ಪುಟ್ಟ ಊರಿನ ಹ್ಯಾರಿ ಪಾಟರ್
Team Udayavani, Aug 10, 2019, 5:00 AM IST
ಬಾಗಲಕೋಟೆಯ ಗುಳೇದಗುಡ್ಡದ ಬನ್ನಿಕಟ್ಟಿಯಲ್ಲಿ ನಾಗರ ಪಂಚಮಿ, ಐದು ದಿನ ಆಚರಣೆಗೊಳ್ಳುವ ಹಬ್ಬ. ಹದಿನೈದು ದಿನಗಳ ವರೆಗೆ ಜೋಕಾಲಿ ಆಡುತ್ತಾ, ಕಳೆಯುವ ಈ ಸುಖ, “ಸ್ವರ್ಗಕ್ಕೆ ಮೂರೇ ಮೆಟ್ಟಿಲು’ ಎನ್ನುವಷ್ಟು…
ಆಕಾಶಕ್ಕೆ ಕಾಲು ಮುಟ್ಟಿಸುವ ಕನಸು, ಭುವಿಯಿಂದ ಮೇಲಕ್ಕೆ ಜಿಗಿಯುವ ಸೊಗಸು. ಸುತ್ತಲೂ ನೆರೆದವರ ಚಪ್ಪಾಳೆ, ಶಿಳ್ಳೆಯ ಹಿಮ್ಮೇಳ. ಮುಗಿಲು ಮುಟ್ಟುವ ಹರ್ಷೋದ್ಗಾರ. ಒಂದು ಪುಟ್ಟ ಜೋಕಾಲಿ, ಗುಳೇದಗುಡ್ಡದ ಬನ್ನಿಕಟ್ಟಿ ಎಂಬ ಊರಿನಲ್ಲಿ ಕ್ಷಣಮಾತ್ರದಲ್ಲಿ ಸ್ವರ್ಗ ಸೃಷ್ಟಿಸುತ್ತಿದೆ. “ಅರೆ! ಮಕ್ಕಳಾಡುವ ಜೋಕಾಲಿಗೆ ಇಷ್ಟೆಲ್ಲ ವರ್ಣನೆ ಬೇಕಾ?’ ಎನ್ನುವ ಪ್ರಶ್ನೆಯೇ. ಹಾ, ನಿಮ್ಮ ಊಹೆ ತಪ್ಪು. ಇದು ದೊಡ್ಡವರೂ ಆಡುವ ಜೋಕಾಲಿ ಕತೆ.
ನಾಗರ ಪಂಚಮಿ! ಹೆಂಗಳೆಯರೆಲ್ಲ ನಾಗಪ್ಪನಿಗೆ ಹಾಲು ಎರೆದು, ಮನೆಮಂದಿಯೆಲ್ಲ ಅಂದು ಸಿಹಿ ಭಕ್ಷ್ಯ ಮಾಡಿ ಸವಿದರೆ, ಮುಗಿಯಿತು ಈ ಹಬ್ಬ. ಆದರೆ, ಗುಳೇದಗುಡ್ಡದ ಬನ್ನಿಕಟ್ಟಿಯಲ್ಲಿ ಜೋಕಾಲಿ ಆಡುವ ಆಟ, ಈ ಹಬ್ಬದಿಂದಲೇ ಚಾಲುಗೊಳ್ಳುತ್ತದೆ. ಊರಿನಲ್ಲಿ ರೂಢಿಗತವಾಗಿ ಬಂದಿರುವ ಈ ಆಟ, ಈಗಲೂ ಇಲ್ಲಿನ ಜನರನ್ನು ಭಕ್ತಿ ಲೋಕದಲ್ಲಿ ಜೀಕುವಂತೆ ಮಾಡಿದೆ. ಇಲ್ಲಿ ಮಹಿಳೆಯರೂ, ದೊಡ್ಡವರೂ ಜೋಕಾಲಿ ಆಡೋದನ್ನು, ಪುಟ್ಟ ಪುಟ್ಟ ಮಕ್ಕಳು ಕಣ್ ಕಣ್ಬಿಟ್ಟು ನೋಡುತ್ತಾ, ಊರಿನವರೆಲ್ಲ ಅದನ್ನು ಹುರಿದುಂಬಿಸುತ್ತಾ, ಚಪ್ಪಾಳೆ ಹೊಡೆಯುವುದನ್ನು ನೋಡುವುದೇ ಒಂದು ಸೊಗಸು.
ಜೀಕೋಣ ಬನ್ನಿ…
ಇಲ್ಲಿ ನಾಗರ ಪಂಚಮಿ ಒಂದು ದಿನವಲ್ಲ. ಬರೋಬ್ಬರಿ ಐದು ದಿನ! ಈ ಜೋಕಾಲಿ ಆಟವಂತೂ ಹದಿನೈದು ದಿನಗಳವರೆಗೆ ಇರುತ್ತದೆ. ಹಾಲೆರೆದ ಮಾರನೇ ದಿನ, ಹುತ್ತದ ಮಣ್ಣಿನಿಂದ ಸಿದ್ಧಮಾಡಿದ ನಾಗಪ್ಪನಿಗೆ ಹಾಲು ಎರೆಯುವುದು, ಕೊನೆಯ ದಿನ ವರ್ಷದ ತೊಡಕು ಆಚರಣೆ, ಇಲ್ಲಿನ ವಿಶೇಷ. ಅಂದು ಮನೆಯಲ್ಲಿ ಕುಳಿತು ಹರಟೆ, ಮೋಜಿನಾಟ, ಜೋಕಾಲಿ ಆಡುವುದು ರೂಢಿ.
ಆ ಮೋಜು, ಚೆಂದ
ಗುಳೇದಗುಡ್ಡದ ತ್ರಯಂಭಕೇಶ್ವರ ದೇವಸ್ಥಾನ ಮಂಡಳಿಯು ಪ್ರತಿವರ್ಷ ಗಾಣದ ಜೋಕಾಲಿ, ಮಂಗನ ಜೋಕಾಲಿ, ಭಾರ ಹೊರುವ (ನಮ್ಮ ಭಾರವನ್ನು ನಾವೇ ಹೊರುವ) ಜೋಕಾಲಿ… ಇತ್ಯಾದಿ ಮಾದರಿಯ ಜೋಕಾಲಿಗಳನ್ನು ಆಲದ ಮರಕ್ಕೆ ಕಟ್ಟಿ ಆಡುತ್ತಾರೆ. ಗರಿ ಗರಿಯಾದ ಸೀರೆ ಉಟ್ಟುಕೊಂಡ ಮಹಿಳೆಯರು ಜೀಕುವಾಗ, ಇಂದ್ರಲೋಕದಿಂದ ಧರೆಗಿಳಿವ ಸುಂದರಿಯರಂತೆ ತೋರುತ್ತಾರೆ.
ಇಂದಿನ ಆಧುನಿಕ ಸ್ಪರ್ಶದ ಉದ್ಯಾನಗಳಲ್ಲಿ ಹೀಗೆ ಹಗ್ಗ ಕಟ್ಟಿದ ಜೋಕಾಲಿಗಳೇ ಇಲ್ಲ. ಯಾಂತ್ರೀಕೃತವಾಗಿ ಜೀಕುವಾಗ, ಸರಪಳಿಯ ಸದ್ದೂ ಕಿವಿಗೇನೋ ಕಿರಿಕಿರಿ. ಜಾಯಿಂಟ್ ವ್ಹೀಲ್ಗಳಂತೂ ಭಯ ಹುಟ್ಟಿಸುವ ಯಂತ್ರದೈತ್ಯಗಳು. ಹಗ್ಗದ ಜೋಕಾಲಿಯ ಮುಂದೆ, ಇವುಗಳನ್ನೆಲ್ಲ ನಿವಾಳಿಸಿ ಎಸೆಯೋಣ ಎನ್ನುವ ಸಾತ್ವಿಕ ಸಿಹಿಕೋಪವೊಂದು ಅಲ್ಲೇ ಹುಟ್ಟಿದ್ದು ಸುಳ್ಳಲ್ಲ.
– ಪ್ರವೀಣರಾಜು ಸೊನ್ನದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ