ಭಾಮೆಯ ನೋಡಲು ತಾ ಬಂದ…
ಗಂಡಿನ ಕಡೆಯವರು ಬಂದಾಗ
Team Udayavani, Jan 8, 2020, 5:34 AM IST
ಒಂದು ಕಾಲವಿತ್ತು: ಆಗೆಲ್ಲ, ಗಂಡಿನ ಕಡೆಯವರು “ಹೆಣ್ಣು ನೋಡುವ ನೆಪದಲ್ಲಿ’ ದಿಢೀರ್ ಬಂದುಬಿಡುತ್ತಿದ್ದರು. ಅಂಥ ಸಂದರ್ಭಗಳಲ್ಲಿ, ಹೆಣ್ಣುಮಕ್ಕಳು ಗಡಿಬಿಡಿಯಲ್ಲಿ ರೆಡಿಯಾಗಿ, ಗಂಡಿನ ಕಡೆಯವರಿಗೆ ಕಾಫಿ-ಟೀ ಮತ್ತು “ದರ್ಶನ’ ನೀಡಬೇಕಿತ್ತು!ಈಗ, ಹೊಸ ವರ್ಷದ ಖುಷಿಯಲ್ಲಿ ತೇಲುತ್ತಲೇ ಹಳೆಯ ದಿನಗಳ ತಮಾಷೆಯ, ಮೋಜಿನ, ಸ್ವಾರಸ್ಯಕರ ಸಂದರ್ಭಗಳನ್ನು ಹಲವರು ನೆನಪಿಸಿಕೊಂಡಿದ್ದಾರೆ…
ಪರೀಕ್ಷೆ ಹಿಂದಿನ ದಿನ “ವಧು ಪರೀಕ್ಷೆ’
ನಾನಾಗ ಪದವಿ ಕೊನೆಯ ವರ್ಷದಲ್ಲಿದ್ದೆ. ವಾರ್ಷಿಕ ಪರೀಕ್ಷೆ ಹತ್ತಿರವಿತ್ತು. ಹೀಗಿದ್ದಾಗಲೇ, ಒಂದು ದಿನ ದಿಢೀರ್ ಅಂತ ನನ್ನ ದೊಡ್ಡಪ್ಪ ಬಂದರು ಮನೆಗೆ.
ಆಗಿದ್ದಿಷ್ಟೇ… ನಮ್ಮೂರಲ್ಲಿ ಶಾಲೆ ದೂರವೆಂದು, ನಾನು ದೊಡ್ಡಮ್ಮನ ಮನೆಯಲ್ಲಿದ್ದು ಓದಿದ್ದೆ. ಮಾಧ್ಯಮಿಕ ಶಾಲೆಯ ಓದನ್ನು ಅಲ್ಲಿ ಮುಗಿಸಿ ಹೈಸ್ಕೂಲಿಗೆ ಮನೆಗೆ ಬಂದಿದ್ದೆ. ಆಗೆಲ್ಲ ಶಾಲೆಗೆ ಸೇರಿಸುವಾಗ ಜಾತಕ ಕೊಟ್ಟರೆ ಸಾಕಿತ್ತು. ಈಗಿನಂತೆ ಜನ್ಮ ಪ್ರಮಾಣ ಪತ್ರ ಕೊಡುವುದಿರಲಿಲ್ಲ. ದೊಡ್ಡಪ್ಪನ ಮನೆಗೆ ಬಂಧುಗಳೊಬ್ಬರು ಬಂದು, “ನಮ್ಮ ಮಗನ ಮದುವೆ ಮಾಡುತ್ತೇವೆ. ಒಳ್ಳೆಯ ಹುಡುಗಿ ಇದ್ದರೆ ಹೇಳಿ’ ಎಂದರಂತೆ. ಹುಡುಗನ ವಿದ್ಯಾರ್ಹತೆ, ನೌಕರಿ ವಿಚಾರಿಸಿದ ದೊಡ್ಡಪ್ಪ, ತಮ್ಮ ಹತ್ತಿರವೇ ಇದ್ದ ನನ್ನ ಜಾತಕ ಕೊಟ್ಟು ವಿವರಿಸಿದರಂತೆ. ನಮ್ಮ ಮನೆಗೆ ಬಂದು ವಿಷಯ ಹೇಳಬೇಕೆನ್ನುವಷ್ಟರಲ್ಲಿ ಹುಡುಗನ ಕಡೆಯವರು, “ಜಾತಕ ಕೂಡಿ ಬಂದಿದೆ. ಹುಡುಗ ರಜೆ ಹಾಕಿ ಬಂದಿದ್ದಾನೆ. ಹುಡುಗಿ ನೋಡಲು ಇವತ್ತು ಬರ್ತಿದ್ದೇವೆ’ ಅಂತ ವಿಷಯ ತಿಳಿಸಿದ್ದರು. ಹಾಗಾಗಿ, ದೊಡ್ಡಪ್ಪ ಗಡಿಬಿಡಿಯಿಂದ ಬಂದಿದ್ದರು.
ಅಕ್ಕರೆಯಿಂದ ಬೆಳೆಸಿದ ದೊಡ್ಡಪ್ಪನನ್ನು ನೋಯಿಸಲೂ ಕಷ್ಟ. ಮದುವೆಯಾಗುವ ಇರಾದೆಯೂ ಇಲ್ಲ! ಇಬ್ಬಂದಿಗೆ ಸಿಲುಕುವಂತಾಯಿತು. ಅದಲ್ಲದೆ, ಬೆಳಗಾದರೆ ಪರೀಕ್ಷೆ! ಅಪ್ಪ-ಅಮ್ಮ, “ಬಂದವರನ್ನು ಅವಮಾನಿಸುವುದು ಬೇಡ. ಒಮ್ಮೆ ಬಂದುಹೋಗಲಿ. ಮುಂದಿನ ವಿಷಯ ಆಮೇಲೆ ಯೋಚಿಸುವ’ ಅಂದರು. ಒಳಗೊಳಗೇ ಧುಮುಗುಡುತ್ತಲೇ ವಧು ಪರೀಕ್ಷೆಗೆ ಸಿದ್ಧಳಾದೆ.
ಹುಡುಗ ಬಂದ. ನನ್ನ ಕಡೆಗೆ ತಿರುಗಿಯೂ ನೋಡಲಿಲ್ಲ. ಪರಿಚಯ ಮಾಡಿಕೊಟ್ಟಾಗಲೂ ಒಂದೂ ಮಾತಾಡಲಿಲ್ಲ. ವರ ಸಾಮ್ಯತೆ ಏನೇನೂ ಹೊಂದುವುದಿಲ್ಲವೆಂದು ಹಿರಿಯರಿಗೆ ಆಶಾಭಂಗವಾಯಿತು. ಮರುದಿನದ ಪರೀಕ್ಷೆಗೆ ಓದಲು ಅಡ್ಡಿಯಾಯಿತೆಂಬ ಕಸಿವಿಸಿ ಬಿಟ್ಟರೆ, ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಆ ದಿನವೇ, ಹುಡುಗಿ ಒಪ್ಪಿಗೆಯೆಂದು ತಿಳಿಸಿದರವರು. ಹುಡುಗಿ ಮುಂದೆ ಓದುವ ಹಂಬಲದಲ್ಲಿದ್ದಾಳೆ ಎಂಬ ವಿಷಯ ಹೇಳಿ ನಕಾರ ಸೂಚಿಸಿಬಿಟ್ಟರು ಹಿರಿಯರು. ಋಣಾನುಬಂಧ ಕೂಡಿ ಬರಲಿಲ್ಲ ಬಿಡಿ!
ಇತ್ತೀಚೆಗೆ ಮದುವೆ ಮನೆಯಲ್ಲಿ ಬಂಧುಗಳೊಬ್ಬರ ಮೂಲಕ ಒಂದು ಕುಟುಂಬದ ಪರಿಚಯವಾಯಿತು. ಗಮನಿಸಿದರೆ, ಅವರೇ ಆತ! ನನ್ನ ಮೊದಲ ವಧು ಪರೀಕ್ಷೆಗೆ ಬಂದ ಹುಡುಗ! ಪ್ರಪೋಸಲ್ ಬಂದವರೆಲ್ಲರನ್ನೂ ಮದುವೆಯಾಗಲು ಸಾಧ್ಯವಿಲ್ಲ. ಮದುವೆಗಳೆಲ್ಲವೂ ಸ್ವರ್ಗದಲ್ಲೇ ನಿಶ್ಚಿತವಂತೆ. ಅಂದಮೇಲೆ, ಎದುರಿಗೆ ಕಂಡರೆ ಮುಜುಗರವೇಕೆ? ಸ್ನೇಹದಿಂದಿರಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯ. ಅವರೀಗ ನಮ್ಮ ಕುಟುಂಬ ಮಿತ್ರರಲ್ಲಿ ಒಬ್ಬರು. ಅಂದಿನ ವಿಷಯವನ್ನೆಲ್ಲ ನೆನಪಿಸಿಕೊಂಡು ನಕ್ಕೆವು. ಒಂದೇ ದಿನದಲ್ಲಿ ಹತ್ತಾರು ವಧುಗಳನ್ನು ನೋಡಿ, ತಿಂಡಿ ತಿಂದು, ಮಾತೂ ಆಡದಷ್ಟು ಸುಸ್ತಾಗಿ ಹೋಗಿದ್ದನ್ನೂ ವಿವರಿಸಿದರು ಅವರು. ಎಲ್ಲ ವಧುಗಳನ್ನು ರಿಜೆಕ್ಟ್ ಮಾಡಿ ಬಂದವರನ್ನು, ಇಲ್ಲಿ ವಧುವೇ ರಿಜೆಕ್ಟ್ ಮಾಡಿದ್ದಳು!
ಆ ತಪ್ಪಿಗೆ ಈಗ ಅವರ ವೈದ್ಯೆ ಮಗಳಿಗೆ ಗಂಡು ಹುಡುಕುತ್ತಿರುವೆ!
-ಸುಮನಾ ಮಂಜುನಾಥ್
ನಾನು ನೋಡಿದ್ದ ವರನನ್ನಲ್ಲ…
ಪದವಿಯ ಮೊದಲ ವರ್ಷದಲಿದ್ದೆ. ಅಪ್ಪ ಒಂದಿನ ಹಾಸ್ಟೆಲ್ನಿಂದ ಕರಕೊಂಡು ಬಂದು, ನಾಳೆ ಗಂಡಿನವರು ಬರ್ತಾರೆ ಅಂದರು! ನನಗೆ ಮದುವೆಯಾ..? ಅಚ್ಚರಿ ಮತ್ತು ವಯೋಸಹಜ ಕುತೂಹಲ. ಜೊತೆಗೆ, ಹತ್ತರಲ್ಲಿ ಫಸ್ಟ್ ಕ್ಲಾಸ್ನಲ್ಲಿ ಪಾಸಾದ ತಪ್ಪಿಗೆ ಸೈನ್ಸ್ ತಗೊಂಡು ನನ್ನ ತಲೆಗೆ ಹತ್ತದ ಟ್ರಿಗ್ನಾಮೆಟ್ರಿ ನೆನಪಾಗಿ, ಮದುವೆಯೂ ಓಕೆಯೇ ಅನಿಸಿದ್ದು ಮಾತ್ರ ಈಗಲೂ ಆಶ್ಚರ್ಯವೇ.
ಅದು ಮೊದಲ ವಧು ಪರೀಕ್ಷೆ…
ನನ್ನದೂ ಅಂತ ಒಂದು ಸೀರೆಯಾಗಲಿ, ಕುಪ್ಪಸವಾಗಲಿ ಇರದ ಹೊತ್ತು. ಅಮ್ಮನ ಗುಲಾಬಿ ಬಣ್ಣದ ಹತ್ತಿಯ ಸೀರೆಗೆ ಅಮ್ಮನದೇ ಬ್ಲೌಸ್ಗೆ ಪಿನ್ನು ಹಾಕಿ ಚಿಕ್ಕದು ಮಾಡಿಕೊಂಡು ರೆಡಿಯಾದೆ.
ಬಂದ ಗಂಡಿನವರು ಅಪ್ಪನ ಜೊತೆಗೆ ಲೋಕಾಭಿರಾಮ ಮಾತಾಡುವ ಹೊತ್ತಲ್ಲೇ, ಅಮ್ಮ ಶರಬತ್ತು ಕೊಟ್ಟು ಕಳಿಸಿದಳು.. ನಂಗೇನೂ ಭಯವಾಗಲಿ, ಕುತೂಹಲವಾಗಲಿ ಇರದಿದ್ರೂ ಸೈನ್ ಥೀಟಾ ,ಕಾಸ್ ಥೀಟಾಗಳು ಕಣ್ಣೆದುರು ಕುಣಿದು ಗಾಬರಿಯಾದೆ. ಅಪ್ಪನಿಗೆ ಜ್ಯೂಸ್ ಕೊಟ್ಟವಳು, ಪಕ್ಕದಲಿದ್ದ ಕಪ್ಪು ಹುಡುಗನ ಕಡೆಗೂ ಟ್ರೇ ಹಿಡಿದೆ. ಅವನು ನನ್ನ ನೋಡಿದ.
ನಾನೇನೂ ಆಸಕ್ತಿ ತೋರಲಿಲ್ಲ. ಮೂರನೆಯವರು ಗಂಡಿನ ತಂದೆ. ಅವರು ಕನ್ನಡಕ ತೆಗೆದು ಒಮ್ಮೆ ಮುಖ ನೋಡಿದವರು, ಮತ್ತೆ ಕನ್ನಡಕ ಧರಿಸಿ ಮೇಲಿಂದ ಕೆಳಗಿನವರೆಗೂ ನೋಡಿದರು. ಮೊದಲೇ ಗುಂಡುಗುಂಡಗಿದ್ದ ನನಗೆ ಮುಜುಗರ.ಏನಾದರೂ ಕಾಣ್ತಿದೆಯಾ ಎನುವ ಅನುಮಾನ..
ಆದಾದ ಮೇಲೆ ಕುಳಿತಿದ್ದವರು, ಆ ಹಸಿರು ಅಂಗಿಯವ..ಚೆಲುವ…ಬೆಳ್ಳಗೆ ಎತ್ತರಕ್ಕಿದ್ದರು. ಸಹಜವಾಗಿ ಒಮ್ಮೆ ನೋಡಿ ಜ್ಯೂಸು ತೆಗೆದುಕೊಂಡರು. ನಾನೂ ನೋಡಿದೆ. ಅಬ್ಟಾ, ಎಂಥ ಚಂದ! ಸಣ್ಣಗೆ ಕಂಪಿಸುತ್ತಾ ಒಳಬಂದವಳು ಕನ್ನಡಿ ನೋಡಿಕೊಂಡೆ. ನನ್ನ ನೋಡಲು ಬಂದ ಮೊದಲ ಗಂಡೇ ಇಂಥ ಚೆಲುವ! ನನ್ನ ಟ್ಯಾನ್ ಥೀಟಾಕ್ಕೆ ಟಾಟಾ ಹೇಳಿ ಇವನ ಮದುವೆಯಾಗುವುದೂ ಅದೃಷ್ಟವೇ! ಒಳಗೊಳಗೇ ಹಿಗ್ಗಿದೆ.
ಮಧ್ಯಾಹ್ನ ಊಟವಾದ ನಂತರ ಬಂದವರು ಮತ್ತೆ ಹತ್ತು ನಿಮಿಷ ಮಾತುಕತೆ ಆಡುವಾಗಲೇ ಎದೆ ಒಡೆಯುವ ಸತ್ಯ ತಿಳಿದಿದ್ದು, ಆ ಹಸಿರು ಅಂಗಿಯ ಕಡುಚೆಲುವ ಹುಡುಗನ ಭಾವನಂತೆ! ಆ ಕಪ್ಪಗಿದ್ದವನೇ ಗಂಡು. ಅಷ್ಟರಲ್ಲಾಗಲೇ ಹುಡುಗನ ತಂದೆ, “ನಮಗೆ ಒಪ್ಪಿಗೆ. ನೀವು ಒಮ್ಮೆ ಬನ್ನಿ’ ಎನ್ನುತ್ತಿದ್ದರು.
ನಾನು, ಗಣಿತವಾ..? ಈ ಕಪ್ಪು ಹುಡುಗನಾ ಅಂತ ಹೊಯ್ದಾಟದಲಿದ್ದೆ. ಕೊನೆಗೂ ಗಣಿತಕ್ಕಿಂತ ಮದುವೆಯೇ ಆಗಬಹುದು ಎನಿಸಿ “ಓಕೆ’ ಎಂದೆ ಅಂದರೆ ಅದು ಸುಳ್ಳಾದೀತು.
ಅಪ್ಪ-ಅಮ್ಮ, ನಿನಗೆ ಹುಡುಗ ಒಪ್ಪಿಗೆಯಾ ಅಂತ ಕೇಳಲೂ ಇಲ್ಲ. ನನಗೆ ಗಣಿತ ಕಷ್ಟ ಅಂತ ನಾನು ಹೇಳಲೂ ಇಲ್ಲ. ಮೊದಲ ಬಂದ ಕಪ್ಪು ವರನೇ ನಿಕ್ಕಿಯಾಗಿ ಗಣಿತಕ್ಕೆ ಮುಕ್ತಿ ಹೇಳಿ ದೊಡ್ಡಮನೆಯ ಸೊಸೆಯಾಗಿ ನೂರು ರೊಟ್ಟಿ ತಟ್ಟುವಾಗ ನನಗೆ ಜ್ಞಾನೋದಯವಾಯ್ತು. ಟ್ರಿಗ್ನಾಮೆಟ್ರಿ ಬಹಳ ಬಹಳ ಸುಲಭ!
-ನಂದಿನಿ ವಿಶ್ವನಾಥ ಹೆದ್ದುರ್ಗ
ಹೇಳದೆ ಕೇಳದೆ ಬಂದವರು…
ಆಗಷ್ಟೇ ನನ್ನ ಓದು ಮುಗಿದಿತ್ತು. ಪ್ರತಿಯೊಬ್ಬ ಹುಡುಗಿಗೂ ಇರುವಂತೆ ನನಗೂ, ನನ್ನ ಹುಡುಗನ ಬಗ್ಗೆ ಬಣ್ಣಬಣ್ಣದ ಕನಸುಗಳಿದ್ದವು. ಆದರೆ ಈಗಲೇ ಮದುವೆ ಆಗುವಷ್ಟು ವಯಸ್ಸಾಗಿಲ್ಲ ಎನ್ನುವುದು ನನ್ನ ಅಭಿಪ್ರಾಯವಾಗಿತ್ತು. ತಲೆಯ ತುಂಬ ಸಂಗೀತದ ಹುಚ್ಚು ತುಂಬಿಕೊಂಡಿತ್ತು. ನೌಕರಿ ಗಿಟ್ಟಿಸಿಕೊಳ್ಳುವ ತಯಾರಿಯಲ್ಲಿಯೂ ಇದ್ದೆ.
ಆದರೆ ಮನೆಯಲ್ಲಿ ಹುಡುಗಿ ವಯಸ್ಸಿಗೆ ಬಂದರೆ ಸಾಕು, ಅಪ್ಪ-ಅಮ್ಮನಿಗೆ ಅವಳ ಮದುವೆಯ ಯೋಚನೆಯೇ ತಲೆ ತುಂಬಾ ತುಂಬಿಕೊಳ್ಳುತ್ತದೆ. ಆಗಂತೂ ಪಿಯೂಸಿಗೇ ಮದುವೆ ಮಾಡಿ ಮುಗಿಸುತ್ತಿದ್ದ ಕಾಲ. ಸದ್ಯ ನನ್ನಪ್ಪನಿಗೆ ಮಗಳನ್ನು ಓದಿಸಿ ನೌಕರಿ ಕೊಡಿಸಿಯೇ ಮದುವೆ ಮಾಡಬೇಕು ಎನ್ನುವ ವಿಚಾರ ಇದ್ದುದರಿಂದಾಗಿ ನಾನು ನಿರಾತಂಕವಾಗಿ ಓದು ಮುಗಿಸಿದ್ದೆ. ಈ ನಡುವೆ, ಹುಡುಗಿಯನ್ನು ಕೇಳುತ್ತಿದ್ದಾರೆ ಎನ್ನುವ ವಿಚಾರ ಅಲ್ಪ ಸ್ವಲ್ಪ ನನ್ನ ಕಿವಿಗೂ ಆಗಾಗ ಬೀಳುತ್ತಿತ್ತು. ಆದರೆ ಪ್ರಶ್ನೆ ನೇರ ನನ್ನ ಅಂಕಣಕ್ಕೆ ಬಂದು ಬಿದ್ದಿರಲಿಲ್ಲವಾಗಿ ನಾ ಆರಾಮಾಗಿದ್ದೆ.
ನಮ್ಮ ಮನೆಗೆ ಆಗಾಗ ಯಾರಾದರೂ ಅಪ್ಪನ ಸ್ನೇಹಿತರು, ಆಪ್ತರು ಬರುವ ವಾಡಿಕೆ ಇತ್ತು. ಅವತ್ತು ಅಂತೆಯೇ ಮನೆಗೆ ಮೂವರು ಬಂದಿದ್ದರು. ಅವರಲ್ಲಿ ಇಬ್ಬರು ಅಪ್ಪನ ಪರಿಚಯದವರು, ಮತ್ತೂಬ್ಬರು ಅಪರಿಚಿತರು. ಆ ವ್ಯಕ್ತಿ ಅಪ್ಪನೊಂದಿಗೆ ತಮ್ಮ ಪರಿಚಯ, ಹಿನ್ನೆಲೆ, ನೌಕರಿ, ಅಪ್ಪ ಅಮ್ಮ… ಎಂದೆಲ್ಲ ಹೇಳಿಕೊಂಡರು. ಅಪ್ಪನ ಪರಿಚಯದವರಲ್ಲೊಬ್ಬರು “ನಿಮ್ಮ ಮಗಳ ವಿದ್ಯಾಭ್ಯಾಸ ಮುಗಿದಿದೆ ಅಲ್ಲವಾ? ಮನೆಯಲ್ಲಿ ಇದಾರಾ?’ ಅಂತೆಲ್ಲಾ ಕೇಳಿದರು. ಅಪ್ಪ ನನ್ನನ್ನು ಕರೆದು ಅವರಿಗೆ ಪರಿಚಯಿಸಿದರು. ನಾನು ಯಾವ ಅಂಜಿಕೆ-ಮುಜುಗರವಿಲ್ಲದೆ ಬಿಡುಬೀಸಾಗಿ ಅವರೊಂದಿಗೆ ಹರಟಿದ್ದೆ. ಅಮ್ಮ ಮಾಡಿದ ಕಾಫಿ, ತಿಂಡಿಯನ್ನೂ ಕೊಟ್ಟಿದ್ದೆ. ಸುಮಾರು ಅರ್ಧ ಗಂಟೆ ಮಾತನಾಡಿದ ಆ ಮೂರೂ ಜನ, “ಮತ್ತೂಮ್ಮೆ ಯಾವಾಗಲಾದರೂ ಬರುತ್ತೇವೆ’ ಎಂದು ಹೇಳಿ ಹೊರಟರು.
ಅಪ್ಪ-ಅಮ್ಮನ ಮನಸ್ಸಲ್ಲಿ ಏನೋ ಅನುಮಾನ ಸುಳಿದಾಡಿದ್ದಿರಬೇಕು ಅವತ್ತು. ನನಗಂತೂ ಏನೂ ಅನಿಸಿರಲಿಲ್ಲ. 2-3 ದಿನಗಳ ನಂತರ, ಅಂದು ಮನೆಗೆ ಬಂದಿದ್ದ ಪರಿಚಯದವರಲ್ಲೊಬ್ಬರು ಅಪ್ಪನಿಗೆ ಸಿಕ್ಕಿ ಹೇಳಿದ್ದರಂತೆ. ಅವತ್ತು ಮನೆಗೆ ಬಂದಿದ್ದ ಆ ಹೊಸ ಪರಿಚಯದವರು ಹುಡುಗಿಯ ಹುಡುಕಾಟದಲ್ಲಿದ್ದರಂತೆ. ಅಂದು ಅದೇ ಕಾರಣಕ್ಕಾಗಿಯೇ ಏನೋ ನೆಪ ಮಾಡಿಕೊಂಡು ನಮ್ಮ ಮನೆಗೆ ಬಂದಿದ್ದರಂತೆ. ಹುಡುಗಿ ಇಷ್ಟ ಆಗಿದ್ದಾಳೆ ಎಂದೂ ಅವರು ಹೇಳಿದ್ದರಂತೆ.
ಹಾಗಂತ ಅಪ್ಪ ಮನೆಗೆ ಬಂದು ಹೇಳಿದಾಗ ರಾದ್ಧಾಂತವೇ ಆಗಿತ್ತು. ಕೊನೆಗೆ ಅಪ್ಪನ ಬಾಯಿಂದಲೇ, ಸದ್ಯಕ್ಕೆ ನಾವು ನಮ್ಮ ಮಗಳಿಗೆ ಮದುವೆ ಮಾಡುವುದಿಲ್ಲ ಎನ್ನುವ ಮಾತನ್ನು ಹೇಳಿಸಿದ್ದೆ
-ಆಶಾ ಜಗದೀಶ್
ನಾನು ಎಲ್ಲ ರೀತಿಯಲ್ಲೂ ನಿಮಗೆ ಸರಿಯಾದ ಜೋಡಿ
ಆ ದಿನ ಮನೆಯಲ್ಲಿ ಚಿಕ್ಕಮ್ಮನ ಮಗಳೊಂದಿಗೆ ತಲೆಗೆ ಎಣ್ಣೆ ಹಚ್ಚಿಕೊಂಡು, ಹರಟೆ ಹೊಡೆಯುತ್ತಾ ಕುಳಿತಿರುವಾಗ ಆ ಹುಡುಗ ಮನೆಯ ಹೊಸ್ತಿಲಲ್ಲಿ ಪ್ರತ್ಯಕ್ಷನಾದ. “ಅರೆ! ಈ ಹುಡುಗ ಆ ಹುಡುಗನೇ ಅಲ್ವ?’ ಅಂತ ಚಿಕ್ಕಮ್ಮನ ಮಗಳು ಹೇಳುವಷ್ಟರಲ್ಲೇ ನನಗೆ ಹೊಳೆದಿತ್ತು, ಹೌದು ಈ ಹುಡುಗ ಕಳೆದ ವಾರ ನನ್ನನ್ನು ನೋಡಲು ತನ್ನ ಹೆತ್ತವರೊಂದಿಗೆ ಬಂದಿದ್ದರು. ಕಾರಣಾಂತರಗಳಿಂದ ನಮ್ಮ ಮನೆಯವರು ಈ ಸಂಬಂಧ ಬೇಡ ಅಂದಿದ್ದರು.
ನನಗೆ ವರಾನ್ವೇಷಣೆ ಶುರುವಾದ ದಿನದಿಂದ ಇಂಥ ಸಂಬಂಧಗಳು ಪ್ರತಿ ಭಾನುವಾರ ತಪ್ಪದೇ ಬರುತ್ತಿದ್ದವು. ಆ ವರ್ಷವೆಲ್ಲಾ ಮನೆಗೆ ಬಂದವರಿಗೆ ಟೀ, ಕಾಫಿ, ತಿಂಡಿ ಸಪ್ಲೆ„ಯರ್ ನಾನೇ ಆಗಿದ್ದೆ. ಅಲಂಕಾರದ ಮೇಲೆ ವೈರಾಗ್ಯ ಬಂದು, ಡಿಗ್ಲಾಮರಸ್ ರೋಲ್ನಲ್ಲಿ, ಅದರಲ್ಲೂ ತಲೆಗೆಲ್ಲಾ ಎಣ್ಣೆ ಹಚ್ಚಿಕೊಂಡು ಕೂತಿರುವಾಗ ಈ ಹುಡುಗ ಬರಬೇಕಾ?
ಕಕ್ಕಾಬಿಕ್ಕಿಯಾದ ನಾನು, ಅವರನ್ನು ಒಳಗೆ ಕರೆದು ಕೂರಿಸಿ ಉಭಯಕುಶಲೋಪರಿಯ ನಂತರ, ಅಮ್ಮನನ್ನು ಕರೆಯುತ್ತೇನೆ ಅಂತ ಹೇಳಿದೆ. ಆಗ ಆ ಹುಡುಗ, “ನಿಮ್ಮ ಬಳಿಯೇ ಮಾತನಾಡಬೇಕು’ ಅಂದರು. ಏನೇ ಮಾತನಾಡುವುದಿದ್ದರೂ, ಚಿಕ್ಕಮ್ಮನ ಮಗಳ ಎದುರಲ್ಲೇ ಮಾತನಾಡಿ ಅಂದೆ. ಅದಕ್ಕೆ ಒಪ್ಪಿದ ಆ ಹುಡುಗ, ಬಹಳ ಆತ್ಮವಿಶ್ವಾಸದಿಂದ, “ನಿಮ್ಮ ವರಾನ್ವೇಷಣೆಯಲ್ಲಿ ನನ್ನನ್ನು ನಿಮ್ಮ ಮನೆಯವರು ಬೇಡ ಅನ್ನಲು ಕಾರಣವೇನು? ಅಂತ ನೇರವಾಗಿ ಕೇಳಿದ. ನನಗೆ ಏನು ಹೇಳಬೇಕು ಅಂತ ತೋಚದೆ, “ಅದನ್ನು ನೀವು ಅವರನ್ನೇ ಕೇಳಬೇಕು’ ಅಂದೆ. ಅದಕ್ಕೆ ಆ ಹುಡುಗ, “ಮನೆಯವರನ್ನು ಬಿಡಿ. ನಿಮಗೆ ನನ್ನ ಬಗ್ಗೆ ಇರುವ ಅಭಿಪ್ರಾಯವೇನು?’ ಅಂದ. ಅದಕ್ಕೆ ನಾನು, “ನಿಮ್ಮ ಹಿನ್ನೆಲೆ ತಿಳಿದುಕೊಳ್ಳದೆ, ನಿಮ್ಮ ಬಗ್ಗೆ ಅಭಿಪ್ರಾಯ ತಿಳಿಸಲು ಸಾಧ್ಯವಿಲ್ಲ ಹಾಗೂ ನಾನು ಮದುವೆಯಾಗುವ ಹುಡುಗನನ್ನು ನನ್ನ ಕುಟುಂಬದವರೇ ನಿರ್ಧರಿಸುತ್ತಾರೆ’ ಎಂದು ಹೇಳಿದೆ.
ಆಗ ಆ ಹುಡುಗ, “ನಾನು ನಿಮ್ಮನ್ನು ನೋಡಿ ಹೋದ ನಂತರ, ಬೇರೆ ಯಾವ ಹುಡುಗಿಯನ್ನೂ ನೋಡಲು ಮನಸ್ಸಾಗುತ್ತಿಲ್ಲ. ನಿಮ್ಮನ್ನು ಮದುವೆಯಾದರೆ ನನ್ನ ಜೀವನ ಚೆನ್ನಾಗಿರುತ್ತದೆ ಅಂತ ತುಂಬಾ ಸ್ಟ್ರಾಂಗ್ ಆಗಿ ಅನ್ನಿಸುತ್ತಿದೆ. ನನ್ನನ್ನು ಬೇಡ ಅನ್ನಲು ನಿಮ್ಮ ಬಳಿ ಯಾವ ಕಾರಣವೂ ಇಲ್ಲ. ಯಾಕಂದ್ರೆ, ನಾನು ಎಲ್ಲ ರೀತಿಯಲ್ಲೂ ನಿಮಗೆ ತಕ್ಕವನು. ನಿಮ್ಮ ಹೆತ್ತವರಿಗೆ ಹೇಳಿ ಒಪ್ಪಿಸಿ..’ ಅಂತೆಲ್ಲಾ ಒಂದೇ ಸಮನೆ ಬಡಬಡಿಸಿದ. ಅಷ್ಟರಲ್ಲಿ, ಅಮ್ಮ ಬಂದರು. ಅವರ ಬಳಿಯೂ ಸ್ವಲ್ಪವೂ ಅಂಜಿಕೆ, ಮುಜುಗರ ಏನೂ ಇಲ್ಲದೆ, ನಿಮ್ಮ ಮಗಳನ್ನು ಮದುವೆ ಆಗುವ ಇಚ್ಛೆ ನನಗಿದೆ. ನಿಮ್ಮ ಅಭಿಪ್ರಾಯವನ್ನು ಮತ್ತೂಮ್ಮೆ ಚರ್ಚಿಸಿ, ಫೋನ್ ಮಾಡಿ ತಿಳಿಸಿ ಅಂತ ಹೇಳಿ ಹೊರಟುಹೋದ!
ನನಗೆ ಅವನನ್ನು ಮದುವೆಯಾಗುವ ಆಸಕ್ತಿ ಮೂಡಲೇ ಇಲ್ಲ. ಆದರೆ, ಆ ಹುಡುಗನ ಸ್ವಯಂ ಪ್ರೇರಣೆ ನನ್ನಲ್ಲಿನ ಆತ್ಮವಿಶ್ವಾಸವನ್ನು ಎಚ್ಚರಿಸಿತ್ತು. ವರಾನ್ವೇಷಣೆಯಲ್ಲಿ ನೋಡಿದ ಹುಡುಗರ ಪೈಕಿ ಆ ಹುಡುಗನ (ಹುಂಬತನ ಅನ್ನುತ್ತೀರೋ, ದಿಟ್ಟತನ ಅನ್ನುತ್ತೀರೋ) ಉಪಕ್ರಮ ಬಹಳ ಇಂಟರೆಸ್ಟಿಂಗ್ ಆಗಿತ್ತು.
-ಉಲ್ಲಾಸ್ ವಿಶ್ವನಾಥ್ ಕೆ.ಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ