ಭಾರತಕ್ಕೆ ಇಂದು ಬಾಂಗ್ಲಾದೇಶ ಸವಾಲು
ವಿಶ್ವಕಪ್ ಅಭ್ಯಾಸ ಪಂದ್ಯ ; ನ್ಯೂಜಿಲ್ಯಾಂಡ್ ವಿರುದ್ಧ ಸೋತ ಸಂಕಟದಲ್ಲಿ ಕೊಹ್ಲಿ ಪಡೆ
Team Udayavani, May 28, 2019, 6:00 AM IST
ಕಾರ್ಡಿಫ್: ವಿಶ್ವಕಪ್ ಕದನಕ್ಕೆ ಇಳಿಯುವ ಮುನ್ನ ಟೀಮ್ ಇಂಡಿಯಾ ಮಂಗಳವಾರ ಕೊನೆಯ “ರಿಹರ್ಸಲ್’ ಒಂದನ್ನು ನಡೆಸಲಿದೆ. ಕಾರ್ಡಿಫ್ನ “ಸೋಫಿಯಾ ಗಾರ್ಡನ್’ನಲ್ಲಿ ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ.
ಇದು ಕೊಹ್ಲಿ ಪಡೆಯ 2ನೇ ಅಭ್ಯಾಸ ಪಂದ್ಯ. ಓವಲ್ನಲ್ಲಿ ನಡೆದ ಮೊದಲ ಮುಖಾಮುಖೀಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ 6 ವಿಕೆಟ್ಗಳ ಸೋಲುಂ ಡಿತ್ತು. ಹೀಗಾಗಿ ಬಾಂಗ್ಲಾ ವಿರುದ್ಧದ ಪಂದ್ಯ ಭಾರತದ ಪಾಲಿಗೆ ಮಹತ್ವದ್ದಾಗಲಿದೆ. ಗೆದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಇದೆ.
ಬಾಂಗ್ಲಾದೇಶಕ್ಕೂ ಈ ಪಂದ್ಯ ಬಹಳ ಮುಖ್ಯ. ಕಾರಣ, ರವಿವಾರ ಇಲ್ಲೇ ನಡೆಯಬೇಕಿದ್ದ ಪಾಕಿಸ್ಥಾನ ವಿರುದ್ಧದ ಅಭ್ಯಾಸ ಪಂದ್ಯ ಭಾರೀ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಇದರಿಂದ ಬಾಂಗ್ಲಾಕ್ಕೆ ಅಭ್ಯಾಸ ನಷ್ಟ ವಾಗಿತ್ತು. ಭಾರತದೆದುರು ಮೇಲುಗೈ ಸಾಧಿಸುವುದು ಮಶ್ರಫೆ ಮೊರ್ತಜ ಪಡೆಯ ಮುಖ್ಯ ಗುರಿ. ಇದರಿಂದ ಕೂಟದ “ಡಾರ್ಕ್ ಹಾರ್ಸ್’ ಎಂಬ ಬಾಂಗ್ಲಾದೇಶದ ಟ್ಯಾಗ್ಲೈನ್ಗೆ ಹೊಸ ಅರ್ಥ ಲಭಿಸಲಿದೆ.
ಕಾಡಿತ್ತು ಬ್ಯಾಟಿಂಗ್ ವೈಫಲ್ಯ
ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಘೋರ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿ ಪಂದ್ಯವನ್ನು ಕಳೆದುಕೊಂಡಿತ್ತು. ಮಧ್ಯಮ ಸರದಿಯ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬೇಕೆಂಬ ಯೋಜನೆಯೊಂದಿಗೆ ಕಣಕ್ಕಿಳಿದ ಭಾರತ ಶೋಚನೀಯ ಕುಸಿತವೊಂದನ್ನು ಕಂಡಿತು. ಅಗ್ರ ಕ್ರಮಾಂಕದ ಮೂವರು ಬೇಗನೇ ಪೆವಿಲಿಯನ್ ಸೇರಿಕೊಂಡರೆ ಆಗ ಟೀಮ್ ಇಂಡಿಯಾದ ಸ್ಥಿತಿ ಏನಾಗಬಹುದು ಎಂಬುದಕ್ಕೆ ಇಲ್ಲಿ ಸ್ಪಷ್ಟ ನಿದರ್ಶನ ಸಿಕ್ಕಿತ್ತು! ರವೀಂದ್ರ ಜಡೇಜ ಅವರ ಅರ್ಧ ಶತಕವೊಂದೇ ಸಮಾಧಾನ ಮೂಡಿಸಿತ್ತು.
ಈ ಸಮಸ್ಯೆಗೆ ತಕ್ಕ ಪರಿಹಾರ ಕಂಡುಕೊಳ್ಳುವಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯ ವೇದಿಕೆಯಾಗ ಬೇಕಿದೆ. ರೋಹಿತ್, ಧವನ್, ಕೊಹ್ಲಿ, ರಾಹುಲ್ ರನ್ ಪೇರಿಸುವ ತುರ್ತು ಅಗತ್ಯವಿದೆ. ಹಾಗೆಯೇ ಪಾಂಡ್ಯ, ಧೋನಿ, ಕಾರ್ತಿಕ್ ಬ್ಯಾಟಿನಿಂದಲೂ ರನ್ ಹರಿದು ಬರಬೇಕಿದೆ. ಪೂರ್ತಿ ಫಿಟ್ನೆಸ್ಗೆ ಮರಳಿದರೂ ಕೇದಾರ್ ಜಾಧವ್ ಅವರನ್ನು ಈ ಪಂದ್ಯದಲ್ಲಿ ಆಡಿಸುವ ಸಂಭವ ಕಡಿಮೆ.
ಬೌಲಿಂಗ್ ಸಾಮಾನ್ಯ
ಭಾರತದ ಬೌಲಿಂಗ್ ಕೂಡ ಸಾಮಾನ್ಯ ಮಟ್ಟ ದಲ್ಲಿತ್ತು. ಟ್ರೆಂಟ್ ಬೌಲ್ಟ್ ಸ್ವಿಂಗ್ ಎಸೆತಗಳಲ್ಲಿ ಹಿಡಿತ ಸಾಧಿಸಿದರೂ ಭಾರತದ ಬೌಲರ್ಗಳಿಗೆ ಇದು ಸಾಧ್ಯವಾಗಿರಲಿಲ್ಲ. ಇದರಿಂದ ಬಾಂಗ್ಲಾದೇಶ ವಿರುದ್ಧದ ಪಂದ್ಯ ಭಾರತದ ಬೌಲರ್ಗಳಿಗೂ ಅಗ್ನಿಪರೀಕ್ಷೆ ಆಗಲಿದೆ. ಎದುರಾಳಿ ಮೊದಲು ಬ್ಯಾಟಿಂಗ್ ನಡೆಸುವಂತಾದರೆ ಭಾರತ ಒಟ್ಟು ಸಾಮರ್ಥ್ಯವನ್ನು ಅಂದಾಜಿಸಬಹುದು.
ಬಾಂಗ್ಲಾ
ಅನುಭವಿಗಳ ಪಡೆ
ಬಾಂಗ್ಲಾದೇಶ ಬಲಿಷ್ಠ ಹಾಗೂ ಅನುಭವಿ ಆಟಗಾರರನ್ನು ಹೊಂದಿರುವ ತಂಡ. ಮೊರ್ತಜ, ತಮಿಮ್, ರಹೀಂ, ಮಹಮದುಲ್ಲ, ಶಕಿಬ್, ಮುಸ್ತಫಿಜುರ್ ಅವರೆಲ್ಲ ಅಪಾಯಕಾರಿ ಕ್ರಿಕೆಟಿಗರಾಗಿದ್ದಾರೆ. ಎಚ್ಚರಿಕೆ ಹಾಗೂ ಹೆಚ್ಚು ಜವಾಬ್ದಾರಿಯಿಂದ ಆಡಿದರೆ ಬಾಂಗ್ಲಾದಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು.
ಬಾಂಗ್ಲಾದೇಶ ಎಷ್ಟೇ ಚೆನ್ನಾಗಿ ಆಡಲಿ, ಭಾರತ ಇದನ್ನು ಮೀರಿಸಿದ ಆಟದೊಂದಿಗೆ ಗೆಲುವಿನ ಸಂಭ್ರಮ ಆಚರಿಸಬೇಕು. ಮಳೆ ಸುರಿದರೆ ಪಾತ್ರ ಎಲ್ಲ ಲೆಕ್ಕಾಚಾರ ತಲೆ ಕೆಳಗಾಗಲಿದೆ!