ಒಂದು ಮುತ್ತಿನ ಕಥೆಗಳು…


Team Udayavani, Apr 22, 2017, 3:35 PM IST

6.jpg

 ಈ ಚನ್ನ ಇರದ ರಾಜ್‌ಕುಮಾರ್‌ರನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಚನ್ನ ಇರದ ರಾಜ್‌ ಫೋಟೋಗಳಿದ್ದರೆ ತೋರಿಸಿ ನೋಡೋಣ?ರಾಮನಿಗೆ ಹನುಮನಂತೆ ರಾಜ್‌ಗೆ ಈ ಚನ್ನ. ಬದುಕಿನ ಮುಕ್ಕಾಲು ಭಾಗ ರಾಜ್‌ ಸೇವೆಗೆ ಎತ್ತಿಟ್ಟ ಉಗ್ರ ಅಭಿಮಾನಿ. ರಾಜ್‌ಕುಮಾರೇ ಕನಸು, ಅವರ ಆಸೆಯ ಇವರ ಆಸೆ ಅಂತ ಬದುಕಿದವರು.  ರಾಜ್‌ ಸೇವೆಗಾಗಿ ಮದುವೆ ಕೂಡ ಆಗಲಿಲ್ಲ. ಚನ್ನ ವಾರ್ತಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಇದ್ದಬದ್ದ ಸಿಎಲ್‌, ಪಿಎಲ್‌, ವೀಕ್ಲಿ ಆಫ್ ಎಲ್ಲವೂ ರಾಜ್‌ಗೆ ಮೀಸಲು.  30 ವರ್ಷಗಳ ಕಾಲ ನೆರಳಂತೆ  ಅವರನ್ನು ನೋಡಿಕೊಂಡವರು. ಆದರೆ ವಿಧಿ ಈ ಹನುಮನನ್ನು ದೂರವಿಟ್ಟು ರಾಮನಂತಿದ್ದ ರಾಜ್‌ ಪ್ರಾಣಪಕ್ಷಿ ಹಾರಿಸಿಕೊಂಡು ಹೋಗಿದ್ದು ದುರಂತವೇ. ಇಂಥ ಒಂದಷ್ಟು ಮುತ್ತಿನಂಥ ಕಥೆಗಳು ರಾಜ್‌ ಹುಟ್ಟುಹಬ್ಬದ ವಿಶೇಷಕ್ಕೆ. 

 ರವೀಂದ್ರ ಕಲಾಕ್ಷೇತ್ರದಲ್ಲಿ ಒಂದೇ ಮಾತು. ಅದ್ಯಾರೋ ಹುಡುಗನ ಬೆರಳು ತುಂಡಾಗಿದೆಯಂತೆ ಅಂತ. ಪ್ರಭಾತ್‌ ಕಲಾವಿದರ ಕಾರ್ಯಕ್ರಮ ತುಂಬ ಹೀಗೇ ಓಡಾಡುತ್ತಿತ್ತು.   ಇದಕ್ಕೆ ಪೂರಕವಾಗಿ ಅರೆ ಇದೇನಪ್ಪಾ ರಕ್ತಾ.. ಅಂತ ಹುಡುಕಿ ಕೊಂಡು ಚಿನ್ನೇಗೌಡರು ಬಂದಾಗಲೇ ಸತ್ಯ ಬಿಚ್ಚಿ ಕೊಂಡದ್ದು.  ಚನ್ನ “ಏನಾಗಿಲ್ಲ ಬಿಡ್ರಣ್ಣಾ… ಬಿಡ್ರಣ್ಣಾ ಅಂತ ಕೈಯನ್ನು ಒದರಿದ. ನೋಡಿದರೆ ರಕ್ತ ನೀರಂತೆ ಹರಿಯುತ್ತಿದೆ. ಕಿರು ಬೆರಳ ತುದಿ ಎಗರಿ ಹೋಗಿದೆ.  ಚನ್ನಗೂ “ಅರೆ ಹೌದಲ್ಲಾ’ ಅಂತ ಅನಿಸಿದ್ದು ಆಗಲೇ. ಗೌಡರು ತಕ್ಷಣ ತಮ್ಮ ಕಾರಲ್ಲಿ ಗೀತಾ ನರ್ಸಿಂಗ್‌ ಹೋಂಗೆ ಕಳುಹಿಸಿದರು. 

ಅಲ್ಲಿ ಡಾಕ್ಟರು “ಚನ್ನ ಏನಾಯ್ತ್‌ ರೀ ‘ ಅಂದಾಗ- “ರಾಜ್‌ಕುಮಾರ್‌ರನ್ನು ಜನರಿಂದ ಬೇರ್ಪಡಿಸಿ ಕಲಾಕ್ಷೇತ್ರದ ಒಳಗೆ ಕಳುಹಿಸಿ ಬಾಗಿಲು ಹಾಕಿದೆ.  ಆಮೇಲೆ ಏನಾಯೊ¤à ಗೊತ್ತಿಲ್ಲ. ಚಿನ್ನೇಗೌಡರು ರಕ್ತ ಯಾರದು ಅಂದಾಗ ನಾನು ಅದನ್ನೇ ಹುಡುಕಿಕೊಂಡು ಹೋದೆ ನೋಡಿದರೆ ನನ್ನ ಕೈಯ್ಯಿಂದೇ ಚಿಮ್ಮಿರೋದು.  ಚುರಿ, ಚುರಿ ಅಂದಿತು ಅಷ್ಟೇ’ ಅಂದರು ಚನ್ನ.  

” ಪೀಸಾಗಿರೋ ಬೆರಳು ಸಿಗ್ತದಾ ನೋಡಿ’ ಅಂದರು ಡಾಕ್ಟರು. ಚನ್ನ ಆಸ್ಪತ್ರೆಯಿಂದ ಕಲಾಕ್ಷೇತ್ರಕ್ಕೆ ಫೋನು ಮಾಡಿದರೆ ಕಪ್ಪಣ್ಣ ಇದ್ದರು. ನನ್ನ ಬೆರಳು ಪೀಸಾಗಿದೆ ನೋಡ್ತೀರಾ ಸಾರ್‌ ಅಂದರೆ- “ಹೌದೇ… ಹುಡುಕಿ ನೋಡ್ತೀನಿ’ ಅಂದರು. ನೋಡಿದರೆ ಬಾಗಿಲ ಮೂಲೆಯಲ್ಲಿ ಚಿಳ್‌ ಎಂದು ಬಿದ್ದಿದೆ ಕಿರುಬೆರಳ ತುದಿ. ಅದನ್ನು ಸ್ಕೂಟರ್‌ನಲ್ಲಿ ಕಳುಹಿಸಿದರು. ಡಾಕುó ಜೋಡಿಸಿದರು. ಕೈಗೆ ಬ್ಯಾಂಡೇಜ್‌ ಹಾಕಿ, ಕತ್ತಿಗೆ ಕಟ್ಟು ಹಾಕಿದರು.  ಒಂದಷ್ಟು ದಿನ ನಂತರ ಚೆನ್ನ ಹೀಗೆ ಒಂದೇ ಕೈಯಲ್ಲಿ ಲೂನಾ ಡ್ರೈವ್‌ ಮಾಡುತ್ತಾ ಸದಾಶಿವನಗರದ ಸ್ಯಾಂಕಿಟ್ಯಾಂಕ್‌ ಕಡೆ ಹೋಗುತ್ತಿದ್ದರೆ ಯಾರೋ ಜೋರಾಗಿ ಕೂಗಿದಂತಾಯಿತು.  ಸ್ಪಷ್ಟವಾಗಿ ಕೇಳಿಸಿಕೊಂಡಾಗ ರೀ.. ಸ್ವಾಮೀ… ನಿಮ್ಮನ್ನೇ ಅಂದ ಕಾರಲ್ಲಿದ್ದ ಡ್ರೈವರ್‌. ಆವತ್ತು ಆಸ್ಪತ್ರೆಗೆ ಕರೆದೊಯ್ದ ಡ್ರೈವರೇ ಇವನು. ಕಾರೊಳಗೆ ಒಳಗೆ ಪಾರ್ವತಮ್ಮನವರು. 

 “ಏನಪ್ಪಾ, ಕೈಗೆ ಏಟಾಯ್ತಂತೆ. ರಾಜ್‌ಕುಮಾರ್‌ ನಿನ್ನ ನೋಡಬೇಕು’ ಅಂತಿದ್ದರು ಅಂದರು.  ಅಯ್ಯೋ ಅದ್ಕೆàನು ಬರ್ತೀನಿ ಅಮ್ಮ ಅಂದರು ಚೆನ್ನ. 

ಚನ್ನ ರಾಜ್‌ ಭೇಟಿ ಇದೇ ಮೊದಲಲ್ಲ.  “ಬಬ್ರುವಾಹನ’ ಚಿತ್ರಕ್ಕೆ ಸೈನಿಕನಾಗಿ ಚೆನ್ನ ನಿಂತಿದ್ದರು. ಆಗ ಖುದ್ದು ರಾಜ್‌ ಊಟ ಮಾಡುವುದನ್ನು ನೋಡೋಕೆ ಹೋದಾಗ ಸಿಕ್ಕಿ ಬಿದ್ದು, ಆ ನಂತರ ರಾಜಕುಮಾರ್‌ ಇವರನ್ನು ಕರೆದು ತಮ್ಮ ಪಕ್ಕದಲ್ಲಿ ಕೂಡ್ರಿಸಿ ಊಟ ಹಾಕಿದ್ದರು. ಇದಾದ ಮೇಲೆ ಚೆ‌ನ್ನಗೆ ಒಂದು ಮುತ್ತಿನ ಕಥೆಯಲ್ಲಿ ರಾಜ್‌ ಸಿಕ್ಕರು. ಅಷ್ಟೊತ್ತಿಗೆ ಪರಮ ಅಭಿಮಾನಿ ಅನ್ನೋದು ಜಗಜ್ಜಾಹೀರಾಗಿತ್ತು.  ಶಂಕರ್‌ನಾಗ್‌- ನೋಡಪ್ಪ, ನಿಮ್ಮ ಅಣ್ಣನ ಚಿತ್ರ ನೀನು ಇರಬೇಕು ಅಂದಾಗ- ಅವರನ್ನು ಎತ್ತು ಕೊಂಡು ಕುಣಿಯುವ ಸೀನ್‌ ಇದೆಯಲ್ಲ ಅದು ನನಗೇ ಕೊಡಬೇಕು ಅಂತ ಹಠ ಹಿಡಿದರು. ಕೊನೆಗೆ ರಾಜಕುಮಾರ್‌ ರನ್ನು ಎತ್ತಿ ಕುಣಿದದ್ದು, ಆಯ್ತು. ಆಗಾಗ ಮನೆಗೆ ಹೋಗಿ ಬಂದು ಇನ್ನು ಹತ್ತಿರ, ಹತ್ತಿರವಾದರು. 

 ಇಂತಿಪ್ಪ, ಚನ್ನರ ಅಡ್ಡ ರವೀಂದ್ರ ಕಲಾಕ್ಷೇತ್ರ. ಬೆನಕ, ನಟರಂಗ, ಸಂಕೇತ್‌ ತಂಡಗಳಲ್ಲಿ ರಂಗಸಜ್ಜಿಕೆ ಮಾಡುತ್ತಿದ್ದರಿಂದ ಸಹಜವಾಗಿ ಎಲ್ಲರ ಪರಿಚಯವಿತ್ತು. ಕಿರುಬೆರಳು ಪ್ರಕರಣವಾದ ನಂತರ ಚೆನ್ನರ ಅಭಿಮಾನ ಇಡೀ ಕಲಾಕ್ಷೇತ್ರ ಪೂರ್ತಿ ಹರಡಿ, ನಾಟಕ ರಂಗಕ್ಕೂ ಹಬ್ಬಿದ್ದರಿಂದ ಕಲಾಕ್ಷೇತ್ರದಲ್ಲಿ ರಾಜ್‌ಕುಮಾರ್‌ ಬಂದರೆ ಚೆನ್ನ ಅವರ ಹಿಂದೆ ಇರುವಂತೆ ಆಯಿತು.

 ಒಂದು ಸಲ ಹೀಗೆ ರಾಜ್‌ಕುಮಾರ್‌ ಕಲಾಕ್ಷೇತ್ರಕ್ಕೆ ಬಂದಬಂದವರೇ ಕಳೆದ ಸಲ ಬಂದಾಗ ಇಲ್ಲಿ ಯಾವುದೋ ಹುಡುಗನ ಬೆರಳು ಮುರಿದಿತ್ತಂತೆ. ಅವರು ಹೇಗಿದ್ದಾರೆ? ಎಲ್ಲಿದ್ದಾರೆ? ಅಂತ ಕೇಳಿಬಿಟ್ಟಿದ್ದಾರೆ.  ಇಡೀ ಕಲಾಕ್ಷೇತ್ರಕ್ಕೆ ಚನ್ನರ ಹೆಸರು ಓಡಾಡುತ್ತಿದೆ.  ಆವತ್ತು ಚನ್ನ ಅಲ್ಲಿಗೆ ಇನ್ನೂ ಬಂದಿರಲಿಲ್ಲ.  ಕಾರ್ಯಕ್ರಮಕ್ಕಾಗಿ ಮೊದಲ ಪಂಕ್ತಿಯಲ್ಲಿ ರಾಜ್‌ಕುಮಾರ್‌,  ಹೈಕೋರ್ಟ್‌ ನ್ಯಾಯಾಧೀಶರು ಹೀಗೆ ಯಾರೋರೋ ಕುಳಿತಿದ್ದರು.  ಅಷ್ಟರಲ್ಲಿ ಬಂದ ಚೆನ್ನ ರಾಜಕುಮಾರ್‌ ಬಳಿ ನಿಂತರು. ಅವರು ನೋಡಿದ್ದು ಚನ್ನರ ಮುಖವನಲ್ಲ. ಬೆರಳನ್ನು- ಏನ್ರೀ  ಈ ರೀತಿ ಮಾಡಿಕೊಂಡಿದ್ದೀರಾ? ಅಂತೆಲ್ಲ ಕೈ ಒತ್ತಿ, ಬೆರಳನ್ನು ಮುಟ್ಟಿ ನೋಡಿದರು.  ಚನ್ನರ ಮೈಯಲ್ಲಿ ನೂರು ಕಿಲೋವ್ಯಾಟ್‌ ಕರೆಂಟ್‌ ಪಾಸಾಗಿತ್ತು.  ಜಾಸ್ತಿ ನೋಯ್ತಾ ಇದೆಯಾ? ಅಂದರು. ಅದಕ್ಕೆ ಚನ್ನ ಏನು ಹೇಳಬೇಕು?
 ” ಅಣ್ಣಾ ಆ ಏಕಲವ್ಯ ಗುರುವಿಗೆ ಹೆಬ್ಬರಳು ಕೊಟ್ಟ. ನಾನು ನನ್ನ ಅಣ್ಣನಿಗೆ ಕಿರುಬೆರಳು ಕೊಟ್ಟೆ ಬಿಡ್ರೀ.. ಆ ಬೆರಳು ಇದದ್ದೇ ನಿಮಗೋಸ್ಕರ ಅನಿಸುತ್ತೆ. ಇದರಲ್ಲಿ ನೋವು ಆಗೋದು ಏನಿದೆ ‘ ಅಂದು ಬಿಟ್ಟರು. ರಾಜಕುಮಾರ್‌ ಕ್ಷಣ ಮಾತ್ರ ದಂಗಾಗಿ, ಮರು ಕ್ಷಣ ಜೋರಾಗಿ ನಕ್ಕರು. ಎಲ್ಲರ ಗಮನ ಇವರಿಬ್ಬರ ತಾದಾತ್ಮದ ಮಾತುಕತೆಯತ್ತ ತಿರುಗಿತು. 

 “ಇಲ್ನೋಡಿ, ಚೆನ್ನ ಏನು ಹೇಳ್ತಾ ಇದ್ದಾರೆ ‘ ಅಂತ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಿಗೂ ಹೇಳಿದರು ಮುಗªವಾಗಿ.   ಎಲ್ಲರೂ ಬೆರಗು ಬೆರೆಸಿ ನಕ್ಕರು. ಚೆನ್ನನ ಬದುಕು ಅಲ್ಲಿಗೆ ಸಾರ್ಥಕ ಎನಿಸಿತು ಮತ್ತು ಅಭಿಮಾನದ ಮೆರವಣಿಗೆ ಶುರುವಾಯಿತು.

ರಾಜ್‌ ಎಲ್ಲಿದ್ದರೆ ಅಲ್ಲಿ ಚನ್ನ.  ಚನ್ನ ಇಲ್ಲದೆ ರಾಜ್‌ ಕಾಣುತ್ತಿರಲೇ ಇಲ್ಲ. ಅವರು ಮದರಾಸಿಂದ ಬೆಂಗಳೂರಿಗೆ ಬಂದ ಮೇಲಂತೂ ಚನ್ನ ರಾಜಾಭಿಮಾನಿಯಾಗಿಬಿಟ್ಟರು. 

 ರಾಜ್‌ಕುಮಾರ್‌ ಅವರಿಗೆ ತಿರುಪತಿ ತಿಮ್ಮಪ್ಪನ ಮೇಲೆ ವಿಶಿಷ್ಟವಾದ ನಂಬಿಕೆ.   ಒಂದು ದಿನ ಇದ್ದಕ್ಕಿದ್ದಾಗೆ ರಾಜ್‌ಕುಮಾರ್‌ ಅವರಿಗೆ ತಿರುಪತಿಗೆ ಹೋಗಬೇಕು ಅನಿಸಿಬಿಟ್ಟಿತು.  ಚನ್ನ ಹೋಗೋಣ ಅಂದರಂತೆ.  ಜೊತೆಗೆ ಡ್ರೈವರ್‌ ಹನುಮಂತು, ವರದಪ್ಪ ತಂಗಿ ನಾಗಮ್ಮ ಇಷ್ಟೇ ಜನ.  ಪಾರ್ವತಮ್ಮನವರು “ರೀ. ಇದ್ದಕ್ಕಿದ್ದಾಗೇ ಏಕೆ. ನಾಳೆ ಎಲ್ಲರೂ ಒಟ್ಟಿಗೆ ಹೋಗೋಣ ಅಂದರೆ -ರಾಜ್‌ ಇಲ್ಲ ನಾನು ಇವತ್ತೇ ಹೋಗಬೇಕು ಅಂದರು. 

 ಸರಿ ಎಲ್ಲ ರೆಡಿಯಾಗಿ, ಹೊರಟರು. ತಿರುಪತಿ ಬೆಟ್ಟದ ಕೆಳಗೆ ಗೌತಮ್‌ ಹೋಟೆಲ್‌ನಲ್ಲಿ ರೂಮು ಬುಕ್‌ ಆಗಿತ್ತು. ಹೋದವರೇ ಊಟ, ಸ್ನಾನ, ರೆಸ್ಟ್‌ ಎಲ್ಲವೂ ಆಯ್ತು.  ಬೆಳಗ್ಗೆ ನಾಲ್ಕೂವರೆಗೆ ಬೆಟ್ಟಕ್ಕೆ ಹೊರಟಿದ್ದೂ ಆಯ್ತು.   ಹನುಮಂತು ಸ್ವಲ್ಪ ಕಾರು ನಿಲ್ಲಿಸಿ ಅಂದರು ರಾಜ್‌.   ಏನೋ ಕಾಫಿ ಕುಡಿಯೋಕೆ ಹೇಳುತ್ತಿದ್ದಾರೆ ಅಂತ ನೋಡಿದರೆ,  ಅದು ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತುವ ಸ್ಥಳ.  “ನೀವು ಕಾರು ತಗೊಂಡು ಬೆಟ್ಟದ ಮೇಲಗಡೆ ಹೋಗಿ. ನಾನು ಚನ್ನ ಮೆಟ್ಟಿಲು ಹತ್ತಿಕೊಂಡು ಬರ್ತೀವಿ’ ಅಂದು ಬಿಡೋದ.  “ಇದೆಂಥದು. ಈ ವಯಸ್ಸಲ್ಲಿ. ಹೀಗೆಲ್ಲಾ ಬೆಟ್ಟ ಹತ್ತೋದಾ’ ಅಂತ ಅನಿಸಿದರೂ ಅದನ್ನು ಅವರ ಎದುರಿಗೆ ಮಂಡಿಸುವುದು ಹೇಗೆ? ಯಾರ ಮಾತಿಗೂ ಬಗ್ಗದೆ ಕೊನೆಗೆ ಮೆಟ್ಟಿಲು ಹತ್ತುವ ಆಸೆ ಗೆದ್ದಿತು.  “ಮೈಮೇಲೆ ದೇವರು ಬಂದಂತೆ ಬುಡು, ಬುಡು ಅಂತ ಹತ್ತುತ್ತಲೇ ಇದ್ದಾರೆ.  ಹಿಂದೆ ಸಹ ನೋಡುತ್ತಿಲ್ಲ. ನಾನು ಸ್ಪಲ್ಪ ದಪ್ಪ ಬೇರೆ ಇದ್ದೆ. ಮೈ ಪೂರ್ತಿ ಬೆವರು.  ಮಂಡಿಗೆ ಯಾರೋ ಬೆಂಕಿ ಹಾಕಿದಂಗೆ ಆಗ್ತಾ ಇದೆ.   ಗಾಳಿ ಗೋಪುರದ ಹತ್ತಿರ ಬಂದಾಗ ನಾನೇ, ಅಣ್ಣಾ ಒಂದು ಐದು ನಿಮಿಷ ಕೂತು ಹೋಗೋಣ ಅಂದೆ.

 “ಏನ್ರೀ ಚನ್ನ. ಸುಸ್ತಾಯಿತಾ, ಇದೇ ಫ‌ಸ್ಟೈ ಟೈಮಾ ಹತ್ತುತಿರೋದು?’ ಅಂತ ಮಂದಹಾಸದಲ್ಲಿ ನಕ್ಕರು.

ಅಷ್ಟರಲ್ಲಿ ಬೆಟ್ಟ ಹತ್ತುತ್ತಿದ್ದ ಚಿಂತಾಮಣಿ, ಕೋಲಾರದ ಕಡೆಯ ಒಂದಷ್ಟು ಜನ ಬಂದು ಬಿಟ್ಟರು.  ಅಣ್ಣನನ್ನು ನೋಡಿ ಖುಷಿಯಾಗಿ ಮಾತುಕತೆಗೆ ಇಳಿದರು. ಇವರು ಮಳೆ, ಬೆಳೆ ಚೆನ್ನಾಗಿದೆಯಾ ಅಂತೆಲ್ಲಾ ವಿಚಾರಿಸಿದರು. ಕೊನೆಗೆ ನಾವೂ ನಿಮ್ಮ ಜೊತೆ ಬೆಟ್ಟ ಹತ್ತುತ್ತೀವಿ ಅಂದರು.  30 ಮೆಟ್ಟಿಲು ಹತ್ತಿಲ್ಲ. ಹಿಂತಿರುಗಿ ನೋಡಿದರೆ ಯಾರೂ ಕಾಣಿ¤ಲ್ಲ. ರಾಜ್‌ಕುಮಾರ್‌ ಅಷ್ಟು ವೇಗವಾಗಿ ಹತ್ತುತ್ತಿದ್ದಾರೆ.  ಒಂದೂಮುಕ್ಕಾಲು ಗಂಟೆಯಲ್ಲಿ ಬೆಟ್ಟ ಹತ್ತಿ ಮೇಲೆ ನಿಂತು ಕೊಂಡೆವು. ಡ್ರೈವರ್‌ ಹನುಮಂತ ಆಮೇಲೆ ಬಂದ.  ರೂಮಿಗೆ ಹೋಗಿ, ಮತ್ತೆ ಸ್ನಾನ ಎಲ್ಲ ಮುಗಿಸಿ ಮಧ್ಯ ರಾತ್ರಿ 1.30ಕ್ಕೆ ಒಂದು ಸಾರಿ, 5 ಗಂಟೆಗೆ ಇನ್ನೊಂದು ಸಲ ದರ್ಶನ ಮಾಡೋಣ ಅಂದರು.  ಎಲ್ಲ ಮುಗಿತಲ್ಲ ಅಂತ ಕಾರಿನ ಬಳಿ ಹೋದರೆ- “ನಾನು ಚನ್ನ ಇಳ್ಕೊಂಡು ಬರ್ತೀವಿ ನೀವು ನಡೀರಿ’ ಅಂದು ಬಿಟ್ಟರು. 

ನನಗೆ ಕಾಲೆಲ್ಲ ನಡುಗಿ ಹೋಯ್ತು. ಅಯ್ಯೋ ದೇವ್ರೇ. ಹತ್ತಿದ ನೋವು ಇನ್ನೂ ಇಳಿದಿಲ್ಲ. ಮತ್ತೆ ಇಳೀಬೇಕಾ ಅಂತ.  ಆದರೆ ರಾಜ್‌ ಬುಡು, ಬುಡು ಅಂತ ಇಳಿದೇ ಬಿಟ್ಟರು. ಒಂದೇ ಒಂದು ಕಡೆ ಕೂಡ ನಿಲ್ಲಲಿಲ್ಲ. ಕೆಳಗೆ ಇಳಿಯುವ ಹೊತ್ತಿಗೆ ಹನುಮಂತು ಕಾರೊಂದಿಗೆ ಇದ್ದ.  ಎಲ್ಲರೂ ಕೂತು ಹೊರಟೆವು. ಆಗ ಬೆಟ್ಟ ಹತ್ತಿದ ಕಥೆ ಹೇಳಿದ್ದು.  ಅವರು ಚನ್ನ, ನಾನು ಇಬ್ಬರೂ ಬೆಟ್ಟವನ್ನು ಸರಾಗವಾಗಿ ಹತ್ತಿ ಇಳಿದರೆ ಮುಂದಿನ ಚಿತ್ರ ಮಾಡೋದು. ಇಲ್ಲವಾದರೆ ಇಲ್ಲ ಅಂತ ಅಂದು ಕೊಂಡಿದ್ದರಂತೆ. ಅದನ್ನು ವರದಪ್ಪಗೆ ಹೇಳಿದರು- ಹೀಗೆ ಚನ್ನ ನೆನಪಿಸಿಕೊಳ್ಳುತ್ತಾರೆ. 

ರಾಜ್‌ಕುಮಾರ್‌ ಇದೇ ರೀತಿ “ಭಕ್ತ ಅಂಬರೀಷ’ ಚಿತ್ರ ಮಾಡುವಾಗ ಕೂಡ ತಿರುಪತಿ ಬೆಟ್ಟ ಹತ್ತಿದ್ದರು. ಆಗ ಕಾಲು ನೋವು ಇತ್ತಂತೆ.  ಇವರ ಜೊತೆಗಿದ್ದ ದೂರದ ಸಂಬಂಧಿ ಪೋತರಾಜ್‌ ಅವರಿಗೆ ಇಳಿಯುವಾಗ ಹುಷಾರು ತಪ್ಪಿದರು. ಆಗ ಮನಸ್ಸಿಲ್ಲದ ಮನಸ್ಸಲ್ಲಿ ಬೆಟ್ಟ ಇಳಿಯದೇ ಕಾರಲ್ಲಿ ವಾಪಸ್ಸು ಬಂದರಂತೆ.  ಆಮೇಲೆ ಕಿಡ್ನಾಪ್‌ ಪ್ರಕರಣವಾಯ್ತು.  ಕಾಲು ನೋವು ಹೆಚ್ಚಾಯ್ತು.  “ಭಕ್ತ ಅಂಬರೀಷ’ ಪ್ರಾಜೆಕ್ಟೇ ನಿಂತು ಹೋಯ್ತು. – “ನಿಜ, ಅಣ್ಣಾವ್ರ ನಂಬಿಕೆ ಹುಸಿಯಾಗಲಿಲ್ಲ. ಅಂದು ಬೆಟ್ಟ ಹತ್ತಿ ಇಳಿದು ಶಬ್ದವೇದಿ ಮಾಡಿದರು. ಭಕ್ತ ಅಂಬರೀಷ ಸಮಯದಲ್ಲಿ ಕಾಲು ನಡಿಗೆಯಲ್ಲಿ ಹತ್ತಿದರು ಮತ್ತೆ ಹಾಗೇ ಇಳೆಯಲೇ ಇಲ್ಲ. ಇದು ದೇವರ ಆಟ ‘ಅಂತಾರೆ ಚನ್ನ.

 ರಾಮನ ಭಂಟ ಹನುಮನಂತೆ ರಾಜ್‌ಗೆ ಚನ್ನ.  ಇವರು ಉಗ್ರ ಅಭಿಮಾನಿ. ಎಷ್ಟೆಂದರೆ ರಾಜ್‌ ಸೇವೆಗಾಗಿಯೇ ಮದುವೆಯೇ ಆಗಲಿಲ್ಲ.  ಇದಕ್ಕೂ ಒಂದು ಕಾರಣ ಇದೆ.  ಜೀವನಚೈತ್ರ ಚಿತ್ರದ ಸಂದರ್ಭದಲ್ಲಿ ರಾಜ್‌ ಒಂದು ಸಾರಿ ಚನ್ನನ ಕೇಳಿದರು. “ಊರಲ್ಲಿ ಮನೆ ಕಟ್ಟಿಕೊಂಡು ಹೊರಟು ಬಿಡೋಣ ಬರ್ತೀಯಾ ಚನ್ನ. ನೀನು ನನ್ನ ಜೊತೆನೇ ಇರಬೇಕು’ ಅಂತ.  ಚನ್ನ ಮರುಮಾತನಾಡದೇ ಒಪ್ಪಿಕೊಂಡರು.  ಆದರೆ ರಾಜ್‌ ಊರಿಗೆ ಹೋಗಲಿಲ್ಲ. ಆದರೆ ಚನ್ನ ಭಾಷೆ ತಪ್ಪಲಿಲ್ಲ.  “ಮನೆಯಲ್ಲೂ ಹುಡುಗಿ ಹುಡುಕಿದರು. ಯಾಕೋ ನನಗೆ ಅಣ್ಣನ ಸಾನಿಧ್ಯ ಇದೆಯಲ್ಲ. ಅದಕ್ಕಿಂತಲೂ ಬೇರೆ ಬೇಕು?  ಮದುವೆ ಮಾಡಿಕೊಳ್ಳುವುದೇ ಬೇಡ ಅಂತ ತೀರ್ಮಾನಿಸಿದೆ.  ಈ ವಿಷಯ ತಿಳಿದ ಅಣ್ಣ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರ ಹತ್ತಿರ ಹೇಳಿಸಿದರು. ಶಬರಿ ಮಲೆಗೆ ಹೋದಾಗ ಹೇಳಿದರು. ತಿರುಪತಿಗೆ ಬಂದಾಗ ಮದುವೆ ಆಗ್ತಿàನಿ ಅಂತ ಮಾತು ಕೊಡು ಅಂದರು.  ನಾನು ಬಿಲ್‌ಕುಲ್‌ ಆಗೋಲ್ಲ ಅಂದೆ.  ಮದುವೆ ಆದರೆ ಅಣ್ಣನಿಗೆ ಈ ರೀತಿ ಸೇವೆ ಮಾಡೋಕೆ ಆಗುತ್ತಿತ್ತಾ ನೀವೆ ಹೇಳಿ? ಅಂತ ಪ್ರಶ್ನೆ ಮಾಡಿದರು ಚನ್ನ.

ಆ ಮುತ್ತು ಮತ್ತು ಸಾವು
ರಾಜ್‌ಕುಮಾರ್‌ಗೆ ಸಿಂಗನಲ್ಲೂರು ಅಂದರೆ ಒಂಥರ ಅಟ್ಯಾಚ್‌ಮೆಂಟ್‌.  ಹೀಗೆ ಹೋದಾಗ ಮನೆಯ ಮುಂದೆ ನಿಂತು ಕೊಂಡು ಅದೇನೋ ಬಲಗಡನೆ ತದೇಕವಾಗಿ ನೋಡುತ್ತ ನಿಂತಿದ್ದರು.  “ಏನಣ್ಣ ಹೀಗೆ ಭಾವುಕರಾಗಿ ನೋಡ್ತಾ ಇದ್ದೀರಾ? ಅಂತ ಚನ್ನ ಕೇಳಿದರೆ- ನೋಡ್ರೀ ಚನ್ನ. ನಿಮ್ಮ ರಾಜ್‌ಕುಮಾರ್‌ ಹುಟ್ಟಿದ್ದು ಅದೇ ಮನೆಯಲ್ಲಿ.  ನಾನು ಎಷ್ಟೇಷ್ಟೋ ಪ್ರಯತ್ನ ಪಟ್ಟೆ ರೀ.
 ಆ ತೊಟ್ಟಿ ಮನೇನ ಸರಿಮಾಡಿಸೋಕೆ ಆಗ್ಲಿಲ್ಲ’ ಅಂತ ಬೇಸರದಿಂದ ಹೇಳಿದರು. 

ಚನ್ನ ಇಷ್ಟಕ್ಕೆ ಸುಮ್ಮನೆ ಇರಲಿಲ್ಲ.  ಎಂಜಿನಿಯರ್‌ನ ಹಿಡಿದು, ಎಸ್ಟಿಮೇಟ್‌ ಮಾಡಿಸಿ ಬೋರ್ವೆಲ್‌ ಇಲ್ಲಿ ಬರಬೇಕು, ಮನೆ ಹೀಗಿರಬೇಕು ಅಂತೆಲ್ಲ ಲೆಕ್ಕ ಮಾಡಿ ಯೋಜನೆ ತಂದರು. ಮನೆಯಲ್ಲಿ ಎಲ್ಲರೂ ಒಪ್ಪಿದರು.  ರಾಜ್‌ಕುಮಾರ್‌ಗೆ ಕುಣಿದಾಡುವಷ್ಟು ಖುಷಿಯಾಯಿತು.  ಚನ್ನ ನೀನೇ ಒಂದು ದಿನ ನಿಗಧಿ ಮಾಡಪ್ಪ ಅಂದರು. ಕೊನೆಗೆ ಏಪ್ರಿಲ್‌ 12-2006 ಒಳ್ಳೇ ದಿನ. ಆವತ್ತು ಬೋರ್‌ವೆಲ್‌ ಕೊರೆಸೇ ಬಿಡೋಣ ಅಂತ ಒಪ್ಪಿಗೆಯಾಯಿತು.  ಇದರ ಹೊಣೆ ಪೂರ್ತಿ ಚನ್ನರ ಮೇಲೆ ಇತ್ತು.  ನಾಳೆ ಸಿಂಗನಲ್ಲೂರಿಗೆ ಬೆಳಗಿನ ಜಾವವೇ ಹೊರಡೋಣ ಅಂತ ಅಂದು ಕೊಂಡರು.  ಪಾರ್ವತಮ್ಮನವರು ” ನೀನು ಬೆಳಗ್ಗೆ ಯಾರನ್ನು ಎಬ್ಬಿಸಬೇಡ’ ಅಂತ ರಾತ್ರಿಯೇ ದುಡ್ಡು ಕೊಟ್ಟಿದ್ದರು. ಏಕೆಂದರೆ, ರಾಜ್‌ಕುಮಾರ್‌ ಮನೆಗೆ ಯಾರೇ ಬಂದರು, ಅವರು ಊರಿಗೆ ಹೊರಟರೆ ಬಾಗಿಲ ತನಕ ಬಂದು, ಬಿಟ್ಟು, ಕ್ಷೇಮವಾಗಿ ಹೋಗಿ ಅಂತ ಹೇಳಿ. ಮನೆಯ ಮುಂದೆ ಇದ್ದ ಗಣಪತಿಗೆ ನಮಸ್ಕಾರ ಹಾಕಿ ಬರುವುದು  ರೂಢಿ. ದಿನದ ಯಾವುದೇ ಹೊತ್ತಲ್ಲಿನಲ್ಲೂ ಊರಿಗೆ ಹೊರಟರೂ ಹೀಗೆ ಮಾಡುತ್ತಿದ್ದರು. ಇನ್ನು ಬೆಳಗಿನ ಜಾವ, ಅದೂ ಚನ್ನ  ಸಿಂಗನಲ್ಲೂರಿಗೆ ಹೊರಟ್ಟಿದ್ದಾನೆ ಅಂದರೆ ಬಿಡುತ್ತಾರೆಯೇ ಅಂತ ಹಿಂದಿನ  ದಿನ ರಾತ್ರಿಯೇ ಆವತ್ತಿನ ಖರ್ಚುಗಳಿಗೆ ಒಂದು ಲಕ್ಷ ರೂ. ಕೊಟ್ಟಿದ್ದರು. 

 ” ರಾತ್ರಿ ಅಣ್ಣನನ್ನು ರೂಮಿನಲ್ಲಿ ಕಾಲು ಒತ್ತಿ ಮಲಗಿಸುತ್ತಿದ್ದೆ. ಅವರು “ಚನ್ನ ನಾಳೆ ನೀವು ನಮ್ಮೂರಿಗೆ ಹೋಗುತ್ತಿದ್ದೀರಿ.  ಬೇಗ ಮಲಗಿಕೊಳ್ಳಿ.  ಬೆಳಗ್ಗೆ ಬೇಗ ಏಳಬೇಕು. ನನಗೆ ಗೊತ್ತು ನೀವು ಹಿಡಿದ ಕೆಲಸ ಮುಗಿಸಿ ಬರ್ತೀರಿ ಅಂತ- ಇದೇ ಮಾತನ್ನು ಎರಡು ಮೂರು ಭಾರಿ ಹೇಳಿದರು. ಸ್ವಲ್ಪ ಸಮಯದ ನಂತರ ಕಣ್ಣು ಮುಚ್ಚಿದರು ಅಂತ ದೀಪ ಹಾರಿಸಿ ಹೊರಟೆ.  ಇದ್ದಕ್ಕಿದ್ದಂತೆ “ರೀ ಚನ್ನ’  ಅಂದರು. “ಅಣ್ಣಾ ‘ ಅಂದೆ. ಲೈಟ್‌ ಹಾಕಿ ಸ್ವಲ್ಪ ಅಂದರು.  ಹಾಕಿದೆ.  ಹಾಸಿಗೆ ಇಂದ  ಎದ್ದು ಬಂದು ನನ್ನ ತಬ್ಬಿಕೊಂಡರು. ಮತ್ತೆ ನನ್ನ ಮೈಯಲ್ಲಿ ಕರೆಂಟು ಹರಿದಂತೆ ಆಯಿತು. ನನ್ನ ಎರಡೂ ಕೆನ್ನೆಗಳಿಗೆ ಮುತ್ತು ಕೊಟ್ಟರು. ಮತ್ತೆ ತಬ್ಬಿಕೊಂಡರು. ಅಷ್ಟರಲ್ಲಿ ಹೇಗೂ ಲೈಟ್‌ ಹಾಕಿದೆ ನೀರು ಇಟ್ಟು ಹೋಗೋಣ ಅಂತ ಅಡುಗೆಯವ ಮಾಧು ಕೈಯಲ್ಲಿ ಲೋಟ ಹಿಡಿದು ಬಂದವನೇ ಬಾಗಿಲ ಬಳಿ ಗರುಡ ಗಂಬದಂತೆ ನಿಂತು ನಮ್ಮಿಬ್ಬರನ್ನೇ ನೋಡುತ್ತಿದ್ದಾನೆ.  ಅಣ್ಣನ ಕಣ್ಣಲ್ಲಿ ನೀರಾಡಿತ್ತು.  ನನ್ನ ಹೊಟ್ಟೆ ಒಂಥರ ಕಿವುಚಿದಂತಾಯಿತು. 
ಅಪ್ಪು, ಶಿವಣ್ಣಗೆ ಈ ರೀತಿ ಮುತ್ತು ಕೊಡುತ್ತಿದ್ದಾಗೆಲ್ಲಾ ಅಣ್ಣ ನನಗೂ ಹೀಗೆ ಮುತ್ತು ಕೊಟ್ಟರೆ… ಅಂತ ಆಸೆಯಾಗುತ್ತಿತ್ತು. ಆಸೆ ಈಡೇರಿತಲ್ಲಾ ಅಂತ ನನಗೆ ಒಳ ಒಳಗೇ ಖುಷಿ.  ಕಾಲು ಗಂಟೆಯಾದ ಮೇಲೆ ಚನ್ನ ಹೋಗಿ ಮಲಗಿ. ಬೆಳಗ್ಗೆ ಬೇಗ ಏಳಬೇಕು ಅಂತ ಕಳುಹಿಸಿಕೊಟ್ಟರು.  ಶಿವಣ್ಣನ ಮನೆಯಲ್ಲಿ ಮಲಗಿ, ಬೆಳಗ್ಗೆ ಬೇಗ ಸ್ನಾನ ಮುಗಿಸಿ, ಐದು ಗಂಟೆಗೆ ಡ್ರೈವರ್‌ ಬಾಬು ಜೊತೆ ಕಾರಲ್ಲಿ ಸಿಂಗನಲ್ಲೂರಿಗೆ ಹೊರಟೆ.  ಅಲ್ಲಿಗೆ ತಲುಪುವ ಹೊತ್ತಿಗೆ 11ಗಂಟೆ. ಅಷ್ಟರಲ್ಲಿ  ಬೋರ್‌ವೆಲ್‌ ಪಾಯಿಂಟ್‌ ಮಾಡೋರು ಬಂದಿದ್ದರು. ಅವರು ಹುಡುಕಾಡುತ್ತಿದ್ದರೆ ಅದು ಅಗ್ನಿ ಮೂಲೆಗೆ ತೋರಿಸುತ್ತಿದ್ದೆ. ಏಕೋ ಇಷ್ಟವಾಗಲಿಲ್ಲ. 
ಕೊನೆಗೆ ಎಂಜನಿಯರ್‌ ಹೇಳಿದ ಸ್ಥಳದಲ್ಲಿ ಒಳ್ಳೇ ಮನಸ್ಸಿಂದ ಕೊರೆಯುವುದು ಅಂತ ತೀರ್ಮಾನ ಮಾಡಿ ಕೆಲಸ ಶುರುಮಾಡಿದೆವು. ಆರಂಭದಲ್ಲಿ ಸ್ವಲ್ಪ ನೀರು ಬರುವ ಸೂಚನೆ ಕಂಡು ಖುಷಿಯಾಯಿತು.  ಒಂದು ಇನ್ನೂರು ಅಡಿ ದಾಟಿರಬಹುದು. ಇದ್ದಕ್ಕಿದ್ದಂತೆ ಬೋರ್‌ವೆಲ್‌ ಸ್ಥಬ್ಧವಾಯಿತು. ಏನು ಮಾಡಿದರೂ ಆನ್‌ ಆಗ್ತಿಲ್ಲ.  ಹೊಸಾ ಹೊಸ ಬೋರ್‌ವೆಲ್‌ಬೇರೆ.  ಮೊದಲು ಗಿರಾಕಿ ನಾವೇ.  ಏನೇನೋ ಕಸರತ್ತು ಮಾಡಿದರು ಪ್ರಯೋಜನವಾಗಲಿಲ್ಲ.  ಆಗ ಸಮಯ ಮಧ್ಯಾಹ್ನ ಒಂದು ಗಂಟೆ.  ಮುಂದೇನು ಅಂತ ಯೋಚಿಸುತ್ತಿರುವಾಗಲೇ- ಡ್ರೈವರ್‌ ಬಾಬು ಗಾಬರಿಯಾಗಿ ಬಂದ. ಅಕ್ಕ ಏನೋ ಮಾತಾಡಬೇಕಂತೆ ತಗೋ ಚನ್ನ ಅಂತ ಮೊಬೈಲ್‌ ಕೊಟ್ಟ. ಆ ಕಡೆಯಿಂದ ಅಶ್ವಿ‌ನಿ ಅಮ್ಮ “ಅಣ್ಣನಿಗೆ ತೀರ ಹುಷಾರಿಲ್ಲ ಚನ್ನ. ನೀನು ಈಗಲೇ ಬಂದು ಬಿಡು’ ಅಂದರು. ಮಾತು ಕಿವಿಗೆ ಇಳಿಯುತ್ತಿದ್ದಂತೆ ಮೇಲಿದ್ದ ಆಕಾಶ ನಿಧಾನಕ್ಕೆ ತಲೆಯ ಮೇಲೆ ಬೀಳುವಂತಾಗುತ್ತಿದೆ.  ಕಣ್ಣು ನೀರಿಂದ ಭಾರವಾಗುತ್ತಾ ಹೋಯಿತು ಕಣ್ಣೀರಿಂದಲೇ ಎಲ್ಲವನ್ನೂ ಅರ್ಥ ಮಾಡಿಕೊಂಡವರಂತೆ ಎಲ್ಲರೂ ಹೊರಟೆವು.  ಮೈಸೂರು ದಾಟುವ ಹೊತ್ತಿಗೆ- ಮೂರು ಇಂಚು ನೀರು ಸಿಕ್ಕ ಸುದ್ದಿ ಬಂತು. ಇತ್ತ ಕಡೆ ಅಣ್ಣನ ಪ್ರಾಣ ಪಕ್ಷಿ ಹಾರಿದ್ದು ಗ್ಯಾರಂಟಿ ಆಯ್ತು.  

ಆಗ ಅರ್ಥವಾಯಿತು.  ಹಿಂದಿನ ದಿನ ರಾತ್ರಿ ಅಣ್ಣ ನನ್ನ ಕೆನ್ನೆಗೆ ಏಕೆ ಮುತ್ತು ಕೊಟ್ಟಿದ್ದು, ಆರೀತಿ ಊರಿಗೆ ಬೀಳ್ಕೊಟ್ಟಿದ್ದು ಏಕೆ ಅಂತ.  ನನ್ನ ಬದುಕಿನ ಮುಕ್ಕಾಲು ಜೀವನ ಅವರ ಜೊತೆ ಕಳೆದೆ. ಹಗಲು ಇರುಳು ನೆರಳಂತೆ ಇದ್ದೆ. ಆದರೆ ಅವರು ಸಾಯುವಾಗ ಮಾತ್ರ ಜೊತೆಗೆ ಇರಲಿಲ್ಲ. ಅವರೇ ಮೊದಲೇ ತಿಳಿದು ನನ್ನ ದೂರ ಕಳುಹಿಸಿದರೋ, ವಿಧಿಯೇ ಹೀಗಿ ಮಾಡಿತೋ ಗೊತ್ತಿಲ್ಲಧಿಧಿಧಿ- ಇಷ್ಟು ಹೇಳಿದ ಚನ್ನನ ಕಣ್ಣಾಲಿಗಳಲ್ಲಿ ಗಳ, ಗಳ ಅಂದವು. 

ಶೂ ಪ್ರಸಂಗ…
ರಾಜಕುಮಾರ್‌ ಬೆಳಗ್ಗೆ ಯೋಗ. ಸಂಜೆ ವಾಕಿಂಗ್‌ ಮಿಸ್‌ ಮಾಡುತ್ತಿರಲಿಲ್ಲ. ತಲೆಗೆ ಟುವಲ್‌ ಕಟ್ಟಿಕೊಂಡು ವರದಪ್ಪ, ಚನ್ನ, ರಾಜ್‌ ಮೂರು ಜನ ಸದಾಶಿವನಗರ ಪೊಲೀಸ್ಟೇಷನ್‌ ಸುತ್ತಮುತ್ತ ವಾಕಿಂಗ್‌ ಮಾಡೋದು ರೂಢಿ. ದಿನಂಪ್ರತಿ ಒಂದು ಗಂಟೆ ವಾಕಿಂಗ್‌ ಮೀಸಲು. ಕೊನೆ ಕೊನೆಗೆ ಚನ್ನ, ರಾಜ್‌ ಇಬ್ಬರೇ ವಾಕಿಂಗ್‌ಗೆ ಹೋಗುತ್ತಿದ್ದರು. ಹೀಗೆ ಹೋಗಬೇಕಾದರೆ ಚನ್ನ ನಿಮ್ಮ ಶೂ ಬೆಲೆ ಎಷ್ಟು ಅಂದರು. ಅಣ್ಣ 400ರೂ. ಹಾಗಾದರೆ ನನಗೆ ಒಂದು ಜೊತೆ ತಂದು ಕೊಡ್ರೀ ಅಂದರು. ಈ ಮಧ್ಯೆ ಪುನೀತ್‌ ವಿದೇಶದಿಂದ ಅಪ್ಪಾಜಿಗೆ ವಾಕಿಂಗ್‌ಗೆ ಈ ಶೂ ಹಾಕಿಕೊಂಡು ಹೋಗಿ ಅಂತ ಹೊಸ ಶೂ ತಂದು, ಕಾಲಿಗೆ ಏರಿಸಿ ಕಳುಹಿಸಿದರು. ರಾಜ್‌ಗೆ ಅದ್ಯಾಕೋ ಕಂಫ‌ರ್ಟ್‌ ಅಂತ ಅನಿಸಿರಲಿಲ್ಲ.  ಮಾರನೆ ದಿನ – ಅಪ್ಪು ನೀನು ಪ್ರೀತಿಯಿಂದ ಶೂ ತಂದು ಕೊಟ್ಟೆ. ಆದರೆ ಅದ್ಯಾಕೋ ಹೊಂದು ತಾ ಇಲ್ಲ. ಈ ಚನ್ನನ ಶೂ ಬಹಳ ಚೆನ್ನಾಗಿದೆ ಅದನ್ನೇ ಹಾಕ್ಕೊತೀನಿ ಅಂತ ಸಾವಿರಾರೂ ಕೊಟ್ಟು ತಂದ ವಿದೇಶಿ ಶೂ ಬಿಟ್ಟು ನಾನ್ನೂರು ರೂಪಾಯಿಯ ಶೂನೇ ಹಾಕಿಕೊಂಡರಂತೆ. 

 ಕಟ್ಟೆ ಗುರುರಾಜ್‌

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.