ಬಟ್ಟೆಯಂಗಡಿಯೊಳಗೊಂದು ವಿಶಿಷ್ಟಾದ್ವೈತ


Team Udayavani, Jun 8, 2018, 6:00 AM IST

cc-27.jpg

ಇಷ್ಟಪಟ್ಟು ಖರೀದಿಸಿದ ಸೀರೆ ಧರಿಸಿ ಕನ್ನಡಿಯ ಎದುರು ಮಾರ್ಜಾಲ ನಡಿಗೆಯಲ್ಲಿ ಸಿಂಹಾವಲೋಕನ ಮಾಡುತ್ತ ಒಮ್ಮೆ ಹೆಗಲ ಮೇಲೆ ಬಾರ್ಡರ್‌ ಬರುವಂತೆ, ಇನ್ನೊಮ್ಮೆ ನೆರಿಗೆ ಬದಿಗೆ ಸರಿಸುವಂತೆ, ಮಗದೊಮ್ಮೆ ಸಿಂಗಲ್‌ ಸೆರಗು ಹಿಡಿದು, ಮತ್ತೂಮ್ಮೆ ಸೆರಗು ಪೋಣಿಸಿ ಪಿನ್‌ ಮಾಡಿಕೊಂಡಂತೆ ಅರುವತ್ತು, ತೊಂಬತ್ತು, ನೂರೆಂಬತ್ತು, ಮುನ್ನೂರರುವತ್ತು ಕೋನದಲ್ಲಿ ನಿಂತು ಪರೀಕ್ಷಿಸಿಯೂ ಕೆಲವೊಮ್ಮೆ ಅಸಮಾಧಾನ ಉಳಿಯುತ್ತದೆ.

ಮನುಷ್ಯನಿಗೆ ಜಗತ್ತಿನಲ್ಲಿ ಅತಿದೊಡ್ಡ ಸಮಸ್ಯೆಯೆಂದರೆ ಆಯ್ಕೆ. ಕವಲು ದಾರಿಗಳನ್ನು ಸೃಷ್ಟಿಸಿ ನಮಗೆ ಗೊಂದಲ ಹುಟ್ಟಿಸಿ ಸೋಲು-ಗೆಲುವು, ಸಂತಸ-ದುಃಖದ ಫ‌ಲಿತಾಂಶಗಳನ್ನು ಹುಟ್ಟಿಸುವುದೇ ಆಯ್ಕೆ. ಆಯ್ಕೆಯ ಗೊಂದಲಗಳ ಪ್ರತ್ಯಕ್ಷದರ್ಶನವಾಗಿಸುವುದು ಬಟ್ಟೆಯಂಗಡಿ. ಬಟ್ಟೆಯಂಗಡಿ ದ್ವಂದ್ವದ ಪರಾಕಾಷ್ಠೆಗೆ ಒಯ್ದು ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಸಮದೂರ-ಸುಮಧುರ ದಾಂಪತ್ಯ ಪರೀಕ್ಷೆಗೆ ಬಟ್ಟೆಯಂಗಡಿಯೇ ಸ್ಪರ್ಧಾಕಣ. ಎಂತಹ ಹೊಂದಾಣಿಕೆಯ ದಂಪತಿಗಳಿಗೂ ಇಲ್ಲಿ ಚರ್ಚೆ ನಡೆದೇ ನಡೆಯುತ್ತದೆ. ಗಂಡನ ರುಚಿ ವೈವಿಧ್ಯಗಳ ಕುರಿತು ಹೆಂಡತಿಗೆ ಸಂಶಯ ಬರುವುದು ಇಲ್ಲಿಯೇ. ಹಾಗೆಯೇ ಹೆಂಡತಿ ಆಯ್ಕೆ ಮಾಡಿದ ಬಟ್ಟೆ ಗಂಡನಿಗೆ ಇಷ್ಟವಾಗುವುದೇ ಇಲ್ಲ. ಆತನ ಕಣ್ಣುರಿಗೆ ಆತ ಕೊಡುವ ದುಡ್ಡು ಕಾರಣವಿರಬಹುದೇನೊ?

ಬಟ್ಟೆಯಂಗಡಿಯಲ್ಲಿ ಬಟ್ಟೆ ಆಯ್ಕೆ ಮಾಡಿಕೊಳ್ಳುವವರು ಸಾಮಾನ್ಯವಾಗಿ ನಾಲ್ಕು ರೀತಿಯವರು. ಅಂಗಡಿ ಪ್ರವೇಶಿಸಿದ ಕೂಡಲೇ ಆಯ್ಕೆಯಲ್ಲಿ ಹೆಚ್ಚು ಗೊಂದಲಗಳಿಲ್ಲದೇ ನಿರ್ದಿಷ್ಟ  ಸ್ಪಷ್ಟ ನಿಲುವಿನಲ್ಲಿ ಬಟ್ಟೆ ಆಯ್ಕೆ ಮಾಡಿಕೊಳ್ಳುವವರು ಒಂದು ವರ್ಗದವರು. ಒಂದಿಷ್ಟು ವಸ್ತ್ರಗಳನ್ನು ಮೇಲೆ-ಕೆಳಗೆ, ಆಚೆ-ಈಚೆ, ಅಡ್ಡಾದಿಡ್ಡಿ ನೋಡಿ ತೆಗೆದುಕೊಳ್ಳುವವರು ಎರಡನೆಯ ವರ್ಗದವರು. ಸಾವಧಾನವಾಗಿ ನೋಡುತ್ತ ಗಡಿಬಿಡಿಯಿಲ್ಲದೇ ಸಾವಧಾನ ಚಿತ್ತದಿಂದ ಖರೀದಿಸುವ ಮೂರನೇ ವರ್ಗದವರು. ವಿವಿಧ ಬಟ್ಟೆಗಳನ್ನು ರಾಶಿಹಾಕಿಕೊಂಡು ಸಾಧ್ಯತೆಗಳನ್ನು ಹುಡುಕಿಕೊಂಡು, ನಂತರ ಖರೀದಿಸಿ ಮನೆಗೆ ಬಂದು ಆಯ್ಕೆಯ ಕುರಿತು ಅತೃಪ್ತಿಯಿಂದ ಕೊರಗುವವರು ನಾಲ್ಕನೆಯ ವರ್ಗದವರು. ದೃಢತೆ, ಚಂಚಲತೆಯ ಪರೀಕ್ಷೆ ನಡೆಯುವುದು ಇಲ್ಲಿಯೇ.

ಒಮ್ಮೆ ಆಯ್ಕೆ ಮಾಡಿ ಖರೀದಿಸಿದ ವಸ್ತ್ರವನ್ನು ವಾಪಾಸು ಕೊಡುವುದೋ, ಬದಲಾಯಿಸಿಕೊಳ್ಳುವುದೋ ಅತ್ಯಂತ ಕಷ್ಟದ ಕೆಲಸ. ಏನೋ ಅಪರಾಧ ಮಾಡಿದವರಂತೆ, ಮಾಲು ಸಮೇತ ಸಿಕ್ಕಿಬಿದ್ದ ಕಳ್ಳನಂತೆ ಅಂಗಡಿಯೊಳಗೆ ಹೆಜ್ಜೆಯಿಡುತ್ತೇವೆ. ಮೊದಲು ಬಟ್ಟೆ ಖರೀದಿಸಲು ಅಂಗಡಿಯೊಳಗೆ ಹೋದಾಗ “”ಬನ್ನಿ, ಬನ್ನಿ, ಇದು ಕುಂಕುಮ ಭಾಗ್ಯ ಸೀರೆ. ಇದು ಆಪ್ತಮಿತ್ರ ಸೀರೆ, ಇದು ಪುಟ್ಟಗೌರಿ ಸೀರೆ, ಇದು ನಾಗಿಣಿ ಸೀರೆ… ನೋಡಿ ಮ್ಯಾಡಮ್‌, ನೋಡೋಕ್ಕೆ ದುಡ್ಡು ಕೊಡಬೇಕಾ” ಎಂದು ಮೂವತ್ತಾರು ಹಲ್ಲು ತೋರಿಸುತ್ತ ಹಲ್ಲುಗಿಂಜಿದವನು ಈಗ ನಮಗೆ ಸಾಲ ಕೊಟ್ಟವನ ಹಾಗೇ ನಮ್ಮನ್ನು ಕಡೆಗಣಿಸುತ್ತಾನೆ. ನಮ್ಮನ್ನು ಕಂಡೂ ಕಾಣದವರ ಹಾಗೇ ವರ್ತಿಸುತ್ತಾನೆ. ಪೆಚ್ಚುಮೋರೆ ಹಾಕಿ ನಿಂತ ನಮ್ಮನ್ನು ಉಳಿದ ಗಿರಾಕಿಗಳ ನಡುವೆ ಉಪೇಕ್ಷಿಸುತ್ತಾನೆ. ವಿನಯಪೂರ್ವಕ ತುಚ್ಚೀಕರಣ ಅಂದರೆ ಇದೇ ಇರಬೇಕು. ಮರು ಆಯ್ಕೆ ಸಿಗುವುದು ಇನ್ನೂ ಅಧ್ವಾನ. ಮೊದಲು ಖರೀದಿಸಿದ ಸೀರೆ ಏಳುನೂರು ರೂಪಾಯಿಗಳ¨ªಾಗಿದ್ದರೆ ಎರಡನೆಯ ಬಾರಿಯ ಆಯ್ಕೆಯಲ್ಲಿ ಇಷ್ಟವಾಗುವುದು ಆರುನೂರು ರೂಪಾಯಿಗಳದ್ದು. ಉಳಿದ ನೂರು ರೂಪಾಯಿ ವಾಪಸು ಕೊಡುವುದಿಲ್ಲ ಇದು ಮಾರಾಟ ನೀತಿ. ಜೊತೆಗೆ ಅಂಗಡಿಯವನು ಕೂಡ ಮೊದಲು ಕೊಂಡುಕೊಂಡ ಸೀರೆಗಿಂತ ತುಸು ಹೆಚ್ಚಿನ ಬೆಲೆಯ ಸೀರೆಗಳನ್ನೇ ತೋರಿಸುತ್ತಾನೆ. ಒಮ್ಮೆ ಖರೀದಿಸಿದ ವಸ್ತ್ರ ಬದಲಾಯಿಸುವುದಕ್ಕೆ ಹೋದ ತಪ್ಪಿಗೆ ಅನಿವಾರ್ಯವಾಗಿ ಹೆಚ್ಚು ಬೆಲೆತೆತ್ತು ಮನಸ್ಸಿಗೆ ಹಿತ ಕೊಡದ ವಸ್ತ್ರವನ್ನು ಖರೀದಿಸಿ ತರುತ್ತೇವೆ. ಆದ್ದರಿಂದಲೇ ಒಮ್ಮೆಯೇ ಮದುವೆಯಾಗಬೇಕು, ಒಮ್ಮೆಯೇ ವಸ್ತ್ರ ಖರೀದಿಸಬೇಕು.

ಶೋಕೇಸ್‌ನಲ್ಲಿ ಇಟ್ಟ ಸೀರೆ ನಮಗೆ ಚಂದ ಕಾಣಿಸುತ್ತದೆ. ಅದೇ ಸೀರೆ ನಾವು ದುಡ್ಡು ಕೊಟ್ಟು ತೆಗೆದುಕೊಂಡು ಉಟ್ಟಾಗ ಅಷ್ಟೊಂದು ಚೆನ್ನಾಗಿದೆ ಎಂಬ ಭಾವ ಬರುವುದಿಲ್ಲ. ಬಟ್ಟೆಯಂಗಡಿಯಲ್ಲಿ ನಮ್ಮ ಪಕ್ಕದವಳು ಹಿಡಿದುಕೊಂಡ ಸೀರೆ ಅದ್ಭುತವಾಗಿ ಕಾಣುತ್ತದೆ. ಅದೇ ಸೀರೆ ನಾವು ಹಿಡಿದುಕೊಂಡರೆ, ಉಟ್ಟು ಕೊಂಡರೆ ತುಸುವೂ ಸಂತೋಷವಿಲ್ಲ! ಏನಿದು ವೈಚಿತ್ರ್ಯ! ಒಂದೇ ಅಂಗಡಿ  ಒಂದೇ ಸೀರೆ  ಒಂದೇ ಗಳಿಗೆಯಲ್ಲಿ ಭಿನ್ನಭಿನ್ನವಾಗಿ ಕಾಣಿಸುವುದು ಬಟ್ಟೆಯಂಗಡಿಯಲ್ಲಿ ಮಾತ್ರ. ಹಿತವೆನಿಸಿದ ಬಟ್ಟೆ ಕಡಿಮೆ ಕ್ರಯದಾಗಿದ್ದರೆ ಏನೋ ಗುಮಾನಿ, ವರದಕ್ಷಿಣೆ ಬೇಡ ಎಂಬ ವರನಂತೆ, ಏನಾದರೂ ಐಬು ಇರಬಹುದೇ ಎಂಬ ಸಂಶಯ. ಹೆಚ್ಚು ದುಡ್ಡು ಕೊಟ್ಟು ತಂದರೆ ಏನೋ ಸಂಭ್ರಮ, ತೃಪ್ತಿ. ಸ್ವಂತಕ್ಕೆ ಬಟ್ಟೆ ಖರೀದಿಸಲು ತೆರಳುವಾಗ ಜೊತೆಗೆ ಯಾರನ್ನೂ ಕರೆದೊಯ್ಯಬಾರದು ಇದು ನನ್ನ ಅನುಭವ. ನಮ್ಮ ಮೆದುಳಿಗೆ ಕೈ ಹಾಕುವಂತೆ ಜೊತೆಗಾರರು ಸೀರೆಯನ್ನು ಹೊಗಳುವಾಗ, ಲೋಕೋಭಿನ್ನ ರುಚಿ ಎಂಬುದನ್ನು ಮರೆತು ಸ್ನೇಹದ ಒತ್ತಡಕ್ಕೊ, ಮುಲಾಜಿಗೊ ಒಳಗಾಗಿ ಖರೀದಿಸುತ್ತೇವೆ. ಖರೀದಿಯ ನಂತರ ಏನೋ ಅಸಮಾಧಾನ, ಅತೃಪ್ತಿ.

ಇಷ್ಟಪಟ್ಟು ಖರೀದಿಸಿದ ಸೀರೆ ಧರಿಸಿ ಕನ್ನಡಿಯ ಎದುರು ಮಾರ್ಜಾಲ ನಡಿಗೆಯಲ್ಲಿ ಸಿಂಹಾವಲೋಕನ ಮಾಡುತ್ತ ಒಮ್ಮೆ ಹೆಗಲ ಮೇಲೆ ಬಾರ್ಡರ್‌ ಬರುವಂತೆ, ಇನ್ನೊಮ್ಮೆ ನೆರಿಗೆ ಬದಿಗೆ ಸರಿಸುವಂತೆ, ಮಗದೊಮ್ಮೆ ಸಿಂಗಲ್‌ ಸೆರಗು ಹಿಡಿದು, ಮತ್ತೂಮ್ಮೆ ಸೆರಗು ಪೋಣಿಸಿ ಪಿನ್‌ ಮಾಡಿಕೊಂಡಂತೆ ಅರುವತ್ತು, ತೊಂಬತ್ತು, ನೂರೆಂಬತ್ತು, ಮುನ್ನೂರರುವತ್ತು ಕೋನದಲ್ಲಿ ನಿಂತು ಪರೀಕ್ಷಿಸಿಯೂ ಕೆಲವೊಮ್ಮೆ ಅಸಮಾಧಾನ ಉಳಿಯುತ್ತದೆ. ಸೀರೆಯ ಬಣ್ಣ ಟೊಮ್ಯಾಟೋ ರೆಡ್‌ ಬದಲಿಗೆ ನೀರುಳ್ಳಿ ಪಿಂಕ್‌ ಆಗಿದ್ದರೆ, ಅಂಚು ಮಾವಿನಹಣ್ಣು ಡಿಸೈನ್‌ ಬದಲಿಗೆ ಸೇಬಿನ ಹಣ್ಣು ಆಗಿದಿದ್ದರೆ, ಸೆರಗಿನಲ್ಲಿ ಗರಿ ಬಿಚ್ಚಿದ ನವಿಲಿನ ಡಿಸೈನ್‌ ಬದಲಿಗೆ ಗರಿ ಮುಚ್ಚಿದ ನವಿಲು ಇರಬಾರದಿತ್ತೆ ಎಂದು ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿಯುತ್ತ ಕಲ್ಪಿಸಿಕೊಳ್ಳುತ್ತ ನೊಂದುಕೊಳ್ಳುತ್ತ ಖರೀದಿಯ ಖುಷಿಯನ್ನು ಕಳೆದುಕೊಳ್ಳುತ್ತೇವೆ. ಬಾಲ್ಯದಲ್ಲಿ ಮುಗ್ಧತೆಯ ಆವರಣದೊಳಗೆ ಹೊಸವಸ್ತ್ರ ನೀಡುತ್ತಿದ್ದ ಸಂಭ್ರಮ ಆಯ್ಕೆಗಳ ಸಾಧ್ಯತೆಗಳು, ಅರಿವು ಹೆಚ್ಚಾದಂತೆ ಕಡಿಮೆಯಾಗಿದೆ. ಬಾಲ್ಯದಲ್ಲಿ ಹೊಸ ವಸ್ತ್ರ ಧರಿಸಿದಾಗ ಮತ್ತೆ ಬಿಚ್ಚುವುದಕ್ಕೆ ಕೇಳುತ್ತಿರಲಿಲ್ಲ. ಧೂಳು-ಕೂಳು, ಕೆಸರು-ಮೊಸರು, ಮಳೆ-ಗಾಳಿ, ಕಸ-ಕಲೆ ಯಾವುದರ ಬಗ್ಗೆಯೂ ತಲೆಕಡಿಸಿಕೊಳ್ಳುತ್ತಿರಲಿಲ್ಲ. ಈಗ ಧರಿಸಿದ ಹೊಸ ಬಟ್ಟೆ ಅದಷ್ಟು ಬೇಗ ಬಿಚ್ಚಿ ಇಡುವುದಕ್ಕೆ, ಮಡಚಿ ಇಡುವುದಕ್ಕೆ, ತುಸು ಹಾನಿಯಾಗದಂತೆ ಒಪ್ಪವಾಗಿಡುವುದಕ್ಕೆ ಹೆಣಗುತ್ತೇವೆ. ಈಗ ಎಲ್ಲವೂ ಲೆಕ್ಕಾಚಾರದ ಬದುಕು.

ಎಂಥ  ಸ್ಥಿರ ಮನಸ್ಸನ್ನು ಕೂಡಾ ತಟಪಟ ಮಾಡಬಲ್ಲ ಚಾಣಾಕ್ಷ ಸೇಲ್ಸ್‌ ಮ್ಯಾನ್‌ಗಳ ಮಾತಿನ ಮೋಡಿಯೋ, ಸೀರೆಗಳನ್ನು ನಮ್ಮ ಮುಂದೆ ಹರಡಿ ರೀಸೆಂಟ್‌ ಟ್ರೆಂಡ್‌, ನ್ಯೂ ಡಿಸೈನ್‌, ಗ್ರ್ಯಾಂಡ್‌ ಲುಕ್‌, ಪಾಸ್ಟ್‌ ಮೂವಿಂಗ್‌, ವಾಶ್‌ ಇಝಿ, ಲೈಟ್‌ವೈಟ್‌, ಪ್ರೀಟಿ ಕಲರ್‌, ಗ್ರೇಟ್‌ ಟೆಕ್ಚರ್‌, ಸಿಂಗಲ್‌ ಫೀಸ್‌, ರ್ಯಾರ್‌ ಕಲೆಕ್ಷನ್‌, ವೆರಿ ಸಾಫ್ಟ್ , ನೈಸ್‌ ಬಾರ್ಡರ್‌, ಸೂಪರ್‌ ಮಾಡೆಲ್‌, ರಿಚ್‌c ಪಲ್ಲು, ಬೆಸ್ಟ್‌ ಕ್ವಾಲಿಟಿ ಎಂದು ವರ್ಣಿಸುವ ಭರಾಟೆಗೆ ಆತ ನೀಲ ಸಾಗರದಲ್ಲಿ ಅಲ್ಲಲ್ಲಿ ಅರಳಿದ ಕೆಂದಾವರೆಗಳು, ಕಮ್ಯೂನಿಸ್ಟ್‌ ಗಿಡದ ಮೇಲೆ ಝೇಂಕರಿಸುವ ದುಂಬಿಗಳು ಎಂದು ವರ್ಣಿಸಿದರೂ ನಮ್ಮ ಕಿವಿಯನ್ನು ಅವನಿಡುವ ದಾಸವಾಳಕ್ಕೆ ಅಡವಿರಿಸಿಕೊಳ್ಳುತ್ತೇವೆಯೇನೋ? 

ವಸ್ತ್ರ ಖರೀದಿಯ ಕುರಿತಂತೆ ಹೆಣ್ಮಕ್ಕಳನ್ನು ಸದಾ ಹೀಯಾಳಿಕೆಯಿಂದ, ಕಾಣುವುದು ಸಾಮಾನ್ಯ. ಹೆಣ್ಮಕ್ಕಳು ವಸ್ತ್ರ ಖರೀದಿಯಲ್ಲಿ ಹೆಚ್ಚು ಸಮಯ ವ್ಯಯಿಸುತ್ತಾರೆ ಎನ್ನುವುದು ಜಾಗತಿಕ ಸತ್ಯ, ಸಾರ್ವಕಾಲಿಕ ಸತ್ಯ ಎಂಬಂತೆ ಬಿಂಬಿತವಾಗಿದೆ. ಆಕೆಯ ವ್ಯಕ್ತಿತ್ವವನ್ನು ಹೀಗಳೆಯುವುದಕ್ಕೆ ಇನ್ನಿಲ್ಲದಂತೆ ಗಾದೆಗಳು, ಪಡೆನುಡಿಗಳು ಸೃಷ್ಟಿಯಾಗುತ್ತವೆ. “ಎಮ್ಮೆ ನೀರಿಗೆ ಬಿದ್ರೆ ಮೇಲೆ ಬರಲ್ಲ, ಹೆಣ್ಮಕ್ಕಳು ಸೀರೆ ಅಂಗಡಿಗೆ ಹೋದ್ರೆ ಹೊರಗೆ ಬರಲ್ಲ ಮತ್ತು ಗಂಡಸು ಬಾರ್‌ನಿಂದಾದರೂ ಬೇಗ ಹೊರಗೆ ಬರಬಹುದು, ಹೆಂಗಸು ಸೀರೆ ಅಂಗಡಿಯಿಂದ ಬೇಗ ಹೊರಗೆ ಬರಲಾರಳು’ ಎಂಬ ಮಾತುಗಳು ಅತ್ಯಂತ ಹಗುರವಾಗಿ ಹೆಣ್ಮಕ್ಕಳನ್ನೂ ಅಳೆಯುವ ಮಾನದಂಡಗಳಾಗಿವೆ. ಹೌದೇ? ಹೆಂಗಸರು ಬಟ್ಟೆಯಂಗಡಿಯಲ್ಲಿ ಸೀರೆ ಖರೀದಿಗೆ ಬಹಳ ಹೊತ್ತು ತೆಗೆದುಕೊಳ್ತಾರೆಯೇ? ಹೌದೆಂದಾದರೆ, ಯಾಕೆ? ಬದುಕಿನಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಅವರಿಗೆ ಅವಕಾಶ ದೊರೆಯದೇ ಇದ್ದಾಗ, ಇಲ್ಲೊಂದಿಷ್ಟು ಆಯ್ಕೆಗೆ ತುಸು ಸ್ಪೇಸ್‌ ಹುಡುಕಿಕೊಳ್ಳುವುದು ತಪ್ಪಾಗುತ್ತದೆಯೇ? ಮನಸ್ಸಿನ ಬಣ್ಣಗಳನ್ನು ಸೀರೆಗಳಲ್ಲಿ ಹುಡುಕುವ, ಬದುಕಿನ ಖಾಲಿತನಗಳನ್ನು ಸೀರೆಯ ಅಂಚುಗಳಲ್ಲಿ ಕಾಣುವ ಹೆಣ್ಣಿನ ಮನಸ್ಸು ಸೀರೆಯ ಸೆರಗಿನಲ್ಲಿ ಹೇಳಿದ ಕತೆಗಳನ್ನು- ಹೇಳದ ಪ್ರಾರ್ಥನೆಗಳನ್ನು ನೇಯ್ದಿರಬಹುದು. ಸೀರೆಯ ನೆರಿಗೆಗಳಲ್ಲಿ ನಿರೀಕ್ಷೆಯ ಜಲಪಾತಗಳಿದ್ದರೆ, ಸೀರೆಯ ಒಡಲಿನಲ್ಲಿ ಆತ್ಮದ ಪಸೆ ಇರಬಹುದು. ಸೀರೆಯ ನವಿರುತನದಲ್ಲಿ ಮುರಿದುಬಿದ್ದ ಪಾರಿಜಾತದ ಘಮಲಿನ ನೆನಪಿರಬಹುದು. ಹಾಗಾಗಿ, ಬಟ್ಟೆಯಂಗಡಿಯ ಬಣ್ಣಗಳಲ್ಲಿ ಹೆಣ್ಣಿನ ಮನಸ್ಸು ಒಳಗೊಳಗೆ ಹಾಡು ಕಟ್ಟಿಕೊಂಡು ಕುಣಿಯುವುದು, ಕಣ್ಣಂಚಿನಲ್ಲಿ ತೇವಗೊಂಡು ಹಗುರವಾಗುವುದು ವ್ಯಂಗ್ಯದ, ಅವಮಾನಿಸುವ ವಸ್ತುವಾಗಬೇಕಾಗಿಲ್ಲ, ಅಲ್ಲವೇ?

ಸುಧಾರಾಣಿ

ಟಾಪ್ ನ್ಯೂಸ್

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.