ಒಂದು ಭಾರತ, ಒಂದು ಶೈಕ್ಷಣಿಕ ರಚನೆ


Team Udayavani, Aug 30, 2019, 5:14 AM IST

f-44

ಖ್ಯಾತ ವಿಜ್ಞಾನಿ ಡಾ|| ಕೆ.ಕಸ್ತೂರಿ ರಂಗನ್‌ ನೇತೃತ್ವದ ಸಮಿತಿ ನಿರೂಪಿಸಿರುವ ಹೊಸ ಶಿಕ್ಷಣ ನೀತಿಯ ಕರಡನ್ನು ರಾಷ್ಟ್ರೀಯ ಚರ್ಚೆಗಾಗಿ ಇಡಲಾಗಿದೆ. ಸಮಿತಿಯ ಮುಂದಿರುವ ಮಹತ್ವದ ಪ್ರಶ್ನೆ ಪದವಿ ಶಿಕ್ಷಣಕ್ಕೆ ಹೇಗೆ ಜಾಗತಿಕ ಮಟ್ಟದ ಶ್ರೇಷ್ಠತೆಯನ್ನು ತಂದು ಕೊಡಬೇಕು ಎನ್ನುವುದು. ಈ ಹಿನ್ನೆಲೆಯಲ್ಲಿ ಹಲವು ಅದ್ಭುತ, ಹೊಸ ವಿಚಾರಗಳನ್ನು ಸಮಿತಿ ಮುಂದಿಟ್ಟಿದೆ. ಪದವಿ ಹಂತದಲ್ಲಿ ಕೌಶಲ್ಯಾಭಿವೃದ್ಧಿಯ ಪ್ರಶ್ನೆಯನ್ನು ಉಲ್ಲೇಖೀಸಿದೆ. ಸಂಶೋಧನೆಯ ಅಗತ್ಯತೆಯ ಮತ್ತು ದಾರಿಯ ಕುರಿತು ಅದು ಹೇಳಿದೆ. ಬೇರೆ ಬೇರೆ ಶ್ಲಾಘನೀಯ ವಿಚಾರಗಳೂ ಬಂದಿವೆ. ಒಟ್ಟಾರೆಯಾಗಿ ಪದವಿ ಶಿಕ್ಷಣದ ಉನ್ನತೀಕರಣಕ್ಕೆ ಅಗತ್ಯವಿರುವ ಕನಸೊಂದನ್ನು ಕಸ್ತೂರಿ ರಂಗನ್‌ ಸಮಿತಿ ಕಟ್ಟಿದೆ.

ಆದರೆ ಇಲ್ಲಿ ಒಂದು ಮಾತು. ಅದೇನೆಂದರೆ ಇಂದಿನ ದೇಶದ ಉನ್ನತ ಶಿಕ್ಷಣದ ಗುಣಮಟ್ಟದ ಬೆಳವಣಿಗೆಯ ದಾರಿಗೆ ಅಡ್ಡಲಾಗಿರುವುದು ಶ್ರೇಷ್ಠ ವಿಚಾರಗಳ ಕೊರತೆ ಅಲ್ಲ. ಸಮಸ್ಯೆ ಇರುವುದು ಉನ್ನತ ಶಿಕ್ಷಣ ಸೌಧದ ಮೂಲಭೂತ ಸ್ಟ್ರಕ್ಚರ್‌ನಲ್ಲಿ. ಅಂದರೆ ಶೈಕ್ಷಣಿಕ ವ್ಯವಸ್ಥೆಯ ಕಟ್ಟಡದ ಸ್ವರೂಪದಲ್ಲಿ. ನಮ್ಮ ಪದವಿ ಶಿಕ್ಷಣದ ಬೃಹತ್‌ ಬೆಳವಣಿಗೆಯನ್ನು, ಶ್ರೇಷ್ಠತೆಯತ್ತ ನಡಿಗೆಯನ್ನು ಕುಂಠಿಸಿದ್ದು ಬಹುಶಃ ಈ ಸ್ಟ್ರಕ್ಚರ್‌ಗಳು. ಹಾಗಾಗಿ ಹೊಸ ಶಿಕ್ಷಣ ನೀತಿಯ ಸ್ವರೂಪಕ್ಕೆ ಹಾಗೂ ವ್ಯವಸ್ಥೆಗೆ ಅಂತಿಮ ಸ್ವರೂಪ ನೀಡುವ ಮೊದಲು ನಾವು ಈ ಸ್ಟ್ರಕ್ಚರ್‌ಗಳನ್ನು ಗಮನಿಸಿಕೊಂಡು ಅವುಗಳ ಕುರಿತೂ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಸೌಧ ನಿರ್ಮಾಣ ವಾದರೂ ಕಂಬಗಳು, ನೆಲಗಟ್ಟು ಹಳೆಯವೇ ಉಳಿಯುತ್ತವೆ.

ಒಂದನೆಯದು. ದೇಶಾದ್ಯಂತದ ಹಲವು ಪದವಿ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳ ತೀವ್ರ ಕೊರತೆ ಇದೆ. ಇಂತಹ ಕೊರತೆಗೆ ಮೂಲ ಕಾರಣವೆಂದರೆ ಅವುಗಳ ಆರಂಭಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕುರಿತು ಸ್ಪಷ್ಟ ನೀತಿ ನಿರೂಪಣೆ ಇಲ್ಲವೇ ಇಲ್ಲ. ಗಮನಿಸಿಕೊಳ್ಳಬೇಕು. ಏನೆಂದರೆ ನನಗೆ ತಿಳಿದ ಹಾಗೆ ನಮ್ಮ ದೇಶದಲ್ಲಿ ಸಾಮಾನ್ಯ ಶಿಕ್ಷಣ ನೀಡುವ ಪದವಿ ಕಾಲೇಜೊಂದರ ಆರಂಭಕ್ಕೆ (ಹಾಗೇ ಮುಂದುವರಿಕೆಗೆ) ಕುರಿತಾದಂತೆ ಸ್ಪಷ್ಟವಾದ ಕಾನೂನು ಬದ್ಧ‌ ಚೌಕಟ್ಟುಗಳಿಲ್ಲ. ಅಂದರೆ ಕಾಲೇಜೊಂದನ್ನು ಆರಂಭಿಸಲು ಏನು ಮೂಲಭೂತ ಸೌಕರ್ಯ ಹಾಗೂ ಮಾನವ ಸಂಪನ್ಮೂಲ ಬೇಕು ಎನ್ನುವುದಕ್ಕೆ ಶಾಸನ ಬದ್ಧವಾದ ಅಗತ್ಯತೆಗಳು ಇಲ್ಲ ಎಂದೇ ಅಂದುಕೊಂಡಿದ್ದೇನೆ. ಒಂದು ಮೆಡಿಕಲ್ ಕಾಲೇಜು ಆರಂಭಿಸುವುದು ಸುಲಭವಲ್ಲ. ಕಠಿಣ ನಿಯಮಗಳಿವೆ. ಅದು ಹೋಗಲಿ! ಒಂದು ಶಾಲೆಗೆ ಸಿ.ಬಿ.ಎಸ್‌.ಸಿ ಸಂಯೋಜನೆ ಪಡೆದುಕೊಳ್ಳುವುದು ಕೂಡ ಸುಲಭವಲ್ಲ. ಕಷ್ಟಕರವಾದ ನಿಯಮಗಳನ್ನು ಪಾಲಿಸಲೇಬೇಕು. ಇಂತಿಷ್ಟು ಎಕರೆ ಭೂಮಿ ಎಂದು ಇರಲೇಬೇಕು. ಬಿಲ್ಡಿಂಗ್‌ಗಳು, ಇತರೆ ಮೂಲಭೂತ ಸೌಲಭ್ಯ ಇರಲೇಬೇಕು. ಆದರೆ ಪದವಿ ಕಾಲೇಜಿನ ವಿಚಾರದಲ್ಲಿ ಇರುವ ಕಟ್ಟಳೆಗಳು ಅಷ್ಟೊಂದು ಶಾಸನ ಬದ್ಧವಾಗಿ ಇಲ್ಲ. ಇದ್ದರೂ ನಿಯಮಗಳು ಇರುವುದು ಹಲವೊಮ್ಮೆ ಕಾಗದದ ಮೇಲೆ. ಅಥವಾ ಇದ್ದರೂ ಅವಕ್ಕೆಲ್ಲ ಮಹತ್ವ ನೀಡಲಾಗಿಲ್ಲ. ಖಾಸಗಿ ಕಾಲೇಜುಗಳ ಸ್ಥಾಪನೆಗಾದರೆ ಸಂಯೋಜಕ ವಿಶ್ವವಿದ್ಯಾಲಯಗಳು ಹೇಗೂ ಅಫಿಲಿಯೆಶನ್‌ ನೀಡಿಬಿಡುತ್ತವೆ ಎಂದೇ ಭಾವನೆ ಇದೆ. ಅಫಿಲಿಯೆಶನ್‌ ಸಮಿತಿಯನ್ನು ಚೂರು ನೋಡಿಕೊಂಡರಾಯಿತು. ಇನ್ನೂ ಮೇಲಿನ ಹಂತದಲ್ಲಿ ಪರಿಚಯ ಇದ್ದರಂತೂ ಹಾಗೆ ನೋಡಿಕೊಳ್ಳುವುದೂ ಬೇಡ. ಸರಕಾರದ ಕೇವಲ ಒಂದು ಆದೇಶ ಸಾಕು. ಪ್ರಭಾವ ಇದ್ದರೆ ಅವೆಲ್ಲ ದೊಡ್ಡದಲ್ಲ ಎನ್ನುವ ಮಾತುಗಳು ಸಾಮಾನ್ಯವಾಗಿವೆ. ಹಾಗಾಗಿಯೇ ದೇಶದ ಹಲವು ಕಾಲೇಜುಗಳಲ್ಲಿ ಕನಿಷ್ಠ ಸೌಲಭ್ಯಗಳಾದ ಕ್ಲಾಸ್‌ರೂಮ್‌ಗಳು, ಟಾಯ್ಲೆಟ್‌ಗಳು, ಲೈಬ್ರರಿಗಳು, ಪುಸ್ತಕಗಳು, ಡೆಸ್ಕ್ಗಳು, ಕಂಪ್ಯೂಟರ್‌ಗಳು, ಕುಡಿಯುವ ನೀರಿನ ವ್ಯವಸ್ಥೆ ಇತ್ಯಾದಿಗಳ ತೀವ್ರ ಕೊರತೆ ಇದೆ. ಕೆಲವು ಕಡೆ ಕಾಲೇಜುಗಳು ಅಸಮರ್ಪಕವಾದ, ಕೆಲವೊಮ್ಮೆ ಅಪಾಯಕಾರಿಯಾದ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತವೆ. ಇದು ವಾಸ್ತವ ಸ್ಥಿತಿ.

ಕಾಲೇಜುಗಳ ಮೂಲಭೂತ ಸೌಕರ್ಯಗಳನ್ನು ಮತ್ತು ಸೂಕ್ತ ಮಾನವ ಸಂಪನ್ಮೂಲದ ಲಭ್ಯತೆಯನ್ನು ಪುನಃ ಪರಿಶೀಲಿಸಲು ಮತ್ತು ಸಂಯೋಜನೆಯನ್ನು ಮುಂದುವರೆಸಲು ಅನುಮತಿ ನೀಡುವುದರ ಸಲುವಾಗಿ ವಿಶ್ವವಿದ್ಯಾಲಯದ ಒಂದು ಸಮಿತಿ ವಾರ್ಷಿಕವಾಗಿ ಕಾಲೇಜುಗಳಿಗೆ ಭೇಟಿ ನೀಡುವ ಕುರಿತಾದ ಕಾನೂನು ಇದೆ. ಆದರೆ ಎಲ್ಲರಿಗೂ ತಿಳಿದಿರುವ ಹಾಗೆ ಇಂತಹ ವರದಿಗಳು ಫಾರ್ಮಾಲಿಟಿಯ ಮಿತಿಗಳನ್ನು ಮೀರುವುದೇ ಇಲ್ಲ. ಅಲ್ಲದೆ ಅವುಗಳ ವರದಿಗಳು ಕೇವಲ ರೆಕಮೆಂಡೇಟರಿ ಸ್ವರೂಪದಲ್ಲಿರುತ್ತವೆ. ವರದಿಗಳ ಕಡೆ ಶಾಸನಬದ್ಧ ಸಂಸ್ಥೆಗಳ ವಿಶೇಷ ಲಕ್ಷ್ಯ ಹರಿಯುವಂತೆ ತೋರುವುದಿಲ್ಲ. ಹಾಗಾಗಿ ಕಾಲೇಜುಗಳು ಮತ್ತೆ ತಮ್ಮದೇ ಹಾಡು ಹಾಡಿಕೊಂಡು ಮುಂದುವರಿಯುತ್ತವೆ. ಸಹಜವಾಗಿ ಅವುಗಳ ಮೇಲೆ ಸುಧಾರಣೆಗಾಗಿ ಪ್ರಯತ್ನಿಸಬೇಕಾದ ಒತ್ತಡಗಳೇ ಇರುವುದಿಲ್ಲ. ಮೂಲಭೂತ ಸೌಕರ್ಯಗಳೇ ಇಲ್ಲದ ಕಾಲೇಜುಗಳು ಕನಸು ಕಾಣುವುದು ಹೇಗೆ?

ಎರಡನೆಯ ಅಂಶ ಸರಕಾರ ಹಾಗೂ ಅನುದಾನಿತ ಖಾಸಗಿ ಕಾಲೇಜುಗಳ ನಡುವಿನ ಸಂಬಂಧಕ್ಕೆ ಕುರಿತಾದದ್ದು. ಗಮನಿಸಬೇಕಾದದ್ದೆಂದರೆ ತಾಂತ್ರಿಕವಾಗಿ, ಕಾನೂನಾತ್ಮಕವಾಗಿ ಅನುದಾನಿತ ಕಾಲೇಜುಗಳ ಅನುದಾನಿತ ಸಿಬ್ಬಂದಿಯ ಮೇಲೆ ಅಷ್ಟೇ ಸರ್ಕಾರಗಳ ಹಿಡಿತವಿರುತ್ತದೆಯೇ ಹೊರತು ಆಡಳಿತ ಮಂಡಳಿಗಳ ಮೇಲೆ ಅಲ್ಲ. ಇದು ಸಹಜ ಕೂಡ. ಆದರೆ ಇಂತಹ ಸಂಬಂಧ ಹಲವೊಮ್ಮೆ ಸಂಕೀರ್ಣತೆಗಳನ್ನು ಹುಟ್ಟು ಹಾಕುತ್ತದೆ. ಏನೆಂದರೆ ಇಂತಹ ಕಾಲೇಜುಗಳ ಅಭಿವೃದ್ಧಿ ಆಡಳಿತ ಮಂಡಳಿಗಳ ಮನಸ್ಸನ್ನು ಅವಲಂಬಿಸಿರುತ್ತದೆಯೇ ಹೊರತು ಸರ್ಕಾರಿ ಆದೇಶಗಳನ್ನಲ್ಲ. ಉದಾಹರಣೆಗೆ ಕೆಲವೊಮ್ಮೆ ಆಡಳಿತ ಮಂಡಳಿಗಳು ನ್ಯಾಕ್‌ ಅಕ್ರೆಡಿಟೇಶನ್‌ನಂತಹ ರಾಷ್ಟ್ರೀಯ ಗುಣಮಟ್ಟ ಮಾಪನ ವ್ಯವಸ್ಥೆಯಲ್ಲಿ ಭಾಗವಹಿಸಲು ಉತ್ಸಾಹ ತೋರುವುದಿಲ್ಲ ಎನ್ನುವ ಮಾತುಗಳಿವೆ. ಇನ್ನೂ ಮುಂದೆ ಹೋಗಿ ಕೆಲವು ಕಡೆ ಇಂತಹ ಪ್ರಕ್ರಿಯೆಗೆ ತಗಲುವ ವೆಚ್ಚವನ್ನು (ಕಾಲೇಜಿಗೆ ಸುಣ್ಣ-ಬಣ್ಣ ವ್ಯವಸ್ಥೆಯ ಖರ್ಚನ್ನು ಕೂಡ) ಸಿಬ್ಬಂದಿ ವರ್ಗವೇ ಭರಿಸಬೇಕಾಗುತ್ತದೆ.

ಗುಣಮಟ್ಟವನ್ನು ಸಾಧಿಸುವುದು ಹೇಗೆ?
ಮೂರನೆಯ ಸಮಸ್ಯೆಯ ಉಗಮವಿರುವುದು ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳು ಶಿಕ್ಷಣ ಕ್ಷೇತ್ರದ ಮೇಲೆ ಅಧಿಕಾರ ಹೊಂದಿರುವುದರಲ್ಲಿ ಅಂದರೆ ಶಿಕ್ಷಣ ಕ್ಷೇತ್ರ ಕನ್‌ಕರೆಂಟ್ಲಿಸ್ಟ್‌ ನಲ್ಲಿರುವುದರಲ್ಲಿ. ಇದರಿಂದಾಗಿಯೇ ರಾಷ್ಟ್ರೀಯವಾಗಿ ಒಂದು ದೇಶ, ಒಂದೇ ರೀತಿಯ ವ್ಯವಸ್ಥೆ ಎನ್ನುವ ಸಿಸ್ಟಮ್‌ಅನ್ನು ಹೊಂದಲು ನಮಗೆ ಸಾಧ್ಯವಾಗಿಲ್ಲ. ಇದರಿಂದಾಗಿ ಕೆಲವು ಗೊಂದಲುಗಳು ಹುಟ್ಟಿಕೊಂಡಿವೆ. ಮುಖ್ಯ ಸಮಸ್ಯೆ ಎಂದರೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ಅಥವಾ ಯು.ಜಿ.ಸಿ.ಯ ಆದೇಶಗಳು ರಾಜ್ಯ ಸರ್ಕಾರದ ಮೇಲೆ ಬೈಂಡಿಂಗ್‌ ಆಗಿರುವುದಿಲ್ಲ. ಅವೆಲ್ಲವೂ ನಿರ್ದೇಶನಗಳು ಮಾತ್ರ. ಆದೇಶಗಳಾಗಿರುವುದಿಲ್ಲ. ಅಂದರೆ ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ರಾಜ್ಯ ಸರಕಾರಗಳು ಒಪ್ಪಿಕೊಂಡುಬಿಡಲೇಬೇಕು ಎಂದೇನೂ ಇಲ್ಲ. ಅವುಗಳನ್ನು ಹಾಗೆಯೇ ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಬಹುದು ಅಥವಾ ಆದೇಶಗಳನ್ನು ಮಾಡಿಫೈ ಮಾಡಬಹುದು ಕೂಡ. ಕೇವಲ ಒಂದು ಉದಾಹರಣೆ ಹೇಳುತ್ತೇನೆ. ಕಾಲೇಜಿನಲ್ಲಿ ಪ್ರಾಂಶುಪಾಲರ ಹುದ್ದೆಯ ಆಯ್ಕೆಯ ಕುರಿತಾದ ಯು.ಜಿ.ಸಿ.ಯ ನಿರ್ದೇಶನಗಳನ್ನು ಕೆಲವು ರಾಜ್ಯಗಳು ಒಪ್ಪಿಕೊಂಡಿವೆ. ಇನ್ನು ಕೆಲವು ರಾಜ್ಯಗಳು ತಣ್ಣನೆ ಉಳಿದಿವೆ. ಈ ನಿರ್ದೇಶನವನ್ನು ಒಪ್ಪಿಕೊಳ್ಳದ ರಾಜ್ಯಗಳಲ್ಲಿ ಹೀಗಾಗಿ ಪ್ರಾಂಶುಪಾಲರ ಶ್ರೇಣಿಗಳೇ ಸೃಷ್ಟಿಯಾಗಿಲ್ಲ. ರೆಗ್ಯೂಲರ್‌ ಪ್ರಿನ್ಸಿಪಾಲರುಗಳೇ ಇಲ್ಲ. ಇರುವವರು ತಾತ್ಪೂರ್ತಿಕ ಪ್ರಿನ್ಸಿಪಾಲರು ಗಳು. ಇಂತಹ ಸಂದರ್ಭದಲ್ಲಿ ಹಲವೊಮ್ಮೆ ಕೇವಲ ಕೂದಲು ಹೆಚ್ಚು ಹಣ್ಣಾದವರಷ್ಟೇ ಪ್ರಾಂಶುಪಾಲರಾಗಿ, ಅಂದರೆ ಸೀನಿಯಾರಿಟಿ ಆಧಾರದ ಮೇಲೆ ಪ್ರಿನ್ಸಿಪಾಲರು ನಿಯುಕ್ತರಾಗುತ್ತ ಹೋಗಿ ನಿಜವಾದ ಯುವ ಪ್ರತಿಭೆಗಳಿಗೆ ಅವಕಾಶ‌ವೇ ಇಲ್ಲದಾಗಿದೆ. ಕೇಂದ್ರ ರಾಜ್ಯಗಳ ಸಂಬಂಧಗಳ ಇಂತಹ ಸ್ವರೂಪಗಳಿಂದಾಗಿ ಹಲವೊಮ್ಮೆ ಯು.ಜಿ.ಸಿ ಕೂಡ ಕೇವಲ ಮಾರ್ಗದರ್ಶಕ ಸಂಸ್ಥೆಯಾಗಿದೆ. ಯಾವ ರೀತಿಯ ರೂಲ್ಗಳು ಯಾವ ರಾಜ್ಯಗಳಲ್ಲಿವೆ ಎನ್ನುವುದಕ್ಕಾಗಿ ತಡಕಾಡಬೇಕಿದೆ.

ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರಗಳ ನಡುವೆ ಹೊಂದಾಣಿಕೆಯ ಕೊರತೆಯಿಂದಲೂ ಹಲವು ಸಮಸ್ಯೆಗಳು ಹುಟ್ಟಿಕೊಂಡಿವೆ. ವ್ಯವಸ್ಥೆ ಹೇಗಿದೆ ಎಂದರೆ ವಿಶ್ವವಿದ್ಯಾಲಯಗಳು ತಮ್ಮಷ್ಟಕ್ಕೆ ತಾವು ಅಕಾಡೆಮಿಕ್‌ ವ್ಯವಸ್ಥೆಗಳ ಅಂದರೆ ಸಿಲೆಬಸ್‌ಗಳ ನಿರೂಪಣೆ, ಪರೀಕ್ಷೆ ನಡೆಸುವಿಕೆ ಇಂತಹ ವಿಷಯಗಳ ಜವಾಬ್ದಾರಿಯಲ್ಲಿವೆ. ಅವು ಅಟೋನಾಮಸ್‌ ಸಂಸ್ಥೆಗಳು. ಅದೇ ವೇಳೆಯಲ್ಲಿ ಶಿಕ್ಷಣ ಸಚಿವಾಲಯಗಳು ಮತ್ತು ಅವುಗಳ ಸಂಬಂಧಿ ಸಂಸ್ಥೆಗಳು ನೌಕರರ ಸೇವಾ ರೂಲ್ಗಳು, ಕಾರ್ಯಭಾರಗಳು ಇತ್ಯಾದಿಗಳನ್ನು ನೋಡಿಕೊಳ್ಳುತ್ತವೆ. ಸಮಸ್ಯೆ ಎಂದರೆ ಹಲವೊಮ್ಮೆ ಈ ಎರಡು ಸಂಸ್ಥೆಗಳ ನಡುವೆ ಹೊಂದಾಣಿಕೆಯ ಕೊರತೆ ಇದೆ ಎಂದೇ ಭಾವನೆ. ವಿಶ್ವವಿದ್ಯಾಲಯಗಳು ಸೃಷ್ಟಿಸುವ ಅಕಾಡೆಮಿಕ್‌ ಕಾರ್ಯಭಾರಗಳನ್ನು ಸರ್ಕಾರಗಳು ಒಪ್ಪಿಕೊಳ್ಳುವುದೇ ಇಲ್ಲ. ವಿಚಿತ್ರವೆಂದರೆ ಅವು ಒಪ್ಪಿಕೊಳ್ಳದಿದ್ದರೂ ವಿಶ್ವವಿದ್ಯಾಲಯಗಳು ತಮ್ಮ ದಾರಿಯಲ್ಲಿ ಹೋಗುತ್ತಲೇ ಇರುತ್ತವೆ. ಇನ್ನೂ ವಿಶೇಷವೆಂದರೆ ಇತ್ತೀಚಿನ ವರ್ಷಗಳಲ್ಲಿ ವಿಶ್ವವಿದ್ಯಾಲಯಗಳು ಹಲವು ಹೊಸ ವಿಷಯಗಳನ್ನು ಆರಂಭಿಸಿವೆ. ಆದರೆ ಆ ವಿಷಯಗಳನ್ನು ಶಿಕ್ಷಣ ಇಲಾಖೆಗಳು ಒಪ್ಪಿಕೊಳ್ಳುವುದಿಲ್ಲ. ಅವು ಒಪ್ಪಿಕೊಳ್ಳುವುದು ಅಪ್ರೂವ್ಡ್ ವಿಷಯಗಳನ್ನು ಮಾತ್ರ. ಅಷ್ಟೇ ಅಲ್ಲ. ಯು.ಜಿ.ಸಿ ನಿರೂಪಿಸುವ ಹೊಸ ಕೋರ್ಸ್‌ಗಳ ಕಾರ್ಯಭಾರಗಳನ್ನು ಕೂಡ ಶಿಕ್ಷಣ ಇಲಾಖೆಗಳು ಒಪ್ಪಿಕೊಂಡೇಬಿಡುತ್ತವೆ ಎಂದು ಹೇಳಲಾಗು ವುದಿಲ್ಲ. ಹೀಗಾಗಿ ಹಲವೊಮ್ಮೆ ಯು.ಜಿ.ಸಿಯ ಉದ್ದೇಶಗಳು ನೆಲಕ್ಕೆ ತಲುಪುವುದೇ ಇಲ್ಲ ಎಂಬ ಭಾವನೆ ಇದೆ. ಇನ್ನೂ ಒಂದು ಮಾತು ಹೇಳಬೇಕು. ಅದೇನೆಂದರೆ ವಿಶ್ವವಿದ್ಯಾಲಯಗಳು ನಿರೂಪಿಸುವ ಸಿಲೆಬಸ್‌ಗಳು ಕೂಡ ಕೆಲವೊಮ್ಮೆ ಕಟ್ಪೇಸ್ಟ್‌ ಆಗಿರುತ್ತವೆ. ಅಷ್ಟೇ ಅಲ್ಲ, ಯಾವ ವಿಷಯಗಳನ್ನು ಎಷ್ಟು ತಾಸು, ಏಕೆ ಕಲಿಸಬೇಕು? ಇತ್ಯಾದಿ ಒಳಸೂಕ್ಷ್ಮಗಳು ವಿಶ್ವವಿದ್ಯಾಲಯಗಳ ಜಟಿಲವಾದ ಆಂತರಿಕ ರಾಜಕೀಯದೊಂದಿಗೆ ಮಿಳಿತಗೊಂಡಿರುತ್ತವೆ ಎಂಬ ಭಾವನೆಯೂ ಚಾಲ್ತಿಯಲ್ಲಿದೆ.

ಸಾಮಾನ್ಯವಾಗಿ ಕಾಲೇಜುಗಳು, ಸಂಸ್ಥೆಗಳು ಸೀನಿಯಾರಿಟಿಗಳಿಗೆ ಮಣೆ ಹಾಕುತ್ತವೆ. ಅವುಗಳ ಒಳಗಿನ ಸೂತ್ರಗಳನ್ನು ನಿರ್ದೇಶಿಸುವವರು ಹಿರಿಯರು. ಹಲವೊಮ್ಮೆ ಈ ಹಿರಿಯರು ತಂತ್ರಜ್ಞಾನಕ್ಕೆ ಮತ್ತು ಆಧುನಿಕ ಚಿಂತನೆಗಳಿಗೆ ಇತ್ಯಾದಿ ಹೊರಗಾದವರು. ಅಲ್ಲದೇ ಅವರು ಸುಮಾರಾಗಿ ನಿವೃತ್ತಿ ಚಿಂತನೆಯಲ್ಲಿರುವವರು. ಸಾಮಾನ್ಯವಾಗಿ ಆಂತರಿಕ ಗುಣಮಟ್ಟ ಕೋಶ ಇತ್ಯಾದಿಗಳಲ್ಲಿರುವವರು. ಹಾಗಾಗಿ ಕೆಲವೊಮ್ಮೆ ಇಂತಹ ಆಂತರಿಕ ಡೈನಮಿಕ್ಸ್‌ಗಳು ಹೊಸ ಐಡಿಯಾಗಳಿಗೆ, ಕ್ರಿಯೆಗಳಿಗೆ, ಅಭಿವೃದ್ಧಿ ಚಿಂತನೆಗಳಿಗೆ ಬಾಗಿಲು ತೆರೆಯುವುದೇ ಇಲ್ಲ.

ನಿಂತ ನೀರು ಕೊಳೆಯುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆಯೂ ಉಚ್ಚ ಶಿಕ್ಷಣದಲ್ಲಿದೆ. ಅದೆಂದರೆ ಹೆಚ್ಚು ಕಡಿಮೆ ಎಲ್ಲ ಖಾಸಗಿ ಕಾಲೇಜುಗಳಲ್ಲಿ ಕೆಲಸ ಮಾಡುವ ಪ್ರಾಧ್ಯಾಪಕರು ಒಂದೇ ಕಾಲೇಜಿನಲ್ಲಿ ನಿಂತ ನೀರಾಗಿ ತಮ್ಮ ಸೇವಾವಧಿ ಕಳೆಯುವುದು. ಅವುಗಳಿಂದ ಏನಾಗುತ್ತದೆ ಎಂದರೆ ವೃತ್ತಿನಿರತರಲ್ಲಿ ಅವಶ್ಯಕವಾಗಿ ಸ್ಪರ್ಧೆಯಲ್ಲಿರಬೇಕಾದ ಮನೋಭಾವ ಮತ್ತು ಪ್ರೊಫೆಶನಲಿಸಂಗೆ ಭಾರಿ ಹೊಡೆತ ತಗಲುತ್ತದೆ. ಅಲ್ಲದೆ ಪ್ರತಿಭಾನ್ವಿತರು ನಿಂತ ನೀರಾಗಿ ಹೋಗುವ ಪರಿಸ್ಥಿತಿ ಬರುತ್ತದೆ.

ಮುಖ್ಯ ಪರಿಹಾರವೆಂದರೆ ಯು.ಜಿ.ಸಿ ಅಡಿಯಲ್ಲಿ ಬರುವ ಎಲ್ಲ ಪದವಿ ಕಾಲೇಜುಗಳನ್ನು ಹಾಗೂ ವಿಶ್ವವಿದ್ಯಾಲಯಗಳನ್ನು ಒಂದೇ ಸ್ಟ್ರಕ್ಚರ್‌ನ ಅಡಿಯಲ್ಲಿ ತರುವುದು ಅಲ್ಲದೆ ಮೇಲಿನ ಕೆಲವು ಸ್ಟ್ರಕ್ಚರಲ್ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಹಿಡಿಯುವುದು. ಒಂದು ಭಾರತ ಮತ್ತು ಒಂದೇ ಒಂದು ಶೈಕ್ಷಣಿಕ ಸ್ಟ್ರಕ್ಚರ್‌ ಅನ್ನು ಸಾಧಿಸಲು ನಾವು ಪ್ರಯತ್ನಿಸಬೇಕಿದೆ.

ಡಾ. ಆರ್. ಜಿ. ಹೆಗಡೆ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.