ಸಿಎಂಗೆ ಒಂದು ಪತ್ರ
Team Udayavani, Jul 10, 2018, 6:00 AM IST
ನಾನು ಈ ಪತ್ರವನ್ನು ಬರೆಯಲು ಕಾರಣ ಕಳೆದವಾರದ ಬಜೆಟ್ನ ಒಂದು ಅಂಶ. ನಿಜವಾಗಿಯೂ ನನಗೆ ಬಜೆಟ್ ಎಂದರೆ ಏನೆಂದು ತಿಳಿದಿಲ್ಲ. ಅದು ನಮ್ಮ ಸ್ಕೂಲ್ ಡೇಯಲ್ಲಿ ಮಾಡುವ ಭಾಷಣದಂತೆಯೇ ಅಂದುಕೊಂಡವಳಾಗಿದ್ದೆ. ಆದರೂ, ರಾಜ್ಯದ 28,847 ಶಾಲೆಗಳಿಗೆ ಬೀಗ ಹಾಕುವ ನಿಮ್ಮದೊಂದು ಮಾತನ್ನು ಟಿವಿ, ಪತ್ರಿಕೆಯಲ್ಲಿ ನೋಡಿ ಗಾಬರಿಗೊಂಡೆ…
# ನನ್ನಶಾಲೆ ನನ್ನಹೆಮ್ಮೆ
ನನ್ನ ಪ್ರೀತಿಯ ಮುಖ್ಯಮಂತ್ರಿಗಳೇ,
ಹೇಗಿದ್ದೀರಿ? ರಾಜ ಕ್ಷೇಮವಿದ್ದರೆ, ರಾಜ್ಯವೂ ಕ್ಷೇಮ ಎಂಬ ಅಮ್ಮ ಹೇಳಿದ ನೀತಿ ಕತೆಯಂತೆ, ನೀವು ಸದಾ ಚೆನ್ನಾಗಿರಿ ಎಂಬ ಹಾರೈಕೆ ನನ್ನದು. ನಾನು, ತೀರ್ಥಹಳ್ಳಿ ತಾಲೂಕಿನ ದೂರದ ಕುಗ್ರಾಮ ಅಕ್ಲಾಪುರದ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವೆನು. ನನ್ನೂರಿಗೂ ಈ ಶಾಲೆಗೂ ಮೂರು ಕಿ.ಮೀ. ಅಂತರ. ನನ್ನ ಊರು ಹಿತ್ತಲಸರದ ರಸ್ತೆಗೆ ಮಳೆಗಾಲದಲ್ಲಿ ವಾಹನಗಳು ಬರುವುದಿರಲಿ, ನಡೆದಾಡುವುದೇ ಕಷ್ಟದ ಮಾತು. ಜೋರು ಮಳೆ ಬಿದ್ದಾಗ ಆ ರಸ್ತೆಯ ಸ್ಥಿತಿ ಗಂಭೀರವಾಗಿರುತ್ತೆ. ಪುಟ್ಟ ಕಾಡಿನ ನಡುವೆ ಒಂದು ಕಾಲು ಹಾದಿಯಲ್ಲಿ, ಪ್ರಪಾತದಂಥ ಕಣಿವೆ ದಾಟಿ, ಜಾರುವ ಎರಡು ಕಲ್ಲು ಸಾರಗಳನ್ನು ಹಾದು ಬಂದರೆ, ಒಂದೂವರೆ ಕಿ.ಮೀ. ಅಂತರದಲ್ಲಿ ನನ್ನ ಶಾಲೆ ಕಾಣಸಿಗುತ್ತದೆ. ನಾನು ಅದೇ ಕಾಲುಹಾದಿಯಲ್ಲೇ ನಿತ್ಯವೂ ನಡೆದು ಬರುತ್ತೇನೆ.
ಬೆನ್ನು ಭಾರವಾಗುವಂಥ ಪುಸ್ತಕಗಳನ್ನು ಹೊತ್ತುಕೊಂಡು ಹಾಗೆ ಬರುವುದು ನನಗೆ ಕಷ್ಟದ ವಿಚಾರವಾಗಿಲ್ಲ. ಯಾವಾಗ ನನ್ನ ಶಾಲೆಗೆ ಸೇರುತ್ತೇನೋ ಎಂದು ಚುರುಕು ಚುರುಕು ಹೆಜ್ಜೆ ಹಾಕಿ, ಬರುವುದೇ ನನಗೊಂದು ಸಂಭ್ರಮ. ನನ್ನ ಶಾಲೆಯಲ್ಲಿ 32 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ತುಂಬಾ ಚೆನ್ನಾಗಿ ಪಾಠ ಮಾಡುವ ಗಣಪತಿ ಸರ್, ವೀರೇಶ್ ಸರ್, ಉಷಾ ಮೇಡಂ, ನಂದಿನಿ ಮೇಡಂ ಅವರನ್ನು ಪಡೆದಿರುವುದು ನಮ್ಮೆಲ್ಲರ ಪುಣ್ಯ. ಊರಿನ ಜನರೂ ಹಾಗೆಯೇ ಹೇಳುತ್ತಾರೆ.
ನಾನು ಈ ಪತ್ರವನ್ನು ಬರೆಯಲು ಕಾರಣ ಕಳೆದವಾರದ ಬಜೆಟ್ನ ಒಂದು ಅಂಶ. ನಿಜವಾಗಿಯೂ ನನಗೆ ಬಜೆಟ್ ಎಂದರೆ ಏನೆಂದು ತಿಳಿದಿಲ್ಲ. ಅದು ನಮ್ಮ ಸ್ಕೂಲ್ ಡೇಯಲ್ಲಿ ಮಾಡುವ ಭಾಷಣದಂತೆಯೇ ಅಂದುಕೊಂಡವಳಾಗಿದ್ದೆ. ಆದರೂ, ರಾಜ್ಯದ 28,847 ಶಾಲೆಗಳಿಗೆ ಬೀಗ ಹಾಕುವ ನಿಮ್ಮದೊಂದು ಮಾತನ್ನು ಟಿವಿ, ಪತ್ರಿಕೆಯಲ್ಲಿ ನೋಡಿ ಗಾಬರಿಗೊಂಡೆ. ಅಂಥ ಅಪಾಯಕ್ಕೆ ಇಂದು ನನ್ನ ಶಾಲೆಯೇನು ಸಿಲುಕಿಲ್ಲ ಎನ್ನುವುದು ಹೆಮ್ಮೆಯ ವಿಚಾರವೇಯಾದರೂ, ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಮಕ್ಕಳಿಲ್ಲದ ಬೇರೆ ಶಾಲೆಗಳಿಗೆ ಬಾಗಿಲು ಹಾಕುವ ಸರ್ಕಾರದ ಚಿಂತನೆ ನನಗೆ ಆತಂಕವನ್ನುಂಟುಮಾಡಿತು.
ಶಾಲೆಗೆ ಶಾಶ್ವತವಾಗಿ ಹಾಗೆ ಬೀಗ ಹಾಕುವುದನ್ನು ಕಲ್ಪಿಸಿಕೊಳ್ಳುವುದೇ ನನಗೆ ಕಷ್ಟವಾಯಿತು. ಇದಕ್ಕೆ ಕಾರಣವೂ ಇದೆ. ನಾಲ್ಕು ವರ್ಷದ ಹಿಂದೆ ನಮ್ಮ ಊರಿನಲ್ಲಿ ಇದೇ ಆತಂಕವಿತ್ತು. “ಅಕ್ಲಾಪುರ ಶಾಲೆಯಲ್ಲಿ ಮಕ್ಕಳೇ ಇಲ್ವಂತೆ, ಸದ್ಯದಲ್ಲೇ ಸ್ಕೂಲ್ ಮುಚಾ¤ರಂತೆ’ ಎನ್ನುತ್ತಿದ್ದರು ಜನ. ಮೇಷ್ಟ್ರ ಮುಖಗಳೂ ಬಾಡಿದ್ದವು. ಹೋದಲ್ಲಿ ಬಂದಲ್ಲಿ ಊರಿನವರೆಲ್ಲರೂ ಹಾಗೆ ಹೇಳುವಾಗ, ಇದೇ ಶಾಲೆಯಲ್ಲಿ ಓದುತ್ತಿದ್ದ ನನಗೆ ಭಯ ತರಿಸಿತ್ತು. ಇಲ್ಲಿ ಮುಚ್ಚಿದರೆ ಬೇರೆ ಊರಿಗೆ ಮತ್ತೆ ಕಾಡುಹಾದಿಯಲ್ಲಿ ಐದು ಕಿ.ಮೀ. ನಡೆದು ಹೋಗಬೇಕಿತ್ತು. ಅಪ್ಪ- ಅಮ್ಮನಿಗೂ ಈ ವಿಚಾರ ನಿದ್ದೆಗೆಡುವಂತೆ ಮಾಡಿತ್ತು. ಪೇಟೆಯ ಸಂಬಂಧಿಕರ ಮನೆಯಲ್ಲಿ ಇವಳನ್ನು ಬಿಡೋಣವೆಂದು ಮಾತಾಡಿಕೊಂಡಾಗ ಅತ್ತೇಬಿಟ್ಟಿದ್ದೆ.
ಈ ಬೆನ್ನಲ್ಲೇ ನನ್ನ ಊರಿನಿಂದ ಕಾನ್ವೆಂಟಿಗೆ ಹೋಗುವ ಮಕ್ಕಳು, ಅವರ ಶಾಲೆಯ ವೈಭವವನ್ನು ಹೇಳಿ ನನ್ನನ್ನು ಸಣ್ಣಗಾಗಿಸುತ್ತಿದ್ದರು. ನಮ್ಗೆ ಇಂಗ್ಲಿಷ್ ಚೆನ್ನಾಗಿ ಹೇಳಿಕೊಡ್ತಾರೆ ಅಂತ, ಹೇಳುತ್ತಲೇ ನಾಲ್ಕಾರು ಇಂಗ್ಲಿಷ್ ಸಾಲು ಹೇಳಿ, ನನ್ನ ಬಾಯಿ ಮುಚ್ಚಿಸುತ್ತಿದ್ದರು. ಶಾಲೆಯ ಕಂಪ್ಯೂಟರಿನಲ್ಲಿ ಅವರೆಲ್ಲ ಸೌರವ್ಯೂಹ ನೋಡಿದ್ದು, ರೊಂಯ್ಯನೆ ತಿರುಗುವ ಗ್ರಹಗಳ ವಿಡಿಯೋ ಕಂಡಿದ್ದನ್ನೆಲ್ಲ ಬಹಳ ಜಂಭದಲ್ಲಿ ಹೇಳುತ್ತಿದ್ದರು. ಅವರು ಹೇಳಿದ್ದು ನೆನಪಾದಾಗಲೆಲ್ಲ, ನನ್ನ ಶಾಲೆಯ ಕಿಟಕಿಯಾಚೆಗೆ ಮುಖ ಮಾಡಿ, ಆ ದುಃಖವನ್ನು ಮರೆಯಲೆತ್ನಿಸುತ್ತಿದ್ದೆ. “ನನ್ನ ಶಾಲೆಯೂ ಅವರ ಶಾಲೆಯಂತೆ ಗ್ರೇಟ್ ಆಗೋದ್ಯಾವಾಗ?’ ಅಂತ ಮೇಷ್ಟ್ರನ್ನು ಕೇಳುತ್ತಿದ್ದೆ.
ಬಾಗಿಲು ಮುಚ್ಚುವ ಭಯದಲ್ಲಿದ್ದ ನನ್ನ ಶಾಲೆಗೆ ಅತ್ಯುತ್ತಮ ಶಿಕ್ಷಕರುಗಳೇ ಬಂದರು. ನಗುನಗುತ್ತಾ ಅವರು ಹೇಳುವ ಸರಳಪಾಠ, ಸರ್ಕಾರ ಕೊಟ್ಟ ಸೌಲಭ್ಯಗಳಲ್ಲೇ ಪ್ರಯೋಗಾತ್ಮಕವಾಗಿ ಅವರು ಪಾಠ ತಿಳಿಸುವ ವಿಧಾನ ಎಲ್ಲರಿಗೂ ಇಷ್ಟವಾಯಿತು. ಹಸಿದ ಹೊಟ್ಟೆಗೆ ಕೂಡುವ ಬಿಸಿಯೂಟವೂ ಗುಣಮಟ್ಟದಲ್ಲೇ ಸಿಕ್ಕಿತು. ಕ್ರೀಡಾಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮುಂದೆ ಬಂದೆವು. ನಮ ಶಿಕ್ಷಕರು ಇಂಗ್ಲಿಷನ್ನೂ ಚೆನ್ನಾಗಿ ಹೇಳಿಕೊಡುತ್ತಾರೆ. ಇಲ್ಲಿಂದ ಪಾಸಾಗಿ ಹೋಗಿ ಸಿಟಿಗೆ ಸೇರಿದ ಮಕ್ಕಳ ಮೇಲೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಇದನ್ನೆಲ್ಲ ನೋಡಿ, ನಮ್ಮೂರಿನ ಬಹುತೇಕ ಜನ ಕಾನ್ವೆಂಟಿಗೆ ಮಕ್ಕಳನ್ನು ಕಳಿಸುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ನನ್ನ ಶಾಲೆಗೇ ಅವರನ್ನೆಲ್ಲ ಕಳಿಸುತ್ತಿದ್ದಾರೆ. ಶಾಲೆಯಲ್ಲಿ ಕಂಪ್ಯೂಟರ್ ಇಲ್ಲದೇ ಇದ್ದರೂ, ಇಂದು ನಾವು ಯಾವ ವಿಚಾರದಲ್ಲೂ ಹಿಂದುಳಿದಿಲ್ಲ.
ಬಹುಶಃ ನೀವು ಮುಚ್ಚಲು ಹೊರಟಿರುವ ಶಾಲೆಗಳಲ್ಲೂ ಮುಂದೆ ಇಂಥದ್ದೊಂದು ಪವಾಡ ಆಗಬಹುದೇನೋ ಎನ್ನುವ ನಂಬಿಕೆ ನನ್ನದು. ಸರ್ಕಾರ ಗುಣಮಟ್ಟದ ಸೌಲಭ್ಯವನ್ನೇ ಕೊಡುತ್ತಿದೆ, ನಮ್ಮ ಊರಿನ ಪೋಷಕರಂತೆ ಬೇರೆ ಪೋಷಕರು ಮನಸ್ಸು ಬದಲಾಗಬೇಕಷ್ಟೇ. ಅದಕ್ಕಾಗಿ ಒಳ್ಳೆಯ ಯೋಜನೆ ಕೈಗೊಳ್ಳಿ. ಬೀಗ ಹಾಕುವ ಮುನ್ನ, ಆ ಶಾಲೆಯ ಶಿಕ್ಷಕರಿಗೆ ಒಂದೇ ಒಂದು ಅವಕಾಶ ಕೊಡಿ ಎನ್ನುವುದು ನನ್ನ ವಿನಂತಿ.
ನಿಮ್ಮ ಪ್ರೀತಿಯ
ಅನನ್ಯ ಎಚ್.ಎಸ್.
7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಕ್ಲಾಪುರ, ತೀರ್ಥಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ