ಬಕಾಸುರನಿಗೆ ಊಟ ಕೊಟ್ಟ ಊರು
Team Udayavani, Mar 14, 2020, 6:02 AM IST
ಚಿಕ್ಕಮಗಳೂರಿನಿಂದ 29 ಕಿ.ಮೀ. ದೂರವಿರುವ ಊರು, ಬೆಳವಾಡಿ. ಮಹಾಭಾರತದ ಕಾಲದಲ್ಲಿ ಇದು “ಏಕಚಕ್ರನಗರ’ ಆಗಿತ್ತು ಎಂದು ಹೇಳಲಾಗುತ್ತದೆ. ವನವಾಸದ ವೇಳೆ ಪಾಂಡವರು ಇಲ್ಲಿ ಕೆಲಕಾಲ ಕಳೆದಿದ್ದರು ಎನ್ನುವುದಕ್ಕೆ ಪೂರಕ ಕಥೆಗಳಿವೆ. ಏಕಚಕ್ರನಗರದ ಜನರನ್ನು ಹಿಂಸಿಸುತ್ತಿದ್ದ ಬಕಾಸುರನು ಇದೇ ಊರಿನಿಂದ ಎತ್ತಿನ ಬಂಡಿಗಳಲ್ಲಿ ಊಟವನ್ನು ತರಿಸಿಕೊಳ್ಳುತ್ತಿದ್ದನಂತೆ. ಭೀಮನು ಬಂಡಿಯಲ್ಲಿ ತಂದಿದ್ದ ಭಾರೀ ಭೋಜನವನ್ನು ತಾನೇ ತಿಂದು, ಬಕಾಸುರನನ್ನು ಇಲ್ಲಿಯೇ ಸಂಹರಿಸಿದನಂತೆ ಎಂದು ಪುರಾಣದ ಐತಿಹ್ಯ ಹೇಳುತ್ತದೆ. ಈಗಲೂ ಇಲ್ಲಿ ವರ್ಷಕ್ಕೊಮ್ಮೆ ಊರಿನ ಜನರು ಬಂಡಿಯಲ್ಲಿ ಅನ್ನ ಸಾಗಿಸಿ, ಊರಿನ ಆಚೆ ತೆರಳಿ, ಊಟ ಮಾಡುವ ಪ್ರತೀತಿ ಇದೆ. ಹೊಯ್ಸಳರ ಕಾಲದಲ್ಲಿ ಇದು ಜೈನಕೇಂದ್ರವಾಗಿತ್ತು. ಇಲ್ಲಿನ ಪ್ರಸಿದ್ಧ ವೀರನಾರಾಯಣ ದೇಗುಲವನ್ನು ನಿರ್ಮಿಸಿದ್ದು ಕೂಡ ಹೊಯ್ಸಳರೇ.
* ಶಾಂಭವಿ ಶ್ರೇಷ್ಠಿ, ಹೊರನಾಡು