ಧರ್ಮ ಸೂಕ್ಷ್ಮ
Team Udayavani, Feb 11, 2020, 4:36 AM IST
ಗೊಟಿಂಗೆನ್ ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದ ಡೇವಿಡ್ ಹಿಲ್ಬರ್ಟ್, ಜಗತ್ತು ಕಂಡ ಅತ್ಯಂತ ಮೇಧಾವಿ ಗಣಿತಜ್ಞರಲ್ಲೊಬ್ಬ. ಆದರೆ, ಅವನಿಗೆ ಎಂಜನಿಯರುಗಳನ್ನು ಕಂಡರೆ ಅಷ್ಟಕ್ಕಷ್ಟೆ. ಅವರದೇನಿದ್ದರೂ ಎರಡನೇ ದರ್ಜೆಯ ಬುದ್ಧಿ ಮತ್ತೆ; ಶುದ್ಧ ವಿಜ್ಞಾನದಲ್ಲಿ ನಮ್ಮಂಥವರು ತೆಗೆದ ಫಲಿತಾಂಶಗಳನ್ನು ಅನ್ವಯಿಸಿ ಯಂತ್ರ ತಯಾರಿಸುವುದಷ್ಟೇ ಅವರ ಕೆಲಸ ಎಂಬ ಅಭಿಪ್ರಾಯ ಅವನದ್ದು. ಒಮ್ಮೆ ಹಿಲ್ಬರ್ಟ್ಗೆ ಒಂದು ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ಆಮಂತ್ರಣ ಬಂತು. ಅದನ್ನು ಹಿಲ್ಬರ್ಟ್ ಒಪ್ಪಿಯೂ ಆಗಿತ್ತು. ಆದರೆ, ಆಯೋಜಕರಿಗೆ ಹಿಲ್ಬರ್ಟ್ನ ಅಭಿಪ್ರಾಯಗಳ ಬಗ್ಗೆ ನಂತರ ತಿಳಿಯಿತು. ಅದು ಎಂಜಿನಿಯರ್ಗಳನ್ನೇ ಉದ್ದೇಶಿಸಿ ಮಾತನಾಡಬೇಕಿದ್ದ ಸಮಾವೇಶವಾದ್ದರಿಂದ, ಹಿಲ್ಬರ್ಟ್ ಎಂಜಿನಿಯರ್ಗಳನ್ನು ಹೀಯಾಳಿಸಿ ಮಾತಾಡಿ ಒಂದು ದೊಡ್ಡ ಸಮಸ್ಯೆ ಸೃಷ್ಟಿಸುತ್ತಾನೆನ್ನುವುದು ಅವರಿಗೆ ಖಾತ್ರಿಯಾಯಿತು. ಅವರು ಕೂಡಲೇ ಅವನನ್ನು ಭೇಟಿಯಾಗಲು ಹೋದರು.
ಉಭಯ ಕುಶಲೋಪರಿಯ ಮಾತುಕತೆಯಲ್ಲ ಆದ ಮೇಲೆ, ಅವರಿಗೆ ಈ ವಿಚಾರವನ್ನು ಹೇಗೆ ಎತ್ತಬೇಕೋ ತಿಳಿಯಲಿಲ್ಲ. ತುಂಬ ಮುಜುಗರದಿಂದ, “ಹಿಲ್ಬರ್ಟ್ ಅವರೇ, ನೀವು ಸಮಾವೇಶಕ್ಕೆ ಭಾಷಣಕರಾನಾಗಿ ಬರುವುದು ಬಹಳ ಸಂತೋಷ. ಆದರೆ, ಅಲ್ಲಿ ತುಂಬ ಜನ ಎಂಜಿನಿಯರ್ಗಳೇ ಇರುತ್ತಾರೆ. ಆದ್ದರಿಂದ ನಿಮ್ಮ ಅಭಿಪ್ರಾಯ ಬದಲಿಸಬೇಕೆಂದು ಹೇಳುತ್ತಿಲ್ಲ…’ ಎಂದು ಏನೇನೋ ಪಟ್ಟು ಹಾಕಿ ಹೇಳುತ್ತಿದ್ದರು. ಹಿಲ್ಬರ್ಟ್ಗೆ ಇದೆಲ್ಲ ಅರ್ಥವಾಯಿತು. ಕೂಡಲೇ ಅವನು, ” ಇದನ್ನು ಹೇಳಲು ಮುಜುಗರವೇಕೆ? ನಾನು ಮಾತಾಡುವುದು ಗಣಿತದ ಮೇಲೆ. ಅದರ ಅಲ್ಪಾಂಶವಾದರೂ ಎಂಜಿನಿಯರ್ಗಳಂತ ಮಂದ ಬುದ್ಧಿಗಳಿಗೆ ಅರ್ಥವಾಗುವುದು ಅನುಮಾನ. ಹೀಗಿರುವಾಗ ಅದನ್ನು ಅರ್ಥೈಸಿಕೊಂಡು ಅವರು ಕೆರಳುವುದು ದೂರದ ಮಾತು ಎಂದ.