ಗೆಜ್ಜೆ ಕಟ್ಟಿದ ಪತ್ರಕರ್ತರು
Team Udayavani, Jan 19, 2018, 3:04 PM IST
ಪ್ರಸ್ಕ್ಲಬ್ ದಿನಾಚರಣೆಯಲ್ಲಿ ಶಕ್ರಾರಿ ಕಾಳಗ ಯಕ್ಷಗಾನ ಲೇಖನಿ ಹಿಡಿದು ಸಮಾಜದ ಅಂಕುಡೊಂಕನ್ನು ಸರಿಪಡಿಸಲೂ ಸೈ, ಗೆಜ್ಜೆಕಟ್ಟಿ ತಾಳಕ್ಕೆ ತಕ್ಕ ಹೆಜ್ಜೆ ಹಾಕಿ ಕಲಾರಸಿಕರ ಮನರಂಜಿಸಲೂ ಸೈ ಎಂಬುದನ್ನು ಮಂಗಳೂರಿನ ಪತ್ರಕರ್ತರು ಇತ್ತೀಚೆಗೆ ನಡೆದ ಪ್ರಸ್ಕ್ಲಬ್ ದಿನಾಚರಣೆಯ ಸಂದರ್ಭದಲ್ಲಿ ತೋರಿಸಿಕೊಟ್ಟಿದ್ದಾರೆ. ಮಂಗಳೂರಿನ ವಿವಿಧ ಪತ್ರಿಕೆಗಳ ಪತ್ರಕರ್ತರು ಶಕ್ರಾರಿ ಕಾಳಗ (ಇಂದ್ರಜಿತು ಕಾಳಗ) ಎಂಬ ಯಕ್ಷಗಾನ ಪ್ರಸಂಗವನ್ನು ಯಕ್ಷಗುರು ಎಲ್ಲೂರು ರಾಮಚಂದ್ರ ರಾಯರ ನಿರ್ದೇಶನದಲ್ಲಿ ಪ್ರದರ್ಶಿಸಿ
ಭೇಷ್ ಎನ್ನಿಸಿಕೊಂಡಿದ್ದಾರೆ.
ಸ್ವಿಜರ್ಲ್ಯಾಂಡಿನ ಕಲಾಸಕ್ತರಾದ ಮೋನಿಕಾ ಮತ್ತು ಯೊ ಅವರೂ ಪತ್ರಕರ್ತರ ಯಕ್ಷಗಾನವನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು. ಮುಮ್ಮೇಳದಲ್ಲಿ ಇಂದ್ರಜಿತುವಾಗಿ ಕಿಶೋರ್ ಭಟ್ ಕೊಮ್ಮೆ, ರಾಮನಾಗಿ ದಿವಾಕರ ಪದುಜ, ಲಕ್ಷ್ಮಣನಾಗಿ ಗಣೇಶ್ ಮಾವಂಜಿ, ರಾವಣನಾಗಿ ಹರೀಶ್ ಮೋಟುಕಾನ, ಹನುಮಂತನಾಗಿ ಜಿತೇಂದ್ರ ಕುಂದೇಶ್ವರ, ವಿಭೀಷಣನಾಗಿ ಸುರೇಶ್ ಡಿ. ಪಳ್ಳಿ, ಜಾಂಬವಂತನಾಗಿ ಹರ್ಷ, ಸುಗ್ರೀವನಾಗಿ ರಾಘವ ಎಂ., ಮಾಯಾಸೀತೆಯಾಗಿ ಇಂದಿರಾ ಎನ್. ಕೆ., ಶುಕ್ರಾಚಾರ್ಯನಾಗಿ ಸುರೇಶ್ ಭಂಡಾರಿ, ನಳನಾಗಿ ಚೇತನ್ ಪಿಲಿಕುಳ, ನೀಳನಾಗಿ ರಾಜೇಶ್, ಅಂಗದನಾಗಿ ಭರತ್ ರಾಜ್ ಕಲ್ಲಡ್ಕ ರಂಜಿಸಿದರೆ, ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ಭವ್ಯಶ್ರೀ ಮಂಡೆಕೋಲು, ಮದ್ದಲೆಯಲ್ಲಿ ಗುರುಪ್ರಸಾದ್ ಬೊಳಿಂಜಡ್ಕ, ಚೆಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ, ಚಕ್ರತಾಳದಲ್ಲಿ ಅನಿರುದ್ಧ್ ಸಾಥ್ ನೀಡಿದರು. ಯಕ್ಷಗಾನಕ್ಕಿಂತ ಮೊದಲು ಅಶ್ವನಿಕುಮಾರ್ ಎನ್. ಕೆ. ಆರ್. ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಜರುಗಿತು.
ಇಂದಿರಾ ಎನ್. ಕೆ.