ಬದುಕಿಗೆ ಸಿಹಿಯಾದ ಮೆಣಸಿನಕಾಯಿ…
Team Udayavani, Nov 30, 2020, 4:01 PM IST
ರೈತರ ಪಾಲಿಗೆ ಇದು ಕಷ್ಟದ ಕಾಲ.ಕಾರಣ, ಒಂದೆಡೆಕೊರೊನಾದಕಾಟ. ಇನ್ನೊಂದುಕಡೆ ಅತಿವೃಷ್ಟಿ/ ಅನಾವೃಷ್ಟಿಯ ಆಟ. ಇದರ ಮಧ್ಯೆಯೂ ರೈತರು ಬದುಕಬೇಕು. ಏನಾದರೂ ಬೆಳೆಯಬೇಕು. ಆ ಬೆಳೆಯನ್ನು ಮಾರಾಟ ಮಾಡಿ 3 ಹೊತ್ತಿನ ಅನ್ನಕ್ಕೆ, ಒಂದಷ್ಟು ಖರ್ಚಿಗೆ ದಾರಿ ಮಾಡಿಕೊಳ್ಳಬೇಕು. ಯಾವುದೇ ಬೆಳೆಯ ಉದಾಹರಣೆ ತೆಗೆದುಕೊಂಡರೂ ಅದನ್ನು ನಾಟಿ ಮಾಡಿ,ಕಳೆ ತೆಗೆದು,ಕೀಟಗಳಿಂದ ಜೋಪಾನ ಮಾಡಿ ಕಡೆಗೊಮ್ಮೆ ಫಸಲು ಕೈಗೆ ಬಂತು ಅನ್ನುವ ಹೊತ್ತಿಗೆ ಆರು ತಿಂಗಳುಗಳೇ ಕಳೆದು ಹೋಗಿರುತ್ತವೆ.
ಈ ಸಂದರ್ಭದಲ್ಲಿ ರೈತನ ಬೆಳೆಗೆ ಒಳ್ಳೆಯ ಬೆಲೆ ಸಿಗುತ್ತದೆ ಎಂಬ ಗ್ಯಾರಂಟಿಯನ್ನು ಯಾರೂ ಕೊಡುವುದಿಲ್ಲ. ವಾಸ್ತವ ಹೀಗಿರುವಾಗ,ಕಡಿಮೆ ಖರ್ಚಿನಲ್ಲಿ ಮುಗಿದುಹೋಗುವ,ಕಡಿಮೆ ಅವಧಿಯಲ್ಲಿ ಫಸಲು ನೀಡುವ ಬೆಳೆ ತೆಗೆಯಲು ಮುಂದಾಗುವುದು ಜಾಣತನ. ಅಲ್ಪಾವಧಿಯಲ್ಲಿ ಫಸಲು ನೀಡುವ, ವರ್ಷವಿಡೀ ಬೇಡಿಕೆಯನ್ನೂ ಪಡೆದಿರುವ ಬೆಳೆ ಯಾವುದು ಗೊತ್ತೇ? ಮೆಣಸಿನಕಾಯಿ! ಖಾರದ ಮೆಣಸಿನಕಾಯಿ ಬೆಳೆದು ಬದುಕನ್ನುಸಿಹಿ ಮಾಡಿಕೊಳ್ಳಬಹುದು ಎಂಬುದನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹುಣಶೀಕಟ್ಟಿ ಗ್ರಾಮದ ಯುವ ರೈತ ರುದ್ರಪ್ಪ ಹಂಚಿನಮನಿ ತೋರಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:ದೆಹಲಿ ಚಲೋ: ಪ್ರತಿಭಟನೆ ನಡೆವೆಯೂ ಗಡಿಯಲ್ಲಿ ಗುರುನಾನಕ್ ಜಯಂತಿ, ಯೋಧರಿಗೆ ಪ್ರಸಾದ ವಿತರಣೆ
ಸಸಿಗಳನ್ನು ತಂದರೆ ಅದರ ಬೆಲೆ ದುಬಾರಿಯಾಗಿ, ಅದನ್ನು ಭರಿಸುವುದಕ್ಕೂ ಕಷ್ಟವಾಗಬಹುದು ಅನ್ನಿಸಿದಾಗ, ತನ್ನ ಹೊಲದಲ್ಲಿ ಹತ್ತು ಮಡಿಗಳನ್ನು ಮಾಡಿ ಅಲ್ಲಿಯೇ ಸಸಿ ಬೆಳೆಸಿದ್ದಾರೆ. ಹನಿ ನೀರಾವರಿ ಮೂಲಕ ಮಡಿಗಳಿಗೆ ನೀರು ಪೂರೈಕೆಯಾಗಿದೆ.
ಅದಕ್ಕೆ ಸಾವಯವ ಗೊಬ್ಬರ,ಕಳಿತ ಗೊಬ್ಬರ, ಬೇವಿನ ಹಿಂಡಿ ಪೂರೈಸಿದ್ದಾರೆ. ಹತ್ತು ಮಡಿಗಳಲ್ಲಿ ಬೆಳೆದ ಸಸಿಗಳು ಒಂದು ಎಕರೆಗೆ ಸಾಕಾಗುತ್ತವೆ. ಸಸಿಗಳು ಹೊಲದಲ್ಲಿ ಗಿಡವಾಗಲು ಒಂದೂವರೆ ತಿಂಗಳು ಬೇಕು. ನಂತರ ಕಾಯಿ ಬಿಡಲು ಪ್ರಾರಂಭಿಸುತ್ತವೆ. ಗಿಡಗಳಿಗೆ ಚೆನ್ನಾಗಿ ನೀರು ಹಾಗೂ ಗೊಬ್ಬರ ಹಾಕಿದರೆ, ಹತ್ತು ಸಲ ಮೆಣಸಿನಕಾಯಿಗಳನ್ನು ಕೊಯ್ಯಬಹುದು.
ಎಲ್ಲಾ ಊರುಗಳಲ್ಲೂ ವರ್ಷವಿಡೀ ಒಂದಲ್ಲ ಒಂದು ಶುಭಕಾರ್ಯಗಳು ನಡೆಯುತ್ತಲೇ ಇರುತ್ತವೆ. ಯಾವಕಾರ್ಯಕ್ರಮವೇ ಆದರೂ ಅಲ್ಲಿ ಅಡುಗೆ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಜೊತೆಗೆ ದಿನನಿತ್ಯದ ಅಡುಗೆಯಲ್ಲಿ ಮೆಣಸಿನಕಾಯಿ ಬಳಕೆ ಅನಿವಾರ್ಯ ಆಗಿರುವುದರಿಂದ, ಈ ಉತ್ಪನ್ನಕ್ಕೆ ಮಾರುಕಟ್ಟೆ ಸಿಕ್ಕೇ ಸಿಗುತ್ತದೆ. ಮೆಣಸಿನಕಾಯಿಕೃಷಿ ನಾಲ್ಕು ತಿಂಗಳ ಬೆಳೆಯಾದ್ದರಿಂದ ಅದನ್ನು ಬೆಳೆಸುವುದುಕಷ್ಟವಿಲ್ಲ ಅನ್ನುತ್ತಾರೆ ರುದ್ರಪ್ಪ.
ಜಗದೀಶ. ಎಂ ಸಂಗಣ್ಣವರ