ಟಾಪ್ ಗೀರ್ -ಗೀರ್ ತಳಿಯಿಂದ ಬಂತು ಆದಾಯ
Team Udayavani, Jul 30, 2018, 12:14 PM IST
ಕೃಷಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ಹಸುಗಳ ಸಾಕಾಣಿಕೆ. ಆದರೆ ಈ ದಿನಗಳಲ್ಲಿ ಪಶುಪಾಲನೆಯ ಕೆಲಸ ಮಾಡಲು ರೈತರೇ ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ, ಕಂಪ್ಯೂಟರ್ ಎಂಜನಿಯರ್ ಒಬ್ಬರು ಸಾಹಸಕ್ಕಿಳಿದು, ದೇಸಿ ಹಸುವಿನ ಡೈರಿ ಸ್ಥಾಪಿಸಿ ಸಾಧನೆ ಮಾಡಿದ್ದಾರೆ.
ಹೌದು, ನಂಜನಗೂಡಿನ ರಾಜೇಶ ಜೈನ್ ಹೈನುಗಾರಿಕೆಯಿಂದ ವೈನಾದ ಜೀವನ ನಡೆಸುತ್ತಿದ್ದಾರೆ. ವಿಶೇಷ ಎಂದರೆ, ಡೈರಿ ಎಂದರೆ ಹಾಲು ಮಾರಾಟ ಎಂದೇ ತಿಳಿದಿರುವ ಈ ಕಾಲದಲ್ಲಿ ಹಾಲು ಅಥವಾ ಮೊಸರು ಮಾರಾಟ ಮಾಡದೆಯೂ ಡೈರಿಯಿಂದ ಲಾಭಗಳಿಸಬಹುದು ಎನ್ನುವುದನ್ನು ನೋಡಲು ನೀವು ಇಲ್ಲಿಗೆ ಬರಬೇಕು.
ಗುಜರಾತಿನ ಪ್ರಸಿದ್ಧ ನಾಡ ಹಸುವೆನಿಸಿದ ಗೀರ್ ಗೋವುಗಳ ಈ ಡೈರಿ, ನಂಜನಗೂಡಿನ ಕಣೆನೂರು ಹಾಗೂ ಮಾದನಳ್ಳಿ ಮಧ್ಯ 50 ಎಕರೆ ಪ್ರದೇಶದಲ್ಲಿ ತಲೆ ಎತ್ತಿದೆ. ಕಪಿಲಾ ನದಿಯ ದಂಡೆಯಲ್ಲಿನ ಸುಂದರ ಪರಿಸರದಲ್ಲಿ ಗೀರ್ತಳಿಗಳ ದಂಡೇ ನೆಲೆಸಿದೆ.
ರಾಜೇಶ ಜೈನ್ ಎನ್ನುವ ಸಾಫ್ಟ್ವೇರ್ ಇಂಜನಿಯರ್, ಆರು ವರ್ಷಗಳ ಹಿಂದೆ 50 ಎಕರೆ ಪ್ರದೇಶವನ್ನು ಖರೀದಿಸಿ, ದೇಶಿ ಹಸುಗಳ ಸಾಕಾಣಿಕೆ ಪ್ರಾರಂಭಿಸಿದರು. ಅದಕ್ಕಾಗಿ ಜಮೀನಿನಲ್ಲಿ ಕೊಟ್ಟಿಗೆಗಳನ್ನು ನಿರ್ಮಿಸಿ, ಒಂದು ಹಸುವಿಗೆ 1.50 ಲಕ್ಷ ರೂ. ರೂ. ನಂತೆ ಪಾವತಿಸಿ, ಗುಜರಾತಿನಿಂದಲೇ 50 ಹಸುಗಳನ್ನು ಖರೀದಿಸಿದರು. ಆಗ, ಪ್ರತಿ ಹಸುವಿನ ಸಾಗಾಣಿಕ ವೆಚ್ಚವೇ ತಲಾ 25.000 ರೂ.
ಆಯಿತಂತೆ. 20 ರಿಂದ 25 ಲೀಟರ್ ಹಾಲು ಕೊಡುವ ಗುಜರಾತಿನ ಈ ಹಸುಗಳು ಪರಿಸರದ ಬದಲಾವಣೆಯೊಂದಿಗೆ ಇಲ್ಲಿ 10 ರಿಂದ 12 ಲೀಟರ್ ಹಾಲು ಮಾತ್ರ ನೀಡುತ್ತಿವೆ. ಈ ಫಾರಂನಲ್ಲಿ 1,000 ನಾಡ ಹಸುಗಳ ಸಾಕಾಣಿಕೆಯ ಗುರಿ ರಾಜೇಶರಿಗೆ ಇದೆ.
ಇಲ್ಲಿ ದಿನಕ್ಕೆ 250 ಕ್ಕೂ ಹೆಚ್ಚು ಲೀ. ದೇಸಿ ಹಸುವಿನ ಹಾಲು ದೊರೆಯುತ್ತಿದೆ. ಅದನ್ನು ಮೊಸರು ಮಾಡಿ ಬೆಣ್ಣೆ ತೆಗೆದು ಇಲ್ಲಿಯೇ ತುಪ್ಪ ಮಾಡಲಾಗುತ್ತಿದೆ. ಒಂದು ರಾಜಸ್ಥಾನಿ ಕುಟುಂಬ ಇದಕ್ಕಾಗಿ ಇಲ್ಲಿಯೇ ವಾಸ ಮಾಡುತ್ತಿದೆ. ರಾಜೇಶ್ ನಿತ್ಯವೂ ತುಪ್ಪದ ತಯಾರಿ ಹಾಗೂ ಹಸುಗಳ ಮೇಲ್ವಿಚಾರಣೆ ನಡೆಸುತ್ತಾರೆ. ದೇಶಿ ಹಸುವಿನ ತುಪ್ಪಕ್ಕೆ ಭಾರಿ ಬೇಡಿಕೆ ಇದೆ. ಸಧ್ಯ ಇಲ್ಲಿನ ತುಪ್ಪ ಮಾರಾಟವಾಗುತ್ತಿರುವುದು ಚೆನ್ನೈ, ಬೆಂಗಳೂರಿನಲ್ಲಿ ಮಾತ್ರ. ಅದೂ ಆನ್ ಲೈನ್ ಬುಕಿಂಗ್ ಮೂಲಕ ತುಪ್ಪದ ಮಾರಾಟ ನಡೆಯುತ್ತಿದೆ. ಇಲ್ಲಿ ಎ, ಬಿ ಗ್ರೇಡ್ ಎಂಬ ಎರಡು ಬಗೆಯ ತುಪ್ಪ ಮಾರಾಟ ಮಾಡುತ್ತಿದ್ದಾರೆ. ಎ ಗ್ರೇಡ್ ತುಪ್ಪ ಕೆ.ಜಿ ಗೆ 2.000 ರೂ ಹಾಗೂ ಬಿ ಗೇÅಡ್ ತುಪ್ಪ ಪ್ರತಿ ಕೆ.ಜಿಗೆ 1.500 ರೂ. ಬೆಲೆ ಇದೆ. ಪ್ರತಿ ದಿನ ಒಂದೂವರೆ ಎರಡು ಕೆ.ಜಿಯಂತೆ ವಾರಕ್ಕೆ 10-12 ಕೆ.ಜಿ ತುಪ್ಪ ತಯಾರಿಸುತ್ತಾರೆ. ತಿಂಗಳಿಗೆ ಹೆಚ್ಚುಕಮ್ಮಿ 70-80 ಕೆ.ಜಿ ತುಪ್ಪ ತಯಾರಾಗುತ್ತದೆ.
ಶುದ್ಧ ಬೆಣ್ಣೆಯಿಂದ ತುಪ್ಪ ತಯಾರಿಸಿ ಅದನ್ನು ಪ್ರತಿ 500 ಗ್ರಾಂ. ಬಾಟಲ್ನಲ್ಲಿ ತುಂಬಿ ಅಂತರ್ಜಾಲದಲ್ಲಿ ಆರ್ಡರ್ ಮಾಡಿದ ಗ್ರಾಹಕರಿಗೆ ಕಳಿಸಲಾಗುತ್ತಿದೆ. ಗುಜರಾತಿನಿಂದ ತಂದಿರುವ ಹಸುಗಳಿಗೆ ತೆನೆ ಸಹಿತ ಹಸಿ ಜೋಳದ ದಂಟು ಹಾಗೂ ಹಿಂಡಿಯನ್ನು ಅಹಾರವಾಗಿ ನೀಡುತ್ತಾರೆ.
ಅಜೋಲವನ್ನು ಪ್ರತಿ ಹಸುವಿಗೆ ನಿತ್ಯ ಅರ್ಧ ಕೆ.ಜಿ ನೀಡಲಾಗುತ್ತದೆ. ಜಮೀನಿನಲ್ಲೆ ನೀರಿನ ಹೊಂಡವನ್ನು ನಿರ್ಮಿಸಿ ಅಜೋಲವನ್ನು ಬೆಳೆಯುತ್ತಿದ್ದಾರೆ. ಇಲ್ಲಿ ಸಿಗುವ ಸಾವಯವ ಗೊಬ್ಬರಕ್ಕೆ ಭಾರೀ ಬೇಡಿಕೆ ಇದೆ. ರಾಜೇಶ್ ಜೈನ್- ಗೊಬ್ಬರ ಮಾರಿಕೊಂಡರೆ ಸಾಕು ಸಾರ್, ನಮ್ಮ ಖರ್ಚು ಬಂದು ಬಿಡುತ್ತದೆ ಎನ್ನುತ್ತಾರೆ. ಪ್ರಸ್ತುತ ಟನ್ ಗೊಬ್ಬರಕ್ಕೆ 12ಸಾವಿರ ರೂ. ಬೆಲೆ ಇದೆ.
– ಶ್ರೀಧರ್ ಆರ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್