ಸುಟ್ಟಗಾಯ ಶಮನಕ್ಕೆ ಸರಳ ಮನೆಮದ್ದು
Team Udayavani, Feb 4, 2020, 4:36 AM IST
ಮನೆ ಕೆಲಸ ಮಾಡುವಾಗ ಅದರಲ್ಲೂ ಅಡುಗೆ, ಇಸ್ತ್ರಿ ಹಾಕುವಾಗ ಅಲ್ಲೊಂದು ಇಲ್ಲೊಂದು ಸುಟ್ಟ ಗಾಯಗಳು ಆಗುತ್ತಲೇ ಇರುತ್ತವೆ. ಈ ಸಣ್ಣಪುಟ್ಟ ಸುಟ್ಟಗಾಯಗಳು ವಿಪರೀತ ನೋವಿನ ಅನುಭವವನ್ನು ಉಂಟುಮಾಡುವ ಜತೆಗೆ ಬೊಕ್ಕೆಗಳನ್ನೂ ಉಂಟುಮಾಡುತ್ತವೆ. ಅನಂತರದ ದಿನಗಳಲ್ಲಿ ಈ ಬೊಕ್ಕೆಗಳು ಚರ್ಮದ ಮೇಲೆ ಕಲೆಗಳನ್ನು ಉಳಿಸಿಬಿಡುತ್ತವೆ.
ಸುಟ್ಟಗಾಯವಾದ ತಕ್ಷಣ ನಾವು ಪರಿಹಾರವಾಗಿ ಮಂಜುಗೆಡ್ಡೆ, ತಂಪಾದ ನೀರನ್ನು ಗಾಯಗಳಿಗಾಗಿ ಬಳಸುತ್ತೇವೆ. ಒಂದು ಕ್ಷಣ ಈ ವಿಧಾನ ಆರಾಮ ನೀಡಿದರೂ ಮಂಜುಗೆಡ್ಡೆಯನ್ನು ತೆಗೆದ ತತ್ಕ್ಷಣವೇ ಪುನಃ ನೋವು ಶುರು ವಾಗುತ್ತದೆ. ಇಂತಹ ಸಣ್ಣಪುಟ್ಟ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಕೆಲವೊಂದು ಪರಿಣಾ ಮಕಾರಿಯಾದ ಮನೆಮದ್ದುಗಳು ಕೆಳಗಿನಂತಿವೆ.
ವೆನಿಲ್ಲಾದ ಸಾರ
ಸಣ್ಣಪುಟ್ಟ ಸುಟ್ಟಗಾಯಗಳ ಆರೈಕೆಗೆ ವೆನಿಲ್ಲಾವನ್ನೂ ಕೂಡ ಬಳಸಿಕೊಳ್ಳಬಹುದು. ಹತ್ತಿಯನ್ನು ವೆನಿಲ್ಲಾದ ಸಾರದಲ್ಲದ್ದಿ ಅದನ್ನು ಸುಟ್ಟಗಾಯದ ಮೇಲೆ ಲೇಪಿಸಬಹುದು. ವೆನಿಲ್ಲಾ ಸಾರದಲ್ಲಿರುವ ಆಲ್ಕೋಹಾಲ್ ಆವಿಯಾಗುವಾಗ ತಂಪಾದ ಅನುಭವವನ್ನು ನೀಡುತ್ತದೆ. ಇದರಿಂದ ಉರಿಯನ್ನು ಉಪಶಮನಗೊಳಿಸುತ್ತದೆ.
ಲ್ಯಾವೆಂಡರ್ ತೈಲ
ಲ್ಯಾವೆಂಡರ್ ತೈಲವು ಸೋಂಕು ಪ್ರತಿಬಂಧಕ ಗುಣವನ್ನು ಹೊದಿದೆ. ಇದರ ಜತೆ ಇದು ಸುಟ್ಟಗಾಯದ ಉರಿಯನ್ನು ಶಮನಗೊಳಿಸುವ ಸಾಮರ್ಥ್ಯ ಹೊಂದಿದೆ. ಇದರ ಬಳಕೆಯಿಂದ ತ್ವಚೆಯ ಮೇಲೆ ಉಂಟಾದ ಕಲೆಗಳನ್ನು ಕೂಡ ಕಡಿಮೆಗೊಳಿಸುತ್ತದೆ. ಸ್ವತ್ಛ ಬಟ್ಟೆ ಅಥವಾ ಹತ್ತಿಯನ್ನು ತೈಲದಲ್ಲಿ ಅದ್ದಿ ಗಾಯದ ಮೇಲೆ ಲೇಪಿಸಿಕೊಳ್ಳಬಹುದು.
ವಿನೆಗರ್
ತಕ್ಷಣಕ್ಕೆ ಸಣ್ಣಪುಟ್ಟ ಸುಟ್ಟಗಾಯಗಳ ಆರೈಕೆಗೆ ಮತ್ತು ಸಂಭಾವ್ಯ ಸೋಂಕನ್ನು ತಡೆಗಟ್ಟಲು ವಿನೆಗರ್ ಸಹಾಯ ಮಾಡುತ್ತದೆ. ವಿನೆಗರ್ ನೋವಿನ ಉಪಶಮನಮಾಡುವ ಜತೆಗೆ ತ್ವಚೆಯನ್ನು ತಂಪಾಗಿರಿಸಲು ಸಹಕಾರಿಯಾಗಿದೆ. ವಿನೆಗರ್, ನೀರನ್ನು ಸಮಪ್ರಮಾಣದಲ್ಲಿ ಬೆರೆಸಿ, ಹತ್ತಿ ಅಥವಾ ಬಟ್ಟೆಯಿಂದ ದ್ರಾವಣದಲ್ಲಿ ಅದ್ದಿ ಸುಟ್ಟಗಾಯದ ಮೇಲಿರಿಸಿಕೊಳ್ಳುವುದರ ಮೂಲಕ ಇದನ್ನು ಬಳಸಬಹುದು.
ಪ್ಲಾಂಟೇನ್ ಎಲೆಗಳು
ಸುಟ್ಟಗಾಯದಿಂದ ಉಂಟಾಗುವ ನೋವನ್ನು ಗುಣಪಡಿಸಲು ಈ ಎಲೆಗಳು ಅತ್ಯಂತ ಪರಿಣಾಮಕಾರಿ ಯಾಗಿವೆ. ಈ ಎಲೆಗಳು ಸೂಕ್ಷ್ಮಾಣುಗಳ ಮತ್ತು ಸುಟ್ಟಗಾಯದ ಉರಿ ಶಮನಗೊಳಿಸುವ ಶಕ್ತಿ ಹೊಂದಿವೆ. ಇದರ ಎಳೆಗಳನ್ನು ಜಜ್ಜಿ ರಸವನ್ನು ಗಾಯದ ಮೇಲೆ ಲೇಪಿಸಬಹುದು.
ಈರುಳ್ಳಿ ರಸ
ಈರುಳ್ಳಿಯ ಗಂಧಕದ ಅಂಶಗಳು ಸುಟ್ಟಗಾಯ ಉಪಶಮನಗೊಳಿಸುವ ನಿಟ್ಟಿನಲ್ಲಿ ನೆರವಾಗುತ್ತವೆ. ಈರುಳ್ಳಿ ರಸವನ್ನು ಹತ್ತಿಯಿಂದ ಗಾಯದ ಮೇಲೆ ಲೇಪಿಸಿಕೊಳ್ಳಬಹುದು.
ಲೋಳೆಸರ
ಲೋಳೆಸರವು ತ್ವಚೆಗಾದ ಹಾನಿಯನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಸುಟ್ಟಗಾಯದ ನೋವನ್ನು ನಿವಾರಿಸಲು ಲೋಳೆಸರವನ್ನು ಬಳಸಬಹುದು. ಮೊದಲು ಸುಟ್ಟಗಾಯವನ್ನು ತಣ್ಣೀರು ಹಾಗೂ ವಿನಿಗರ್ನಿಂದ ಸ್ವತ್ಛಗೊಳಿಸಿದ ಅನಂತರ ಲೋಳೆಸರದ ಜೆಲ್ನ್ನು ಬಾಧಿತ ಸ್ಥಳಕ್ಕೆ ಹಚ್ಚಿಕೊಳ್ಳಿರಿ.
ಜೇನುತುಪ್ಪ
ಜೇನುತುಪ್ಪ ಸುಟ್ಟಗಾಯದ ನೋವಿನಿಂದ ಮುಕ್ತರಾಗಲು ಅತ್ಯುತ್ತಮ ಮನೆಮದ್ದು ಗಳಲ್ಲೊಂದಾಗಿದೆ. ಇದನ್ನು ಲೇಪಿಸುವುದರಿಂದ ತತ್ಕ್ಷಣ ಉರಿಯಿಂದ ಆರಾಮ ನೀಡುತ್ತದೆ. ಜೇನುತುಪ್ಪವನ್ನು ಲೇಪಿಸುವುದರಿಂದ ಇದು ಸುಟ್ಟಗಾಯದಲ್ಲಿರಬಹುದಾದ ದ್ರವಾಂಶಗಳನ್ನು ಹೀರಿ ಗಾಯವು ಬೇಗನೇ ಗುಣವಾಗಲು ಸಹಾಯ ಮಾಡುತ್ತದೆ.
- ಜಯಶಂಕರ್ ಜೆ. ಸುಬ್ರಹ್ಮಣ್ಯ