ಚೆನ್ನೈಯಲ್ಲಿ ಮಹಿಳಾ ತಾಳಮದ್ದಳೆ
Team Udayavani, Oct 5, 2018, 6:00 AM IST
ಸುರತ್ಕಲ್ ತಡಂಬೈಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ವನಿತೆಯರು ಪರವೂರಿನಲ್ಲೂ ಯಕ್ಷಗಾನದ ಕಂಪನ್ನು ಪಸರಿಸುವಲ್ಲಿ ನಿರತರಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಚೆನ್ನೈಪ್ರವಾಸ ಕೈಗೊಂಡು ಅಲ್ಲಿರುವ ಕನ್ನಡಿಗರಿಗೆ ಯಕ್ಷಗಾನದ ಸವಿ ಉಣಿಸಿರುವ ಕಲಾವಿದೆಯರು ಇತ್ತೀಚೆಗೆ ಇನ್ನೊಂದು ಚೆನ್ನೈ ಯಾನ ಕೈಗೊಂಡು 183 ಹಾಗೂ 184ನೇ ಕಾರ್ಯಕ್ರಮಗಳನ್ನು ನಡೆಸಿ ಜನಮನ್ನಣೆ ಪಡೆದುಕೊಂಡರು. ಸುರತ್ಕಲ್ ವಾಸುದೇವ ರಾವ್ ಇವರ ಮಾರ್ಗದರ್ಶನ ಹಾಗೂ ಸಂಚಾಲಕತ್ವದಲ್ಲಿ ದುರ್ಗಾಂಬಾ ಮಹಿಳಾ ಮಂಡಳಿಯ ಸದಸ್ಯೆಯರು ಮೊದಲನೇ ದಿನ ಎಸ್.ವಿ.ಆರ್. ಮಂಟಪಂದಲ್ಲಿ “ಸುದರ್ಶನ ವಿಜಯ’ ತಾಳಮದ್ದಲೆಯನ್ನು ಪ್ರದರ್ಶಿಸಿದರು. ಮಂಡಳಿಯ ಅಧ್ಯಕ್ಷೆ ಸುಲೋಚನ ವಿ. ರಾವ್ ವಿಷ್ಣುವಾಗಿ, ಜಯಂತಿ ಎಸ್. ಹೊಳ್ಳ, ಲಕ್ಷ್ಮೀ, ಕೆ. ಕಲಾವತಿ ದೇವೇಂದ್ರ, ದೀಪ್ತಿ ಬಾಲಕೃಷ್ಣ ಭಟ್ ಶತ್ರು ಪ್ರಸೂದನನಾಗಿ ಹಾಗೂ ಕೆ. ಲಲಿತ ಭಟ್ ಸುದರ್ಶನನಾಗಿ ರಂಜಿಸಿದರು.
ಧರ್ಮಪ್ರಕಾಶ ಸಭಾ ಮಂದಿರದಲ್ಲಿ ನಡೆದ ಎರಡನೇ ದಿನ “ಮೀನಾಕ್ಷಿ ಕಲ್ಯಾಣ’ ಪ್ರಸಂಗ ಪ್ರದರ್ಶನಗೊಂಡಿತು. ಲಲಿತ ಭಟ್ ಮೀನಾಕ್ಷಿಯಾಗಿ, ಸುಲೋಚನಾ ವಿ. ರಾವ್ ಶೂರಸೇನನಾಗಿ, ಜಯಂತಿ ಹೊಳ್ಳ ಈಶ್ವರ, ಕಲಾವತಿ ನಂದಿಕೇಶ್ವರ ನಾರದನಾಗಿ ಹಾಗೂ ದೀಪ್ತಿ ಭಟ್ ಪದ್ಮಗಂಧಿನಿಯಾಗಿ ಪಾತ್ರ ನಿರ್ವಹಿಸಿ ಕಲಾಭಿಮಾನಿಗಳ ಮನಸೂರೆಗೊಂಡರು.
ಎರಡು ದಿನವೂ, ಕಟೀಲು ಮೇಳದ ದೇವರಾಜ ಆಚಾರ್ಯ ಭಾಗವತರಾಗಿ ಮಿಂಚಿದರೆ, ಮದ್ದಳೆಯಲ್ಲಿ ಕೆ. ರಾಮ ಹೊಳ್ಳ ಚಂಡೆಯಲ್ಲಿ ವೇದವ್ಯಾಸ ರಾವ್ ಸಹಕರಿಸಿದರು.
ಕಲಾಪ್ರಿಯ