ್ಟು ನೋವು, ಹಿಂಸೆ ಹುಡುಗಿಯರಿಗೆ ತಾವು “ಆಂಟಿ’ ಎಂದು ಕರೆಸಿಕೊಂಡಾಗ ಆಗುತ್ತೆ. ಯಾಕೆ ಹೀಗೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ?

ಮೊನ್ನೆ ಬೇಕರಿಗೆ ಬ್ರೆಡ್‌ ಖರೀದಿಸಲು ಹೋಗಿದ್ದೆ. ಅಲ್ಲಿದ್ದ ಹುಡುಗರು ಪ್ರತಿಯೊಬ್ಬರಿಗೂ ಅವರವರಿಗೆ ಬೇಕಾದ ವಸ್ತು ನೀಡುವಾಗ ಬಳಸುತ್ತಿದ್ದ ಪದ “ಮೇಡಂ’ ಅಥವಾ “ಅಕ್ಕ’. ಬೇಕರಿಯ ಮಾಲೀಕನನ್ನು ವಿಚಾರಿಸಿದೆ. “ಏನ್ರೀ ನಿಮ್ಮ ಹುಡುಗರನ್ನು ಚೆನ್ನಾಗಿ ತಯಾರು ಮಾಡಿದ್ದೀರಾ?!’. ಅದಕ್ಕೆ ಆತ ನಕ್ಕು ಹೇಳಿದ್ದು: “ನೋಡಿ ಮೇಡಂ, ಈಗ ಕಾಂಪಿಟೇಷನ್‌ ಭಾಳ. ನಮ್ಮ ಕಸ್ಟಮರ್ನ್ನು ನಾವು ಕಾಪಾಡ್ಕೊಬೇಕು ಎಂದರೆ ಅವರಿಗೆ ಬೇಕಾದ ಹಾಗೆ ನಡ್ಕೊಬೇಕು. ಈಗಿನ ಹುಡುಗಿಯರಿಗೆ- ಹೆಂಗಸರಿಗೆ “ಆಂಟಿ’ ಅಂದ್ರೆ ಆಗಲ್ಲ. ಹಿಂದೆ ಬೇಜಾರಾಗಿದ್ರೂ ಸುಮ್ಮನೆಯಾದ್ರೂ ಇರೋವ್ರು, ಆದರೆ ಈಗ ಹಾಗಲ್ಲ, ಆಂಟಿ ಅಂತ ಕರೆದ್ರೆ ಸಾಕು, ಸಿಡಾರನೆ ನಮನ್ನು ಅಂಕಲ್ಲೋ, ಅಜ್ಜಾನೋ ಅಂತ ಕರೆದುಬಿಡ್ತಾರೆ. ಒಬ್ರು ಹಾಗೆ ಮಾಡಿದ್ರೆ ಉಳಿದವ್ರಿಗೂ ಧೈರ್ಯ ಬಂದ್ಬಿಟ್ಟು ಅವರೂ ಹಾಗೇ ಬೈತಾರೆ. ನಮಗೇನು ಅವರನ್ನು “ಮೇಡಂ’, “ಅಕ್ಕ’ ಅಂತ ಕರೆಯೋಕ್ಕೆ? ಸರಿ, ನಮ್ಮ ಎಲ್ಲಾ ಹುಡುಗರಿಗೂ ತಾಕೀತು ಮಾಡ್ಬಿಟ್ಟಿದ್ದೀನಿ. ಯಾರನ್ನೂ “ಆಂಟಿ’ ಅನ್ನಕೂಡ್ದು ಅಂತ!’.

  ಭಾರತದ “ಆಂಟಿ’ ಬದಲಾಗುತ್ತಿದ್ದಾಳೆ! ನಿಧಾನವಾಗಿ “ಆಂಟಿ’ಯನ್ನು ಜನ ದೂರ ತಳ್ಳುತ್ತಿದ್ದಾರೆ! “ಆಂಟಿ’ ಪಟ್ಟ ಮಹಿಳೆಯರಿಗೆ ದೊರಕುವುದಕ್ಕೆ ಅವರಿಗೆ ವಯಸ್ಸಾಗಿರಬೇಕೆಂದೇನೂ ಇಲ್ಲ ಅಥವಾ ವಯಸ್ಸಾದಂತೆ ಕಾಣುತ್ತಿರಬೇಕು ಎಂದೂ ಇಲ್ಲ. “ಆಂಟಿ’ ಎಂಬ ಪದವನ್ನು ನಮ್ಮ ಸಮಾಜದಲ್ಲಿ ನಾಲ್ಕು ಮುಖ್ಯ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಮೊದಲನೆಯದು “ಚಿಕ್ಕಮ್ಮ’, “ದೊಡ್ಡಮ್ಮ’ನಿಗೆ ಬದಲಾಗಿ ಆಂಟಿಯ ಬಳಕೆ. ಇಲ್ಲಿ ಸಂಬಂಧದಿಂದ “ಆಂಟಿ’ ಬಲಗೊಳ್ಳುತ್ತಾಳೆ! ಎರಡನೆಯದು, ತನಗಿಂತ ವಯಸ್ಸಿನಲ್ಲಿ ಅಪರಿಚಿತ ಮಹಿಳೆ ಸಾಕಷ್ಟು ಹಿರಿಯರು ಎಂದೆನಿಸಿ “ಆಂಟಿ’ ಎಂಬ ಪದವನ್ನು ಗೌರವಸೂಚಕವಾಗಿ ಬಳಸುವುದು. ಮೂರನೆಯದು, ಕೆಲವೊಮ್ಮೆ ಅಜ್ಞಾನ/ ಇಂಗ್ಲಿಷ್‌ ಬಳಕೆಯ ವ್ಯಾಮೋಹ/ ಮತ್ತೆ ಕೆಲವೊಮ್ಮೆ ಕುಹಕ- ಇನ್ನೊಬ್ಬರನ್ನು ಪೀಡಿಸುವ ಉದ್ದೇಶದಿಂದ “ಆಂಟಿ’ ಎಂದು ಸಂಬೋಧಿಸುವುದು. ನಾಲ್ಕನೆಯದು ಒಂದು ನಿರ್ದಿಷ್ಟ ಕೆಲಸ ಮಾಡುವ, ಸಾಮಾನ್ಯವಾಗಿ ಸಹಾಯಕಿಯರನ್ನು ಆಸ್ಪತ್ರೆಗಳಲ್ಲಿ, ನರ್ಸರಿಗಳಲ್ಲಿ, ಶಾಲೆಗಳಲ್ಲಿ “ಆಯಾ’ ಎಂಬ ಹೆಸರಿನ ಬದಲಾಗಿ “ಆಂಟಿ’ ಎಂದು ಕರೆಯುವುದು!    

  ಸುಮ್ಮನೇ, ಸುತ್ತಮುತ್ತಲ ಮಹಿಳೆಯರು- ಹುಡುಗಿಯರ ಬಳಿ ಈ ಬಗ್ಗೆ ಮಾತನಾಡಿದರೆ ಹಲವು ಸ್ವಾರಸ್ಯಕರ ಪ್ರಸಂಗಗಳು ಹೊರಹೊಮ್ಮುತ್ತವೆ. ಪುರುಷರಿಗೆ, ಹುಡುಗರಿಗೆ  “ಆಂಟಿ’ ಎಂದು ಕರೆದರೆ ಈ ಹೆಣ್ಣುಮಕ್ಕಳು, ಇಷ್ಟೊಂದು ತಲೆಕೆಡಿಸಿಕೊಳ್ಳುವುದು ಏಕೆ ಎಂದು ಅಚ್ಚರಿಯೂ ಆಗುತ್ತದೆ. ಬಹಳಷ್ಟು ಹೆಣ್ಣುಮಕ್ಕಳು ತಾವು ಮೊದಲ ಬಾರಿ “ಆಂಟಿ’ ಎಂದು ಕರೆಸಿಕೊಂಡ ಘಟನೆಯನ್ನು (ಅದೂ ಹೆಚ್ಚಿನ ಬಾರಿ ಅವರಿನ್ನೂ “ಹುಡುಗಿ’ಯರಾಗಿದ್ದಾಗ!) ನೆನಪಿಟ್ಟುಕೊಂಡಿರುತ್ತಾರೆ! ಏಕೆ?! ಏಕೆಂದರೆ ಸಮಾಜ ಹುಡುಗಿಯರ “ವಯಸ್ಸಾಗುವಿಕೆ’, “ಸೌಂದರ್ಯ’, “ದೈಹಿಕ ಸೌಷ್ಟವ’ಗಳ ಬಗ್ಗೆ ತೋರುವ ಕಾಳಜಿ ಹುಡುಗರಿಗಿಂತ ಹೆಚ್ಚು. ಮಹಿಳೆಯರಲ್ಲಿಯೇ ಇರುವ ಈ ವಿಷಯಗಳ ಬಗೆಗಿನ ಕೀಳರಿಮೆ, ಎಚ್ಚರ, ಚಿಕ್ಕ ಮಕ್ಕಳು ಅರಿಯದೆ ಹುಡುಗಿಯರಿಗೆ ಆಂಟಿ, ಹುಡುಗರಿಗೆ ಅಂಕಲ್‌ ಎಂದು ಕರೆದಾಗಲೂ ಜಾಗೃತವಾಗಿಬಿಡುತ್ತದೆ. ಹುಡುಗರಿಗೆ “ಅಂಕಲ್‌’ ಅನ್ನು ತಳ್ಳಿ ಹಾಕುವುದೂ ಸುಲಭ, ಹಾಗೆಯೇ ಅವರನ್ನು “ಅಣ್ಣ’, “ಸಾರ್‌’ ಎಂದೇ ಸಂಬೋಧಿಸುವ ಸಾಧ್ಯತೆಯೇ ಹೆಚ್ಚು.

   ನಾವೇ ಸ್ವಲ್ಪ ಹಿಂತಿರುಗಿ ಗಮನಿಸಿ ನೋಡಿದರೆ, ಬಾಲ್ಯದಲ್ಲಿ ಹಿರಿಯರ ವಯಸ್ಸಿನ ಅಂದಾಜು ಸುಲಭವಲ್ಲ. ಅಥವಾ ಅಪ್ಪ- ಅಮ್ಮನ ಜೊತೆ ಒಡನಾಡುವ ಕಿರಿಯ ಸಹೋದ್ಯೋಗಿಗಳನ್ನೂ, ಅವರು ವಯಸ್ಸಿನಲ್ಲಿ ನಮಗಿಂತ ಕೆಲವೇ ವರ್ಷಗಳ ಅಂತರದಲ್ಲಿದ್ದರೂ, “ಅವರು ಅಪ್ಪ- ಅಮ್ಮನ ಫ್ರೆಂಡ್ಸ್‌’ ಎಂದು ಭಾವಿಸಿ ಅವರನ್ನು “ಅಂಕಲ್‌- ಆಂಟಿ’ ಎಂದು ಕರೆದುಬಿಡುತ್ತೇವೆ! ಇದರ ಹಿಂದೆ ದುರುದ್ದೇಶವಿರದಿದ್ದರೂ, ಕ್ರಮೇಣ ನಮ್ಮ ಅರಿವಿಗೆ ಅವರ “ಕಿರಿತನ’ ಬರುವ ವೇಳೆಗೆ ನಾವೂ “ಆಂಟಿ- ಅಂಕಲ್‌’ ಆಗಿಬಿಟ್ಟಿರುತ್ತೇವೆ! ಅದೇಕೋ “ಮಾಮ- ಅತ್ತೆ’ಗಳು, “ಅಕ್ಕ- ಅಣ್ಣ’ಗಳು, ನಮ್ಮ ಮಕ್ಕಳ ಬಾಯಿಗೆ ಸಹಜವಾಗಿ ಬರುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವು ಅಪರೂಪವಾಗಿ ಬಿಟ್ಟಿವೆ ಅಥವಾ ಅವು ರಕ್ತಸಂಬಂಧಕ್ಕೆ ಮಾತ್ರ ಸೀಮಿತವಾಗಿವೆ.

  “ನಿಮ್ಮನ್ನು ಅಪರಿಚಿತರೊಬ್ಬರು ಬಂದು, ಆಂಟಿ ಎಂದು ಕರೆದರೆ ನೀವೇನು ಮಾಡುತ್ತೀರಿ?’ ಎಂಬ ಪ್ರಶ್ನೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಹೆಚ್ಚಿನ ಹುಡುಗಿಯರು ಹೇಳಿದ್ದೇನು ಗೊತ್ತೆ? “ಕೆನ್ನೆಗೆ ಬಾರಿಸುತ್ತೇವೆ!’ ಎಂದು. ಅಂದರೆ, ಹಿಂದಿನ ತಲೆಮಾರಿನ ಮಹಿಳೆಯರು ಆಂಟಿಯನ್ನು ಒಪ್ಪಿಕೊಂಡ, ಅಥವಾ “ಅಜ್ಜಿ/ಪಾಟಿ’ ಎನಿಸಿಕೊಳ್ಳುವುದರ ಬದಲು ಆಂಟಿ ಎಷ್ಟೋ ಮೇಲು ಎಂದು ಸಮಾಧಾನ ಪಡುವ ಬದಲು, “ಆಂಟಿ’ಯನ್ನೂ ಗೌರವಸೂಚಕ ಎಂದು ಸ್ವೀಕರಿಸುವ ಬದಲು, ಇಂದಿನ ಹುಡುಗಿಯರು- ಮಹಿಳೆಯರು “ಅಕ್ಕ’ನಾಗಲು ಅಥವಾ ಹೆಸರು ಹಿಡಿದೇ ಕರೆಸಿಕೊಳ್ಳಲು ಕಾತರರಾಗಿದ್ದಾರೆ. ಇಂದಿನ ತಲೆಮಾರಿನ ಹುಡುಗರು- ಪುರುಷರೂ ಅಷ್ಟೇ, ಮಹಿಳೆಯರ ಮನಸ್ಸಿನ ಭಾವನೆಗಳಿಗೆ ಬೆಲೆ ನೀಡಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ! 

  ಸಂಬಂಧಗಳಲ್ಲಿ ಆಯಾ ಸಂಬಂಧವನ್ನು ಗುರುತಿಸಿ ಕರೆಯುವುದನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಸಂಬಂಧಗಳನ್ನು ಕಳೆದುಕೊಳ್ಳುವ ಪ್ರಥಮ ಹಂತ, ಅವುಗಳ ಹೆಸರುಗಳನ್ನು ಬಿಡುವುದು! ಪಾಶ್ಚಾತ್ಯರ ಎಷ್ಟೋ ಕ್ರಮಗಳನ್ನು ಥಟ್ಟನೆ ಗುರುತಿಸಿ, ನಮ್ಮದಾಗಿಸಿಕೊಳ್ಳುವ ನಾವು, ಅವರ ಸಂಬೋಧನಾ ಕ್ರಮದ ಬಗೆಗೆ ಖಂಡಿತ ಗಮನಿಸಬೇಕಿದೆ. ವೃತ್ತಿಪರ ಸಂಬಂಧಗಳಲ್ಲಿ ಸರ್‌ ಅಥವಾ ಮೇಡಂ ಬಳಕೆ, ಆತ್ಮೀಯತೆಯಿದ್ದಾಗ- ವಯಸ್ಸು ಕೆಲವೇ ವರ್ಷಗಳ ಅಂತರದಲ್ಲಿದ್ದಾಗ ಹೆಸರು ಹಿಡಿದು ಮಾತನಾಡಿಸುವುದು ಮತ್ತು ಆತ್ಮೀಯತೆಯಿದ್ದು, ವಯಸ್ಸಿನ ಅಂತರ ಹೆಚ್ಚಿದ್ದಾಗ “ಅಕ್ಕ-ಅಣ್ಣ’ಂದಿರ ಬಳಕೆ ಸೂಕ್ತ ಎನಿಸಬಲ್ಲದು.

  “ಆಂಟಿ’ಯ ಬಗ್ಗೆ ಇಷ್ಟೆಲ್ಲಾ ತಲೆಯಲ್ಲಿ ಹರಿದಾಡುತ್ತಿರುವಾಗಲೇ ಬೇಕರಿಯ ಹುಡುಗ “ತೊಗೊಳ್ಳಿ ಮೇಡಂ, ನಿಮ್ಮ ಐಟಂ ಎಲ್ಲಾ ಪ್ಯಾಕ್‌ ಆಗಿದೆ’ ಎಂದಿದ್ದ. ಮಗಳು ಭೂಮಿ ಆ ಹುಡುಗನಿಗೆ “ಅಂಕಲ್‌ ಅಂಕಲ್‌ ಕಾಲು ಕೆಜಿ ರಸ್ಕ್ ಕೊಡಿ’ ಎಂದಿದ್ದಳು! ತಕ್ಷಣ ನಾನು ಗದರಿಸಿ “ಅಣ್ಣ ಅಂತ ಕರಿ, ಅಂಕಲ್‌ ಅಲ್ಲ’ ಎಂದೆ. ಆ ಹುಡುಗ ನಕ್ಕು ಕಣ್ಣರಳಿಸಿದ!

ನಿಮ್ಮನ್ನು “ಆಂಟಿ’ ಅಂತ ಕರೆದಾಗ…
– “ಆಂಟಿ’ ಎಂದು ಯಾರಾದರೂ ಕರೆದಾಗ ಕೋಪಗೊಳ್ಳಬೇಕಿಲ್ಲ, ಕೆನ್ನೆಗೆ ಹೊಡೆಯಬೇಕಾಗಿಲ್ಲ, ನಿಜ! ಆದರೆ ಅವರನ್ನು ತಿದ್ದಬೇಕು.

ಕುಹಕ- ವ್ಯಂಗ್ಯಗಳಿಂದ “ಆಂಟಿ’ ಎಂದು ಕರೆದಾಗ ನಾವೇ ಮುಜುಗರದಿಂದ ಸುಮ್ಮನಿರಬೇಕಾಗಿಲ್ಲ. ಬದಲಾಗಿ ನೇರವಾಗಿ “ಹಾಗೆ ಕರೆಯಬೇಡಿ’ ಎಂದು ಹೇಳುವುದು, “ನಮಗೆ ಹೇಗೆ ಬೇಕೋ ಹಾಗೆ ಕರೆಸಿಕೊಳ್ಳುವುದು ನಮ್ಮ ಹಕ್ಕು’ ಎಂದು ಸ್ವಷ್ಟಪಡಿಸುವುದು ಉತ್ತಮ.

– ಸ್ವತಃ ತಾಯಂದಿರು ತಮಗೆ “ಆಂಟಿ’ ಎಂದು ಕರೆದಾಗ ಆದ ಮುಜುಗರವನ್ನು ನೆನಪಿಟ್ಟು, ಚಿಕ್ಕ ಮಕ್ಕಳು ಆಂಟಿ- ಅಂಕಲ್‌ಗ‌ಳನ್ನು ಎಲ್ಲೆಂದರಲ್ಲಿ ಪ್ರಯೋಗಿಸಿದಾಗ ಅದನ್ನು ತಿದ್ದುವುದು ಮುಖ್ಯ. 

– ಮಕ್ಕಳು “ಅಕ್ಕ- ಅಣ್ಣ’ ಎನ್ನಲು ಅನುಮಾನಿಸಿದಾಗ ಅವರನ್ನು ಹಾಗೆ ಕರೆಯಲು ಪ್ರೋತ್ಸಾಹಿಸುವುದು, ಮಕ್ಕಳು 14 ವರ್ಷ ದಾಟುತ್ತಿದ್ದಂತೆ “ಆಂಟಿ-ಅಂಕಲ್‌’ ಗಳನ್ನು ಸಂಪೂರ್ಣವಾಗಿ ಕೈಬಿಡುವಂತೆ ಹೇಳುವುದು ಮುಖ್ಯ.

– ಒಂದೊಮ್ಮೆ ಹಾಗೆ ಕರೆಸಿಕೊಳ್ಳುತ್ತಿದ್ದ ವ್ಯಕ್ತಿ “ತನ್ನನ್ನು ಹಾಗೆಯೇ ಸಂಬೋಧಿಸಬೇಕು, ತನಗೆ ಸಂತಸ’ ಎಂದು ಸ್ಪಷ್ಟಪಡಿಸಿದಾಗ ಮಾತ್ರ ಹಾಗೆ ಕರೆಯುವುದನ್ನು ಆ ವ್ಯಕ್ತಿಗೆ ಸಂಬಂಧಿಸಿದಂತೆ ಮುಂದುವರಿಸುವುದು, ಇವುಗಳನ್ನು ಮಕ್ಕಳ ಬೆಳವಣಿಗೆಯ ಭಾಗವಾಗಿ ಕಲಿಸಬೇಕು.

– ಆಸ್ಪತ್ರೆ, ನರ್ಸರಿ ಶಾಲೆಗಳಲ್ಲಿಯೂ ಅಷ್ಟೆ: “ಆಯಾ’ ಎಂಬ ಪದಕ್ಕೆ ಅಂಟಿರುವ ಕೀಳರಿಮೆಯನ್ನು ಬದಲಿಸಲು “ಆಂಟಿ’ ಎಂಬ ಪದದ ಪ್ರಯೋಗವೇ ಆಗಬೇಕಿಲ್ಲ. ಆಯಾಗಳನ್ನು ಅಮ್ಮ, ಅಕ್ಕ ಎಂದೂ ಕರೆದು ಅವರಿಗೆ ವಿಶೇಷ ಗೌರವ ನೀಡಬಹುದು. 

– ಡಾ. ಕೆ.ಎಸ್‌. ಪವಿತ್ರ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.