ವಿನೂತನ ಪರಿಕಲ್ಪನೆ ಮನೆ – ಮನದಲಿ ಸಂಗೀತ
Team Udayavani, Jul 26, 2019, 5:00 AM IST
ಖ್ಯಾತ ಹಿಂದೂಸ್ಥಾನಿ ಶೈಲಿಯ ಗಾಯಕ ವಿ| ಶಂಕರ್ ಶಾನುಭಾಗ್ ಕೆಲ ಸಮಯದ ಹಿಂದೆ ಸೀಮಿತ ಸಂಗೀತಾಸಕ್ತರಿಗೆ ತಮ್ಮ ಸಂಗೀತದ ಗುರುಕುಲದ ಮುಖಾಂತರ ಉಚಿತ ಸಂಗೀತ ಶಿಕ್ಷಣವನ್ನು ನೀಡುವ ಪರಿಕಲ್ಪನೆ ಆರಂಭಿಸಿ ಸಫಲರಾಗಿದ್ದಾರೆ. ಇದೀಗ ವಿನೂತನ “ಮನೆ-ಮನದಲಿ ಸಂಗೀತ’ ಎನ್ನುವ ಪರಿಕಲ್ಪನೆ ಆರಂಭಿಸಿದ್ದಾರೆ.ಹಿಂದಿನ ಕಾಲದಲ್ಲಿ ಸಂಜೆಯ ಹೊತ್ತಿನಲ್ಲಿ ಭಜನೆ/ಸಂಕೀರ್ತನೆ ಸಾಮಾನ್ಯ ವಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಸಾಂಸ್ಕೃತಿಕ ಅಧಃಪತನ, ಪಾಶ್ಚಾéತೀಕರಣ, ಆಧುನಿಕತೆ ಇನ್ನಿ ತರ ಕಾರಣಗಳಿಂದ ಭಜನಾ ಸಂಪ್ರದಾಯ ಮರೆಯಾಗುತ್ತಿದೆ. ಈ ಸತ್ ಸಂಪ್ರದಾಯದ ಪುನರುತ್ಥಾನವೇ ಈ ಪರಿಕಲ್ಪನೆಯ ಮೂಲೋದ್ದೇಶ.
“ಮನೆ-ಮನೆಯಲಿ ಭಜನೆ, ಮನ-ಮನದಲಿ ಭಜನೆ’ ಎಂಬುದು ಈ ಸಂಗೀತ ಅಭಿಯಾನದ ಘೋಷಾ ವಾಕ್ಯ. ಈ ಅಭಿಯಾನದಡಿ ಶಂಕರ್ ಶಾನ್ಭಾಗ್ ಸಂಗೀತಾಸಕ್ತರ ಕೋರಿಕೆ ಮೇರೆಗೆ ಮನೆಗೆ ಬಂದು ಸಂಗೀತಾರಾಧನೆಗೈಯ್ಯಲಿದ್ದಾರೆ. ದಾಸ ಸಾಹಿತ್ಯ, ಮರಾಠಿ ಅಭಂಗ್, ಭಕ್ತಿಗೀತೆ, ವಚನ ಇವೆಲ್ಲವುಗಳು ಈ ಆರಾಧನೆಯಲ್ಲಿ ಸೇರಿಕೊಂಡಿವೆ. ನವಕಲಾಕಾರರಿಗೂ ಇಲ್ಲಿ ಅವಕಾಶವಿದೆ.
ಈ ಅಭಿಯಾನ ಈಚೆಗೆ ಆರಂಭಿಸಿದ್ದು, ಪ್ರತಿ ವಾರಾಂತ್ಯದಲ್ಲಿ ಸಂಜೆ ಸಂಗೀತ ಸೇವೆ ನಡೆಯಲಿದೆ. ವೈಶಿಷ್ಟ್ಯಪೂರ್ಣವಾಗಿ ಮತ್ತು ವೈವಿಧ್ಯಮಯವಾಗಿ ಮೂಡಿಬರುತ್ತಿದೆ.
ಸಂದೀಪ್ ನಾಯಕ್ ಸುಜೀರ್