ಪ್ರೀತಿಯ ಮೇಷ್ಟ್ರು
Team Udayavani, Sep 8, 2017, 6:20 AM IST
ನಾನು ಐದನೆಯ ತರಗತಿಯಲ್ಲಿದ್ದಾಗ ನಮಗೆ ಹೊಸ ಮೇಷ್ಟ್ರು ಬಂದ್ರು. ನೋಡೋಕೆ ತುಂಬ ಮುದ್ದಾಗಿದ್ದರು. ಅವರು ವಿಜ್ಞಾನ ಅಧ್ಯಾಪಕ. ಮೊದಲ ದಿನ ತರಗತಿಗೆ ಬಂದು ಎಲ್ಲರನ್ನು ಪರಿಚಯ ಮಾಡಿಕೊಂಡರು. ಮತ್ತೆ ಪಾಠ ಮಾಡೋಕೆ ಶುರು ಮಾಡಿದ್ರು. ಒಂದೆರಡು ದಿನದಲ್ಲಿ ಒಂದು ಪಾಠವನ್ನು ಮುಗಿಸಿಯೇ ಬಿಟ್ಟರು. ಒಂದು ಪಾಠ ಮುಗಿದ ಬಳಿಕ ಒಂದು ಟೆಸ್ಟ್ ಮಾಡ್ತಾ ಇದ್ರು. ಹೀಗೆ ಪರೀಕ್ಷೆಯ ಹಿಂದಿನ ದಿನ ಕಂಠಪಾಠ ಮಾಡಿ ಪರೀಕ್ಷೆ ಬರೆದೆವು. ಆದರೆ, ಮರುದಿನ ನನಗೆ ಆ ಪರೀಕ್ಷೆಯಲ್ಲಿ ಇಪ್ಪತ್ತೈದಕ್ಕೆ ಇಪ್ಪತೂ¾ರು ಬಂದಿತ್ತು. ಯಾವತ್ತೂ ಅಂಕದಲ್ಲಿ ಕಡಿಮೆ ಇದ್ದ ನನಗೆ ಆವತ್ತು ತರಗತಿಗೆ ಆ ವಿಷಯದಲ್ಲಿ ಸೆಕೆಂಡ್ ಆಗಿದ್ದೇ, ಪೆನ್ಸಿಲ್ ಅನ್ನು ಬಹುಮಾನವಾಗಿ ಸರ್ ಕೈಯಿಂದ ಪಡೆದಿದ್ದೆ.
ಹೀಗೆ ಕಾಲ ಕಳೆಯಿತು. ಏಳನೆಯ ತರಗತಿಯಲ್ಲಿ ಇರಬೇಕಾದರೆ ನನ್ನ ಪ್ರೀತಿಯ ವಿಜ್ಞಾನ ಮೇಷ್ಟ್ರು ಬೇರೆ ಕಡೆ ವರ್ಗಾವಣೆ ಆಗುತ್ತಾರೆ ಎಂಬ ಮಾಹಿತಿ ತಿಳಿಯಿತು. ಅವರು ನಮ್ಮ ಶಾಲೆಯಿಂದ ಬಿಟ್ಟು ಹೋಗುವ ದಿನ ನಾವು ಅತ್ತಿದ್ದೆ ಅತ್ತಿದ್ದು. ಆ ದಿನ ನಮ್ಮೊಟ್ಟಿಗೆ ಅವರು ಫೋಟೋ ತೆಗೆಸಿಕೊಂಡು ಹೋಗಿದ್ದರು. ಏಳನೆಯ ತರಗತಿಗೆ ಕಲಿಕೆಯಲ್ಲಿ ಪ್ರಥಮ ಸ್ಥಾನವನ್ನು ಆವಾಗ ಪಡೆದಿದ್ದೆ.
ಇನ್ನೇನು, ಹೈಸ್ಕೂಲ್. ನಮ್ಮ ಹಳ್ಳಿಯಲ್ಲಿ ಏಳನೇ ತರಗತಿಯವರೆಗೆ ಮಾತ್ರ ಇದ್ದದ್ದು. ಇದಕ್ಕಾಗಿ ಬಸ್ಸಿನಲ್ಲಿ ಹೋಗಬೇಕಾಯಿತು. ಮೊದಲು ಭಯವಾದರೂ ನಂತರ ಅಷ್ಟೇನೂ ಗೊತ್ತಾಗಲಿಲ್ಲ. ಆದರೆ ಪ್ರೈಮರಿ ಶಾಲೆಯಲ್ಲಿ ಸರ್ ಹೇಳಿದ ಒಂದು ಮಾತು ಪದೇ ಪದೇ ನೆನಪಿಗೆ ಬರುತ್ತ ಇತ್ತು. ನೀವು ಯಾವುದೇ ಸಂಸ್ಥೆಗೆ ಹೋಗುವಾಗ ಸಾಮಾನ್ಯ ವಿದ್ಯಾರ್ಥಿಗಳಂತೆ ಹೋದ ನೀವು ಆ ಸಂಸ್ಥೆಯಿಂದ ಹೊರ ಹೋಗುವಾಗ ಆ ಸಾಮಾನ್ಯದ ಹಿಂದೆ ಎಕ್ಸಾಎಂಬ ಪದವನ್ನು ಸೇರಿಸಿಕೊಂಡರೆ (ಎಕ್ಸ್ಟ್ರಾರ್ಡಿನರಿ) ಆ ಸಂಸ್ಥೆಗೆ ಕೊಡುವ ದೊಡ್ಡ ಗೌರವ. ಹೈಸ್ಕೂಲಿನಲ್ಲಿ ವಿಜ್ಞಾನ ವಿಷಯ ನನ್ನ ಫೇವರೇಟ್ ಆಯಿತು. ಎಷ್ಟು ಅಂತ ಹೇಳಿದರೆ ನಮ್ಮ ಕ್ಲಾಸಿನಲ್ಲಿ ವಿಜ್ಞಾನ ವಿಷಯದ ಯಾವುದೇ ಪ್ರಯೋಗಗಳು ನಡೆಯಬೇಕಾದರೆ ಅದಕ್ಕೆ ಬೇಕಾದ ಮೆಟೀರಿಯಲ್ ಅನ್ನು ತರಲು ನನ್ನನ್ನೇ ಮೇಡಮ್ ಕರೆಯುತ್ತಿದ್ದರು. ವಿಜ್ಞಾನದ ವಿಷಯದಲ್ಲಿ ಅಧಿಕ ಅಂಕ ಬರುತ್ತಿದ್ದರೂ ಉಳಿದ ವಿಷಯದಲ್ಲಿ ಕಡಿಮೆ ಅಂಕ ಬರುತ್ತಿತ್ತು. ಅಂತೂ ಹತ್ತನೆಯ ತರಗತಿಗೆ ಬಂದಾಗ ಎಲ್ಲ ವಿಷಯಗಳು ಮುಖ್ಯವಾದವು. ಹತ್ತನೇ ತರಗತಿಯಲ್ಲಿ ತಿಂದ ಪೆಟ್ಟುಗಳಿಗೆ ಲೆಕ್ಕವೇ ಇಲ್ಲ. ಆ ಪೆಟ್ಟಿನ ಮಹತ್ವ ತಿಳಿದದ್ದು ಹತ್ತನೆಯ ತರಗತಿಯ ಫಲಿತಾಂಶ ಬಂದಾಗ. ನಾನು ತರಗತಿಗೆ ಎರಡನೆಯ ಸ್ಥಾನ ಪಡೆದಿದ್ದೆ.
ನನಗೆ ಇಷ್ಟವಿದ್ದದ್ದು ವಿಜ್ಞಾನ ವಿಭಾಗ. ಆದರೆ ನನ್ನ ಪಾಲಿಗೆ ಒದಗಿ ಬಂದದ್ದು ಕಲಾ ವಿಭಾಗ. ಮೊದಲ ದಿನ ಸಮಾಜಶಾಸ್ತ್ರ ಪಾಠದ ಮೇಷ್ಟ್ರು ಬಂದ್ರು. ಫರ್ಸ್ಡ್ ಪಿಯುಸಿ ಮುಗಿದದ್ದೇ ತಿಳಿಯಲಿಲ್ಲ. ಅಂತೂ ಪರೀಕ್ಷೆ ಬರೆದದ್ದು ಆಯಿತು. ನಾನು ಕ್ಲಾಸಿಗೆ ನಾಲ್ಕನೆಯ ಸ್ಥಾನ ಪಡೆದಿದ್ದೆ.
ಖುಷಿಯ ಜೊತೆಗೆ ನಮ್ಮ ಪಿಯು ಲೈಫ್ ಮುಗಿಯುವ ಹಂತಕ್ಕೆ ತಲುಪುವಾಗ ನಮ್ಮ ಕ್ಲಾಸಿನಲ್ಲಿ ಆಟೋಗ್ರಾಫ್ ಹವಾ ಶುರುವಾಯಿತು. ಯಾವುದೋ ಮೂಲೆಯಿಂದ ಬಂದವರು ಗುರುತು ಪರಿಚಯ ಇಲ್ಲದವರು ವರ್ಷ ಕಳೆಯುವುದರೊಳಗೆ ಬಿಟ್ಟಿಲಾರದಷ್ಟು ಹತ್ತಿರವಾಗಿಬಿಡುತ್ತಾರೆ. ಕಾಡುವ ನೆನಪು ಇರುತ್ತೆ. ಬೆಟ್ಟದಷ್ಟು ಅನಿಸಿಕೆಗಳಿರುತ್ತೆ. ಕ್ಲಾಸ್ನಲ್ಲಿ ಅಷ್ಟೊಂದು ಕ್ಲೋಸ್ ಇಲ್ಲದವರು, ಮಾತು ಬಿಟ್ಟವರು, ಜಗಳ ಆಡಿದವರು ಕೂಡ ಅನಿಸಿಕೆಗಳನ್ನು ಗೀಚಿದ್ದುಂಟು. ಮಾತಿನಲ್ಲಿ ಮೂಡದ ಎಷ್ಟೋ ಭಾವನೆಗಳು ಅಕ್ಷರಗಳ ಮೂಲಕ ಅಚ್ಚಾಗುತ್ತವೆ. ಅಂತೂ ಪರೀಕ್ಷೆ ಬರೆದ್ದದ್ದು ಆಯಿತು ಫಲಿತಾಂಶ ಬಂದಾಗ ಡಿಸ್ಟಿಂಕ್ಷನ್ನಲ್ಲಿ ಕ್ಲಾಸಿಗೆ ದ್ವಿತೀಯ ಸ್ಥಾನಿಯಾಗಿ ಕಾಲೇಜಿನಿಂದ ಹೊರಹೊಮ್ಮಿದೆ.ಹೀಗೆ ಈ ಎಲ್ಲಾ ನೆನಪುಗಳು ನನ್ನ ಆಟೋಗ್ರಾಫ್ ಬುಕ್ ಓದಿದಾಗ ಮರುಕಳಿಸಿದವು.
– ಮೋಹನ್
ಪತ್ರಿಕೋದ್ಯಮ ವಿಭಾಗ
ಎಸ್ಡಿಎಂ ಕಾಲೇಜು, ಉಜಿರೆ