ಬೇರು ಬಿಡುವ ಕೆಲಸ
Team Udayavani, Oct 12, 2018, 6:00 AM IST
ಅವಳು ಹೆಸರು, ಊರು ನನಗೆ ಗೊತ್ತಿಲ್ಲ. ಕೇಳಿದರೆ ಹೆಸರು, ಊರು ತೆಗೆದುಕೊಂಡು ನಿಮಗೆ ಏನಾಗಬೇಕು? ಎಂದು ಕೇಳುತ್ತಾಳೆ. ಅವಳು ನಮ್ಮೂರಾದ ಕಲ್ಲುಗುಂಡಿಗೆ ದಿನಾ ಬೆಳಿಗ್ಗೆ ಕೆಂಪು ಬಸ್ಸಲ್ಲಿ ಮೈಸೂರು ಕಡೆಯಿಂದ ಬರುತ್ತಾಳೆ. ಬಸ್ಸಿನಿಂದ ದೊಡ್ಡ ಕಟ್ಟನ್ನು ಇಳಿಸಿ ತಲೆಮೇಲೆ ಹೊತ್ತುಕೊಂಡು ರಸ್ತೆಯಲ್ಲಿ ಬಿರಬಿರನೆ ನಡೆಯುತ್ತಾಳೆ. ರಸ್ತೆ ಬದಿಯಲ್ಲಿರುವ ಮನೆಗಳ ಎದುರು ಕುಳಿತು ಕಟ್ಟು ಬಿಚ್ಚುತ್ತಾಳೆ. ಮೇಲಿನ ಭಾಗದಲ್ಲಿ ಕನಕಾಂಬರ, ಗುಲಾಬಿ, ಕಾಕಡ ಹೂಗಳಿರುತ್ತವೆ. ಅದನ್ನು ತೆಗೆದು ಕೆಳಗೆ ಇಡುತ್ತಾಳೆ. ಅಡಿಭಾಗದಲ್ಲಿ ಮೆಂತೆ, ದಂಟು, ಸಬ್ಬಸಿಗೆ, ಕೊತ್ತಂಬರಿ ಇತ್ಯಾದಿ ಸೊಪ್ಪುಗಳಿರುತ್ತವೆ. ಸೊಪ್ಪನ್ನು ಒಂದು ಕಟ್ಟಿಗೆ 10 ರೂ. ಹಾಗೂ ಒಂದು ಮೊಳ ಹೂವಿಗೆ 20 ರೂಪಾಯಿಯಂತೆ ಮಾರುತ್ತಾಳೆ. ಒಂದೊಂದು ದಿನ ವ್ಯಾಪಾರವಾಗುತ್ತದೆ. ಏನೂ ಮಾರಾಟವಾಗದ ದಿನಗಳೂ ಇರುತ್ತವೆ. ಅವಳೇ ಹೇಳಿದ ಪ್ರಕಾರ ತನ್ನ ಊರಿಂದ ಅವಳು ಸೊಪ್ಪು, ಹೂವನ್ನು ಖರೀದಿಸಿ ಬೆಳಿಗ್ಗೆ 5 ಗಂಟೆಗೆ ಬಸ್ಸು ಹತ್ತುತ್ತಾಳೆ. ನಮ್ಮೂರು ತಲಪುವಾಗ ಗಂಟೆ ಹತ್ತಾಗುತ್ತದೆ. ಪುನಃ ಸಾಯಂಕಾಲ 4 ಗಂಟೆಯ ಬಸ್ಸು ಹಿಡಿಯುತ್ತಾಳೆ. ಮನೆ ತಲುಪುವಾಗ ರಾತ್ರಿಯಾಗುತ್ತದೆ. ಆ ದಿನದ ಪಾತ್ರೆ ತೊಳೆಯುವುದು, ಮರುದಿನದ ಅಡುಗೆ ಮಾಡುವುದು, ಮಕ್ಕಳ ಬೇಕು ಬೇಡಗಳನ್ನು ಗಮನಿಸುವುದು, ಕುಡಿದು ಬಿದ್ದಿರುವ ಗಂಡನ ಬೈಗುಳ ಕೇಳುವುದರಲ್ಲಿ ಬೆಳಗಾಗಿ ಬಿಟ್ಟಿರುತ್ತದೆ. ದಿಂಬಿಗೆ ತಲೆ ಕೊಡುವಷ್ಟೂ ಅವಳಿಗೆ ವಿರಾಮ ದೊರೆಯುವುದಿಲ್ಲ. ಅವಳ ನಿದ್ರೆ, ವಿಶ್ರಾಂತಿ ಎಲ್ಲ ಬಸ್ಸಲ್ಲೇ.
ಬೆಂಗಳೂರು, ತುಮಕೂರು ಬಸ್ಸುಗಳಲ್ಲಿ ಪ್ರಯಾಣ ಕೈಗೊಂಡರೆ ನಿಮಗೆ ಕೆಲವು ಹೆಂಗಸರ ಮಡಿಲಲ್ಲಿ ಕಾಕಡ, ಕನಕಾಂಬರ ಇತ್ಯಾದಿ ಬಿಡಿಹೂಗಳು ತುಂಬಿದ ಚೀಲ ಕಾಣುತ್ತದೆ. ಚಲಿಸುತ್ತಿರುವ ಬಸ್ಸಿನಲ್ಲೇ ಅವರು ಚೀಲದಿಂದ ಒಂದೊಂದೇ ಹೂಗಳನ್ನು ಆಯ್ದು ನೂಲಿನಿಂದ ಮಾಲೆ ಹೆಣೆಯುತ್ತಿರುತ್ತಾರೆ.
ಸಾಮಾನ್ಯವಾಗಿ ರಸ್ತೆ ಕಾಮಗಾರಿಗಳು ಬೇಸಿಗೆ ಕಾಲದಲ್ಲೇ ನಡೆಯು ತ್ತವೆ. ಆ ಸಮಯದಲ್ಲಿ ನಾವು ಪ್ರಯಾಣಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದರೆ ಸುಡುಬಿಸಿಲನ್ನೂ ಲೆಕ್ಕಿಸದೆ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಹೆಂಗಸರು ಮಣ್ಣು, ಕಲ್ಲು ಹೊರುವ ಕೆಲಸವನ್ನೋ ಅಥವಾ ಇನ್ಯಾವುದೋ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ.
ನನ್ನ ಪಕ್ಕದ ಊರಿನಲ್ಲಿ ಒಂದು ಎಣ್ಣೆ ಮಿಲ್ಲು ಎಷ್ಟೋ ವರ್ಷಗಳಿಂದ ಕಾರ್ಯಾಚರಿಸುತ್ತಿತ್ತು. ಅವರು ಕೊಡುವ ಎಣ್ಣೆಯ ಗುಣಮಟ್ಟ ಚೆನ್ನಾಗಿದ್ದುದರಿಂದ ನಾವು ಕೊಬ್ಬರಿಯನ್ನು ಎಣ್ಣೆ ಮಾಡಲು ಅಲ್ಲಿಗೇ ಕೊಡುತ್ತಿದ್ದೆವು. ಅದರ ಯಜಮಾನ ಊರಮೇಲಿನ ಕೆಲಸಗಳಲ್ಲಿ ಇರುತ್ತಿದ್ದುದೇ ಹೆಚ್ಚು. ಬೆಳಗ್ಗೆಯಿಂದ ಸಂಜೆ ತನಕ ಅವರ ಹೆಂಡತಿಯೇ ಕೊಬ್ಬರಿ ಪಡೆಯುವುದು, ಅದನ್ನು ಯಂತ್ರಕ್ಕೆ ಹಾಕಿ ಎಣ್ಣೆ ತೆಗೆದು ದೊಡ್ಡ ದೊಡ್ಡ ಡ್ರಮ್ಗಳಲ್ಲಿ ಶೇಖರಿಸಿಟ್ಟು ಗಿರಾಕಿಗಳಿಗೆ ಕೊಡುವುದು ಹೀಗೆ ಎಲ್ಲ ಉಸ್ತುವಾರಿ ಮಾಡುತ್ತಿದ್ದರು. ಒಂದು ದಿನವೂ ಮನೆಯಿಂದ ಹೊರ ಹೋಗಿ ಇದ್ದವರಲ್ಲ. ಹೀಗಿರುವ ಅವರಿಗೆ ವರ್ಷದ ಹಿಂದೆ ಯಾವುದೋ ಕಾಯಿಲೆ ಬಂತು. ಬೆಂಗಳೂರಿನಲ್ಲಿರುವ ಮಗಳು ಬಂದು ಅವರನ್ನು ಚಿಕಿತ್ಸೆಗೆಂದು ಕರೆದುಕೊಂಡು ಹೋದವಳು ಅಲ್ಲೇ ದೀರ್ಘ ಸಮಯ ಉಳಿಸಿಕೊಂಡಳು. ಇಲ್ಲಿ ಅವರ ಗಂಡನಿಗೆ ಅವರಿಲ್ಲದೆ ಮಿಲ್ಲು ನಡೆಸುವುದು ಕಷ್ಟವಾಗಿ ಶಾಶ್ವತವಾಗಿ ಬಾಗಿಲು ಹಾಕಿದರು.
ನಾನು ಒಮ್ಮೆ ಬೆಂಗಳೂರಿನ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸ ಮಾಡುವ ಗೆಳತಿ ಮನೆಗೆ ಹೋಗಿದ್ದೆ. ಅಲ್ಲಿ ಕೆಳಗೆ ಬಗ್ಗಿ ನೋಡಿದರೆ ಕಟ್ಟಡದ ಕೆಲಸಕ್ಕೆ ಹೋಗುವವರ ಮೂರು ಜೋಪಡಿ ಮನೆಗಳು ಕಾಣುತ್ತಿತ್ತು. ಅಲ್ಲಿನ ಹೆಂಗಸರು ಬೆಳಿಗ್ಗೆ ಐದು ಗಂಟೆಗೆ ಎದ್ದು ಮುಖ ತೊಳೆದು ಸ್ನಾನ ಮಾಡಿ, ಬಟ್ಟೆ ಒಗೆದು, ಮಕ್ಕಳನ್ನು ಎಬ್ಬಿಸಿ ಅವರ ಕೆಲಸಗಳನ್ನೂ ಮಾಡಿ, ಅಡುಗೆ ಮಾಡಿ, ಪಾತ್ರೆ ತೊಳೆದು ಒಂಬತ್ತು ಗಂಟೆಗೆಲ್ಲ ಕೆಲಸಕ್ಕೆ ಹೊರಟು ಬಿಡುತ್ತಿದ್ದರು. ಗಂಡಸರು ಅಷ್ಟೂ ಹೊತ್ತು ಬೀಡಿ ಎಳೆಯುವುದೋ, ಪಕ್ಕದ ಮನೆಯವರೊಂದಿಗೆ ಹರಟೆ ಹೊಡೆಯುವುದೋ, ಸುಮ್ಮನೆ ಅಂಗಳದಲ್ಲಿ ಶತಪಥ ತಿರುಗುವುದೋ ಹೀಗೆ ಕೆಲಸಕ್ಕೆ ಬಾರದ ವಿಷಯಗಳಲ್ಲಿ ತೊಡಗಿರುತ್ತಿದ್ದರು. ಹೆಂಗಸರು ಹೊರಟ ನಂತರವೇ ಅವರ ಹಿಂದೆ ಬಾಲಂಗೋಚಿಗಳ ಹಾಗೆ ಹೋಗುತ್ತಿದ್ದರು. ಹೆಚ್ಚಿನ ಗಂಡಾಳುಗಳು ದುಡಿದ ಕೂಲಿ ಹಣವನ್ನು ಮನೆ ಖರ್ಚಿಗೆ ಕೊಡದೆ ಕುಡಿತ, ಬೀಡಿ, ಸಿಗರೇಟ್, ಇಸ್ಪೇಟ್ ಇತ್ಯಾದಿ ದುಶ್ಚಟಗಳಿಗೆ ಪೋಲು ಮಾಡುತ್ತಾರೆ. ಹೆಂಗಸರಾದರೋ ದುಡಿದು ಮನೆ ನಡೆಸುತ್ತಾರೆ.
ಬೇಸಾಯದ ವಿಷಯಕ್ಕೆ ಬಂದರೆ ಬೀಜವನ್ನು ಜೋಪಾನವಾಗಿ ಕಾಪಿಡುವುದು, ಬಿತ್ತುವುದು, ಗೊಬ್ಬರ ಹಾಕುವುದು, ನೇಜಿ ನೆಡುವುದು, ಪೈರು ಕೊಯ್ಯುವುದು, ಸೂಡಿ ಹೊಡೆಯುವುದು, ಭತ್ತ ಬೇಯಿಸುವುದು-ಒಣಗಿಸುವುದು ಈ ಎಲ್ಲದರಲ್ಲೂ ಹೆಣ್ಣಿನ ಪಾತ್ರವೇ ಅಧಿಕ. ಹೈನುಗಾರಿಕೆಯನ್ನು ತೆಗೆದುಕೊಂಡರೆ ಹಾಲು ಕರೆಯುವುದು, ಹಿಂಡಿ ಕೊಡುವುದು, ಹುಲ್ಲು ಕೊçದು ಹಾಕುವುದೂ ಹೆಚ್ಚಾಗಿ ಹೆಣ್ಣಿನ ಕೆಲಸವೇ. ಕುರಿ, ಕೋಳಿ, ಹಂದಿ ಸಾಕಣೆಯ ವಿಷಯದಲ್ಲೂ ಅಷ್ಟೆ ಹೆಣ್ಣಿನದೇ ಪ್ರಧಾನ ಪಾತ್ರ.
ಈ ಮೇಲಿನ ಉದಾಹರಣೆಗಳಲ್ಲಿ ಹೆಣ್ಣಿನ ಶ್ರಮ, ಶ್ರದ್ಧೆ, ಮನೋಬಲ, ನಿಯತ್ತು, ತಾಳ್ಮೆ, ಶಕ್ತಿ, ಸಾಮರ್ಥ್ಯವನ್ನು ಕಾಣಬಹುದು. ಹೆಣ್ಣು ಕುಟುಂಬದ ಹಿತಕ್ಕಾಗಿ ತನ್ನನ್ನು ಗಂಧದಂತೆ ತೇಯುತ್ತಾಳೆ. ಅವಳ ಸ್ವಂತ ಆಸೆ, ಆಕಾಂಕ್ಷೆಗಳು ಅವಳಿಗೇ ಗೊತ್ತಿರುವುದಿಲ್ಲ. ಹೆಣ್ಣಿನ ಈ ಅವಿರತ ದುಡಿಮೆ, ಕಷ್ಟ ಸಹಿಷ್ಣುತೆ, ಸಹನೆ, ಸ್ವಾವಲಂಬನೆ, ತ್ಯಾಗವನ್ನು ಗಂಡಿನಲ್ಲಿ ಕಾಣಲು ಸಾಧ್ಯವಿಲ್ಲ. ಹೆಣ್ಣನ್ನು ಭೂಮಿಗೆ ಹೋಲಿಸುವುದು ಇದೇ ಕಾರಣದಿಂದ ಇರಬಹುದು. ಅದು ಅವಳು ಹುಟ್ಟಿನಿಂದಲೇ ಪಡೆದ ಗುಣ.
ಹೆಣ್ಣು ಮನೆಕೆಲಸ, ಕೌಟುಂಬಿಕ ಜವಾಬ್ದಾರಿಯನ್ನೂ ನಿರ್ವಹಿಸಿ ಕೃಷಿ ಅಥವಾ ಹೊರಗಿನ ಕೆಲಸದಲ್ಲಿ ಪಾಲ್ಗೊಳ್ಳುತ್ತಾಳೆ. ಆದರೂ ಅವಳ ಕೆಲಸ ಗಣನೆಗೇ ಬರುವುದಿಲ್ಲ. ಯಾಕೆಂದರೆ ಮಹಿಳೆಯರು ಮಾಡುವ ಮನೆಕೆಲಸವನ್ನು ಸೇವೆಯೆಂದು ಪರಿಗಣಿಸಿ, ಹೆಂಗಸರು ಇರಬೇಕಾದುದು ಹೀಗೇ ಎಂದು ಸಮಾಜದಲ್ಲಿ ನಡೆದುಕೊಂಡು ಬಂದುಬಿಟ್ಟಿದೆ. ಕೃಷಿ ಕೇತ್ರದಲ್ಲಿ ಹೆಣ್ಣು, ಗಂಡು ಸಮಾನ ಕೆಲಸ ಮಾಡಿದರೂ ಹೆಣ್ಣಿಗೆ ಸಂಬಳ ಕಡಿಮೆ, ಗಂಡಿಗೆ ಜಾಸ್ತಿ. ಈ ತಾರತಮ್ಯ ಅಂದಿನಿಂದ ಇಂದಿನವರೆಗೂ ಹಾಗೆಯೇ ಇದೆ!
ಮಡಿಕೇರಿ ಆಕಾಶವಾಣಿಯಲ್ಲಿ ಆಗಾಗ ಬಾನುಲಿ ಕಿರು ಸಂದೇಶವೊಂದು ಪ್ರಸಾರವಾಗುತ್ತದೆ. ಅದು ರೈತ ಮತ್ತು ಡಾಕ್ಟರ್ನ ಮಧ್ಯೆ ಗ್ರಾಮೀಣ ಪ್ರದೇಶದ ಕ್ಲಿನಿಕ್ ಒಂದರಲ್ಲಿ ನಡೆಯುವ ಸಂಭಾಷಣೆ. ಹಳ್ಳಿಯ ಹೆಣ್ಣುಮಕ್ಕಳ ವಿಷಯದಲ್ಲಿ ಅದು ಬಹಳ ಪ್ರಸ್ತುತ ಎಂದು ನನಗೆ ಅನಿಸಿದ್ದರಿಂದ ಅದನ್ನು ಇಲ್ಲಿ ಹಾಗೆಯೇ ಕೊಟ್ಟಿದ್ದೇನೆ.
“ಡಾಕ್ಟ್ರೇ ನಮಸ್ಕಾರ’.
“ಓ! ಬಾಪ್ಪ, ಏನು ಸಮಾಚಾರ?’
“ಒಂದು ವಾರವಾಯಿತು ಡಾಕೆó ಕೆಮ್ಮು. ಹೋಗ್ತಾನೆ ಇಲ.
“ಹೂಂ. ಎಷ್ಟು ಮಕ್ಕಳಪ್ಪಾ ನಿಂಗೆ? ಏನು ಕೆಲಸ ಮಾಡ್ತೀಯ?’
“ನಾನು ರೈತ ಸ್ವಾಮಿ’.
“ಎಷ್ಟು ಮಕ್ಕಳು?’
“ಮೂರುವರೆ’.
“ಮೂರೂವರೆ?’
“ಒಂದು ಹೊಟ್ಟೆಯಲ್ಲಿದೆ’.
“ಓ! ಅಂದ್ರೆ ಹೆಂಡ್ತಿ ಗರ್ಭಿಣಿ! ಏನು ಕೆಲಸ ಮಾಡ್ತಾಳೆ ನಿನ್ನ ಹೆಂಡ್ತಿ?’
“ಏನಿಲ್ಲ ಸ್ವಾಮಿ. ಅವಳು ಮನೆಯಲ್ಲೇ ಇರ್ತಾಳೆ’.
“ಏನೂ ಕೆಲ್ಸ ಮಾಡಲ್ವ?’
“ಇಲ್ಲ ಸಾಮಿ. ಬೆಳಿಗ್ಗೆ ನಾಲ್ಕು ಗಂಟೆಗೆ ಏಳ್ತಾಳೆ. ನೀರು, ಸೌದೆ ಹೊತ್ತು ತರ್ತಾಳೆ. ಒಲೆ ಹೊತ್ತಿಸಿ ನಾಷ್ಟಾ ರೆಡಿ ಮಾಡ್ತಾಳೆ. ಮತ್ತೆ ಹೊಳೆ ಕಡೆ ಸ್ನಾನ ಮಾಡ್ಕೊಂಡು ಹಂಗೆ ಬಟ್ಟೆನೂ ಒಗೊRಂಡು ಬರ್ತಾಳೆ. ವಾರಕ್ಕೊಂದು ಬಾರಿ ಗಿರಣಿಗೆ ಹೋಗಿ ಹಿಟ್ಟು ಬೀಸ್ಕೊಂಡು ಬರ್ತಾಳೆ. ನಂತ್ರ ಹತ್ರದ ಸಂತೆಗೆ ಮಕ್ಕಳನ್ನೂ ಕರೊRಂಡು ಹೋಗಿ ಟೊಮೆಟೊ ಮಾರ್ತಾಳೆ. ಅÇÉೇ ಬುಟ್ಟಿ ಹೆಣೀತಾಳೆ. ಬರುವಾಗ ಮನೆಗೆ ಬೇಕಾದ ಸಾಮಾನೂ ತರ್ತಾಳೆ. ಅಲ್ಲಿಂದ ಬಂದು ಮಧ್ಯಾಹ್ನದ ಅಡುಗೆ ತಯಾರು ಮಾಡ್ತಾಳೆ’.
“ಮತ್ತೆ ನಿನಗೆ ಮಧ್ಯಾಹ್ನದ ಊಟ?’
“ಹೂಂ. ಅವಳೇ ಮೂರು ಕಿ.ಮೀ. ನಡೆದುಕೊಂಡು ಹೊಲಕ್ಕೆ ಬಂದು ಊಟ ತಂದು ಕೊಡ್ತಾಳೆ. ನಾನು ಊಟ ಮಾಡಿ ಬದುವಲ್ಲಿ ಅÇÉೇ ಮಲಗಿ ಸ್ವಲ್ಪ ವಿಶ್ರಾಂತಿ ತಗೋತೀನಿ’.
“ಆಮೇಲೆ?’
“ಆಮೇಲೆ ಅವಳು ಹೊಲದಲ್ಲಿ ಕಳೆ ಕೀಳ್ತಾಳೆ. ಕೈತೋಟಕ್ಕೆ ನೀರು ಹಾಕ್ತಾಳೆ. ಸಂಜೆ ಒಟ್ಟಿಗೆ ಮನೆಗೆ ಬರಿ¤àವಿ’.
“ಆಮೇಲೆ?’
“ನಾನು ಸ್ನೇಹಿತರ ಜೊತೆ ಸ್ವಲ್ಪ ಕಾಲ ಕಳೀತೀನಿ’.
“ಅಲ್ಲಪ್ಪಾ, ನೀನೇನೋ ಸ್ನೇಹಿತರ ಜೊತೆ ಹೊರ ಹೋಗ್ತಿàಯಾ? ಅವಳೇನು ಮಾಡ್ತಾಳೆ?’
“ಅವಳು ಮನೆಯಲ್ಲೇ ಇರ್ತಾಳೆ ಸಾಮಿ. ರಾತ್ರಿ ಊಟಕ್ಕೆ ರೆಡಿ ಮಾಡಬೇಕಲ್ಲ?’
“ಓಹೋಹೋ! ಅಂದ್ರೆ ರಾತ್ರಿ ಊಟಕ್ಕೆ ಮನೆಗೆ ಬರಿ¤àಯಾ?’
“ಹೂಂ. ತಪ್ಪದೆ ಬರ್ತೀನಿ. ಊಟ ಮಾಡಿ ಬೇಗ ಮಲಕ್ಕೋತೀನಿ’.
“ಅವಳು?’
“ಇಲ್ಲ ಸಾಮಿ. ಪಾತ್ರೆಗೀತ್ರೆ ಎಲ್ಲ ತೊಳೀಬೇಕಲ್ಲ?’
“ಅಂದ್ರೆ ಆಗ್ಲೆà ಹೇಳಿದೆ ಅವಳು ಏನೂ ಕೆಲಸ ಮಾಡಲ್ಲಂತ?!’
“ಹೂಂ. ಹೇಳಿದ್ನಲ್ಲ ಡಾಕ್ಟೇ. ಅವಳೇನೂ ಕೆಲಸ ಮಾಡಲ್ಲ. ಮನೇಲಿರ್ತಾಳೆ’.
“ಅಂದ್ರೆ ನಿನ್ನ ದೃಷ್ಟಿನಲ್ಲಿ ಇವೆಲ್ಲ ಕೆಲಸಾನೇ ಅಲ್ಲ…’
“ಹೂಂ. ಮತ್ತೆ?’
ಹಳ್ಳಿಗಳಲ್ಲಿ ಮಾತ್ರವಲ್ಲ ನಗರಗಳಲ್ಲೂ ಗೃಹಿಣಿಯರ ಕೆಲಸ ಲೆಕ್ಕಕ್ಕಿಲ್ಲ.
ಸಂಸಾರದಲ್ಲಿ ಮಹಿಳೆಯ ಕೆಲಸವನ್ನು ಬೇರು ಬಿಡುವ ಕೆಲಸಕ್ಕೆ ಹೋಲಿಸಬಹುದು. ಬೇರು ಬಿಡುವುದು ಯಾರಿಗೂ ಕಾಣಿಸದ ಆದರೆ ಮಹತ್ವದ ಕೆಲಸ. ಇಡೀ ಮರ ನಿಂತಿರುವುದೇ ಬೇರಿನ ಭದ್ರ ತಳಹದಿಯ ಮೇಲೆ. ಇದನ್ನು ಬರೆಯುವಾಗ ಯಾಕೋ ಕವಿ ಜಿ.ಎಸ್. ಶಿವರುದ್ರಪ್ಪ ಬರೆದ “ಗಂಡ, ಮಕ್ಕಳನು ತೂಗಿದಾಕೆ. ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ?’ ಪದ್ಯವೊಂದು ನೆನಪಾಗುತ್ತಿದೆ.
ಸಹನಾ ಕಾಂತಬೈಲು