ಮಧ್ಯರಾತ್ರಿ ನಿರಂತರವಾಗಿ ಬಾಗಿಲು ತಟ್ಟುತ್ತಿದ್ದ!
Team Udayavani, Aug 28, 2018, 6:00 AM IST
ಎರಡು ವರ್ಷದ ಹಿಂದಿನ ಘಟನೆ. ಅತ್ತೆ- ಮಾವ ಶಿರಸಿಗೆ ಹೋಗಿದ್ದರು. ಮನೆಯವರು, ಸಂಜೆ ಆಫೀಸಿಗೆ ಹೋದವರು, ಬೆಳಗ್ಗೆ ಬರುವುದಾಗಿ ಹೇಳಿದ್ದರು. ಮನೆಯಲ್ಲಿ ಇದ್ದಿದ್ದು ನಾನು ಮತ್ತು ಮಗಳು ಮಾತ್ರವೇ.
ರಾತ್ರಿ ಎರಡು ಗಂಟೆ ಸುಮಾರು. ಯಾರೋ ಬಾಗಿಲು ತಟ್ಟುತ್ತಿರುವ ಸದ್ದು. ಮೊದಲೇ ನನಗೆ ಪುಕ್ಕಲುತನ ಜಾಸ್ತಿ. ಎಲ್ಲ ಬಾಗಿಲುಗಳನ್ನು ಭದ್ರಪಡಿಸಿ, ಅದಕ್ಕೆ ಲಾಕ್ ಹಾಕಿಯೇ ಮಲಗುತ್ತೇನೆ. ಮನೆಯವರು ಬರುವ ಮುಂಚೆ ಹೇಗಿದ್ದರೂ, ದೂರವಾಣಿ ಕರೆ ಮಾಡಿಯೇ ಬರುತ್ತಾರೆ. ಆದರೆ, ಈಗ ಬಂದು ಬಾಗಿಲು ತಟ್ಟುತ್ತಿರುವುದು ಯಾರಿರಬಹುದು ಎಂಬ ಕುತೂಹಲ, ಆತಂಕ ಹೆಚ್ಚಾಗುತ್ತಿತ್ತು. ಮನೆಯಲ್ಲಿ ನಾದಿನಿ ಮದುವೆಯ ಖರ್ಚಿಗೆಂದು ತಂದಿಟ್ಟ ಹಣಕಾಸು ಬೇರೆ ಜಾಸ್ತಿಯಿತ್ತು.
ಬರುಬರುತ್ತಾ ಬಾಗಿಲು ಬಡಿದ ಶಬ್ದ ಹೆಚ್ಚಾಗುತ್ತಲೇ, ನನ್ನ ಎದೆ ಬಡಿತವೂ ಜಾಸ್ತಿಯಾಯಿತು. ಏನು ಮಾಡುವುದೆಂದು ತಿಳಿಯದೇ ಅಕ್ಕಪಕ್ಕದ ಮನೆಯವರೆಲ್ಲರಿಗೂ ಫೋನಾಯಿಸಲು ಶುರುಮಾಡಿದೆ. ಗಾಢ ನಿದ್ರೆಯಲ್ಲಿರುವ ಕಾರಣ ಯಾರೂ ಕರೆಯನ್ನು ಸ್ವೀಕರಿಸದೇ ಇದ್ದಿದ್ದರಿಂದ, ಬಹಳ ಭಯವಾಯಿತು. ಹಾಗೆಯೇ ಫೋನಾಯಿಸುತ್ತ ಕುಳಿತಾಗ, ಸನಿಹದ ಮನೆಯ ಅಜಯ್ ಬಾಯಾರಿಕೆಯಾಗಿ ನೀರು ಕುಡಿಯಲು ಎದ್ದವನು, ಮೊಬೈಲ್ನ ಮೇಲೆ ಕಣ್ಣುಹಾಯಿಸಿದ. ಆತ ವಾಪಸು ನನಗೆ ಕರೆಮಾಡಿ ಧೈರ್ಯ ಹೇಳಿದ. ತನಗೆ ಗೊತ್ತಿರುವ ಪೊಲೀಸರಿಗೆ ಬರುವುದಾಗಿಯೂ ಹೇಳಿದ.
ಅಜಯ್ ಮತ್ತು ಪೋಲಿಸ್ ಬರುವವರೆಗೂ ಬಾಗಿಲು ಬಡಿದ ಶಬ್ದ ಜೋರಾಗಿ ಕೇಳಿಸುತ್ತಲೇ ಇತ್ತು. ಬಂದಿರುವನು ಕಳ್ಳನೇ ಆಗಿರಬೇಕು, ಮನೆಯಲ್ಲಿರುವ ಆಭರಣ, ಹಣದ ಸುಳಿವು ಸಿಕ್ಕಿ ಕಳ್ಳರ ಸಮೂಹವೇ ಬಂದಿರಬಹುದು ಎಂಬ ಅನುಮಾನ ಒಂದು ಕಡೆ. ನನ್ನ ಮತ್ತು ಕಳ್ಳರ ನಡುವೆ 2-3 ಬಾಗಿಲುಗಳ ಕೋಟೆಯಿದ್ದರೂ ಕಳ್ಳರಿಗೆ ಅದನ್ನು ಒಡೆದು ಬರಲು ಹೆಚ್ಚೇನೂ ಕಷ್ಟವಿಲ್ಲ. ಭಯದಲ್ಲಿ ನೂರಾರು ಸಂದೇಹಗಳು ನನ್ನ ತಲೆಯನ್ನು ಹೊಕ್ಕುತ್ತಿದ್ದವು.
ಪೋಲಿಸರು ಬಂದು ಬಾಗಿಲು ಬಡಿಯುತ್ತಿದ್ದವನನ್ನು ಬಂಧಿಸಿದರು. ಅವನ ವಿಚಾರಣೆ ನಡೆಸಿದಾಗ, ಆತ ಕುಡಿದು ಬಂದಿದ್ದ ಸಂಗತಿ ತಿಳಿಯಿತು. ಆದರೆ, ಕೆಲ ಹೊತ್ತಿನವರೆಗೆ ನನ್ನೊಳಗೆ ಭಯ ಹುಟ್ಟಿಸಿದ ಆ ಅಪರಿಚಿತನನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ. ಅಬ್ಟಾ! ಅಂದು ನಮ್ಮನ್ನು ದೇವರೇ ಕಾಪಾಡಿದ್ದ.
ಸಾವಿತ್ರಿ ಶ್ಯಾನಭಾಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ