ಹೀಗೆ ಒಂದು ಬೇಸಿಗೆ ಶಿಬಿರ
Team Udayavani, May 12, 2017, 3:45 AM IST
ಪೇಟೆಯ ಮಕ್ಕಳನ್ನು ಗ್ರಾಮ ಜೀವನ ಶೈಲಿಯ ಜತೆಗೆ ಬೆಸೆಯುವ ಸೇತುವೆ ಬ್ರಿಡ್ಜ್ ಎಂಬ ಈ ಮಕ್ಕಳ ಶಿಬಿರವನ್ನು ಮಾಳದ ಪ್ರಾಚಿ ಫೌಂಡೇಷನ್ ಪ್ರಾಯೋಜಿಸಿತ್ತು. ಕಲಾವಿದ ಪುರುಷೋತ್ತಮ ಅಡ್ವೆಯವರ ಮಾಳ ತೋಟದ “ಮಣ್ಣಪಾಪು’ ಎಂಬ 200 ವರ್ಷ ಹಳೆಯ ಮಹಾಮನೆಯಲ್ಲಿ ಬೇರೆ ಬೇರೆ ಊರಿನ 30 ಮಕ್ಕಳು ಮತ್ತು ಅವರ ಹೆತ್ತವರು ಭಾಗವಹಿಸಿದ ಅಪೂರ್ವ ಶಿಬಿರ. ನಗರದಲ್ಲಿ ರೂಢಿಸಿ ಕೊಂಡ ಜಡ ಜೀವನ, ಅನಾರೋಗ್ಯಕರ ಆಹಾರಶೈಲಿ, ಸುತ್ತಲಿನ ಜನರ ಮತ್ತು ಪರಿಸರದ ಬಗ್ಗೆ ನಿರಾಸಕ್ತಿಯ ಮನೋಭಾವ ಇವೆಲ್ಲದಕ್ಕೂ ಮದ್ದರೆಯುವಂತೆ ಆಯೋಜಿತವಾಗಿದ್ದ ಶಿಬಿರ ಇದು.
ಸುತ್ತಲಿನ ಪರಿಸರದಿಂದಲೇ ಸಂಗ್ರಹಿಸಿದ ಸೊಪ್ಪುಗಳು, ಹಣ್ಣುಗಳು ಮತ್ತು ಹೆಚ್ಚಾಗಿ ಸಾವಯವ ವಸ್ತುಗಳಿಂದಲೇ ತಯಾರಿಸಿದ ಆಹಾರ ಮತ್ತು ಪಾನೀಯಗಳು, ದಿನನಿತ್ಯ ಎರಡು ಸಲ ಪ್ರಕೃತಿ ವೀಕ್ಷಣೆಯ ನಡಿಗೆ ಮತ್ತು ಪರಿಸರದ ಜನರ ಮನೆಗೆ ಭೇಟಿ ಮತ್ತು ಅನುಭವ ಹಂಚಿಕೆ ಹಾಗೂ ಕಾಡಿನೊಳಗೆ ಟ್ರೆಕ್ಕಿಂಗ್ ಇಂತಹ ಅನೇಕ ಪರಿಸರ ಕಾಳಜಿ ಹೆಚ್ಚಿಸುವ ಕಾರ್ಯಕ್ರಮಗಳು ಈ ಶಿಬಿರದ ವಿಶೇಷ. ಅಡ್ವೆಯವರ ಗೆಳೆಯರ ಬಳಗ ಮತ್ತು ಹೆತ್ತವರಿಂದಲೇ ಬಹುತೇಕ ಕಾರ್ಯಕ್ರಮಗಳ ಆಯೋಜನೆ. ಪರಿಸರದ ಕುಶಲಕರ್ಮಿಗಳಿಂದ ಕುಂಬಾರಿಕೆ, ಬುಟ್ಟಿ ಹೆಣೆಯುವುದು, ಗಿಡಗಳ ನರ್ಸರಿ ಬಗ್ಗೆ ಪ್ರಾತ್ಯಕ್ಷಿಕೆ, ಖ್ಯಾತ ಕಲಾ ನಿರ್ದೇಶಕ ಶಶಿಧರ ಅಡಪರಿಂದ ಸ್ಥಳದಲ್ಲಿಯೇ ಯಾಂತ್ರಿಕ ಆಟಿಕೆಗಳ ತಯಾರಿ, ವಾಣಿ ಪೆರಿಯೋಡಿಯವರಿಂದ ಹಾಡು – ಕಥೆ, ರಂಗಕರ್ಮಿ ನಂದಕಿಶೋರ್ ಅವರಿಂದ ಮೋಜಿನ ಆಟಗಳು, ಸಚ್ಚು ಮೈಸೂರು ಇವರಿಂದ ಒರಿಗಾಮಿ – ಪೇಪರ್ ತಯಾರಿ – ಆನಿಮೇಷನ್, ಮುರಾರಿ ಮತ್ತು ಬಳಗದವರಿಂದ ಗೊಂಬೆ ತಯಾರಿ ಮತ್ತು ಗೊಂಬೆ ಆಟ, ಅಡ್ವೆ ಮತ್ತು ಕಲಾವಿದ ಜಯವಂತ ಅವರಿಂದ ಟೈ ಎಂಡ್ ಡೈ ಬಣ್ಣಗಾರಿಕೆ, ಪಿಲಿಕುಳದ ಉದಯ ಶೆಟ್ಟಿ ಮತ್ತು ಸ್ಥಳೀಯರಿಂದ ಕಾಡಿನ ಗಿಡ ಮರಗಳ ಪರಿಚಯ, ಕಾರ್ಕಳದ ಮಮತಾ ರೈ ಅವರಿಂದ ಸುಲಭ ವಿಧಾನದಲ್ಲಿ ಆರೋಗ್ಯಕರ ಚಾಕೊಲೇಟ್, ಕುಕ್ಕೀಸ್, ಬ್ರೆಡ್ ಮತ್ತು ಕೇಕ್ ತಯಾರಿಯ ಪಾಠ. ಎಲ್ಲದರಲ್ಲೂ ಸಾವಯವ ಬೆಲ್ಲ, ರಾಗಿ, ಗೋಧಿಯ ಬಳಕೆ ಮಾತ್ರವಲ್ಲ ಪರಿಸರಸಹ್ಯ ಮನೋಭಾವನೆಯ ಬೆಳವಣಿಗೆಗೆ ಒತ್ತು. ಅಡ್ವೆಯವರು ಸ್ವತಃ ಶಿಬಿರಕ್ಕಾಗಿ ತಯಾರಿಸಿದ ಮಣ್ಣಿನ ಇಟ್ಟಿಗೆಯ ಓವನ್ನಲ್ಲಿ ಬೇಯಿಸಿದ ಮಸಾಲಾ ಬ್ರೆಡ್ ರುಚಿಯಲ್ಲೂ ನೋಟದಲ್ಲೂ ಯಾವುದೇ ಬೇಕರಿ ಬ್ರೆಡ್ಗೆ ಸಡ್ಡು ಹೊಡೆಯುವಂತಿತ್ತು. ಕೊಕ್ಕೊ ಮರದಿಂದ ಹಣ್ಣನ್ನು ಮಕ್ಕಳೇ ಕೊಯಿದು ಸಂಸ್ಕರಿಸಿ ತಯಾರಿಸಿದ ಚಾಕೊಲೇಟ್ ಅಂತೂ ನಿಮಿಷಾರ್ಧದಲ್ಲಿಯೇ ಖಾಲಿ ಹಾಗೂ ಅದರ ಕುಕ್ಕೀಸ್ಗಳಿಗೆ ನಿರಂತರ ಬೇಡಿಕೆ!
ಸಂಜೆಗಳಲ್ಲಿ ಕಾದಿರುತ್ತಿದ್ದ ಕಾಡತೊರೆಯ ನೀರಾಟ ಮಕ್ಕಳನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತಿತ್ತು. ಅಲ್ಲಿಂದ ಅವರನ್ನು ವಿಮುಖರನ್ನಾಗಿಸು ವುದೇ ಪ್ರಯಾಸದ ಕೆಲಸವಾಗಿತ್ತು. ಕಡಾರಿ ಅಣ್ಣು ಮೂಲ್ಯರ ಕುಂಬಾರಿಕೆ ಯಲ್ಲಿ ಮಕ್ಕಳೆಲ್ಲರೂ ಭಾಗವಹಿಸಿದರು, ತಾವು ಸೇರಿ ತಯಾರಿಸಿದ ವಸ್ತುಗಳನ್ನು ಕೊಂಡುಹೋಗುವ ಅವಕಾಶ ಗಳಿಸಿದರು. ಮಾಳ ಮತ್ತು ನಿಟ್ಟೂರಿನ ಸರಕಾರಿ ಶಾಲೆಯ ಮಕ್ಕಳು ತಮ್ಮ ಹೆತ್ತವರಿಗೆ ಯಾವುದೇ ಹೊರೆಯಾಗದಂತೆ ಈ ಶಿಬಿರದಲ್ಲಿ ಭಾಗವಹಿಸಿದ್ದರು. ಈ ಶಿಬಿರದಿಂದ ಪೇಟೆಯ ಮಕ್ಕಳು ಕಲಿತ ಜೀವನ ಪಾಠ ಬಹಳ. ಇವೆಲ್ಲಕ್ಕೂ ಕಲಶವಿಟ್ಟದ್ದು ಸ್ಥಳೀಯ ರಘುನಾಥ ಫಡೆR ಮತ್ತು ಅವರ ಪುತ್ರ ತಯಾರಿಸುತ್ತಿದ್ದ ಸುಗ್ರಾಸ ಭೋಜನ. ಶಿಬಿರದುದ್ದಕ್ಕೂ ಆಗಮಿಸುತ್ತಿದ್ದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ದೇಶ-ವಿದೇಶದ ಅತಿಥಿಗಳು ಶಿಬಿರದ ವಿಶೇಷತೆಗೆ ಮೆಚ್ಚುಗೆ ಸೂಚಿಸಿದರು.
ಇವೆಲ್ಲವನ್ನೂ ಮುಗಿಸಿ ಹೊರಟು ನಿಂತಾಗ ಮಕ್ಕಳ ಮುಖದಲ್ಲಿನ ಬೇಸರ ಮತ್ತು ಮುಂದಿನ ಶಿಬಿರಕ್ಕೆ ಖಂಡಿತ ಕರೆಯಬೇಕೆಂಬ ಗೋಗರೆತ ಶಿಬಿರದ ಯಶಸ್ಸಿಗೆ ಸಾಕ್ಷಿಯಾಗಿತ್ತು. ಪರಿಸರದೊಂದಿಗೆ ಸಂಬಂಧ ಜೋಡಿಸುವ ಮತ್ತು ಜೀವನ ಪ್ರೀತಿ ಬೆಳೆಸುವ ಇಂತಹ ಶಿಬಿರಗಳು ಇನ್ನಷ್ಟು ನಡೆಯಲಿ.
ಬಿ. ಚಿಕ್ಕಪ್ಪ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ
Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!
Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್ ಶಾ ಮನವಿ
ವೇಷದ ಬಣ್ಣ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ
Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ