ಬಣ್ಣಾ, ಒಲವಿನ ಬಣ್ಣಾ…
Team Udayavani, Aug 20, 2018, 6:00 AM IST
ಹೊಸದಾಗಿ ಬಣ್ಣ ಬಳಿದಾಗ, ಕಿಟಕಿಗಳನ್ನು ಕೆಲ ತಿಂಗಳುಗಳ ಕಾಲವಾದರೂ ತೆರೆದಿಟ್ಟು, ಬಣ್ಣದ ಘಾಟು ಕಡಿಮೆ ಆಗಿಸುವುದು ಕಡ್ಡಾಯ. ಅದೇ ನೈಸರ್ಗಿಕವಾಗಿ ಬಣ್ಣ ಹೊಂದಿರುವ ಕಲ್ಲು ಇಟ್ಟಿಗೆ ಬಿಲ್ಲೆಗಳಿಗೆ ಈ ಮಿತಿ ಇಲ್ಲ. ಅವು ಜಡ ವಸ್ತುಗಳಾಗಿದ್ದು ವಾತಾವರಣದ ಏರುಪೇರುಗಳಿಗೆ ಘಾಸಿಗೊಳ್ಳುವುದಿಲ್ಲ.
ಮನೆಗಳಿಗೆ ಸುಣ್ಣ ಬಣ್ಣ ಬಳಿಯುವುದು ಅತ್ಯಗತ್ಯವಾದ ಕೆಲಸ. ಕೆಲವರ್ಷಗಳು ಹಾಗೆಯೇ ಬಿಟ್ಟರೆ ಇಡಿ ಮನೆ ಪಾಳುಬಿದ್ದಂತೆ ಕಾಣತೊಡಗುತ್ತದೆ. ಮಳೆ, ಗಾಳಿ, ಬಿಸಿಲಿನ ಹೊಡೆತಕ್ಕೆ ಮನೆ ಕಟ್ಟುವ ಬಹುತೇಕ ವಸ್ತುಗಳು ಬಹುಬೇಗ ಕಳೆಗುಂದುವುದೇ ಇದಕ್ಕೆ ಮುಖ್ಯ ಕಾರಣ. ಆದರೆ, ಪ್ರಕೃತಿಯಲ್ಲಿ ಅನೇಕ ವಸ್ತುಗಳು ಸದೃಢವಾಗಿದ್ದು, ಹಳೆಯದಾದಷ್ಟೂ ಅವುಗಳಿಗೆ ತನ್ನದೇ ಆದ ಘನತೆ ಗಾಂಭೀರ್ಯ ಬಂದು ಮತ್ತೂ ಸುಂದರವಾಗಿ ಕಾಣುವುದನ್ನು° ನಾವೆಲ್ಲ ನೋಡಿದ್ದೇವೆ. ಈ ಸಾಲಿನಲ್ಲಿ ಕಲ್ಲು ಹಾಗು ಸುಟ್ಟ ಮಣ್ಣಿನಿಂದ ಮಾಡಿದ ವಸ್ತುಗಳನ್ನು ನಾವು ನೆನಪಿಸಿಕೊಳ್ಳಬಹುದು. ಸಾವಿರಾರು ವರ್ಷಗಳ ಹಿಂದೆ ಮಾಡಿದ ಮಡಿಕೆ ಕುಡಿಕೆಗಳೂ ಕೂಡ ಉತ್ಖನನದ ನಂತರ ಹೊಚ್ಚಹೊಸದರಂತೆ ಮಿನುಗುತ್ತಿರುವುದನ್ನು ನಾವು ಪ್ರಾಚೀನ ವಸ್ತುಸಂಗ್ರಹಾಲಯಗಳಲ್ಲಿ ಕಾಣುತ್ತೇವೆ. ಈ ಮಾದರಿಯ ವಸ್ತುಗಳು ಒಂದು ರೀತಿಯಲ್ಲಿ ಕಾಲವನ್ನು ಜಯಿಸಿದವು ಎಂದರೂ ತಪ್ಪಾಗಲಾರದು. ಹಾಗಾದರೆ ನಿಮಗೆ ನಿಮ್ಮ ಮನೆಯೂ ಪದೇ ಪದೇ ಸುಣ್ಣ ಬಣ್ಣ ಬೇಡದೆ ವರ್ಷದಿಂದ ವರ್ಷಕ್ಕೆ ಮತ್ತೂ ಹೆಚ್ಚಿನ ಸೌಂದರ್ಯವನ್ನು ಪಡೆಯಬೇಕು ಎಂದಿದ್ದರೆ ನೈಸರ್ಗಿಕ ಬಣ್ಣದ ಮನೆ ಕಟ್ಟಿ ನೋಡಿ. ಅದರ ಖದರೇ ಬೇರೆ.
ಪ್ಲಾಸ್ಟರ್ ಬಿಟ್ಟು ಹಾಕಿ
ಮನೆಗಳು ಕಳೆಗುಂದಲು ಮುಖ್ಯ ಕಾರಣ, ನಾವು ಬಹುತೇಕ ನೈಸರ್ಗಿಕ ಅಥವಾ ಪರಿಸರಕ್ಕೆ ಹೆಚ್ಚು ಹೊಂದುವ ವಸ್ತುಗಳನ್ನು ಸಿಮೆಂಟ್ ಪ್ಲಾಸ್ಟರ್ ಮಾಡಿಬಣ್ಣ ಹಚ್ಚಿಬಿಡುತ್ತೇವೆ. ಬಣ್ಣ ಹೊಡೆದಾಗ ಹೊಚ್ಚಹೊಸದರಂತೆ ಕಂಡರೂ ಕೆಲವೇ ವರ್ಷಗಳಲ್ಲಿ ಬಣ್ಣ ಮಾಸಲು ತೊಡಗುತ್ತದೆ. ಹೇಳಿಕೇಳಿ ಬಣ್ಣ ಒಂದು ತೆಳು ಪದರ ಮಾತ್ರ ಆಗಿದ್ದು, ಮುಟ್ಟಿದರೆ ಕೈಗುರುತು ಬಿದ್ದು ಮಸಿ ಆದಂತೆ ಕಾಣುತ್ತದೆ. ಚಕ್ಕೆ ಏಳಲು ತೊಡಗಿದರಂತೂ ಪಾಳು ಬಿದ್ದಂತೆ ಕಾಣುತ್ತದೆ. ಆದುದರಿಂದ ಪ್ಲಾಸ್ಟರ್ ಹಾಗೂ ಅದರಿಂದಾಗಿ ಬಣ್ಣ ಬಯಸದ, ಆದಷ್ಟೂ ನೈಸರ್ಗಿಕ ಹಾಗೂ ಪರಿಸರಕ್ಕೆ ಹತ್ತಿರವಾದ ವಸ್ತುಗಳನ್ನು ಬಳಸಿ ಮನೆ ಕಟ್ಟಿದರೆ, ನಿಮ್ಮ ಮನೆಯೂ ಬಹುಕಾಲ ಹೊಸದರಂತೆಯೇ ಇರುತ್ತದೆ.
ವೈಟ್ಫೀಲ್ಡ್ನಲ್ಲಿರುವ ಇಂಥ ಮಾದರಿಯ ಒಂದು ಮನೆಯ ಉದಾಹರಣೆಗೆ ತೆಗೆದುಕೊಳ್ಳಬಹುದು. ಮನೆ ಮಾಲೀಕ ಬಾಲರಾಜ್ ಅವರು ಮನೆಗೆ ವಿನ್ಯಾಸ ಮಾಡುವಾಗಲೇ ಸ್ಪಷ್ಟತೆ ಹೊಂದಿದ್ದರು. ಆದಷ್ಟೂ ಕೃತಕ ಹಾಗೂ ಪದೇ ಪದೇ ನಿರ್ವಹಣೆ ಬಯಸದ ವಸ್ತುಗಳನ್ನು ಬಳಸಿ ಮನೆ ಕಟ್ಟಬೇಕೆಂದು ಆರ್ಕಿಟೆಕ್ಟ್ ಎಂಜಿನಿಯರ್ಗೆ ಸೂಚಿಸಿದ್ದರು. (ಫೋಟೊ ನೋಡಿ) ಗೋಡೆ ಪಾಯಕ್ಕೆಲ್ಲ ಕಲ್ಲು ಬಳಸಿದ್ದು, ಕಲಾತ್ಮಕವಾಗಿ ಕಟ್ಟಲಾಗಿರುವ ಈ ಭಾಗಗಳಿಗೆ ಪ್ಲಾಸ್ಟರ್ ಮಾಡಿ ಮುಚ್ಚಿಹಾಕುವ ಅಗತ್ಯ ಇರಲಿಲ್ಲ. ಹಾಗೆಯೇ, ಎಲ್ಲೆಲ್ಲಿ ತೆಳು ಗೋಡೆಗಳು ಪಾರ್ಟಿಷನ್ ಭಜಕಗಳಾಗಿ ಬರಬೇಕೋ ಅಲ್ಲೆಲ್ಲ ಮಣ್ಣಿನ ಮೂಲ ಬಣ್ಣ ಮಾಸದಂತೆ ಸುಟ್ಟು ಗಟ್ಟಿಗೊಳಿಸಿದ ವೈರ್ ಕಟ್ ಇಟ್ಟಿಗೆಗಳನ್ನು ಬಳಸಲಾಯಿತು. ಕಾಲಿಗೂ ಕೂಡ ಮಣ್ಣಿನ ನೆಲಕ್ಕೆ ಹತ್ತಿರವಾದ, ಆದರೆ ಅದರಷ್ಟು ನಿರ್ವಹಣೆ ಬಯಸದ ಮಣ್ಣಿನ ಸುಟ್ಟ ಆರು ಮೂಲೆಯ ಬಿಲ್ಲೆಗಳನ್ನು ಬಳಸಲಾಯಿತು. ಈ ಮಾದರಿಯ ನೆಲಹಾಸು – ಟೈಲ್ಸ್ ಬಳಸಿದಷ್ಟೂ ಪಾಲೀಶ್ ಹೆಚ್ಚಿಸಿಕೊಂಡು ಮತ್ತೂ ಹೆಚ್ಚುವರಿಯಾಗಿ ಮಿರಮಿರನೆ ಮಿಂಚುತ್ತದೆ. ಜೊತೆಗೆ ಕಾಲಿಗೆ ನಡೆದಾಡಲು ಬೆಚ್ಚನೆಯ ಅನುಭವ ಕೊಡುತ್ತಲೇ ನೀರನ್ನು ಬೇಗ ಹೀರಿಕೊಳ್ಳುವ ಗುಣವಿದ್ದು, ಜಾರುವ ಸಂಭವ ಇರುವುದಿಲ್ಲ.
ಪ್ಲಾಸ್ಟರ್ ಬೇಡದ ಕಲ್ಲಿನ ಗೋಡೆ ಕಟ್ಟುವಿಕೆ
ಕಲ್ಲು, ನೀರು ನಿರೋಧಕ ಗುಣ ಹೊಂದಿದ್ದರೂ ಅದರ ಮಧ್ಯೆಬರುವ ಸಂದಿ – ಜಾಯಿಂಟ್ ಮೂಲಕ ನೀರು ನುಸುಳಿ ಬೂಷ್ಟು ಹಿಡಿಯುವ ಸಾಧ್ಯತೆ ಇರುತ್ತದೆ. ಆದುದರಿಂದ ಈ ಮಾದರಿಯ ಗೋಡೆಗಳ ನೈಸರ್ಗಿಕ ರೂಪ ಉಳಿಸಿಕೊಳ್ಳಲು ಗೋಡೆ ಕಟ್ಟುವಾಗ ಸಂದಿಗಳನ್ನು ಸ್ವಲ್ಪ ಒಳಗೆ ಅಂದರೆ ಸುಮಾರು ಮುಕ್ಕಾಲು ಇಂಚಿನಷ್ಟು ಒಳಗೆ ತಳ್ಳಿಕೊಂಡು, ನಂತರ ನೀರು ನಿರೋಧಕ ಮಿಶ್ರಣ ಸೇರಿಸಿ “ಪಾಯಿಂಟಿಂಗ್’ ಮಾಡಬೇಕು. ಹೀಗೆ ಮಾಡುವಮೂಲಕ ಸಂದಿಗಳನ್ನು ಸಪೂರಗೊಳಿಸಬೇಕು. ಕಲ್ಲಿನ ಗೋಡೆ ಕಟ್ಟುವಾಗ ಅನಿವಾರ್ಯವಾಗಿ ಒಂದಷ್ಟು ಸಿಮೆಂಟ್ ಗಾರೆ ಕಲ್ಲಿಗೆ ಅಂಟಿಕೊಳ್ಳುವುದು ಇದ್ದದ್ದೇ. ಇದನ್ನು ಕಡ್ಡಾಯವಾಗಿ ಸಿಮೆಂಟ್ ಗಟ್ಟಿಗೊಳ್ಳುವ ಮೊದಲೇ ಕ್ಲೀನ್ – ಶುದ್ಧಮಾಡಿಕೊಳ್ಳಬೇಕು. ಒಮ್ಮೆ ಸಿಮೆಂಟ್ ಗಾರೆ ಕಲ್ಲಿಗೆ ಅಂಟಿದರೆ ಅದನ್ನು ತೆಗೆಯುವುದು ಕಷ್ಟ.
ವೈರ್ ಕಟ್ ಇಟ್ಟಿಗೆ ಗೋಡೆ
ವಿಭಜಕ -ನಾಲ್ಕೂವರೆ ಇಂಚಿನದ್ದಾಗಿದ್ದರೆ ಕಡ್ಡಾಯವಾಗಿ ಪ್ರತಿ ಎರಡು ಅಡಿಗೆ ಒಂದರಂತೆ ಮೂರು ಇಂಚಿನ ಕಾಂಕ್ರಿಟ್ ಪದರವನ್ನು ಹಾಕಬೇಕು. ಇಟ್ಟಿಗೆ ಗೋಡೆಯಲ್ಲಿ ಕಾಂಕ್ರಿಟ್ ಮೊಸರಿನಲ್ಲಿ ಕಲ್ಲಿನಂತಿದ್ದರೆ, ಅದನ್ನು ಹಾಕಬೇಕಾದರೆ – ಎರಡೂ ಬದಿಗೆ ಇಟ್ಟಿಗೆ ಅಳತೆಯ ಟೈಲ್ಸ್ಗಳನ್ನು ಹೊಂದಿಸಿ ಇಟ್ಟರೆ, ಆಗ ಈ ಕಾಂಕ್ರಿಟ್ ಪದರ ಹೊರಗೆ ಕಾಣುವುದಿಲ್ಲ! ನಿಮಗೇನಾದರೂ ಕಾಂಕ್ರಿಟ್ ಪದರ ಬೇಡವೇ ಬೇಡ ಎಂದಿದ್ದರೆ, ಪ್ರತಿ ಆರು ಇಲ್ಲವೇ ಎಂಟು ಅಡಿಗೆ ಒಂದರಂತೆ ಒಂಭತ್ತು ಇಂಚಿನ ಕಟ್ಟೆ ಒಂದನ್ನು ಕಟ್ಟಿ. ಆಗ ಇಡಿ ಪಾರ್ಟಿಷನ್ ಗೋಡೆಗೆ ಈ ಕಟ್ಟೆಗಳು ಆಧಾರ ಕಲ್ಪಿಸಿ ಕಾಂಕ್ರಿಟ್ ಪದರದ ಅಗತ್ಯ ಇಲ್ಲದಂತೆ ಮಾಡುತ್ತವೆ. ಯಥಾಪ್ರಕಾರ ಗೋಡೆ ಕಟ್ಟುವಾಗ ಸಿಮೆಂಟ್ ಬಿದ್ದು ಮಣ್ಣಿನ ಬಣ್ಣದ ಇಟ್ಟಿಗೆಗಳು ಹಾಳಾಗದಂತೆ ಪದೇ ಪದೇ ಶುದ್ಧ ಮಾಡುತ್ತಿರಬೇಕು. ಜಾಯಿಂಟ್ ಗಳನ್ನು ಸುಮಾರು ಅರ್ಧ ಇಂಚಿನಷ್ಟು ಒಳಗಿಟ್ಟುಕೊಂಡು ನಂತರ ಪಾಯಿಂಟಿಂಗ್ ಮಾಡಲು ಮರೆಯಬಾರದು.
ಕೆಂಪು ಜೇಡಿ ಮಣ್ಣಿನ ಸುಟ್ಟ ಬೆಲ್ಲೆಗಳ ನೆಲಹಾಸು
ಮಾಮೂಲಿ ನೆಲಹಾಸುಗಳನ್ನು ಹಾಕುವ ರೀತಿಯಲ್ಲೇ ಈ ಟೈಲ್ಸ್ ಗಳನ್ನೂ ಹಾಕಬಹುದು. ಒಂದೆರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಲು ಮರೆಯಬಾದು. ಕೆಳ ಪದರ ಅಂದರೆ ಬೆಡ್ ಕಾಂಕ್ರಿಟ್ ಮೇಲೆ ಒಂದು ಪದರ ಸಿಮೆಂಟ್ ಗಾರೆ 1ಕ್ಕೆ ಆರರಂತೆ ಬೆರೆಸಿ ಮಟ್ಟಮಾಡಿಕೊಂಡು, ಬಿಲ್ಲೆಗಳಿಗೆ ಸಿಮೆಂಟ್ ಗಸಿ ಮೆತ್ತಿಸಿ ಕೂರಿಸಬಹುದು.
ನೈಸರ್ಗಿಕ ಬಣ್ಣದ ಮನೆಯ ಲಾಭಗಳು
ಕೃತಕ ಬಣ್ಣಗಳು ಬಹುತೇಕ ಪ್ಲಾಸ್ಟಿಕ್ ಆಧರಿಸಿದವಾಗಿದ್ದು ಒಂದಷ್ಟು ಹಾನಿಕಾರಕ ರಾಸಾಯನಿಕಗಳನ್ನು ಒಳಾಂಗಣಕ್ಕೆ ಕಾಲಾಂತರದಲ್ಲಿ ಹೊರಸೂಸಲು ತೊಡಗುತ್ತದೆ. ಅದರಲ್ಲೂ, ಹೊಸದಾಗಿ ಬಣ್ಣ ಬಳಿದಾಗ, ಕಿಟಕಿಗಳನ್ನು ಕೆಲ ತಿಂಗಳುಗಳ ಕಾಲವಾದರೂ ತೆರೆದಿಟ್ಟು, ಬಣ್ಣದ ಘಾಟು ಕಡಿಮೆ ಆಗಿಸುವುದು ಕಡ್ಡಾಯ. ಅದೇ ನೈಸರ್ಗಿಕವಾಗಿ ಬಣ್ಣ ಹೊಂದಿರುವ ಕಲ್ಲು ಇಟ್ಟಿಗೆ ಬಿಲ್ಲೆಗಳಿಗೆ ಈ ಮಿತಿ ಇಲ್ಲ. ಅವು ಜಡ ವಸ್ತುಗಳಾಗಿದ್ದು ವಾತಾವರಣದ ಏರುಪೇರುಗಳಿಗೆ ಘಾಸಿಗೊಳ್ಳುವುದಿಲ್ಲ. ನೆಲ, ಗೋಡೆ ಎಲ್ಲವೂ ಸಣ್ಣ ಸಣ್ಣ ರಂಧ್ರಗಳನ್ನು ಹೊಂದಿದ್ದು, ಅವು ನೈಸರ್ಗಿಕವಾಗಿಯೇ ಉಸಿರಾಡುತ್ತಿದ್ದು, ವಾತಾವರಣದ ವೈಪರೀತ್ಯವನ್ನು ಸರಿದೂಗಿಸಿಕೊಂಡು ಹೋಗುತ್ತವೆ.
ಹೆಚ್ಚಿನ ಮಾತಿಗೆ ಫೋನ್ 98441 32826
ಆರ್ಕಿಟೆಕ್ಟ್ ಕೆ.ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ