ಆರೋಗ್ಯವರ್ಧಕ ದಾಳಿಂಬೆ
Team Udayavani, Nov 8, 2019, 4:39 AM IST
ಕವಿಗಳು, ಸುಂದರ ದಂತಪಂಕ್ತಿಯನ್ನು ದಾಳಿಂಬೆ ಕಾಳುಗಳಿಗೆ ಹೋಲಿಸಿ, ಕಾವ್ಯದ ಸೊಗಸನ್ನು ಹೆಚ್ಚಿಸುತ್ತಾರೆ. ಹಾಗೆಯೇ ದಾಳಿಂಬೆ ಹಣ್ಣು , ನಮ್ಮ ಆರೋಗ್ಯವನ್ನು, ಸೌಂದರ್ಯವನ್ನು ಕೂಡಾ ಹೆಚ್ಚಿಸುತ್ತದೆ. ಈ ಹಣ್ಣು ತಿನ್ನಲು ರುಚಿಕರವಾಗಿದ್ದು ತಿನ್ನಲು ಹಾಗೂ ಪಾನೀಯ ತಯಾರಿಸಲು ಉಪಯೋಗಿಸುತ್ತಾ ಕೇವಲ ಹಣ್ಣಷ್ಟೇ ಅಲ್ಲ, ದಾಳಿಂಬೆಯ ಸಿಪ್ಪೆ , ಎಲೆ ಕೂಡಾ ಆರೋಗ್ಯಕರ ಮತ್ತು ಸೌಂದರ್ಯವರ್ಧಕ ಗುಣಗಳನ್ನು ಹೊಂದಿದೆ. ಹಾಗೂ ಔಷಧಿಗಳಲ್ಲಿ ಬಳಸಲ್ಪಡುತ್ತದೆ.
.ದಾಳಿಂಬೆ ತಿಂದರೆ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದಲ್ಲದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
.ಈ ಹಣ್ಣಿನ ರಸದಲ್ಲಿ ಸಿಟ್ರಿಕ್ ಮತ್ತು ಮಾಲಿಕ್ ಆಮ್ಲ ಅಧಿಕವಾಗಿದೆ.
.ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು, ಸುಟ್ಟ ಗಾಯಗಳಿಗೆ ಲೇಪಿಸಿದರೆ ಉರಿ ಕಡಿಮೆಯಾಗುತ್ತದೆ.
.ದಾಳಿಂಬೆ ರಸ ಸೇವಿಸುವುದರಿಂದ ಹೃದಯ ಹಾಗೂ ಮೂತ್ರಪಿಂಡಗಳ ಕೆಲಸ ಸರಾಗವಾಗುತ್ತದೆ.
.ದಾಳಿಂಬೆಯ ಚಿಗುರಿನಿಂದ ಹಲ್ಲುಜ್ಜಿದರೆ/ಬಾಯಲ್ಲಿ ಹಾಕಿಕೊಂಡು ಜಗಿದರೆ ಹಲ್ಲುನೋವು ಮತ್ತು ಒಸಡಿನ ರಕ್ತಸ್ರಾವ ಗುಣವಾಗುವುದು.
.ದಾಳಿಂಬೆಯ ಕಾಳುಗಳನ್ನು ನುಣ್ಣಗೆ ಅರೆದು, ಉಗುರು ಬೆಚ್ಚಗಿನ ನೀರಿನಲ್ಲಿ ಕದಡಿ ಕುಡಿಯುವುದರಿಂದ ಆಮಶಂಕೆ, ಅತಿಸಾರ ಭೇದಿ ನಿಲ್ಲುತ್ತದೆ.
.ದಾಳಿಂಬೆಯ ಚಿಗುರು ಎಲೆಗಳ ಕಷಾಯವನ್ನು ನಿಯಮಿತವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಟ್ರಬಲ್ ನಿವಾರಣೆಯಾಗುವುದು.
.ಒಂದು ಚಮಚ ದಾಳಿಂಬೆ ರಸಕ್ಕೆ ಒಂದು ಚಮಚ ಜೇನು ಬೆರೆಸಿ ನಿತ್ಯ ಸೇವಿಸಿದರೆ ಕಣ್ಣಿಗೆ ಒಳ್ಳೆಯದು.
.ಎರಡು ಚಮಚ ದಾಳಿಂಬೆ ರಸಕ್ಕೆ ಒಂದು ಚಮಚ ಜೇನು ಬೆರೆಸಿ ಕುಡಿದರೆ ತಲೆನೋವು ಕಡಿಮೆಯಾಗುವುದು.
.ದಾಳಿಂಬೆ ಕಾಳುಗಳನ್ನು ತೆಗೆದ ನಂತರ ಉಳಿಯುವ ದಿಂಡನ್ನು ಬೇಯಿಸಿ ಕಷಾಯ ಮಾಡಿ, ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು , ಗಂಟಲಿನ ಕಿರಿಕಿರಿ ಹೋಗುತ್ತದೆ.
.ದಿಂಡನ್ನು ಬೇಯಿಸಿ, ಮೆಂತ್ಯೆಯ ಕಷಾಯದೊಂದಿಗೆ ಬೆರೆಸಿ 2 ಚಮಚ ಜೇನು ಬೆರೆಸಿ ಕುಡಿದರೆ ಆಮಶಂಕೆ ಗುಣವಾಗುತ್ತದೆ.
.ದಾಳಿಂಬೆ ಬೀಜಗಳನ್ನು ಅರಸಿನ ಹುಡಿಯೊಂದಿಗೆ ಬೆರೆಸಿ ಮೊಡವೆಗಳಾಗಿರುವ ಸ್ಥಳಕ್ಕೆ ಹಚ್ಚುವುದರಿಂದ ಮೊಡವೆ ನಿವಾರಣೆಯಾಗುತ್ತದೆ.
.ದಾಳಿಂಬೆ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ನೆನಪಿನ ಶಕ್ತಿ ವರ್ಧಿಸುತ್ತದೆ.
ಹರ್ಷಿತಾ ಹರೀಶ್ ಕುಲಾಲ್