ಪ್ರತೀಕಾರ ತೀರಿಸಿಕೊಳ್ಳುವುದೇ ಇರಾನ್?
Team Udayavani, Jan 6, 2020, 7:00 AM IST
ಅಮೆರಿಕದ ಪಾಲಿಗೆ ಖಾಸಿಮ್ ಸುಲೈಮಾನಿ ತನ್ನ ಕೈಗಳಿಗೆ ಅಮೆರಿಕನ್ನರ ರಕ್ತದ ಕಲೆಗಳನ್ನು ಅಂಟಿಸಿಕೊಂಡಿದ್ದ ಶತ್ರುವಾಗಿದ್ದ. ಇನ್ನೊಂದೆಡೆ ಇರಾನ್ನಲ್ಲಿ ಸುಲೈಮಾನಿ ರಾಷ್ಟ್ರೀಯ ಹೀರೋ ಆಗಿದ್ದ. ಸುಲೈಮಾನಿ ಹೆಸರು ಅಮೆರಿಕದ ಹಿಟ್ಲಿಸ್ಟ್ನಲ್ಲಿ ಇತ್ತು ಎನ್ನುವುದಕ್ಕಿಂತ, ಅದೇಕೆ ಅಮೆರಿಕ ಈ ಸಮಯದಲ್ಲಿ ಆತನನ್ನು ಕೊಲ್ಲಲು ನಿರ್ಧರಿಸಿತು ಎನ್ನುವುದು ಅಚ್ಚರಿ.
ಅಮೆರಿಕ ಸೇನೆಯು ಇರಾಕ್ ರಾಜಧಾನಿ ಬಾಗ್ಧಾದ್ನಲ್ಲಿ ಇರಾನಿ ಸೇನೆಯ ಅತ್ಯುನ್ನತ ಕಮಾಂಡರ್, ಖುದ್ಸ್ ಫೋರ್ಸ್ನ ಮುಖ್ಯಸ್ಥ ಜನರಲ್ ಖಾಸಿಮ್ ಸುಲೈಮಾನಿಯನ್ನು ಹತ್ಯೆಗೈದಿದೆ. ಇದರಿಂದಾಗಿ ಅಮೆರಿಕ ಮತ್ತು ಇರಾನ್ನ ನಡುವೆ ಕೆಲ ವರ್ಷಗಳಿಂದ ನಡೆದಿದ್ದ ಕೆಳಮಟ್ಟದ ಸಂಘರ್ಷವೀಗ ನಾಟಕೀಯ ರೀತಿಯಲ್ಲಿ ಏರಿಕೆ ಕಂಡಿದ್ದು, ಇದರ ಪರಿಣಾಮ ಸಾಕಷ್ಟು ಗಂಭೀರವಾಗುವ ಸಾಧ್ಯತೆ ಇದೆ.
ಸುಲೈಮಾನಿ ಹತ್ಯೆಗೆ ಇರಾನ್ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದರೆ ಪ್ರತೀಕಾರ ಮತ್ತು ಪ್ರತಿಕ್ರಿಯೆಗಳ ಈ ಸರಣಿಯು ಉಭಯ ದೇಶಗಳನ್ನು ಮುಖಾಮುಖೀಗೆ ತಂದು
ನಿಲ್ಲಿಸಲೂಬಹುದೇನೋ?
ಈಗ ಇರಾಕ್ನಲ್ಲಿ ಅಮೆರಿಕದ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆಯಂತೂ ಏಳಲಿದೆ. ಆದರೆ, ಇನ್ನೊಂದೆಡೆ ಏನಾದರೂ ಬಹಳ ದಿನದಿಂದ ಮಧ್ಯಪ್ರಾಚ್ಯದ ವಿಷಯದಲ್ಲಿ ರಣನೀತಿ ರೂಪಿಸಿಟ್ಟುಕೊಂಡಿದ್ದರೆ, ಆ ರಣನೀತಿಯ ಪ್ರಯೋಗವೂ ಈಗಲೇ ಆಗಬಹುದು.
ಬರಾಕ್ ಒಬಾಮಾ ಅವರ ಸರಕಾರದಲ್ಲಿ ಮಧ್ಯಪ್ರಾಚ್ಯ ಮತ್ತು ಶ್ವೇತಭವನದ ಪರ್ಷಿಯನ್ ಕೊಲ್ಲಿಯ ಸಹ ಸಂಯೋಜಕರಾಗಿದ್ದ ಫಿಲಿಪ್ ಗಾರ್ಡನ್, “”ಸುಲೈಮಾನಿ ಹತ್ಯೆಯು ಇರಾನ್ ವಿರುದ್ಧದ ಅಮೆರಿಕದ “ಯುದ್ಧ ಘೋಷಣೆ’ಗಿಂತ ಕಡಿಮೆಯಿಲ್ಲ” ಎಂದು ಹೇಳಿದ್ದಾರೆ.
ಇಲ್ಲಿ ಖುದ್ಸ್ ಪಡೆಯ ಬಗ್ಗೆ ಹೇಳಲೇಬೇಕು. ಇದು ಇರಾನಿ ಸೇನೆಯ ಒಂದು ಶಾಖೆಯಾಗಿದ್ದು, ಇದರ ಮೂಲಕ ಇರಾನ್, ವಿದೇಶಗಳಲ್ಲಿ, ಅದರಲ್ಲೂ ಮಧ್ಯಪ್ರಾಚ್ಯದಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸುತ್ತದೆ. ಖಾಸಿಮ್ ಸುಲೈಮಾನಿ ಲೆಬನಾನ್, ಇರಾಕ್, ಸಿರಿಯಾ ಮತ್ತು ಇತರ ಕೊಲ್ಲಿ ರಾಷ್ಟ್ರಗಳಲ್ಲಿ ವರ್ಷಗಟ್ಟಲೆ ಪೂರ್ವಯೋಜಿತ ದಾಳಿ ನಡೆಸುತ್ತಲೇ ಬಂದರು. ಆ ಮೂಲಕ ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅದರ ಸಹಯೋಗಿಗಳ ಪ್ರಭಾವ ಹೆಚ್ಚುವಂತೆ ನೋಡಿಕೊಂಡರು.
ಈಗೇಕೆ ದಾಳಿಗೆ ನಿರ್ಧರಿಸಿತು ಅಮೆರಿಕ?
ಅಮೆರಿಕದ ಪಾಲಿಗೆ ಖಾಸಿಮ್ ಸುಲೈಮಾನಿ ತನ್ನ ಕೈಗಳಿಗೆ ಅಮೆರಿಕನ್ನರ ರಕ್ತದ ಕಲೆಗಳನ್ನು ಅಂಟಿಸಿಕೊಂಡಿದ್ದ ಶತ್ರುವಾಗಿದ್ದ. ಇನ್ನೊಂದೆಡೆ ಇರಾನ್ನಲ್ಲಿ ಸುಲೈಮಾನಿ ರಾಷ್ಟ್ರೀಯ ಹೀರೋಗಿಂತ ಕಡಿಮೆಯೇನೂ ಇರಲಿಲ್ಲ. ಸತ್ಯವೇನೆಂದರೆ, ಕಳೆದ ಒಂದೆರಡು ವರ್ಷಗಳಿಂದ ಅಮೆರಿಕವು ಇರಾನ್ನ ಮೇಲೆ ಒತ್ತಡ ತರಲು ನಡೆಸಿದ ವ್ಯಾಪಕ ಅಭಿಯಾನ ಮತ್ತು ಪ್ರತಿಬಂಧಗಳ ವಿರುದ್ಧ ಸುಲೈಮಾನಿ ನೇತೃತ್ವದಲ್ಲಿ ತೀವ್ರ ಪ್ರತಿರೋಧ ಎದುರಾಗಿತ್ತು.
ಸುಲೈಮಾನಿ ಹೆಸರು ಅಮೆರಿಕದ ಹಿಟ್ಲಿಸ್ಟ್ನಲ್ಲಿ ಇತ್ತು ಎನ್ನುವುದಕ್ಕಿಂತ, ಅದೇಕೆ ಅಮೆರಿಕ ಈ ಸಮಯದಲ್ಲಿ ಸುಲೈಮಾನಿಯನ್ನು ಹತ್ಯೆಗೈಯ್ಯಲು ನಿರ್ಧರಿಸಿತು ಎನ್ನುವುದು ಅಚ್ಚರಿ ಹುಟ್ಟಿಸಬೇಕಾದ ಸಂಗತಿ.
ಇತ್ತೀಚೆಗೆ ಇರಾಕ್ನಲ್ಲಿ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ನಡೆದ ಸರಣಿ ಕ್ಷಿಪಣಿ ದಾಳಿಗಳಿಗೆ ಇರಾನ್ ಕಾರಣ ಎಂದು ಆರೋಪಿಸಲಾಗಿತ್ತು. ಈ ದಾಳಿಗಳಲ್ಲಿ ಅಮೆರಿಕದ ಗುತ್ತಿಗೆದಾರನೊಬ್ಬ
ಸಾವನ್ನಪ್ಪಿದ್ದ.
ಇದಕ್ಕೂ ಮೊದಲು ಇರಾನ್, ಅಮೆರಿಕನ್ ಟ್ಯಾಂಕರ್ಗಳ ಮೇಲೆ ದಾಳಿ ಮಾಡಿತ್ತು, ಅಮೆರಿಕದ ಕೆಲವು ಮಾನವರಹಿತ ವಿಮಾನಗಳನ್ನು ಹೊಡೆದುರುಳಿಸಿತ್ತು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸೌದಿ ಅರೇಬಿಯಾದ ದೊಡ್ಡ ತೈಲ ನೆಲೆಯ ಮೇಲೂ ದಾಳಿ ಮಾಡಿತ್ತು. ಈ ಎಲ್ಲಾ ಘಟನೆಗಳಿಗೂ ಅಮೆರಿಕ ಆಗ ನೇರ ಪ್ರತಿಕ್ರಿಯ ನೀಡಿರಲಿಲ್ಲ.
ಒಂದು ಕಲ್ಲಿಗೆ ಎರಡು ಹಕ್ಕಿ
ಇರಾಕ್ನಲ್ಲಾದ ದಾಳಿಗಳ ವಿಚಾರಕ್ಕೆ ಬರುವುದಾದರೆ, ಆ ದೇಶದಲ್ಲಿ ಅಮೆರಿಕನ್ ಮಿಲಿಟರಿ ನೆಲೆಗಳ ಮೇಲೆ ನಡೆದ ರಾಕೆಟ್ ದಾಳಿಗೆ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳೇ ಸೂತ್ರಧಾರಿಗಳೆಂದು ಹೇಳಿದ ಅಮೆರಿಕ, ಅವುಗಳ ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ಇದಾದ ಕೆಲವೇ ಸಮಯದಲ್ಲಿ, ಅಂದರೆ ಜನವರಿ 1 ರಂದು ಇರಾಕ್ನ ಬಾಗ್ಧಾದ್ ನಗರಿಯಲ್ಲಿನ ಅಮೆರಿಕದ ದೂತಾವಾಸ ಕಚೇರಿಯ ಮೇಲೆ ಕತಾಬಿ ಹೆಜ್ಬುಲ್ಲಾ ಎಂಬ ಗುಂಪಿನಿಂದ ದಾಳಿ ಆಯಿತು.(ಈ ಕತಾಬಿ ಹೆಜ್ಬುಲ್ಲಾ ಇರಾನ್ನೊಂದಿಗೆ ಆಪ್ತವಾಗಿದೆ. ಈ ದಾಳಿಯ ನಂತರ ಟ್ರಂಪ್ ತಕ್ಕ ಪ್ರತ್ಯುತ್ತರ ನೀಡುವುದಾಗಿ ಘೋಷಿಸಿದ್ದರು).
ತಾನೇಕೆ ಸುಲೈಮಾನಿಯನ್ನು ಸಾಯಿಸಬೇಕಾಯಿತು ಎನ್ನುವುದನ್ನು ಅಮೆರಿಕ ಸ್ಪಷ್ಟಪಡಿಸಿದೆ. ಈ ವಿಷಯದಲ್ಲಿ ಅದು, ಸುಲೈಮಾನಿ ಮತ್ತು ತಂಡದಿಂದ ನಡೆದ ಇತ್ತೀಚಿನ ದಾಳಿಗಳನ್ನು ಉಲ್ಲೇಖೀಸಿದೆಯಾದರೂ, ಸಂಭಾವ್ಯ ದಾಳಿಗಳನ್ನು ತಡೆಯುವ ಮುನ್ನೆಚ್ಚರಿಕೆಯ ಕ್ರಮವಾಗಿಯೂ ತಾನು ಹೀಗೆ ಮಾಡಬೇಕಾಯಿತು ಎಂದೂ ಹೇಳಿದೆ. ಆ ಸಂಭಾವ್ಯ ದಾಳಿಗಳು ಯಾವುವು ಎನ್ನುವುದಕ್ಕೂ ಅಮೆರಿಕ ಉತ್ತರಿಸಿದೆ.
ಕಮಾಂಡರ್ ಸುಲೈಮಾನಿ ಮತ್ತವರ ತಂಡ ಇರಾಕ್ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿನ ಅಮೆರಿಕನ್ ರಾಜತಾಂತ್ರಿಕರು ಮತ್ತು ಸೇವಾ ಸದಸ್ಯರ ಮೇಲೆ ದಾಳಿ ಮಾಡುವ ವ್ಯವಸ್ಥಿತ ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಿತ್ತು ಎಂದು ಟ್ರಂಪ್ ಸರಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ಬರೆದಿದೆ.
ಒಟ್ಟಲ್ಲಿ ಈ ಬಿಕ್ಕಟ್ಟಿನಿಂದಾಗಿ ಮುಂದೆ ಏನಾಗಲಿದೆ ಎನ್ನುವುದು ಎದುರಾಗಿರುವ ಪ್ರಶ್ನೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅಂತೂ ಈ ನಾಟಕೀಯ ಕಾರ್ಯಾಚರಣೆಯ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ನೆಲಕ್ಕೆ ಉರುಳಿಸಿದ್ದಾರೆ.
ಮೊದಲನೆಯದಾಗಿ, “ಅಮೆರಿಕದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ’ ಎಂದು ಇರಾನ್ಗೆ ಈ ಮೂಲಕ ಟ್ರಂಪ್ ಬೆದರಿಸಿದ್ದಾರೆ ಮತ್ತು ಎರಡನೆಯದಾಗಿ, ಮಧ್ಯಪ್ರಾಚ್ಯದಲ್ಲಿನ ತನ್ನ ಮಿತ್ರರಾಷ್ಟ್ರಗಳಾದ ಸೌದಿ ಅರೇಬಿಯ ಮತ್ತು ಇಸ್ರೇಲ್ಗೆ ಅಭಯ ಹಸ್ತ ನೀಡಿದ್ದಾರೆ . ಸುಲೈಮಾನಿ ಹತ್ಯೆಯ ಮೂಲಕ “”ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಶಕ್ತಿ ಕಡಿಮೆಯೇನೂ ಆಗಿಲ್ಲ. ನಾವು ನಿಮ್ಮೊಂದಿಗೆ ಇದ್ದೇವೆ ಹೆದರದಿರಿ” ಎಂದು ಸೌದಿ ಮತ್ತು ಇಸ್ರೇಲ್ಗೆ ಸಂದೇಶ ಕಳುಹಿಸಿದೆ ಅಮೆರಿಕ.
ಈಗೇನಾಗಬಹುದು?
ಇರಾನ್ ಅಮೆರಿಕದ ದಾಳಿಯನ್ನು ತುಟಿಕಚ್ಚಿ ಸಹಿಸಿಕೊಳ್ಳಲಿದೆ, ಯಾವುದೇ ಆಕ್ರಮಕ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಭಾವಿಸುವುದು ಖಂಡಿತ ತಪ್ಪು. ಇರಾಕ್ನಲ್ಲಿ 5000ಕ್ಕೂ ಹೆಚ್ಚು ಅಮೆರಿಕನ್ ಸೈನಿಕರಿದ್ದಾರೆ. ಈಗ ಇರಾನ್ನ ಗಮನ ಈ ಸೈನಿಕರತ್ತ ಹರಿಯಲಿದೆ. ಈ ಹಿಂದೆಯೂ ಕೂಡ ಇರಾನ್, ಅಮೆರಿಕದೊಂದಿಗೆ ಬಿಕ್ಕಟ್ಟು ಸೃಷ್ಟಿಯಾದಾಗಲೆಲ್ಲ ಅಮೆರಿಕನ್ ಸೈನಿಕರನ್ನೇ ಗುರಿಯಾಗಿಸಿ ದಾಳಿ ನಡೆಸಿದ ಉದಾಹರಣೆಗಳು ಇವೆ. ಇನ್ನು ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಆರಂಭವಾಗಿದ್ದು, ಇದರ ಪರಿಣಾಮವು ತೈಲ ಬೆಲೆಯ ಏರಿಕೆಯ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳು ಈಗ ತಮ್ಮ ರಕ್ಷಣೆಯತ್ತ ಗಮನ ಹರಿಸುತ್ತಿವೆ. ಅಮೆರಿಕವು ಬಾಗ್ಧಾದ್ನಲ್ಲಿರುವ ತನ್ನ ರಾಯಭಾರ ಕಚೇರಿಯ ಸುರಕ್ಷತೆಗಾಗಿ ಸಹಾಯವನ್ನು ಕಳುಹಿಸಿದೆ. ಅಗತ್ಯ ಎದುರಾದರೆ, ಅದು ಈ ಪ್ರದೇಶದಲ್ಲಿ ತನ್ನ ನೌಕಾಪಡೆಯ ಸಂಖ್ಯೆಯನ್ನು ಸಹ ಹೆಚ್ಚಿಸಬಹುದು.
ಏನು ಮಾಡಬಹುದು ಇರಾನ್?
ಇರಾನ್ ಒಂದು ದಾಳಿಗೆ ಉತ್ತರವನ್ನು ನೇರವಾಗಿ ಇನ್ನೊಂದು ದಾಳಿಯ ಮೂಲಕವೇ ನೀಡಲಿದೆ ಎಂದು ಸ್ಪಷ್ಟವಾಗಿ ಹೇಳಲು ಬರುವುದಿಲ್ಲ. ಈ ಬಾರಿ ಇರಾನ್ನ ಪ್ರತಿಕ್ರಿಯೆ ಹಿಂದೆಂದಿಗಿಂತ ಭಿನ್ನವಾಗಿರಲಿದೆ ಎನ್ನಲಾಗುತ್ತದೆ.
ಈಗ ಇರಾನ್, ಸುಲೈಮಾನಿಯಿಂದ ಸೃಷ್ಟಿಯಾದ ಮತ್ತು ಫಂಡಿಂಗ್ ಮಾಡಲಾದ ಗುಂಪುಗಳಿಂದ ವ್ಯಾಪಕ ಸಮರ್ಥನೆ ಪಡೆಯಲು ಪ್ರಯತ್ನಿಸಬಹುದು. ಉದಾಹರಣೆಗೆ, ಅದು ಈ ಗುಂಪುಗಳನ್ನು ಬಳಸಿಕೊಂಡು ಬಾಗ್ಧಾದ್ನಲ್ಲಿನ ಅಮೆರಿಕದ ರಾಯಭಾರ ಕಚೇರಿಯ ಘೇರಾಬಂದಿಗೆ ಹೊಸ ರೂಪ ಕೊಡಬಹುದು.
ತನ್ಮೂಲಕ ಅದು ಇನ್ಮುಂದೆ ಇರಾಕ್ ಸರ್ಕಾರವನ್ನು ಮತ್ತಷ್ಟು ಕಷ್ಟಕ್ಕೆ ದೂಡಬಹುದು. ಜತೆಗೇ, ಇರಾಕ್ನ ಉಳಿದ ಜಾಗಗಳಲ್ಲೂ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಲು ಪ್ರಯತ್ನಿಸಿ, ಇದೇ ನೆಪದಲ್ಲಿ ಮತ್ತಷ್ಟು ದಾಳಿಗಳನ್ನು ಮಾಡಬಹುದು.
ಒಂದಂತೂ ಸತ್ಯ. ಖಾಸಿಮ್ ಸುಲೈಮಾನಿಯ ಹತ್ಯೆಯು ಸ್ಪಷ್ಟ ರೂಪದಲ್ಲಿ ಅಮೆರಿಕನ್ ಸೇನೆಯ ಚಾಣಾಕ್ಷತೆ ಮತ್ತು ಅದರ ಸೇನಾ ಕ್ಷಮತೆಯ ಪ್ರದರ್ಶನವಾಗಿದೆ. ಆದರೆ, ಟ್ರಂಪ್ ಈ ಕಾರ್ಯಾಚರಣೆಗೆ ಅನುಮತಿ ನೀಡಿದ್ದನ್ನು ಸರಿಯಾದ ನಿರ್ಧಾರ ಎನ್ನಬಹುದೇ? ಈ ಘಟನೆಯ ನಂತರದ ಪರಿಣಾಮಗಳನ್ನು ಎದುರಿಸಲು ಅಮೆರಿಕ ತಯಾರಿದೆಯೇ? ಇದು ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಅವರ ಒಟ್ಟಾರೆ ಕಾರ್ಯತಂತ್ರವನ್ನು ಸೂಚಿಸುತ್ತದೆಯೇ? ಅಥವಾ ಟ್ರಂಪ್ರ ಮಾತಲ್ಲೇ ಹೇಳುವುದಾದರೆ, ಸುಲೈಮಾನಿ ಅತ್ಯಂತ “ಕೆಟ್ಟ ಮನುಷ್ಯನಾಗಿದ್ದ’ ಎಂದು ಆತನನ್ನು ಶಿಕ್ಷಿಸುವುದಕ್ಕಷ್ಟೇ ಈ ಬಿಕ್ಕಟ್ಟು ಸೀಮಿತವೇ? ಈ ಪ್ರಶ್ನೆಗಳಿಗೆ ಸಮಯವೇ ಉತ್ತರಿಸಲಿದೆ.
(ಲೇಖಕರು ಮಧ್ಯಪ್ರಾಚ್ಯ ರಾಜಕೀಯ ಪರಿಣತರು, ಬಿಬಿಸಿಯ ರಕ್ಷಣಾ ಮತ್ತು ರಾಜತಾಂತ್ರಿಕ ಹಿರಿಯ ವರದಿಗಾರರು)
ಕೃಪೆ: ಬಿಬಿಸಿ
– ಜಾನಥನ್ ಮಾರ್ಕಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ
Sandalwood: ಬಿಸಿಲ ಧಗೆ ಎಫೆಕ್ಟ್; ಔಟ್ಡೋರ್ ಶೂಟಿಂಗ್ನಿಂದ ಸಿನಿಮಂದಿ ದೂರ