ಬೆಲೆ ಏರಿಕೆಯ ಕಾವು, ಆಯಾಮ ಹಲವು
Team Udayavani, Nov 28, 2019, 4:53 AM IST
ಇತ್ತ ರಾಜ್ಯವು ಉಪಚುನಾವಣೆಗಳಿಗೆ ಸಜ್ಜಾಗುತ್ತಿರುವ ಹೊತ್ತಲ್ಲಿ, ಅತ್ತ ಮಹಾರಾಷ್ಟ್ರವು ಸರ್ಕಾರ ರಚನೆಯ ಗದ್ದಲದಲ್ಲಿ ಮುಳುಗಿರುವಾಗಲೇ ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೆ ಏರಿದೆ. ಈರುಳ್ಳಿ ಬೆಲೆಗೂ ಈ ರಾಜ್ಯಗಳಿಗೂ ಅವಿನಾಭಾವ ಸಂಬಂಧ. ಏಕೆಂದರೆ ದೇಶದ 45 ಪ್ರತಿಶತ ಈರುಳ್ಳಿ ಉತ್ಪಾದನೆಯಾಗುವುದು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲೇ. ಈ ಎರಡೂ ರಾಜ್ಯಗಳೂ ಇತ್ತೀಚೆಗೆ ಭಾರಿ ಮಳೆಯಿಂದಾಗಿ ತತ್ತರಿಸಿದ್ದರಿಂದ ಅಪಾರ ಪ್ರಮಾಣದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಬೆಳೆಗೆ ಹಾನಿಯಾಗಿದೆ. ಈ ಕಾರಣದಿಂದಲೇ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಗಗನಕ್ಕೇರಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಈರುಳ್ಳಿ ಬೆಲೆ 100 ರೂಪಾಯಿ ಗಡಿ ದಾಟಿದ್ದರೆ, ಬೆಳ್ಳುಳ್ಳಿಯು 200 ದಾಟಿ ಮುನ್ನುಗ್ಗುತ್ತಿದೆ. ಈ ಬೆಲೆ ಏರಿಕೆಯ ದಾಳಿಗೆ ಸಾಮಾನ್ಯ ಜನರು ತತ್ತರಿಸಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನಂತರ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲೂ ಮಳೆಯ ಹಾವಳಿ ಕಾಡಿದ್ದನ್ನು ಇಲ್ಲಿ ಗಮನಿಸಬೇಕು. ಈ ಕಾರಣದಿಂದಾಗಿಯೇ, ಸದ್ಯಕ್ಕಂತೂ ದಿನನಿತ್ಯದ ಅಡುಗೆಗೆ ಅಗತ್ಯವಾದ ಈರುಳ್ಳಿ-ಬೆಳ್ಳುಳ್ಳಿಯ ಬೆಲೆ ತಗ್ಗುವುದು ಅನುಮಾನವೇ.
ದುರ್ದೈವದ ಸಂಗತಿಯೆಂದರೆ, ಅತ್ತ ಸರ್ಕಾರ ರಚನೆಯಲ್ಲಿ ಮಹಾರಾಷ್ಟ್ರ, ಇತ್ತ ಉಪಚುನಾವಣೆಯ ಕಾವಿನಲ್ಲಿ ಕರ್ನಾಟಕ ವ್ಯಸ್ತವಾಗಿರುವುದರಿಂದ, ಬೆಲೆ ಏರಿಕೆಯ ವಿಷಯದಲ್ಲಿ ಯಾವೊಬ್ಬ ಜನನಾಯಕನೂ ಮಾತನಾಡುತ್ತಿಲ್ಲ, ಸಮಸ್ಯೆಯ ಪರಿಹಾರಕ್ಕೆ ಯೋಚಿಸುತ್ತಿಲ್ಲ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೂ ಚುನಾವಣೆಯ ಚರ್ಚೆಯ ಸುತ್ತಲೇ ಗಿರಕಿ ಹೊಡೆಯುತ್ತಿರುವುದರಿಂದ, ಜನಸಾಮಾನ್ಯರನ್ನು ಕಂಗೆಡಿಸಿರುವ ಈ ಪ್ರಮುಖ ಸಮಸ್ಯೆಯನ್ನು ನೋಡುವವರೇ ಇಲ್ಲವಾಗಿದೆ.
ಪ್ರವಾಹದಿಂದ ತತ್ತರಿಸಿದ್ದ ರೈತರಿಗೆ ಬೆಲೆ ಏರಿಕೆಯು ತುಸು ನಿರಾಳತೆ ತಂದಿರಬಹುದಾದರೂ, ಅವರಿಗೂ ಇದರಿಂದ ಹೆಚ್ಚಿನ ಪ್ರಯೋಜನವೇನೂ ಆಗುತ್ತಿಲ್ಲ. ಲಾಭವೆಲ್ಲ ಮಧ್ಯವರ್ತಿಗಳ-ಸಗಟು ವ್ಯಾಪಾರಿಗಳ ಪಾಲಾಗುತ್ತಿದ್ದರೆ ಸಾಮಾನ್ಯ ಜನರು ಮಾತ್ರ ಪರದಾಡುವಂತಾಗಿದೆ.
ದುರಂತವೆಂದರೆ, ಈರುಳ್ಳಿ, ಬೆಳ್ಳುಳ್ಳಿಯ ಬೆಲೆ ಏರಿಕೆಯಾಗುತ್ತಿದ್ದಂತೆಯೇ, ಲಾಭದಾಸೆಗೆ ಬಿದ್ದಿರುವ ಕೆಲ ವ್ಯಾಪಾರಿಗಳು ಕೊಳೆತ ಈರುಳ್ಳಿ-ಬೆಳ್ಳುಳ್ಳಿಯನ್ನೂ ಮಾರುಕಟ್ಟೆಗೆ ತಂದು ಸುರಿಯಲಾರಂಭಿಸಿರುವುದು. ಹೀಗಾಗಿ, ಹಣ ಕೊಟ್ಟರೂ ಗುಣಮಟ್ಟದ ಉತ್ಪನ್ನ ಸಿಗದಂಥ ಸ್ಥಿತಿ ಉದ್ಭವಿಸಿದೆ. ಇದರ ಪರಿಣಾಮವಾಗಿ ಗ್ರಾಹಕರು ಈರುಳ್ಳಿ ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ, ಫಲವಾಗಿ ಮಾರುಕಟ್ಟೆಯಲ್ಲಿ ಮಾರಾಟವಾಗದೇ ಇವು ಮತ್ತಷ್ಟು ಕೊಳೆಯಲಾರಂಭಿಸಿವೆ.
ಈರುಳ್ಳಿ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಳೆದ ತಿಂಗಳ 29ನೇ ತಾರೀಕಿನಿಂದ ವಿದೇಶಗಳಿಗೆ ಈರುಳ್ಳಿ ರಫ¤ನ್ನು ರದ್ದುಗೊಳಿಸಿ, ಇತರೆ ದೇಶಗಳಿಂದ ಆಮದು ಮಾಡಿಕೊಳ್ಳಲಾರಂಭಿಸಿದೆ. ಈರುಳ್ಳಿ ಸಂಗ್ರಹಣೆಯ ಮೇಲೂ ಕೇಂದ್ರ ಸರ್ಕಾರ ಜಾಗ್ರತೆ ವಹಿಸಿದ್ದು, ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳು ಎಷ್ಟು ಪ್ರಮಾಣದದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂಬುದಕ್ಕೆ ಕಟ್ಟುನಿಟ್ಟು ಮಿತಿಯನ್ನು ಹೇರಿದೆ. ಉಳಿದದ್ದನ್ನು ಮಾರುಕಟ್ಟೆಗೆ ಬಿಡಲೇಬೇಕು ಎಂದು ಆದೇಶಿಸಿದೆ.
ತತ್ತರಿಸಿದ ನೇಪಾಳ-ಬಾಂಗ್ಲಾದೇಶ
ಇನ್ನು ಇದೇ ಸಂದರ್ಭದಲ್ಲಿ ಅನ್ಯ ದೇಶಗಳಿಗೆ ಈರುಳ್ಳಿ ಕಳ್ಳಸಾಗಣೆ ಆರಂಭವಾಗಿದ್ದು, ಭಾರತೀಯ ಗಡಿಭದ್ರತಾಪಡೆಗಳು ಕಟ್ಟೆಚ್ಚರಿಕೆ ವಹಿಸಿವೆ. ಹೀಗಿದ್ದರೂ ಬೆಲೆ ಇಳಿಕೆಯಾಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಇವೆಲ್ಲದರ ಪರಿಣಾಮವು ಭಾರತವಷ್ಟೇ ಅಲ್ಲದೇ, ಭಾರತದ ಈರುಳ್ಳಿಯ ಮೇಲೆ ಅವಲಂಬಿತವಾಗಿರುವ ಸುತ್ತಮುತ್ತಲ ರಾಷ್ಟ್ರಗಳಿಗೂ ತಟ್ಟುತ್ತಿದೆ. ಕಳೆದ ವರ್ಷವಷ್ಟೇ ಭಾರತದಿಂದ 562 ಕೋಟಿ ರೂಪಾಯಿಯಷ್ಟು ಈರುಳ್ಳಿ ಖರೀದಿಸಿದ್ದ ನೇಪಾಳವೀಗ ತತ್ತರಿಸುತ್ತಿದೆ. ಮಂಗಳವಾರವಷ್ಟೇ ಆ ದೇಶದಲ್ಲಿ ಈರುಳ್ಳಿಯ ಬೆಲೆ ಏಕಾಏಕಿ 50 ರೂಪಾಯಿ(ನೇಪಾಳಿ ಹಣ) ಅಧಿಕವಾಗಿದ್ದು , ಈಗ ಕೆ.ಜಿ.ಗೆ 250 ರೂಪಾಯಿ ತಲುಪಿದೆ. ಕೆಲವೇ ದಿನಗಳ ಹಿಂದಷ್ಟೇ ನೇಪಾಳಕ್ಕೆ ಅಕ್ರಮವಾಗಿ ಈರುಳ್ಳಿ ಸಾಗಿಸುತ್ತಿದ್ದ 14 ಟ್ರಕ್ಗಳನ್ನು, 40 ಟನ್ ಈರುಳ್ಳಿಯನ್ನು ಭಾರತೀಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈಗ ನೇಪಾಳಕ್ಕೆ ಚೀನಾ ಈರುಳ್ಳಿಯನ್ನು ರಫ್ತು ಮಾಡಲಾರಂಭಿಸಿದ್ದು, ಅಲ್ಲೂ ಬೆಲೆ ಇಳಿಕೆಯಾಗುತ್ತಿಲ್ಲ. ಭಾರತದ ರಫ್ತು ನಿಷೇಧದಿಂದಾಗಿ ಬಾಂಗ್ಲಾದೇಶದಲ್ಲೂ ಹಾಹಾಕಾರ ಎದ್ದಿದ್ದು ಕೆ.ಜಿ. ಈರುಳ್ಳಿಯ ಬೆಲೆ 250 ಬಾಂಗ್ಲಾದೇಶಿ ಟಾಕಾ(210 ರೂಪಾಯಿ) ತಲುಪಿದೆ.
ಈರುಳ್ಳಿ- ಬೆಳ್ಳುಳ್ಳಿಯಂಥ ತರಕಾರಿಗಳ ಅತಿದೊಡ್ಡ ಗ್ರಾಹಕರು ರೆಸ್ಟಾರೆಂಟ್ಗಳು ಹಾಗೂ ಚಿಕ್ಕ ಪುಟ್ಟ ಹೋಟೆಲ್ಗಳಾಗಿರುತ್ತವೆ. ಹೀಗಾಗಿ, ಇವುಗಳೂ ಕೂಡ ಆಹಾರದ ಬೆಲೆ ಏರಿಸಲಾರಂಭಿಸಿವೆ. ಇದರ ಜತೆಗೆ ಕೆಲ ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಕೂಡ ನಿರಂತರ ಏರಿಕೆ ಕಾಣುತ್ತಿದೆ. ಇಂಧನ ಬೆಲೆಯಲ್ಲಿನ ಏರಿಕೆ ದಿನೋಪಯೋಗಿ ಸಾಮಗ್ರಿಗಳು ಮತ್ತು ತರಕಾರಿಗಳ ಬೆಲೆ ಏರಿಕೆಯ ಮೇಲೂ ಪರಿಣಾಮ ಬೀರುತ್ತವಾದ್ದರಿಂದ ಜನಸಾಮಾನ್ಯರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆಯೇ ಎಂಬ ಪ್ರಶ್ನೆ-ಆತಂಕ ಎದುರಾಗುತ್ತಿದೆ. ಬೆಲೆ ಏರಿಕೆಯ ಸಮಸ್ಯೆಯನ್ನು ಹತೋಟಿಗೆ ತರುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು(ಮುಖ್ಯವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ) ಜತೆಯಾಗಿ ಶ್ರಮಿಸಬೇಕಿದೆ. ಜನನಾಯಕರು ತಮ್ಮ ಸ್ವಹಿತಾಸಕ್ತಿಯನ್ನು ಬದಿಗೊತ್ತಿ ಜನರತ್ತ ದೃಷ್ಟಿ ಹರಿಸಬೇಕಿದೆ.