ವಿಜಯ್ ಶಂಕರ್ಗೂ ಗಾಯ
Team Udayavani, Jun 21, 2019, 5:13 AM IST
ಸೌತಾಂಪ್ಟನ್: ಪ್ರಸಕ್ತ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಭಾರತದ ಗಾಯಾಳು ಆಟಗಾರರ ಯಾದಿ ಮತ್ತೆ ಬೆಳೆದಿದೆ. ಶಿಖರ್ ಧವನ್, ವೇಗಿ ಭುವನೇಶ್ವರ್ ಬಳಿಕ ಇದೀಗ ಆಲ್ರೌಂಡರ್ ವಿಜಯ್ ಶಂಕರ್ ಸರದಿ.
ಆಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಬುಧ ವಾರ ಸೌತಾಂಪ್ಟನ್ನಲ್ಲಿ ಅಭ್ಯಾಸ ನಡೆಸುತ್ತಿ ದ್ದಾಗ ಈ ಅವಘಡ ಸಂಭವಿಸಿದೆ. ಬುಮ್ರಾ ಎಸೆದ ಯಾರ್ಕರ್ ಒಂದರ ವೇಳೆ ಚೆಂಡು ವಿಜಯ್ ಶಂಕರ್ ಅವರ ಕಾಲಿನ ಬೆರಳಿಗೆ ಬಡಿದಿದೆ. ಕೂಡಲೇ ಅವರು ನೋವಿನಿಂದ ಚೀರಿದ್ದಾರೆ. ಫಿಸಿಯೋ ನೆರವಿಗೆ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿದರು.
ಈ ಕುರಿತು ಪ್ರಕಟನೆ ನೀಡಿರುವ ಬಿಸಿಸಿಐ, “ಹೌದು, ವಿಜಯ್ ಶಂಕರ್ ಗಾಯಗೊಂಡಿರುವುದು ನಿಜ. ಅಭ್ಯಾಸ ವೇಳೆ ಅವರ ಕಾಲಿಗೆ ಏಟಾಗಿದ್ದು, ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ. ಸಣ್ಣ ಗಾಯ, ಹೆಚ್ಚು ಚಿಂತಿಸುವ ಅಗತ್ಯವಿಲ್ಲ’ ಎಂದಿದೆ.
ಅಭ್ಯಾಸಕ್ಕಿಳಿಯದ ಶಂಕರ್
ಗುರುವಾರದ ಅಭ್ಯಾಸದಲ್ಲಿ ವಿಜಯ್ ಶಂಕರ್ ಪಾಲ್ಗೊಳ್ಳಲಿಲ್ಲ. ಬದಲಿಗೆ ಅವರು ಚಪ್ಪಲಿ ಹಾಕಿಕೊಂಡು ಕ್ರೀಡಾಂಗಣದ ಸುತ್ತ ನಡೆದುಕೊಂಡು ಹೋಗುತ್ತಿದ್ದುದು ಕಂಡುಬಂತು. ಆನಂತರ ಜಾಗಿಂಗ್ ನಡೆಸಿದರು. ಭರವಸೆಯ ಆಲ್ರೌಂಡರ್
4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಇರುವ ಬ್ಯಾಟ್ಸ್ ಮನ್ ವಿಜಯ್ ಶಂಕರ್ ಉಪಯುಕ್ತ ಆಲ್ರೌಂಡರ್ ಕೂಡ ಹೌದು. ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಹೊರನಡೆದಾಗ ಅವರ ಬೌಲಿಂಗ್ ಮುಂದುವರಿಸಿದ ವಿಜಯ್ ಶಂಕರ್ ಮೊದಲ ಎಸೆತದಲ್ಲೇ ಇಮಾಮ್ ಉಲ್ ಹಕ್ ವಿಕೆಟ್ ಹಾರಿಸಿದ್ದರು.