ದೇಶ ಕಾಯುವ ಮಾಂತ್ರಿಕ


Team Udayavani, Jan 6, 2018, 3:12 PM IST

90.jpg

ದೇಶದ ಗಡಿಯಲ್ಲಿ, ಪ್ರತಿಕೂಲ ವಾತಾವರಣದ ನಡುವೆ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ದೇಶವನ್ನು ಕಾಯುವ ಸೈನಿಕನಿಗೆ ಅಭಯ ನೀಡುತ್ತಿರುವ, ಸ್ಫೂರ್ತಿಯನ್ನು ತುಂಬುತ್ತಿರುವ ಶಕ್ತಿ ಸ್ಥಳಗಳು ಹಲವು. ಇದು ಅವುಗಳಲ್ಲೊಂದು. ಹಿಮದಿಂದಾವೃತ, ಮರಗಟ್ಟಿಸುವ ಈ ಶೀತಲ ಗಡಿ ಪ್ರದೇಶದಲ್ಲಿದೆ ಈ ಬಾಬಾ ಮಂದಿರ. ತಮ್ಮನ್ನು ಮತ್ತು ದೇಶದ ಗಡಿಯನ್ನು ಬಾಬಾ ಅವರ ಆತ್ಮ ಕಾಯುತ್ತಿದೆ ಎಂದು ಸೈನಿಕರು ನಂಬುತ್ತಾರೆ. ಆ ಬಾಬಾನ ಸನ್ನಿಧಾನದ ತಾಜಾ ಚಿತ್ರಣವಿದು….

ಮರಗಟ್ಟಿಸುವಂಥ ಶೀತಲ ಪ್ರದೇಶ ನಾಥುಲಾ ಪಾಸ್‌. ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಕ್‌ ಬಳಿ, ಇಂಡೋ ಚೀನಾ ಗಡಿ ಪ್ರದೇಶದಲ್ಲಿದೆ ಈ ಜಾಗ. ಕಣಿವೆ, ಬೆಟ್ಟ ಗುಡ್ಡಗಳಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ಆಗಿಂದ್ದಾಗ್ಗೆ ಹಿಮಪಾತದಿಂದಾಗಿ ರಸ್ತೆಸಂಚಾರ ಕಡಿತಗೊಳ್ಳುವುದು ತುಂಬಾ ಸಾಮಾನ್ಯವಾದ ಸಂಗತಿ. ದಾರಿಯುದ್ದಕ್ಕೂ ಭಾರತೀಯ ಸೇನಾ ನೆಲೆಗಳನ್ನು ಕಾಣಬಹುದು. “ಈ ಪ್ರದೇಶ ಚೀನೀ ಸೈನಿಕರ ಕಣ್ಗಾವಲಿಗೊಳಪಟ್ಟಿದೆ.’ ಎಂಬ ರಸ್ತೆ ಬದಿಯ ಫ‌ಲಕ ಮೈ ಜುಮ್ಮೆನ್ನಿಸುತ್ತೆ. ಇಂಥ ಸೇನಾ ಪ್ರದೇಶದಲ್ಲಿ ಒಂದು ಬಾಬಾ ಮಂದಿರವಿದೆ ಎಂದರೆ ಎಂಥವರಿಗಾದರೂ ಆಶ್ಚರ್ಯವಾಗುವುದು ಸಹಜ. ಈ ಪ್ರದೇಶವನ್ನು ಬಾಬಾ ಅವರ ಆತ್ಮ ಕಾಯುತ್ತಿದೆ ಎಂಬ ನಂಬಿಕೆ ಇಲ್ಲಿನ ಸೈನಿಕರದು.

ಯಾರೀ ಬಾಬಾ?
ಈ ಮಂದಿರ ಬಾಬಾ ಹರ್ಭಜನ್‌ ಅವರದ್ದು. ಅವರ ಹೆಸರಲ್ಲೇ ಮಂದಿರ ಕಟ್ಟಿಸಿದ್ದಾರೆಂದರೆ ಅವರು ಸನ್ಯಾಸಿಯೇ ಆಗಿರಬೇಕು ಎಂದು ಕೆಲವರು ತಿಳಿಯಬಹುದು. ಆದರೆ, ಅವರು ಭಾರತೀಯ ಸೇನೆಯಲ್ಲಿ ಸೈನಿಕರಾಗಿದ್ದರು! ಮೂಲತಃ ಪಂಜಾಬಿನರವಾರ ಹರ್ಭಜನ್‌ ಅವರು ಪಂಜಾಬ್‌ ರೆಜಿಮೆಂಟಿನಲ್ಲಿ ಕೆಲಸ ಮಾಡುತ್ತಿದ್ದರು. 60ರ ದಶಕದಲ್ಲಿ ಗಡಿಯಲ್ಲಿ, ನಾಥುಲಾ ಪಾಸ್‌ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಪ್ರಾಣ ಕಳೆದುಕೊಂಡರು. ಆಗ ಅವರಿಗೆ 27 ವರ್ಷ ವಯಸ್ಸು. ಸೈನಿಕರಾಗಿದ್ದ ಹರ್ಭಜನ್‌ ಸಿಂಗ್‌ ಅವರು ಬಾಬಾ ಆಗಿದ್ದರ ಹಿಂದೆ ಕುತೂಹಲಕರ ಕಥೆಯಿದೆ. 

ಕನಸಿನಲ್ಲಿ ಬಂದ ಬಾಬಾ
ಹರ್ಭಜನ್‌ ಕಣ್ಮರೆಯಾದ ಮೂರು ದಿನಗಳ ನಂತರ ಅವರ ದೇಹ ಪತ್ತೆಯಾಗಿತ್ತು. ಮಿಲಿಟರಿಯ ಸಕಲ ಗೌರವ ಮರ್ಯಾದೆಗಳೊಂದಿಗೆ ಅಂತ್ಯಸಂಸ್ಕಾರವೂ ನೆರವೇರಿತು. ಆಮೇಲೆಯೇ ಪವಾಡ ಶುರುವಾಗಿದ್ದು. ಸೈನಿಕನ ಕನಸಿನಲ್ಲಿ ಕಾಣಿಸಿಕೊಂಡರು ಬಾಬಾ. ಕೆಲ ದಿನಗಳು ಸುಮ್ಮನಿದ್ದ ಸೈನಿಕನಿಗೆ ಬಾಬಾರ ಕನಸು ಬೀಳುವುದು ಪುನರಾವರ್ತಿಸಿದಾಗ ಸಹವರ್ತಿಗಳೊಂದಿಗೆ ಹೇಳಿಕೊಂಡರು. ಆಗ ಒಂದು ತಿಳಿದು ಇಡೀ ರೆಜಿಮೆಂಟು ಬೆಚ್ಚಿ ಬಿದ್ದಿತ್ತು. ಬಹಳಷ್ಟು ಸೈನಿಕರಿಗೂ ಅದೇ ಅನುಭವವಾಗಿತ್ತು. ಕನಸಿನಲ್ಲಿ ಕಾಣಿಸಿಕೊಂಡ ಹರ್ಭಜನ್‌ ತಮಗಾಗಿ ಮಂದಿರವನ್ನು ಕಟ್ಟಿಸಬೇಕೆನ್ನುವ ಇರಾದೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ ಸಮೀಪದಲ್ಲೇ ಬಾಬಾ ಮಂದಿರವನ್ನು ಸೇನೆ ಕಟ್ಟಿಸಿತು.

ಅವರ ಆತ್ಮ, ದೇಶ ಕಾಯುತ್ತಿದೆ… 
ನಿಧನ ಹೊಂದಿದರೂ ಬಾಬಾ ಅವರಿಗೆ ದೇಶಪ್ರೇಮ ಒಂದಿಷ್ಟೂ ಕಡಿಮೆಯಾಗಿಲ್ಲ. ಗಡಿಯಲ್ಲಿ ಉದ್ವಿಘ್ನ ವಾತಾವರಣವಿದ್ದಾಗ ಮತ್ತು ಯುದ್ಧದ ಸಂದರ್ಭದಲ್ಲಿ ಬಾಬಾ ಸೈನಿಕರ ಕನಸಿನಲ್ಲಿ ಕಾಣಿಸಿಕೊಂಡು ಮುಂಚಿತವಾಗಿ ಅಪಾಯದ ವಿರುದ್ಧ ಎಚ್ಚರಿಕೆ ನೀಡುತ್ತಾರಂತೆ. ಒಂದು ಸ್ಫೂರ್ತಿಯಾಗಿ, ಪ್ರೇರಣೆಯಾಗಿ ಸೈನಿಕರಿಗೆ ಅಭಯ ನೀಡುತ್ತಿರುವ ಬಾಬಾ ಅವರ ರೋಮಾಂಚನ ಉಕ್ಕಿಸುವಂಥದ್ದು.

ಪ್ರಮೋಷನ್‌ ಕೊಟ್ಟಿದ್ದಾರೆ…
ಇವೆಲ್ಲಾ ನಂಬಿಕೆಗಳಿರುವುದರಿಂದ ಸೇನೆ ಕೂಡಾ ಅವರನ್ನು ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕನೆಂದೇ ಪರಿಗಣಿಸಿದೆ. ಅದು ಹೇಗೆ ಎಂದು ಕೇಳುತ್ತಿದ್ದೀರಾ? ಅವರಿಗಾಗಿ ಮಂದಿರ ಕಟ್ಟಿಸಿದ್ದಲ್ಲದೆ ಅವರಿಗೆ ಪ್ರಮೋಷನ್‌ ಅನ್ನು ನೀಡಿದೆ. ಅಲ್ಲದೆ ವರ್ಷಕ್ಕೊಂದು ಬಾರಿ ಅವರನ್ನು ಊರಿಗೆ ಕಳಿಸಿಕೊಡುತ್ತಾರೆ. ಬಾಬಾ ಅವರು ಕರ್ತವ್ಯದಲ್ಲಿದ್ದಾಗ ಪ್ರತಿ ಸೆಪ್ಟೆಂಬರ್‌ 14ಕ್ಕೆ ರೈಲಿನಲ್ಲಿ ಊರಿಗೆ ಹೋಗುತ್ತಿದ್ದರಂತೆ. ಅದಕ್ಕೇ ಅದೇ ದಿನಾಂಕದಂದು ಬಾಬಾ ಅವರ ಪೆಟ್ಟಿಗೆ, ಸಮವಸ್ತ್ರಗಳನ್ನು ರೈಲಿನಲ್ಲಿ ಊರಿಗೆ ಕಳಿಸಿಕೊಡಲಾಗುತ್ತಿತ್ತು. ಇದಕ್ಕಾಗಿ ಬಾಬಾ ಅವರ ಹೆಸರಿನಲ್ಲಿ ರೈಲ್ವೇ ಟಿಕೆಟ್‌ ಕೂಡಾ ಕಾಯ್ದಿರಿಸಲಾಗುತ್ತಿತ್ತು. ಈಗ ಅದನ್ನು ನಿಲ್ಲಿಸಲಾಗಿದೆ. ಯಾಕೆ ಗೊತ್ತಾ ಬಾಬಾ ಅವರಿಗೆ ನಿವೃತ್ತಿಯಾಗಿದೆ! 

ಬಾಬಾ ಬದುಕಿದ್ದಾರೆ!
ಮಂದಿರದಲ್ಲಿರುವ ಎರಡು ಕೊಠಡಿಗಳಲ್ಲೊಂದರಲ್ಲಿ ಬಾಬಾ ಹರ್ಭಜನ್‌ ಅವರ ದೇವಸ್ಥಾನವಿದೆ. ಅಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತದೆ. ಆ ಜಾಗದಲ್ಲಿ ನಿಯುಕ್ತಿಗೊಂಡ ಸೈನಿಕರೇ ಪೂಜೆಯನ್ನು ಮಾಡುತ್ತಾರೆ. ಆ ಸಂದರ್ಭದಲ್ಲಿ ಹಾಜರಿದ್ದ ಪ್ರವಾಸಿಗರಿಗೆ ಪ್ರಸಾದವನ್ನೂ ಹಂಚುತ್ತಾರೆ. ಅದರ ಪಕ್ಕದ ಕೊಠಡಿ ಹರ್ಭಜನ್‌ ಅವರದು. ಅಲ್ಲಿ ಅವರ ಇಸ್ತ್ರಿ ಹಾಕಿದ ಸಮವಸ್ತ್ರ, ಬೂಟು, ಟೇಬಲ್‌, ಪೆಟ್ಟಿಗೆ… ಹೀಗೆ ಅವರು ಬಳಸುತ್ತಿದ್ದ ವಸ್ತುಗಳನ್ನು ಇರಿಸಲಾಗಿದೆ. ಬೂಟುಗಳಿಗೆ ಪ್ರತಿದಿನ ಪಾಲಿಶ್‌ ಮಾಡಲಾಗುತ್ತೆ. ಬೆಳಿಗ್ಗೆ ಪಾಲಿಶ್‌ ಮಾಡಿದ ಶೂ ರಾತ್ರಿಯಾಗುವಷ್ಟರ ಹೊತ್ತಿಗೆ ಮಣ್ಣಾಗಿರುತ್ತದಂತೆ. ಹೀಗಾಗಿ ಬಾಬಾ ಹರ್ಭಜನ್‌ ಅದನ್ನು ಬಳಸುತ್ತಿರುವುದರಿಂದಲೇ ಮಣ್ಣಾಗುತ್ತೆ ಎಂಬ ಪ್ರತೀತಿಯಿದೆ. 

ದೇಶವನ್ನು ಕಾಯುವ ಸೈನಿಕರನ್ನೇ ಕಾಯುತ್ತಿವೆ ಎಂದು ನಂಬಲಾದ ಅನೇಕ ಮಂದಿರಗಳು ನಮ್ಮಲ್ಲಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಿದ್ದೇವೆ.

1. ಜೈಸಲ್ಮೇರಿನ ತನೋಟ್‌ ಮಾತಾ
ಈ ಮಂದಿರ ಭಾರತ- ಪಾಕ್‌ ಗಡಿಯಿಂದ 10 ಕಿ.ಮೀ ದೂರದಲ್ಲಿದೆಯಷ್ಟೆ. 1965ರಲ್ಲಿ ಭಾರತ ಪಾಕ್‌ ಯುದ್ಧವಾದಾಗ ಈ ದೇವಸ್ಥಾನವನ್ನು ಗುರಿಯಾಗಿಸಿ ಸುಮಾರು 3000 ಬಾಂಬುಗಳನ್ನು ಇದರ ಮೇಲೆ ಪ್ರಯೋಗಿಸಿತ್ತಂತೆ. ಆಶ್ಚರ್ಯವೆಂದರೆ ಇವ್ಯಾವುವೂ ಮಂದಿರಕ್ಕೆ ಹಾನಿ ಮಾಡುವಲ್ಲಿ ವಿಫ‌ಲವಾಗಿದ್ದು. ಹತ್ತಾರು ಬಾಂಬುಗಳಲ್ಲಿ ಒಂದಷ್ಟು ಮಿಸ್‌ ಆಗಿದ್ದರೆ ಸೋಜಿಗ ಪಡುವ ಅಗತ್ಯವಿರಲಿಲ್ಲವೇನೋ, ಆದರೆ 3,000 ಬಾಂಬುಗಳಲ್ಲಿ ಒಂದೂ ಹಾನಿ ಮಾಡಲಿಲ್ಲವೆನ್ನುವುದು ಸೋಜಿಗವಲ್ಲದೆ ಮತ್ತೇನು. ಯುದ್ಧ ಮುಗಿದ ನಂತರ ಪಾಕ್‌ ಜನರಲ್‌ ಈ ಜಾಗವನ್ನು ನೋಡುವ ಇಚ್ಛೆ ವ್ಯಕ್ತಪಡಿಸಿದರು. ಅವರಿಗೆ ಅನುಮತಿಯನ್ನೂ ನೀಡಲಾಗಿತ್ತು. ಅದಾದ ನಂತರ 1971ರಲ್ಲಿ ಮತ್ತೆ ಯುದ್ಧ ನಡೆದಾಗಲೂ ಪಾಕ್‌ಗೆ ದೇವಸ್ಥಾನದ ಹತ್ತಿರ ಸುಳಿಯಲು ಸಾಧ್ಯವಾಗಿರಲಿಲ್ಲ. ಆವತ್ತಿನಿಂದ ಸೇನೆ ಈ ಮಂದಿರ ಉಸ್ತುವಾರಿ ವಹಿಸಿಕೊಂಡಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರು ತನೋಟ್‌ ಮಾತಾ ರಕ್ಷಿಸುತ್ತಾಳೆ ಎಂದು ನಂಬುತ್ತಾರೆ. ಮಂದಿರದ ನೆಲದಲ್ಲಿರುವ ಮರಳನ್ನು ಹಣೆ ಮೇಲೆ ಉಜ್ಜಿಕೊಳ್ಳುತ್ತಾರೆ.

2. ಬಾಬಾ ಜಸ್ವಂತ್‌ ಸಿಂಗ್‌
ಇಂಡೋ ಚೀನಾ ಯುದ್ಧದಲ್ಲಿ ಅರುಣಾಚಲಪ್ರದೇಶದ ಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಸ್ವಂತ್‌ ಸಿಂಗ್‌ 10,000 ಅಡಿಗಳಷ್ಟು ಎತ್ತರದ ಶಿಖರದಲ್ಲಿ ನಿಂತು ಚೀನೀಯರ ವಿರುದ್ಧ ಪ್ರಬಲ ಹೋರಾಟ ನಡೆಸಿ ಮಡಿದಿದ್ದರು. ಮರಣದ ತರುವಾಯ ಮಹಾವೀರ ಚಕ್ರವನ್ನೂ ದಯಪಾಲಿಸಿತ್ತು. ಇವತ್ತಿಗೂ ಅವರು ನಮ್ಮ ನಡುವೆ ಇದ್ದಾರೆ ಎಂದು ಅದೇ “ಗಢ್‌ವಾಲ್‌’ ರೆಜಿಮಂಟಿನ ಸೈನಿಕರು ನಂಬುತ್ತಾರೆ. ಅವರ ನೆನಪಿನಲ್ಲಿ ಸೇನೆ ಒಂದು ಸ್ಮಾರಕವನ್ನು ಕಟ್ಟಿಸಿದೆ. ಅದನ್ನು ಮಂದಿರವೆಂಬಂತೆ ಸೈನಿಕರು ಪೂಜೆ ಸಲ್ಲಿಸಿ ಆ ಮಹಾ ವೀರನಿಗೆ ಇಂದಿಗೂ ಗೌರವ ಸಲ್ಲಿಸುತ್ತಿದ್ದಾರೆ.

3. ಸಿಯಾಚಿನ್‌ ಬಾಬಾ
ಜಗತ್ತಿನಲ್ಲೇ ಅತಿ ಎತ್ತರದ ಯುದ್ಧಭೂಮಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಸಿಯಾಚಿನ್‌ನಲ್ಲಿ ಕಾರ್ಯ ನಿರ್ವಹಿಸುವುದು ಎಷ್ಟು ಕಷ್ಟವೆನ್ನುವುದು ನಿಮ್ಮಲ್ಲನೇಕರಿಗೆ ತಿಳಿದೇ ಇರುತ್ತೆ. ಅಂಥ ದುರ್ಗಮ ಪ್ರದೇಶದಲ್ಲೂ ಒಂದು ಮಂದಿರವಿದೆ. ಒ.ಪಿ. ಬಾಬಾ ಅವರ ಮಂದಿರವದು. 1980ರ ಯುದ್ಧದಲ್ಲಿ ವಿರೋಧಿ ಪಾಳೆಯದ ಬಲ ಹೆಚ್ಚತೊಡಗಿದಾಗ ಭಾರತೀಯ ಸೈನಿಕರಿಗೆ ಹಿಮ್ಮೆಟ್ಟುವಂತೆ ಮೇಲಧಿಕಾರಿಗಳಿಂದ ಬುಲಾವ್‌ ಬರುತ್ತದೆ. ಆದರೆ, ಒಬ್ಬ ಸೈನಿಕ ಮಾತ್ರ ಹಿಡಿದ ಬಂದೂಕನ್ನು ಇಳಿಸದೆ ಶತ್ರುಗಳ ವಿರುದ್ಧ ಹೋರಾಟ ಮುಂದುವರಿಸಿ ಅಲ್ಲೇ ವೀರಮರಣವನ್ನಪ್ಪುತ್ತಾನೆ. ಆ ಸೈನಿಕನೇ ಒ.ಪಿ ಬಾಬಾ. ಅವರ ಸ್ಮರಣಾರ್ಥ ಕಟ್ಟಿಸಿರುವ ಮಂದಿರವೇ ಒ.ಪಿ. ಬಾಬಾ ಮಂದಿರ.

4. ಕಾರ್ಗಿಲ್‌ನಲ್ಲಿ ಅನಾಮಿಕ ಶಿವಭಕ್ತ
1971ರಲ್ಲಿ ಬಾರತ- ಪಾಕ್‌ ಯುದ್ಧದ ಸಮಯದಲ್ಲಿ, ಯುದ್ಧ ನಡೆಯುತ್ತಿದ್ದ ಕಾರ್ಗಿಲ್‌ ಕಣಿವೆ ಪ್ರದೇಶದ ಸಮೀಪದಲ್ಲೇ ವೃದ್ಧನೊಬ್ಬ ಗುಡಿಸಲು ಕಟ್ಟಿಕೊಂಡಿದ್ದ. ಶಿವಭಕ್ತನಾಗಿದ್ದ ಅವನು ಆ ಜಾಗದಿಂದ ಕದಲಲಿಲ್ಲ. ಗುಡಿಸಲು ಬಳಿ ಬೀಳುತ್ತಿದ್ದ ಶತ್ರುಗಳ ಬಾಂಬುಗಳು ಸ್ಫೋಟಗೊಳ್ಳುತ್ತಿರಲಿಲ್ಲವಂತೆ. ಅದನ್ನು ಅವನು ಕೈಯಾರೆ ಎತ್ತಿಕೊಂಡು ದೂರಕ್ಕೆ ಬಿಸಾಡಿದ ನಂತರವೇ ಅವು ಸ್ಫೋಟಗೊಳ್ಳುತ್ತಿದ್ದವಂತೆ. ಈ ಪವಾಡವನ್ನು ಗ್ರಾಮಸ್ಥರು ನೋಡಿದ್ದರು. 96ರಲ್ಲಿ ಆ ಮುದುಕನ ಗುಡಿಸಲಿದ್ದ ಜಾಗದಲ್ಲೇ ಮುಂದೆ “ಪ್ಲಾಟ್ಯೂ ನಾಥ್‌’ ಮಂದಿರವನ್ನು ಕಟ್ಟಿಸಲಾಯಿತು. ಇದಾದ ಮೂರೇ ವರ್ಷಗಳಲ್ಲಿ ಕಾರ್ಗಿಲ್‌ ಯುದ್ಧ ಶುರುವಾಗಿದ್ದು ಆಶ್ಚರ್ಯ!

 ಹರ್ಷವರ್ಧನ್‌ ಸುಳ್ಯ 

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.