ನಾಲ್ಕು ಹೆಜ್ಜೆ ಮುಂದಾಗಿದೆ…
Team Udayavani, Feb 25, 2020, 5:15 AM IST
“ಈ ಮನಸ್ಸು ಯಾಕೆ ಹೀಗಾಡುತ್ತೆ ?
ನೀನು ಎದುರಿಗಿದ್ದರೆ ಹುಸಿಮುನಿಸು ತೋರುತ್ತೆ, ಅದೇ ನಾಲ್ಕು ದಿನ ಕೆಲಸದ ಮೇಲೆ ಬೇರೆ ಊರಿಗೆ ಹೋದರೆ ವಿಲವಿಲ ಒದ್ದಾಡುತ್ತೆ. ನೀನು ಕರೆಗೆ ಸಿಗದಿದ್ದರೆ ಸಿಟ್ಟು, ಮೆಸೇಜ್ ಗೆ ಉತ್ತರಿಸದಿದ್ದರೆ ಆತಂಕ. ನಿನ್ನ ಮೊಬೈಲ್ ಸ್ವಿಚ್ ಆಫ್ ಅಂತ ಬಂದರಂತೂ ಕಾಣದ ಗಾಬರಿ; ಇದೆಲ್ಲಾ ನಿನ್ನನ್ನು ಮತ್ತೆ ಕಾಣುವತನಕ ಮಾತ್ರ. ಮತ್ತೆ ಬ್ಯಾಕ್ ಟು ಸ್ಟ್ರೈಟ್ ಒನ್. ಯಾಕಾದ್ರೂ ಇವಳಿಗೆ ಮರುಳಾದೆನೋ ಅನ್ನಿಸುವಷ್ಟು ವಟಗುಟ್ಟುತ್ತಾ ಇರ್ತೀನಿ. ನಿನ್ನಲ್ಲಿ ಎಲ್ಲ ವಿಚಾರ ಹಂಚಿಕೊಂಡರೇನೇ ನನಗೆ ನಿರಾಳ. ಅವುಗಳಲ್ಲಿ ಹೇಳಿಕೊಳ್ಳಬಹುದಾದದ್ದು, ನಿನಗೆ ಆಸಕ್ತಿಯೇ ತಾರದೆ ಬೋರ್ ಹೊಡಿಸುವಂತಹುದ್ದು. ಎಲ್ಲಾ ಇರುತ್ತೆ ಏಕೆಂದರೆ, ನಾನು ನಿನ್ನ ಮಟ್ಟಿಗೆ ತೆರೆದ ಪುಸ್ತಕ!
ಅಂದಹಾಗೆ, ಮೊನ್ನೆ ಅಕ್ಕನ್ನ ನೋಡೋಕ್ಕೆ ಬಂದ ಸಾಫ್ಟ್ವೇರ್ ಹುಡುಗ ಒಪ್ಪಿದ್ದಾನೆ. ‘ನನಗಂತೂ ಖಂಡಿತ ಅಂತಹವನು ಬೇಡ ಕಾಲೇಜ್ ಲೆಕ್ಚರರ್ ಆದರೆ ಸಾಕು’ ಅಂತ ಇಂಡೈರೆಕ್ಟಾಗಿ ನನ್ನ ಆಯ್ಕೆ ಕುರಿತು ಹಿಂಟ್ ಕೊಟ್ಟಿದ್ದೀನಿ. ಹೆಚ್ಚು ಟೆನ್ಷನ್ ಇಲ್ಲದ, ಬೇಕಾದಷ್ಟು ರಜ ಇರೋ ಆ ವೃತ್ತಿಯಲ್ಲಿರೋ ನೀನೇ ನನ್ನ ರಾಜಕುಮಾರ ಅಂತ ಅಕ್ಕನಿಗೆ ಗೊತ್ತು- ಹೇಗೋ ಆಗುತ್ತೆ ಅನ್ನೋ ಭರವಸೆ. ಆದರೂ, ನಾನು ಎಷ್ಟು ಬಾರಿ ಹೇಗೆಲ್ಲಾ ನನ್ನ ಪ್ರೀತೀನ ತೋಡಿಕೊಂಡರೂ ನೀನು ಕೂಲ್ ಆಗಿ ಇರ್ತಿದ್ದೆ. ಆಗ ಕಳವಳ ಶುರುವಾಗುತ್ತಿತ್ತು. ನನ್ನದು ಒನ್ ಸೈಡೆಡ್ ಲವ್ ಆಗಿದೆಯಾ ಅಂತ. ಹಾಗೇನಾದ್ರೂ ಆಗಿದ್ರೆ ಹೇಳಿಬಿಡು ಆ ಭ್ರಮಾಲೋಕದಿಂದ ಹೊರಗೆ ಬರ್ತೀನಿ… ಹೀಗೆಲ್ಲಾ ಟೈಪ್ ಮಾಡಿ ಅವನಿಗೆ ವಾಟ್ಸಪ್ ಮೆಸೇಜು ಕಳಿಸಿಯೇ ಬಿಟ್ಟಳು. ಮೂರು ನಿಮಿಷ ಕಳೆಯುವದರೊಳಗೆ ಮೊಬೈಲ್ ಬೀಪ್ ಬೀಪ್ ಸದ್ದು ಹೊರಡಿಸಿತು. ಅವನದೇ ರಿಪ್ಲೆ„ ಅಂದುಕೊಳ್ಳುತ್ತಾ ನೋಡಿದಳು’.
“ಪ್ರೀತೀಲಿ ನಾಲ್ಕ… ಹೆಜ್ಜೆ ಮುಂದಾಗಿದೆ. ನನ್ನ ರಾಣಿಯಾಗೋಕ್ಕೆ ಇನ್ನು ಎರಡು ತಿಂಗಳು ಕಾಯಬೇಕು. ಅಲ್ಲಿಯವರೆಗೆ ಅಡ್ಡಿಯಿಲ್ಲ, ನೀನು ಆ ಲೋಕದಲ್ಲೇ ವಿಹರಿಸಬಹುದು’
ಆ ಉತ್ತರ ಅವಳ ದುಗುಡವನ್ನು ಕ್ಷಣಮಾತ್ರದಲ್ಲಿ ಕರಗಿಸಿತ್ತು.
ಕೆ.ವಿ. ರಾಜಲಕ್ಷ್ಮೀ