ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ
Team Udayavani, Oct 12, 2019, 5:41 AM IST
ಹೆಬ್ರಿ : ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ಆಡಳಿತದಿಂದ ಜನ ಬೀದಿಗೆ ಬಂದಿದ್ದಾರೆ. ರಾಜ್ಯದ ನೆರೆ ಸಂತ್ರಸ್ತರ ಗೋಳನ್ನು ಕೇಳದೇ, ಚಿಕ್ಕಾಸು ಪರಿಹಾರ ಹಣ ಕೊಡದ ಸರಕಾರ ನಿರ್ಲಕ್ಷ್ಯ ಮಾಡಿದೆ. ಸ್ವಾಯತ್ತ ಸಂಸ್ಥೆಗಳಾದ ಐ. ಟಿ. ಮತ್ತು ಇ.ಡಿ.ಯನ್ನು ತನ್ನ ಕೈಗೊಂಬೆಯಾಗಿಸಿಕೊಂಡು ದರ್ಪದ ಆಡಳಿತ ಮಾಡುತ್ತಿದೆ. ಕೇಂದ್ರ ಸರಕಾರದ ಜನವಿರೋಧಿ ಮೋಟಾರ್ ಕಾಯ್ದೆಯನ್ನು ಜಾರಿಗೆ ತಂದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಅ. 11ರಂದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ಕೆಲಸಕಾರ್ಯಗಳ ಬಗ್ಗೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹೆಬ್ರಿ ಚೈತನ್ಯ ಸಭಾಭವನದಿಂದ ಹೆಬ್ರಿ ಬಸ್ ನಿಲ್ದಾಣದವರೆಗೆ ಬೃಹತ್ ಪ್ರತಿಭಟನಾ ಜಾಥಾ ಹಾಗೂ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಲಕ್ಷಾಂತರ ಮಂದಿ ಬೀದಿಗೆ
ಮೋದಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರ ಸುಳ್ಳು ಹೇಳಿಕೊಂಡು ಜನರಿಗೆ ಮೋಸ ಮಾಡಿದೆ ಎಂದು ಈ ಭಾಗದ ಬಿಜೆಪಿ ಮುಖಂಡರಾದ ನಳಿನ್ ಕುಮಾರ್, ಶೋಭಾ ಕರಂದ್ಲಾಜೆ, ರಘುಪತಿ ಭಟ್ ಹಾಗೂ ಸುನಿಲ್ ಕುಮಾರ್ಗೆ ಗೊತ್ತಿದೆ. ಆದರೆ ಅವರು ಸತ್ಯ ಹೇಳುವಂತಿಲ್ಲ. ಹೇಳಿದರೆ ಮುಂದೆ ಬಿಜೆಪಿಯಲ್ಲಿ ಸೀಟು ಸಿಗುವುದಿಲ್ಲ ಎಂದು ನ್ಯಾಯವಾದಿ ಸುಧೀರ್ಕುಮಾರ್ ಕೊಪ್ಪ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ ಜಿಲ್ಲೆಯ ಅಭಿವೃದ್ಧಿಪರ ರಾಷ್ಟ್ರೀಯ ಬ್ಯಾಂಕ್ಗಳನ್ನು ನಷ್ಟದ ಬ್ಯಾಂಕ್ಗಳೊಂದಿಗೆ ವಿಲೀನಗೊಳಿಸಿ ರಿಸರ್ವ್ ಬ್ಯಾಂಕಿನ ಭದ್ರತಾ ಠೇವಣಿಯನ್ನು ಕೇಂದ್ರ ಸರಕಾರ ದುರುಪಯೋಗಗೊಳಿಸಿ ರಾಜ್ಯದ ಬಿ.ಜೆ.ಪಿ.ಸರಕಾರ ಬಡವರ ಪರ ಜನಪರ ಕೆಲಸ ಮಾಡದೇ ಜನರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ,ಸುಧಾಕರ ಕೋಟ್ಯಾನ್, ಬಿಪಿನ್ಚಂದ್ರ ಪಾಲ್, ಸುಜಾತಾ ಲಕ್ಷ್ಮಣ್, ರವಿಶಂಕರ್ ಸೇರಿಗಾರ್ ಇದ್ದರು. ಸಂತೋಷ ಶೆಟ್ಟಿ ಮುದ್ರಾಡಿ ಕಾರ್ಯಕ್ರಮ ನಿರೂಪಿಸಿ, ಜನಾರ್ದನ್ ವಂದಿಸಿದರು.