ಕುರುವತ್ತಿ ಮಲ್ಲಿಕಾರ್ಜುನ
Team Udayavani, Apr 21, 2018, 3:25 AM IST
ಬಳ್ಳಾರಿ ಜಿಲ್ಲೆಯ ಕುರುವತ್ತಿ ಗ್ರಾಮವು ಮಲ್ಲಿಕಾರ್ಜುನ ಸ್ವಾಮಿ ನೆಲೆಸಿದ ಒಂದು ಪುಣ್ಯ ಕ್ಷೇತ್ರ.
ಇದು 11 ನೇ ಶತಮಾನದ ಕಲ್ಯಾಣಿ ಚಾಲುಕ್ಯರು ನಿರ್ಮಿಸಿದ ಒಂದು ಸುಂದರ ಪುರಾತನ ದೇವಸ್ಥಾನ. ತುಂಗಭದ್ರಾ ನದಿಯ ತಟದಲ್ಲಿ ನೆಲೆನಿಂತ ಈ ದೇವಾಲಯವು ಚಾಲುಕ್ಯರ ವಾಸ್ತುಶಿಲ್ಪಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇತಿಹಾಸದ ಪ್ರಕಾರ, ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಹಿಂದೆ ಕುರುವತ್ತಿ ಒಂದು ಪ್ರಸಿದ್ಧ ಪಟ್ಟಣವಾಗಿತ್ತು. ದೊರೆ ಒಂದನೇ ಸೋಮೇಶ್ವರನು ಗುಣಪಡಿಸಲಾಗದ ಖಾಯಿಲೆಯಿಂದ ನರಳುತ್ತಿದ್ದಾಗ, ಕುರುವತ್ತಿಗೆ ಬಂದು ಮಲ್ಲಿಕಾರ್ಜುನನಿಗೆ ಪೂಜೆ ಸಲ್ಲಿಸಿ, ಬಡ ಬಗ್ಗರಿಗೆ ದಾನ – ಧರ್ಮಗಳನ್ನು ಮಾಡಿದರಂತೆ. ನಂತರ ಇಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಮುಳುಗಿ ದೇಹತ್ಯಾಗ ಮಾಡಿದನಂತೆ. ಆ ಕಾರಣದಿಂದ ಇಲ್ಲಿರುವ ಮಲ್ಲಿಕಾರ್ಜುನ
ದೇವಾಲಯದಲ್ಲಿ ಒಂದನೆಯ ಸೋಮೇಶ್ವರನ ಮೂರ್ತಿಯನ್ನು ಕೆತ್ತನೆ ಮಾಡಿ ಇರಿಸಲಾಗಿದೆ.
ಈ ದೇವಾಲಯವನ್ನು ಸಂಪೂರ್ಣವಾಗಿ ಬೆಣಚುಕಲ್ಲಿನಿಂದಲೇ ನಿರ್ಮಾಣ ಮಾಡಲಾಗಿದೆ. ಸಾಮಾನ್ಯವಾಗಿ ಚಾಲುಕ್ಯರು ನಿರ್ಮಿಸಿದ ದೇಗುಲಗಳು ಏಕಕೂಟ ಮತ್ತು ದ್ವಿಕೂಟದಲ್ಲಿರುತ್ತವೆ. ಏಕಕೂಟ ಎಂದರೆ ಒಂದು ಶಿಖರ ಹಾಗೂ ದ್ವಿಕೂಟ ಎಂದರೆ ಎರಡು ಶಿಖರವಿರುವ ದೇವಾಲಯ. ಅದರಂತೆ ಈ ದೇವಾಲಯ ಏಕಕೂಟದಲ್ಲಿದ್ದು ಮಹಾಶಿಖರವನ್ನೂ, ತುದಿಯಲ್ಲಿ ಕಳಸವನ್ನೂ ಹೊಂದಿದೆ. ಈ ದೇವಾಲಯಕ್ಕೆ ಮೂರು ಪ್ರವೇಶ ದ್ವಾರಗಳು ಮತ್ತು ಮೂರು ನವರಂಗಗಳಿವೆ. ಈ ನವರಂಗಗಳನ್ನು ಸೇರಿಸಿ ಒಂದೇ ರಂಗಮಂಟಪಕ್ಕೆ ಜೋಡಿಸಲಾಗಿದೆ. ರಂಗಮಂಟಪದಲ್ಲಿ 12 ಅಲಂಕೃತ ಕಂಬಗಳಿದ್ದು, ಅವು 8 ಅಡಿ ಎತ್ತರ ಹಾಗೂ 4 ಅಡಿ ಅಗಲವಾಗಿವೆ. ದೇವಸ್ಥಾನದ ಒಳಭಾಗದ ಗೋಡೆಯ ಮೇಲೆ ಬ್ರಹ್ಮ, ವಿಷ್ಣು, ಮಹೇಶ್ವರರ ಸುಂದರವಾದ ಕೆತ್ತನೆಗಳು, ನೃತ್ಯ ಭಂಗಿಯಲ್ಲಿರುವ ಜೋಡಿ, ನಾಗಬಂಧ, ತೋರಣ, ನಾಟ್ಯ ಮಾಡುತ್ತಿರುವ ಮದನಿಕೆಯರು ಹಾಗೂ ಅತ್ಯಂತ ಸೂಕ್ಷ್ಮವಾಗಿ ಕುಸುರಿ ಕೆಲಸ ಮಾಡಿದ ಕಂಬಗಳಿವೆ. ಬಾಗಿಲ ಚೌಕಟ್ಟಿನ ಅಲಂಕಾರ ಎಂಥವರನ್ನೂ ನಿಬ್ಬೆರಗಾಗಿಸುತ್ತವೆ. ಇಲ್ಲಿರುವ ರಂಗಮಂಟಪದಲ್ಲಿ 5 ಅಡಿ ಎತ್ತರದ ಗಣೇಶ,
ಸುಬ್ರಮಣ್ಯನ ವಿಗ್ರಹಗಳಿವೆ. ಗರ್ಭಗೃಹದಲ್ಲಿ 4 ಅಡಿ ಎತ್ತರದ ಶಿವ, ಲಿಂಗ ರೂಪದಲ್ಲಿ ನೆಲೆಸಿದ್ದಾನೆ. ಒಂದು ಐತಿಹ್ಯದ ಪ್ರಕಾರ ಶಿವ ಒಬ್ಬ ರಾಕ್ಷಸನನ್ನು ಇದೇ ಜಾಗದಲ್ಲಿ ಸಂಹರಿಸಿ ಲಿಂಗ ರೂಪದಲ್ಲಿ ಮಲ್ಲಿಕಾರ್ಜುನ ಸ್ವಾಮಿಯಾಗಿ ನೆಲೆಸಿದನು ಎಂದು ಹೇಳುತ್ತಾರೆ. ಪೂರ್ವಕ್ಕೆ ದ್ವಾರವಿರುವ ದೇವಸ್ಥಾನದ ಎರಡೂ ಬದಿಗೆ ಸುಂದರವಾದ ಮದನಿಕೆಯರ ಶಿಲ್ಪಗಳಿವೆ. ಇದು ಹೊಯ್ಸಳರು ನಿರ್ಮಿಸುತ್ತಿದ್ದ ದೇವಾಲಯಗಳಿಗಿಂತ ಮೊದಲೇ ಶಿಲಾಬಾಲಿಕೆಯರನ್ನು ಈ ದೇವಸ್ಥಾನದಲ್ಲಿ ಅಳವಡಿಸಿದ್ದರು ಎಂಬುದಕ್ಕೆ ಸಾಕ್ಷಿ.
ನಿತ್ಯವೂ ಪೂಜೆ ನಡೆಯುವ ಈ ದೇವಾಲಯದಲ್ಲಿ ಶಿವರಾತ್ರಿಯ ಸಮಯದಲ್ಲಿ ಸುತ್ತಲಿನ ಹತ್ತಾರು ಹಳ್ಳಿಗಳಿಂದ ಲಕ್ಷಗಟ್ಟಲೇ ಭಕ್ತರು ಬಂದು ಸೇರುತ್ತಾರೆ. ಈ ಸಂದರ್ಭದಲ್ಲಿ ವಿಶೇಷವಾದ ಅಭಿಷೇಕಗಳು ನಡೆಯುತ್ತವೆ. ಶಿವರಾತ್ರಿಯ ರಥೋತ್ಸವವು ಅತ್ಯಂತ ವಿಶೇಷವಾಗಿದ್ದು ತೇರು ಎಳೆಯುವ ಸಮಯದಲ್ಲಿ ಮಾಘ ನಕ್ಷತ್ರ ಇರಬೇಕು ಹಾಗೂ ನಂದಿಯ ವಿಗ್ರಹವನ್ನು ತೇರಿನ ಮುಂದೆ ತಂದು ಇಟ್ಟಾಗ ಮಾತ್ರ ತೇರು ಮುಂದಕ್ಕೆ ಚಲಿಸುತ್ತದೆ. ಈ ದೇವಾಲಯ ಹೂವಿನಹಡಗಲಿಯಿಂದ ಸುಮಾರು 35 ಕಿ.ಮೀ ಹಾಗೂ ದಾವಣಗೆರೆ ಜಿಲ್ಲೆ ಹರಪನಹಳ್ಳಿಯಿಂದ ಸುಮಾರು 30 ಕಿ.ಮೀ. ಅಂತರದಲ್ಲಿದೆ.
ಆಶಾ ಎಸ್. ಕುಲಕರ್ಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?