ಹೃತಿಕ್ ಮೇಲೆ ವಿಶೇಷ ಪ್ರೀತಿ ಪುನೀತ್ ಅಂದ್ರೂ ಇಷ್ಟ
Team Udayavani, Mar 8, 2017, 3:45 AM IST
ಪವನ್ಕುಮಾರ್ ನಿರ್ದೇಶನದ ಯೂಟರ್ನ್ ಸಿನಿಮಾದಿಂದ ಎಲ್ಲರ ಮನಗೆದ್ದವರು ಶ್ರದ್ಧಾ ಶ್ರೀನಾಥ್. ಕೇವಲ ಪ್ರತಿಭೆ ಮಾತ್ರದಿಂದಲೇ ಮಣಿರತ್ನಂ ಅವರಂಥ ಮೇರು ನಿರ್ದೇಶಕರ ಚಿತ್ರದಲ್ಲೂ ಚಾನ್ಸ್ ಪಡೆದುಕೊಂಡಿದ್ದು ಶ್ರದ್ಧಾರ ಹೆಚ್ಚುಗಾರಿಕೆ. ಈಗ ಐದಾರು ಸಿನಿಮಾಗಳಲ್ಲಿ ನಟಿಸುತ್ತಿರುವ ಶ್ರದ್ಧಾ ಇಲ್ಲಿ ಸಡಗರದಿಂದ ಮಾತಾಡಿದ್ದಾರೆ.
-ಮಹಿಳಾ ದಿನಾಚರಣೆ ಆಚರಿಸುತ್ತಿದ್ದೇವೆ. ಈಗಲಾದರೂ ಮಹಿಳೆಯರ ಸಂಕಷ್ಟಗಳು ಮುಗಿದಿದೆ ಎನಿಸುತ್ತಿದೆಯೇ?
ಉದ್ಯೋಗ ಸಿಗುವ ಮಟ್ಟಿಗೆ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶಗಳಿವೆ. ಕೆಲಸದ ವಿಷಯದಲ್ಲೂ ಅಷ್ಟೇ: ಮಹಿಳೆ ಎಂದು ಕಡಿಮೆ ಕೆಲಸವನ್ನೇನೂ ಕೊಡುವುದಿಲ್ಲ. ಆದರೆ ಸಂಬಳ ಮತ್ತು ಬಡ್ತಿ ನೀಡುವಾಗ ತಾರತಮ್ಯ ಮಾಡುತ್ತಾರೆ. ಇದು ಎಲ್ಲಾ ಕ್ಷೇತ್ರದಲ್ಲೂ ಇದೆ. ಅದಲ್ಲದೇ ಕುಟುಂಬದ ಹೊಣೆಗಾರಿಕೆಯೂ ಮಹಿಳೆಯದ್ದೇ ಆಗಿರುವುದರಿಂದ, ಆಚೆ ಹೋಗಿ ಕೆಲಸ ಮಾಡುವುದು ಮಹಿಳೆಗೆ ಈಗಲೂ ಕಷ್ಟ. ಮಗು ನೋಡಿಕೊಳ್ಳುವ, ಕೆಲಸದವರನ್ನು ನೇಮಿಸಿಕೊಳ್ಳುವ ಸೌಲಭ್ಯ ಈಗಲೂ ಕೆಲವೇ ಮಹಿಳೆಯರಿಗೆ ಮಾತ್ರ ಇದೆ.
-ಸಿನಿಮಾ ಕ್ಷೇತ್ರದಲ್ಲಿ ಮಹಿಳೆಗೆ ಎಷ್ಟು ಪ್ರಾಮುಖ್ಯತೆ ಸಿಗುತ್ತಿದೆ?
ಈ ಕುರಿತು ನಾನು ದೂರುವುದಿಲ್ಲ. ನನ್ನ ವಿಷಯದಲ್ಲಿ ತಾರತಮ್ಯ ನಡೆದಿಲ್ಲ. ಮೊದಲ ಚಿತ್ರದಿಂದಲೂ ನನಗೆ ಗಟ್ಟಿ ಪಾತ್ರಗಳೇ ಸಿಕ್ಕಿವೆ. ಇನ್ನೂ ಹೇಳಬೇಕೆಂದರೆ ಹೀರೊ ಅಗತ್ಯವಿಲ್ಲದೇ ಹಿಟ್ ಚಿತ್ರ ನೀಡಬಹುದು ಎಂದು ತೋರಿಸಿಕೊಟ್ಟ “ಯು ಟರ್ನ್’ ಚಿತ್ರದಿಂದ ನಾನು ಕನ್ನಡ ಚಿತ್ರರಂಗಕ್ಕೆ ಪರಿಚಯವಾದೆ. ಕೇವಲ ಗ್ಲಾಮರ್ಗೆ ಮಾತ್ರ ಸಿನಿಮಾದಲ್ಲಿ ನಾಯಕಿಯ ಅಗತ್ಯವಿದೆ ಎಂಬ ಕಲ್ಪನೆ ನಿಧಾನವಾಗಿ ದೂರಾಗುತ್ತಿದೆ. ದೊಡ್ಡ ಸ್ಟಾರ್ ಜೊತೆ ನಟಿಸಿದರೆ ಮಾತ್ರ ಹೆಸರು, ಕೀರ್ತಿ ಗಳಿಸಲು ಸಾಧ್ಯ ಎಂಬ ಭ್ರಮೆಗಳು ಈಗಿಲ್ಲ. ಇದಕ್ಕೆ ಇತ್ತೀಚಿನ ಚಿತ್ರಗಳೇ ಸಾಕ್ಷಿ. ಎಲ್ಲಾ ಚಿತ್ರರಂಗದಲ್ಲೂ ನಾಯಕಿಯರಿಗೆ ಹೆಚ್ಚು ಪ್ರಾಮುಖ್ಯತೆ ಈಚಿನ ದಿನಗಳಲ್ಲಿ ಸಿಗುತ್ತಿದೆ.
– ಚಿತ್ರರಂಗಕ್ಕೆ ಬರುವ ಮೊದಲು ನಿಮಗೆ ಎಷ್ಟು ಆತ್ಮವಿಶ್ವಾಸ ಇತ್ತು. ಯಾವುದಾದರೂ ವಿಷಯದ ಕುರಿತು ಅಳುಕು ಇತ್ತೇ?
ಮೊದಮೊದಲಿಗೆ ತುಂಬಾ ಹೆದರಿದ್ದೆ. ನನ್ನ ಮೊದಲ ಚಿತ್ರ ಅರ್ಧಕ್ಕೇ ನಿಂತು ಹೋಯಿತು. ಅದಾದ ಬಳಿಕವೇ ನಾನು ಚಿತ್ರರಂಗವನ್ನೂ ಇಲ್ಲಿರುವ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ಆರಂಭಿಸಿದೆ. ಎಷ್ಟೋ ಚಿತ್ರಗಳ ಆಡಿಶನ್ ಹಂತದಲ್ಲೇ ಹೊರಬಿದ್ದೆ. ಒಬ್ಬ ನಟಿಗೆ ಬೇಕಾದ ದೇಹ ಸೌಂದರ್ಯ, ಮುಖ, ಗ್ಲಾಮರ್ ನನಗೆ ಇಲ್ಲ ಎಂದು ಅನಿಸಿದ್ದೂ ಇದೆ. ಆದರೆ ರಂಗಭೂಮಿಯಿಂದ ಬಂದ ನನಗೆ ನಟನೆಯೇ ನನ್ನ ಬಲ ಎಂದು ಗೊತ್ತಿತ್ತು. ಈಗಲೂ ಅದನ್ನೇ ಬಳಸಿಕೊಳ್ಳುತ್ತಿದ್ದೇನೆ.
– ಚಿತ್ರರಂಗ ಕೇವಲ ಅತ್ಯಂತ ಸುಂದರಿಯರಿಗಷ್ಟೇ ಇರುವ ಕ್ಷೇತ್ರ ಎನ್ನುವಂತಿದೆ. ಸಾಮರ್ಥ್ಯವಿರುವ ಎಷ್ಟೋ ಯುವತಿಯರು ಕೇವಲ ಸೌಂದರ್ಯದ ಕಾರಣ ಅವಕಾಶ ವಂಚಿತರಾಗುತ್ತಾ ಇದ್ದಾರೆ ಅಲ್ವಾ?
ಖಂಡಿತಾ ಹೌದು. ಈ ಪ್ರಶ್ನೆ ನನ್ನ ಮನಸ್ಸಿನಲ್ಲೂ ಬಂದಿದೆ. ನಾನು “ಯು ಟರ್ನ್’ಗೂ ಮೊದಲು ಮಲಯಾಳಂ ಚಿತ್ರದಲ್ಲಿ ನಟಿಸಿದ್ದೆ. ಅದರಲ್ಲಿ ನನಗೆ ಮೇಕಪ್ ಇರಲಿಲ್ಲ. ನನ್ನ ಸಿನಿಮಾ ಜರ್ನಿ ಈ ಚತ್ರದಿಂದಲೇ ಆರಂಭವಾಗಿತ್ತು. ಮೇಕಪ್ ಇಲ್ಲದೇ ನಾನು ತೆರೆ ಮೇಲೆ ಚೆನ್ನಾಗಿ ಕಾಣದೇ ಹೋದೆ. ನನ್ನ ಕೆರಿಯರ್ ಹಾಳಾಗುತ್ತದೆ ಎಂಬ ಅನುಮಾನ ಇತ್ತು. ಆದರೆ ತೆರೆ ಮೇಲೆ ನನ್ನನ್ನು ನಾನು ನೋಡಿದಾಗ ಬಹಳ ಸಂತೋಷಪಟ್ಟೆ. ನಾನು ತುಂಬಾ ಚನ್ನಾಗಿ ಕಾಣುತ್ತಿದ್ದೆ. ಮಲಯಾಳಂ ಚಿತ್ರರಂಗಕ್ಕೆ ಮೇಕಪ್, ಗ್ಲಾಮರ್ ಬಗ್ಗೆ ನಂಬಿಕೆ ಇಲ್ಲ. ನಟನೆಯನ್ನು ಮಾತ್ರ ಅವರು ನಟಿಯರಿಂದ ನಿರೀಕ್ಷಿಸುತ್ತಾರೆ. ನಟಿಯರು ಹೇಗಿದ್ದೇರೋ ಹಾಗೇ ಜನ ಅವರನ್ನು ಸ್ವೀಕರಿಸುತ್ತಾರೆ. ಈ ಬದಲಾವಣೆ ಎಲ್ಲಾ ಭಾಷೆ ಚಿತ್ರರಂಗದಲ್ಲೂ ಆಗಲೀ ಎಂಬುದೇ ನನ್ನ ಆಶಯ.
– ಬ್ಯೂಟಿ ಸ್ಟಾಂಡರ್ಡ್ಸ್ ತಲುಪಲು ನಟಿಯರು ಸೌಂದರ್ಯ ಚಿಕಿತ್ಸೆಗಳಿಗೆ ಮೊರೆ ಹೋಗ್ತಾರೆ. ನಮ್ಮ ಯುವತಿಯರು ಅವರನ್ನು ಅನುಕರಿಸುತ್ತಾ ಇದ್ದಾರಲ್ಲ…
ಹೌದು ಈಗ ಎಲ್ಲರೂ ಬೆಳ್ಳಗಾಗಲು ಸ್ಕಿನ್ ಲೈಟನಿಂಗ್, ಪೀಲಿಂಗ್ನಂಥ ಚಿಕಿತ್ಸೆಗೆ ಮೊರೆ ಹೋಗುತ್ತಿದ್ದಾರೆ. ದೇಹದ ಪ್ರತಿ ಅಂಗವನ್ನೂ ತಿದ್ದಿ ತೀಡಲು ಮುಂದಾಗುತ್ತಾರೆ. ಇದೆಲ್ಲದರ ಅದತ್ಯ ನಿಜಕ್ಕೂ ಇದೆಯಾ? ಅಥವಾ ದುಡ್ಡಿದೆ ಎಂದು ಹೇಗೆಲ್ಲಾ ಮಾಡುತ್ತಾರೊ ಗೊತ್ತಿಲ್ಲ. ನಾವು ಹೇಗಿದ್ದೇವೋ ಹಾಗೇ ಚಂದ ಕಾಣಿ¤àವಿ ಅನ್ನೋ ಸತ್ಯ ಅರಿವಾಗ ಬೇಕು ಅಷ್ಟೇ.
– ಜನ ನಿಮ್ಮ ಸಿನಿಮಾವನ್ನು “ಇದು ಶ್ರದ್ಧಾ ಶ್ರೀನಾಥ್ ಸಿನಿಮಾ’ ಎಂದೇ ಗುರುತಿಸುತ್ತಿದ್ದಾರಲ್ಲ… ಏನನ್ನಿಸುತ್ತೆ ಈ ಬಗ್ಗೆ?
ಖುಷಿ ಆಗತ್ತೆ. ಊರ್ವಿ ಚಿತ್ರದಲ್ಲಿ ನನಗೆ ನಾಯಕನಾಗಿರುವ ನಟ, “ನಾನು ಎಲ್ಲರ ಬಳಿ ಶ್ರದ್ಧಾ ಜೊತೆ ನಟಿಸುತ್ತಾ ಇದೀನಿ ಅಂತ ಹೇಳ್ಕೊàತೀನಿ’ ಅಂತ ಹೇಳ್ತಿರ್ತಾರೆ. ನಿಜವಾಗಲೂ ಮುಜುಗರವಾಗುತ್ತದೆ. ಲಕ್, ಡೆಸ್ಟಿನಿ, ಹಾರ್ಡ್ವರ್ಕ್ ಮೂರೂ ನನ್ನ ಜೊತೆ ಇದೆ ಅಂತ ಅನ್ಸುತ್ತೆ.
– ನಿಮ್ಮದು ಮಿಲಿಟರಿ ಕುಟುಂಬ. ನಿಮ್ಮ ಬಾಲ್ಯ ಹೇಗಿತ್ತು? ಪೋಷಕರು ತುಂಬಾ ಸ್ಕ್ರಿಕ್ಟ್ ಇದ್ರಾ?
ಆರ್ಮಿ ಕುಟುಂಬದಲ್ಲಿ ತಂದೆ ಸ್ಟ್ರಿಕ್ಟ್ ಇರ್ತಾರೆ, ಮನೆಯಲ್ಲೂ ಕಮಾಂಡರ್ ತರಹ ಇರ್ತಾರೆ ಅನ್ನೋದೆಲ್ಲಾ ಸಿನಿಮಾದವರು ಹುಟ್ಟುಹಾಕಿರುವುದು. ನನಗೆ ಸಿನಿಮಾದಲ್ಲಿ ಆರ್ಮಿ ಕುಟುಂಬ ನೋಡಿದರೆ ನಗು ಬರುತ್ತದೆ. ಹಾಗೆಲ್ಲಾ ಯಾವ ಪೋಷಕರೂ ಇರುವುದಿಲ್ಲ. ನಮ್ಮ ಮನೆಯಲ್ಲಿ ರಿಸ್ಟ್ರಿಕ್ಷನ್ ಅನ್ನೋದೆ ಇರಲಿಲ್ಲ. ನಾನು ಮತ್ತು ನನ್ನ ಅಕ್ಕನಿಗೆ ಇದನ್ನೇ ಓದಿ, ಇಂಥ ಬಟ್ಟೆಯನ್ನೇ ಧರಿಸಿ, ಇಂಥ ಉದ್ಯೋಗವನ್ನೇ ಆರಿಸಿಕೊಳ್ಳಿ ಎಂದು ನಮ್ಮ ಅಪ್ಪ ಅಮ್ಮ ಎಂದೂ ನಮ್ಮ ಮೇಲೆ ಒತ್ತಡ ಹೇರಿಲ್ಲ.
– ಬಾಲ್ಯದಲ್ಲಿ ಎಂದೂ ಮರೆಯಲಾರದ ಘಟನೆ.
ನನ್ನ ಬಾಲ್ಯವನ್ನು ಹೆಚ್ಚಾಗಿ ಉತ್ತರಭಾರತದಲ್ಲೇ ಕಳೆದಿದ್ದೇನೆ. 1996ರಲ್ಲಿ ನಾಮ್ಮ ಕುಟುಂಬ ಉತ್ತರಾಖಂಡದ ದಾರುcಲಾಕ್ಕೆ ಸ್ಥಳಾಂತರವಾಯಿತು. ಒಂದು ಬೆಳಗ್ಗೆ ನಮ್ಮ ಮನೆ ಬಾಲ್ಕನಿಗೆ ಹೋಗಿ ನಿಂತೆ. ಎಂಥ ಅದ್ಭುತ ದೃಶ್ಯ ಕಣ್ಣು ಮುಂದೆ ಇತ್ತು ಎನ್ನುತ್ತೀರಾ… ಮನೆಗೆ ಹತ್ತಿರದಲ್ಲಿ ಹಿಮಚ್ಛಾದಿತ ಪರ್ವತವಿದೆ. ನೋಡುನೋಡುತ್ತಿದ್ದಂತೆ ಪರ್ವತದ ಮೇಲೆ ಮಳೆ ಸುರಿಯಲಾರಂಭಿಸುತ್ತದೆ. ಈ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.
– ಸಿನಿಮಾಗೆ ಬಂದ ಮೇಲೆ ಹೆಚ್ಚು ನೆನಪಾಗುವ ಘಳಿಗೆ.?
“ಯು ಟರ್ನ್’ ಸಿನಿಮಾ ಪ್ರೀಮಿಯರ್ ಶೋ ನ್ಯೂಯಾರ್ಕ್ನಲ್ಲಿ ಏರ್ಪಡಿಸಲಾಗಿತ್ತು. ಸಿನಿಮಾ ಪ್ರದರ್ಶನ ಆರಂಭವಾಗಿ 30 ನಿಮಿಷ ಕಳೆದಿತ್ತು. ನನ್ನ ಪಕ್ಕದಲ್ಲಿ ಪುಟ್ಟ ಹುಡುಗಿ ಕೂತಿದ್ದಳು. ಅವಳು ಇದ್ದಕ್ಕಿದ್ದ ಹಾಗಿ “ಅಪ್ಪಾ ಸ್ಕ್ರೀನ್ ಮೇಲೆ ಕಾಣಾ¤ ಇರುವವರು ಇವರೇ ಅಲ್ವಾ’ ಜೋರಾಗಿ ಕೂಗಿದಳು. ಇಡೀ ಸಿನಿಮಾ ಹಾಲ್ ಜೋರಾಗಿ ನಕ್ಕಿತು. ನನಗೆ ಒಂದು ಕ್ಷಣ ಗಾಬರಿಯಾಗಿತ್ತು.
– ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ನಟಿಸ್ತಾ ಇದ್ದೀರಂತೆ?
ಹೌದು. ನಾನು ಚಿಕ್ಕಂದಿನಿಂದಲೂ ಮಣಿರತ್ನಂ ಅಭಿಮಾನಿ. ಈಗ ಅವರ ಚಿತ್ರದಲ್ಲೇ ಕೆಲಸ ಮಾಡುತ್ತಾ ಇದ್ದೀನಿ ಎಂದರೆ ನನಗೇ ನಂಬಲು ಆಗ್ತಾ ಇಲ್ಲ.
– ಯಾವ ಹೀರೋಗೆ ಹೀರೋಯಿನ್ ಆಗಿ ನಟಿಸಬೇಕು ಅಂತ ಆಸೆ ಇದೆ?
ಸುದೀಪ್, ಪುನೀತ್
– ಸಿನಿಮಾ ಆಸಕ್ತಿ ಬಂದಿದ್ದು ಯಾವಾಗಿನಿಂದ?
2001ರ ಜನವರಿ ತಿಂಗಳಿನಲ್ಲಿ. “ಕಹೋ ನ ಪ್ಯಾರ್ ಹೈ’ ಚಿತ್ರ ನೋಡಿದಾಗಿನಿಂದ. ಹೃತಿಕ್ ಮೇಲೆ ನನಗೆ ಒಂಥರಾ ಪ್ರೀತಿ. ಅವರನ್ನು ನೋಡ್ತಾ ನೋಡ್ತಾನೆ ನಟಿಯಾಗಬೇಕು ಅಂತ ತೀರ್ಮಾನ ಮಾಡಿದೆ.
– ಮುಜುಗರ ಎನಿಸಿದ ಸಂದರ್ಭ
ಊರ್ವಿ ಟೀಂ ಫೇಸ್ಬುಕ್ ಲೈವ್ ಬಂದಿದ್ವಿ. ಆಗ ಒಬ್ಬ- ಶ್ರದ್ಧಾ ನಿಮಗೆ ಕನ್ನಡ ಮಾತನಾಡಲು ಬರುತ್ತದೆ ಅಂತ ಗೊತ್ತು. ಜಾಸ್ತಿ ಡವ್ ಮಾಡಬೇಡ ಅಂತ ಮೆಸೇಜ್ ಮಾಡಿದ್ದ.
ನನ್ನ ಮನೆ ಮಾತು ಕನ್ನಡಾನೇ. ಆದರೆ ಬಾಲ್ಯ ಪೂರ್ತಿ ಕಳೆದಿದ್ದು ಹೊರ ರಾಜ್ಯದಲ್ಲಾದ್ದರಿಂದ ಮಾತಿನ ಮಧ್ಯೆ ಕೆಲವೊಮ್ಮೆ ಇಂಗ್ಲೀಷ್ ನುಸುಳುವುದುಂಟು. ಅಷ್ಟಕ್ಕೇ ಡವ್ ಮಾಡಬೇಡ ಅಂತ ಹೇಳ್ಳೋದಾ?
– ಮನೆಯಲ್ಲಿ ಇರುವಾಗ ಅಡುಗೆ ಮನೆ ಕಡೆ ಹೋಗ್ತಿàರಾ, ಅಂದರೆ ಅಡುಗೆ ಮಾಡೋ ಆಸಕ್ತಿ ಇದೆಯಾ?
ಯಾವ ಅಡುಗೆ ಮಾಡ್ತಾ ಇದಾರೆ ಅಂತ ನೋಡೋಕೆ ಅಡುಗೆ ಮನೆಗೆ ಆಗಾಗ ಹೋಗ್ತಿàನಿ. ಅಡುಗೆ ಮಾಡಕ್ಕೆ ಅಂತ ಹೋಗೋದು ತುಂಬಾ ಕಡಿಮೆ. ಕೆಲವೊಮ್ಮೆ ಕೇಕ್ ಬೇಕ್ ಮಾಡಬೇಕು ಅನ್ಸತ್ತೆ. ಆಗ ಅಡುಗೆ ಮನೆಗೆ ಹೋಗ್ತಿàನಿ. ಮುಂದೆ ಅಡುಗೆ ಮಾಡುವ ಸಮಯ ಬರುತ್ತೆ ಬಿಡಿ. ಆಗ ಮಾಡ್ತೀನಿ. ಸದ್ಯಕ್ಕೆ ಇಲ್ಲ.
– ನಿಮ್ಮ ಇಷ್ಟದ ಆಹಾರ?
ಅಮ್ಮ ಮಾಡುವ ಪುಳಿಯೊಗರೆ. ಅದು ಬಿಟ್ರೆ ಚಾಟ್ಸ್ ತುಂಬಾ ಇಷ್ಟ.
– ನೆಚ್ಚಿನ ಚಾಟ್ ಪಾಯಿಂಟ್
ಬನ್ನೇರುಘಟ್ಟ ರೋಡಲ್ಲಿರೋ ಆನಂದ್ ಭವನ್
– ಯಾವ ಶೈಲಿ ಆಹಾರ ನಿಮಗಿಷ್ಟ?
ವಿದೇಶಿ ಅಡುಗೆ ಎಲ್ಲಾ ಟ್ರೈ ಮಾಡ್ತೀನಿ. ವಿಯೆಟ್ನಾಮೀಸ್, ಲೆಬನೀಸ್, ಇಟಾಲಿಯನ್ ತುಂಬಾ ಇಷ್ಟ. ಆದರೆ ನನ್ನ ಅಪ್ಪಅಮ್ಮ ಭಾರತೀಯ ಶೈಲಿ ಅಡುಗೆ ಬಿಟ್ಟು ಬೇರೆ ಏನನ್ನೂ ತಿನ್ನೋದಿಲ್ಲ. ಅವರು ಪ್ಯೂರ್ ವೆಜಿಟೇರಿಯನ್. ಅವರ ಜೊತೆ ಊಟಕ್ಕೆ ಹೋದಾಗ ಮಾತ್ರ ಭಾರತೀಯ ಶೈಲಿ ಊಟ ಮಾಡ್ತೇನೆ.
– ಪಾರ್ಟಿ ಮಾಡೋದು ಎಲ್ಲಿ?
ಕಾಲೇಜಲ್ಲಿದ್ದಾಗ ಪಾರ್ಟಿ ಫ್ರೀಕ್ ಆಗಿದ್ದೆ. ಫ್ರೆಂಡ್ಸ್ ಎಲ್ಲಾ ಸೇರಿ ಡ್ಯಾನ್ಸ್ ಮಾಡ್ಕೊಂಡು, ಕೇಕೆ ಹಾಕೊಂಡು ಮಜಾ ಮಾಡ್ತಿದ್ದೆ. ಈಗ ಪಾರ್ಟಿ ಮಾಡುವಷ್ಟು ಸಮಯ ಇಲ್ಲ. ಹೆಚ್ಚೆಂದರೆ ಇಷ್ಟದ ರೆಸ್ಟೋರೆಂಟ್ನಲ್ಲಿ ಊಟ ಮಾಡ್ತೀನಿ, ಅಷ್ಟೆ.
– ಫ್ಯಾಮಿಲಿ ಜೊತೆ ಹೆಚ್ಚಾಗಿ ಹೋಗೊ ಜಾಗ ಯಾವುದು?
ನಾವು ಟ್ರಿಪ್, ಪಿಕ್ನಿಕ್ ಅಂತ ಹೋಗ್ತಾನೆ ಇರಿ¤àವಿ. ಈ ವರ್ಷ ಭೂತಾನ್ಗೆ ಹೋಗ್ತಾ ಇದ್ದೀವಿ.
– ತುಂಬಾ ಬ್ಯುಸಿ ಇದ್ದು ನಂತರ ಬಿಡುವು ಸಿಕ್ಕರೆ ಏನು ಮಾಡ್ತೀರ?
ಮನೆಯಿಂದ ಹೊರಗೇ ಬರಲ್ಲ. ಫ್ಯಾಮಿಲಿ ಜೊತೇಲೆ ಕಾಲ ಕಳೆಯುತ್ತೇನೆ.
– ನಿಮ್ಮ ಡಯಟ್ ಬಗ್ಗೆ ಹೇಳ್ತೀರಾ?
ನಾನು ತುಂಬಾ ಫುಡ್ಡೀ. 15 ದಿನ ತುಂಬಾ ಶ್ರದ್ಧೆಯಿಂದ ಡಯಟ್ ಫಾಲೋ ಮಾಡ್ತೀನಿ. ಆಮೇಲೆ ನಾಲಗೆ ಏನೇನೋ ಬಯಸಲು ಶುರು ಮಾಡುತ್ತದೆ. ಆದರೆ ದಿನಾ ವರ್ಕ್ಔಟ್ ಮಾತ್ರ ತಪ್ಪಿಸಲ್ಲ.
– ಶ್ರದ್ಧಾಗೆ ಫಿಟ್ನೆಸ್ ಎಷ್ಟು ಮುಖ್ಯ?
ತುಂಬಾ ಮುಖ್ಯ. ಈಗಿನ ಕಾಲದಲ್ಲಿ ನಮ್ಮ ಆರೋಗ್ಯ ಯಾವಾಗ ಕೈಕೊಡುತ್ತೆ ಅಂತ ಹೇಳಲು ಆಗಲ್ಲ. ಆದ್ದರಿಂದ ಸದಾ ಆರೋಗ್ಯಕರ ಊಟ ತಿಂಡಿ ತನ್ನಬೇಕು, ಆದಷ್ಟು ಆಲ್ಕೋಹಾಲ್, ಧೂಮಪಾನದಿಂದ ದೂರ ಇರಬೇಕು. ದಿನಾ ವ್ಯಾಯಾಮ ಕಡ್ಡಾಯವಾಗಿ ಮಾಡಲೇಬೇಕು.
– ಮಹಿಳಾ ದಿನಾಚರಣೆ ಪ್ರಯುಕ್ತ ನಮ್ಮ ಯುವಕರಿಗೆ ಏನಾದರೂ ಸಂದೇಶ ಕೊಡುವುದಾದರೆ?
ಎಲ್ಲಾ ಗಂಡಸರೂ ಕೆಟ್ಟವರಿರುವುದಿಲ್ಲ. ಸುಸಂಸ್ಕೃತ, ಸೂಕ್ಷ್ಮ ಮನಸ್ಸಿನ ಯುವಕರು, ಮಹಿಳೆಯರನ್ನು ಅಗೌರವದಿಂದ ಕಾಣುವ ಯುವಕರನ್ನು ಬದಲಿಸಲು ಪ್ರಯತ್ನಿಸಬೇಕು.
ಮಹಿಳೆಯರನ್ನು ಗೇಲಿ ಮಾಡುವುದು ಸಾಮಾನ್ಯ ಎಂಬಂತೆ ಆಗಿದೆ. ಆದು ಸಾಮಾನ್ಯ ಸಂಗತಿಯಲ್ಲ ಎಂಬುದನ್ನು ಮನಗಾಣಿಸಬೇಕು. ರೇಪ್ನಂಥ ಭೀಕರ ಪದವನ್ನೂ ದಿನ ನಿತ್ಯದ ಜೀವನದಲ್ಲಿ ಸಾಮಾನ್ಯ ಪದದಂತೆ ಬಳಸಲಾಗುತ್ತಿದೆ. ಅದು ತುಂಬಾ ತಪ್ಪು. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ.
– ಚೇತನ ಜೆ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್