ಕೆಪಿಎಲ್ಗೂ ಅಂಟಿಕೊಂಡ ಫಿಕ್ಸಿಂಗ್ ದುರಂತ
Team Udayavani, Nov 23, 2019, 5:02 AM IST
ಕ್ರೀಡೆಯಲ್ಲಿ ಮೋಸದಾಟ ಹೊಸತೇನಲ್ಲ. ವಿಶ್ವದ ಹಲವು ಕ್ರೀಡೆಗಳಿಗೆ ಈ ರೋಗ ತಗುಲಿ ಭಾರೀ ವಿವಾದಗಳೇ ಸಂಭವಿಸಿದೆ. ಕ್ರಿಕೆಟ್ನಲ್ಲಿ ಈ ವಿವಾದ ಮೊದಲು ಬೆಳಕಿಗೆ ಬಂದಿದ್ದು 90ರ ದಶಕದಲ್ಲಿ. 2000ನೇ ವರ್ಷದಲ್ಲಿ ಈ ವಿವಾದ ತೀವ್ರ ಸ್ವರೂಪ ಪಡೆಯಿತು. 2013ರ ಐಪಿಎಲ್ ಆವೃತ್ತಿಯಲ್ಲಿ ಈ ವಿವಾದ ಇನ್ನಷ್ಟು ಜೋರಾಗಿ ವಿಶ್ವ ಕ್ರಿಕೆಟನ್ನು ಅಲ್ಲಾಡಿಸಿತು. ಭಾರತೀಯ ಕ್ರಿಕೆಟ್ನ ಆಡಳಿತಸ್ವರೂಪವನ್ನೇ ಬದಲಿಸಲು ಇದು ಕಾರಣವಾಯಿತು.
ಆ ಮೋಸದಾಟ ಭಾರತದ ದೇಶೀಯಮಟ್ಟದಲ್ಲೂ ಇದೆ ಎನ್ನುವುದು ಬಹಿರಂಗವಾಗಿದೆ. ಅತ್ಯಂತ ಬೇಸರದ ಸಂಗತಿಯೆಂದರೆ, ಕರ್ನಾಟಕ ಕ್ರಿಕೆಟ್ ಸಂಸ್ಥೆ ಆಯೋಜಿಸುವ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಅದು ದೊಡ್ಡಮಟ್ಟದಲ್ಲಿ ಸ್ಫೋಟಗೊಂಡಿದೆ. ಇದು ರಾಜ್ಯದ ಮಟ್ಟಿಗೆ ಅತ್ಯಂತ ಅವಮಾನಕಾರಿ ಸಂಗತಿ. ದೇಶೀಯಮಟ್ಟದಲ್ಲಿ ಟಿ20 ಲೀಗನ್ನು ಮೊದಲು ಆರಂಭಿಸಿದ್ದೇ ಕರ್ನಾಟಕ.
ಅದೇ ಮಾದರಿಯಿಟ್ಟುಕೊಂಡು ದೇಶದ ವಿವಿಧ ರಾಜ್ಯಗಳು ಟಿ20 ಲೀಗ್ ಆರಂಭಿಸಿ ಯಶಸ್ವಿಯಾಗಿವೆ. ಆದರೆ ಮೊದಲ ರಾಜ್ಯವಾಗಿ ಕರ್ನಾಟಕವೇ ಫಿಕ್ಸಿಂಗ್ ಸುಳಿಗೆ ಸಿಲುಕಿಕೊಂಡಿದೆ. ರಾಜ್ಯದ ಖ್ಯಾತ ಕ್ರಿಕೆಟಿಗರಾದ ಸಿ.ಎಂ.ಗೌತಮ್, ಅಬ್ರಾರ್ ಕಾಜಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಟಸ್ಕರ್ಸ್ ಮಾಲಿಕ ಅರವಿಂದ್ ವೆಂಕಟೇಶ್ ರೆಡ್ಡಿ ಪತ್ತೆಗಾಗಿ ಲುಕೌಟ್ ನೋಟಿಸ್ ಹೊರಡಿಸಲಾಗಿದೆ.
ಬೆಳಗಾವಿ ಪಿಂಕ್ ಪ್ಯಾಂಥರ್ಸ್ ಮಾಲಿಕ ಅಶ್ಫಾಕ್ ಅಲಿ ತಹ್ರಾನನ್ನು ಬಂಧಿಸಲಾಗಿದೆ. ಐಪಿಎಲ್ನಲ್ಲಿ ಆಡಿ ಖ್ಯಾತರಾಗಿರುವ ಸ್ಪಿನ್ನರ್, ಕೆ.ಸಿ.ಕಾರಿಯಪ್ಪರನ್ನೂ ವಿಚಾರಣೆಗೊಳಪಡಿಸಲಾಗಿದೆ. ಇದು ಸದ್ಯ ಕರ್ನಾಟಕ ಕ್ರಿಕೆಟ್ ಮಟ್ಟಿಗೆ ಸಂಕಷ್ಟದ ಸಮಯ. ಮತ್ತೂಮ್ಮೆ ಇಂತಹ ದುರಂತ ನಡೆಯದಂತೆ ರಾಜ್ಯ ಕ್ರಿಕೆಟ್ ಸಂಸ್ಥೆ ನೋಡಿಕೊಳ್ಳಬೇಕಾಗಿದೆ.