ಕೆರೆಯಲ್ಲಿ ಕಮಾಂಡೋಗಳ ಕದಂತಾಲ್
Team Udayavani, Nov 17, 2018, 3:25 AM IST
ವರ್ಷದ ಹಿಂದೆ ಕಸದ ತೊಟ್ಟಯಿಂತಿದ್ದ ಬೆಳಗಾವಿಯ ಗಣೇಶಗುಡಿ ಹತ್ತಿರದ ಮಿಲಿಟರಿ ಕ್ಯಾಂಪ್ನಲ್ಲಿರುವ ಕೆರೆ, ಇವತ್ತು, ತಿಳಿನೀರ ಕೊಳವಾಗಿ ಕಂಗೊಳಿಸುತ್ತಿದೆ. ಈ ಬದಲಾವಣೆಗೆ ಕಾರಣ ಆಗಿರುವವರು ಸೈನಿಕರು. ದೇಶ ಕಾಯುವ ಯೋಧರು ಕೆರೆಯನ್ನು ಕಟ್ಟಬಲ್ಲರು ಎಂಬ ಮಾತಿಗೆ ಸಾಕ್ಷಿಯಾದ ಪ್ರಸಂಗ ಇದು.
ಬೆಳಗಾವಿಯ ಹಿಂಡಲಗಾ ರಸ್ತೆಯಲ್ಲಿ ವಾಕಿಂಗ್ ಮಾಡಲೋಸುಗ ಜಾಗ ಹುಡುಕುತ್ತಿದ್ದೆ. “ಇಲ್ಲಿ ವಾಕಿಂಗ್ಗೆ ಜಾಗ ಇದೆಯಾ?’ ಅಂತ ಅಲ್ಲಿ ಯಾರನ್ನೋ ಕೇಳಿದರೆ-“ಹತ್ತಿರದಲ್ಲೇ ಗಣೇಶ ಗುಡಿ ಮಿಲಿó ಕ್ಯಾಂಪ್ ಇದೆ…’ ಅಂತ ದಾರಿ ತೋರಿಸಿದರು. ಅತ್ತ ತಿರುಗಿದಾಗ ಕಾಣಿಸಿದ್ದು ಅಚ್ಚುಕಟ್ಟಾದ ಸಣ್ಣ ಸಣ್ಣ ಕೆರೆಗಳು. ಕೆರೆಯಲ್ಲಿ ನಮ್ಮ ಬಿಂಬ ಕಾಣುವಷ್ಟು ಸ್ವತ್ಛ ನೀರು, ಸುತ್ತಲೂ ಮರಗಿಡಗಳು, ಏರಿ ಮೇಲೆ ವಾಯುವಿಹಾರ ಮಾಡುವ ಜನರ ದಂಡು..! ನಾಲ್ಕು ಕೆರೆಗಳನ್ನು ಪ್ರದಕ್ಷಿಣೆ ಹಾಕಿ, ಐದನೇ ಕೆರೆ ಏರಿ ಮೇಲೆ ಅಡಿ ಇಡುತ್ತಿದ್ದಂತೆ ಅಚ್ಚರಿ ಕಾದಿತ್ತು. ನೀಲಿ, ಹಸಿರು ಪ್ಯಾಂಟ್, ಬಿಳಿ ಟೀ ಶರ್ಟ್ ಧರಿಸಿದ ನೂರಾರು ಸೈನಿಕರು ಕೆರೆಯನ್ನು ಸ್ವತ್ಛಗೊಳಿಸುತ್ತಿದ್ದರು. ಅವರ ಶಿಸ್ತುಬದ್ಧ ಶ್ರಮದಾನ ನೋಡುತ್ತಲೇ, ಕೆರೆಗೆ ಅಂಟಿದ್ದ ಗುಡ್ಡಗಾಡಿನತ್ತ ನಡೆದರೆ. ಅಲ್ಲಿಯೂ ಸೈನಿಕರು ದಂಡು ಗಿಡಗಳಿಗೆ ನೀರುಣಿಸುವುದು, ಬಿದ್ದಿರುವ ಕಸ ಆರಿಸುವುದು, ಗುಡಿಸುವುದು ಮಾಡುತ್ತಿದ್ದರು. ಏನಿದು ಅಂತ ಅವರಿವರನ್ನು ಕೇಳಿದಾಗ ತಿಳಿದದ್ದು; ಈ ಸುಂದರ ಕೆರೆಗಳು, ಪರಿಸರ ಈ ಸೈನಿಕರ ಗಿಫ್ಟ್ ಎಂದು.
ವಾಕರಿಕೆ ಹುಟ್ಟಿಸುತ್ತಿದ್ದ ತಾಣ
ವರ್ಷದ ಹಿಂದಷ್ಟೆ ಈ ತಾಣ ಈ ರೀತಿ ಕಂಗೊಳಿಸುತ್ತಿರಲಿಲ್ಲ. ಸುತ್ತಮುತ್ತಲಿನ ಜನರಿಗೆ ಅಕ್ಷರಶಃ ಡಸ್ಟ್ಬಿನ್ ಆಗಿತ್ತು. ಗಣೇಶನ ವಿಸರ್ಜನೆ, ಪೂಜೆಗೈದ ತೆಂಗಿನ ಕಾಯಿ, ಹೂವಿನ ಹಾರ ಬಿಸಾಡುವ, ವಾಹನ, ದನಕರು ತೊಳೆಯುವ ಅಡ್ಡೆಯಾಗಿತ್ತು. ಮಳೆ ನೀರಿನೊಟ್ಟಿಗೆ ಕೊಚ್ಚೆ ನೀರು ಕೆರೆ ಸೇರಿ, ಕಸದ ಗುಂಡಿ ಆಗಿತ್ತು. ಪರಿಣಾಮ, ಕೆರೆಗಳೆಲ್ಲಾ ದುರ್ನಾತ ಬೀರುತ್ತಿದ್ದವು. ಹೀಗೆ, ಗಲೀಜಿನಿಂದ ತುಂಬು ತುಳುಕುತ್ತಿದ್ದದ್ದನ್ನು ಕಂಡ ಬೆಳಗಾವಿಯ ನಿವೃತ್ತ ಸುಬೇದಾರ್ ಮೇಜರ್, ಮಾಜಿ ಸೈನಿಕರ ಸಂಘ ಬೆಳಗಾವಿ ಘಟಕದ ಅಧ್ಯಕ್ಷ ಕೆ.ಬಿ ನೌಕುಡಕರ್ ಕ್ಯಾಂಪ್ಅನ್ನು ಕಸಮುಕ್ತ ಮಾಡಲು ಸಂಕಲ್ಪ ತೊಟ್ಟರು. ಮಿಲಿóಸ್ಟೇಷನ್ ಕಮಾಂಡೆಂಟ್ ವೈಎಸ್ಎಂ ಗೋವಿಂದ ಕಲ್ವಾಡ್ ನೆರವಿಗೆ ನಿಂತರು. ಸ್ವತ್ಛತೆಯ ರೂಪರೇಷೆಗಳನ್ನು ಸಿದ್ಧಪಡಿಸಿ, ಕೆಲಸ ಆರಂಭಿಸಿಯೇ ಬಿಟ್ಟರು.
ಶುರುವಾಯ್ತು ಸೈನಿಕ ಕಾರ್ಯಾಚರಣೆ
ಮೊದಲಿಗೆ, ಕೆರೆಯ ತಗ್ಗು ಪ್ರದೇಶದ ನೀರನ್ನು ಖಾಲಿ ಮಾಡಿ, ಒಣಗಿದ ನಂತರ, ಇಟಾಚಿ ಯಂತ್ರ ಬಳಸಿ ಸುಮಾರು 20 ಅಡಿ ಆಳದವರೆಗೆ ಹೂಳು, ಕಸ ತೆಗೆದರು. ಆ ಮೂಲಕ ಅಸ್ಥವ್ಯಸ್ಥವಾಗಿದ್ದ ಕೆರೆಗೆ ಒಂದು ಆಕಾರ ಕೊಟ್ಟರು. ಇದರಿಂದ ಕೆರೆ ಮತ್ತಷ್ಟು ಆಳ ಮತ್ತು ವಿಶಾಲ ಆಯ್ತು. ಫಲವತ್ತಾದ ಹೂಳು, ಹೊರಗಿನಿಂದ ಮಣ್ಣು ತಂದು ವಾಕಿಂಗ್ ಟ್ರ್ಯಾಕ್ ಮಾಡಿ, ಕೆರೆ ಏರಿಯನ್ನು ಭದ್ರಗೊಳಿಸಿದರು. ಹೂಳಿನಲ್ಲಿ ಪೋಷಕಾಂಶ ಇರುತ್ತದೆ. ಅದನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಪ್ರಚಾರ ಮಾಡಿದರು. ರೈತರು ಮುಗಿಬಿದ್ದು ತಮ್ಮ ತಮ್ಮ ಹೊಲಗಳಿಗೆ ಏರಿಕೊಂಡರು. ಉಳಿದಂತೆ, ಕ್ಯಾಂಪ್ನ ಕೈತೋಟ, ಬೆಟ್ಟ-ಗುಡ್ಡದಲ್ಲೂ ಹೂಳನ್ನು ಹರಡಿದರು. ಇದೇ ಕ್ರಮವನ್ನು ಉಳಿದ ನಾಲ್ಕು ಕೆರೆಗಳಿಗೂ ಅನುಸರಿಸಿದರು. 2 ಇಟಾಚಿ, 10 ಟಿಪ್ಪರ್ ಜೊತೆಗೆ ಒಂದಷ್ಟು ಸೈನಿಕರ ದಂಡು ನಿತ್ಯವೂ ಬೆವರು ಬಸಿದರು.
5,000 ಸೇನಾ ಸಿಬ್ಬಂದಿ ಮತ್ತು ಟ್ರೆ„ನಿಗಳು, 2000ಕ್ಕೂ ಹೆಚ್ಚು ನಿವೃತ್ತ ಯೋಧರ ಕೊಡುಗೆ ಇದರಲ್ಲಿದೆ!. ಇವರೆಲ್ಲಾ ಕೆರೆ ಸ್ವತ್ಛತೆಗೆ ಸರದಿ ಪ್ರಕಾರ ತೊಡಗಿಸಿಕೊಂಡರು. ದಿನಕ್ಕೆ ಕನಿಷ್ಠ 5 ಗಂಟೆಯಿಂದ 7 ಗಂಟೆಗಳ ಕಾಲ ಕೆಲಸ ಮಾಡಿದರು. ಅಲ್ಲಿಯೇ ತಿಂಡಿ, ಊಟ ಮಾಡಿದರು!. ವಾರದ ರಜೆಯಲ್ಲಿಯೂ ವಿಶ್ರಾಂತಿ ತೆಗೆದುಕೊಳ್ಳದೇ ನೂರಾರು ಸೈನಿಕರು ಪರಿಸರ ಸಂರಕ್ಷಣೆ ಮತ್ತು ಸ್ವತ್ಛತೆ ಕಾರ್ಯದಲ್ಲಿ ಕಳೆದರು. ಹೀಗಾಗಿ ಗಣೇಶ ಮಂದಿರ ಕ್ಯಾಂಪ್ ಪರಿಸರದ ಚಿತ್ರಣ ಸಂಪೂರ್ಣ ಬದಲಾಯ್ತು. ಈಗಲೂ ಕೆರೆ ನಿರ್ವಹಣೆಗಾಗಿ ನಿತ್ಯವೂ 20-30 ಸೈನಿಕರು ಶ್ರಮಿಸುತ್ತಿದ್ದಾರೆ. ಸೈನಿಕರೆಂದರೆ ದೇಶದ ಗಡಿ ಕಾಯುವವರು ಮಾತ್ರ ಅನ್ನೋ ಅಭಿಪ್ರಾಯ ನಮ್ಮಲ್ಲಿವೆ. ಆದರೆ ಸೈನಿಕರು ದೇಶ ಸೇವೆಯೊಂದಿಗೆ ಸಮಾಜ ಸೇವೆ, ಪರಿಸರ ಸಂರಕ್ಷಣೆಗೂ ಸೈ ಎನ್ನುವುದನ್ನು ತೋರಿಸಿದ್ದಾರೆ.
ಸಮೃದ್ಧ ಹಸಿರು
ಗಣೇಶ್ ಗುಡಿ ಕ್ಯಾಂಪ್ 150 ಎಕರೆ ವ್ಯಾಪ್ತಿಯಲ್ಲಿದೆ. 30ಕ್ಕೂ ಹೆಚ್ಚು ಎಕರೆ ಜಾಗವನ್ನು ಸುಂದರಗೊಳಿಸಿ ಆರು ಸಾವಿರಕ್ಕಿಂತ ಹೆಚ್ಚು ಗಿಡ ನೆಟ್ಟಿದ್ದಾರೆ!.ಮರಗಿಡಗಳಲ್ಲಿ ಬಹುತೇಕ ಹಣ್ಣಿನ ಗಿಡಗಳಿದ್ದು, ವಿಶೇಷವಾಗಿ ನವಿಲು, ಕೋಗಿಲೆ, ಗಿಳಿ.. ಮುಂತಾದ ಪಕ್ಷಿ$ಗಳು ನೆಲೆಸಿವೆ. ಹಕ್ಕಿಗಳ ಕಲರವ ಮನಸ್ಸಿಗೆ ಮುದ ನೀಡುತ್ತದೆ. ಗಿಡಮರಗಳಿಗೆ ನಿತ್ಯವೂ ನೀರುಣಿಸಿ ಬೆಳೆಸುವ ಜವಾಬ್ದಾರಿಯನ್ನು ಇವರೇ ವಹಿಸಿಕೊಂಡಿದ್ದಾರೆ. ಹೀಗಾಗಿ, ಬಯಲೆಲ್ಲಾ ಸಮೃದ್ಧ ಹಸಿರು ಮೈದಳೆದಿದೆ. ಹಾಲಿ ಇರುವ ಮರಗಿಡಗಳಿಗೆ ಯಾರೂ ಕೆಂಗಣ್ಣು ಬೀರದಂತೆ ಕಾವಲು ನಿಂತಿದ್ದಾರೆ.
ನೀರು ಖಾಲಿಯಾಗದ ಕೆರೆಗಳು..!
ಮಳೆಗಾಲ ಮುಗಿದ ಕೂಡಲೇ ಕೆರೆಯಲ್ಲಿ ನೀರು ಖಾಲಿ ಆಗುವುದಿಲ್ಲ. ಏಕೆಂದರೆ, ಗುಡ್ಡದಿಂದ ಹರಿದು ಬರುವ ನೀರು ಕೆರೆ ಸೇರುವಂತೆ ಮಾಡಲಾಗಿದೆ. ಸುಮಾರು ಮೂರು ಕಿ.ಮೀ ದೂರದಲ್ಲಿ, ಅಂದರೆ ನಗರದ ಲಕ್ಷಿ$¾ ತೆಕಡಿಯಲ್ಲಿರುವ ನೀರು ಸರಬರಾಜು ಮತ್ತು ಶುದ್ಧೀಕರಣ ಘಟಕದ ವೇಸ್ಟೇಜ್ ನೀರನ್ನು ಪೈಪ್ಲೈನ್ ಮೂಲಕ ತಂದು ಕೆರೆಗೆ ಬಿಡಲಾಗುತ್ತಿದೆ. ಕೆರೆಯ ಒಡಲಿನ ಅಲ್ಲಲ್ಲಿ ನೀರಿನ ಸೆಲೆ ಸೃಷ್ಟಿಯಾಗಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ನೀರು ಕಮ್ಮಿ ಆಗಲ್ಲ. ಕೋಡಿ ಬಿದ್ದ ನೀರು ಮತ್ತೂಂದು ಕೆರೆಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ. ಅದು ಚಿಕ್ಕ ಜಲಪಾತದ ರೂಪದಲ್ಲಿ!. ನೀರಿನ ಜುಳು ಜುಳು ನಿನಾದಕ್ಕೆ ಮನಸ್ಸು ಅರಳುತ್ತದೆ. ಅಲ್ಲದೆ ಹೆಚ್ಚು-ಕಮ್ಮಿ 2 ಲಕ್ಷ ಮೀನಿನ ಮರಿಗಳನ್ನು ಬಿಟ್ಟು, ಮೀನು ಸಾಕಾಣಿಕೆ ಮಾಡಿ, ಅದನ್ನು ಸೈನಿಕರೇ ಊಟಕ್ಕೆ ಬಳಸುತ್ತಾರೆ.
ದೇಗುಲ ಹಣ ಅಭಿವೃದ್ಧಿಗೆ
ಕ್ಯಾಂಪ್ನಲ್ಲಿರುವ ಗಣೇಶ ದೇಗುಲಕ್ಕೆ ಸಾಕಷ್ಟು ಭಕ್ತರಿದ್ದಾರೆ. ಸಹಜವಾಗಿಯೇ ಹಣವನ್ನು ಕಾಣಿಕೆ ಆಗಿ ನೀಡುತ್ತಾರೆ. ಹೀಗೆ ಸಂಗ್ರಹವಾದ ಹಣವನ್ನು ಕೆರೆ ಅಭಿವೃದ್ಧಿ, ಪರಿಸರ ಸಂರಕ್ಷಣೆಗೆ ವಿನಿಯೋಗಿಸಲಾಗುತ್ತಿದೆ. ಈಗಾಗಲೇ 20 ಲಕ್ಷ ಹಣ ವ್ಯಯಿಸಿದ್ದು, ಸರಕಾರ, ಸ್ಥಳೀಯ ಜನ ಪ್ರತಿನಿಧಿಗಳು ಕ್ಯಾಂಪ್ನ ಪರಿಸರ ಅಭಿವೃದ್ಧಿಗೆ ಹಣ ನೀಡುವುದಾಗಿ ಭರವಸೆ ನೀಡಿದ್ದಾರಂತೆ. ಬೇಜಾರು ಕಳೆಯಲಿಕ್ಕೆ, ಪಿಕ್ನಿಕ್ಗೆ, ಮನೋರಂಜನೆಗೆ, ವಿಹಾರಕ್ಕೆ, ವಿರಾಮಕ್ಕೆ, ಬರ್ಡ್ಸ್ ವಾಚಿಂಗ್ಗೆ, ವ್ಯಾಯಾಮ, ಯೋಗ… ಹೀಗೆ ಎಲ್ಲದಕ್ಕೂ ಇದು ಹೇಳಿ ಮಾಡಿಸಿದ ತಾಣ.
“ಮೊದಲು ಇಲ್ಲಿ ಓಡಾಡಲೂ ಆಗುತ್ತಿರಲಿಲ್ಲ. ಅಷ್ಟೊಂದು ಪರಿಸರ ಕೆಟ್ಟು ಹೋಗಿತ್ತು. ಆದರೆ ಈಗ ನನಗೆ ಹೆಚ್ಚು ಪ್ರಿಯವಾದ ತಾಣವಾಗಿದೆ ಎನ್ನುತ್ತಾರೆ ಜಯನಗರದ ನಿವಾಸಿ ಶೆಟ್ಟಣ್ಣನವರ್.
ಹತ್ತಾರು ಕನಸುಗಳಿವೆ..
ಪುನಶ್ಚೇತನಗೊಂಡ ಕೆರೆಯ ಒಡಲಲ್ಲಿ ಹತ್ತಾರು ಕನಸುಗಳು ಟಿಸಿಲೊಡೆದಿವೆ. ಅದರಲ್ಲಿ ಕೆರೆ ವೀಕ್ಷಣೆಗೆ ತೂಗು ಸೇತುವೆ, ಕುಳಿತುಕೊಳ್ಳಲು ಆಸನಗಳು ಸಾಕಾರಗೊಂಡಿವೆ. ಇನ್ನು ಮನರಂಜನೆಗಾಗಿ ಬೋಟಿಂಗ್ ವ್ಯವಸ್ಥೆ, ರಕ್ಷಣೆಗೆ ಸುತ್ತಲೂ ತಂತಿ ಬೇಲಿ, ವಾಕ್ಪಾತ್ಗೆ ಲೈಟಿಂಗ್ ಮುಂತಾದ ಸೌಲಭ್ಯಗಳನ್ನು ಒದಗಿಸುವ ಯೋಜನೆ ಇಗಬೇಕಾಗಿದೆ. ಅದನ್ನೆಲ್ಲ ಹಂತ-ಹಂತವಾಗಿ ಮಾಡುವುದಾಗಿ ಕ್ಯಾಪ್ಟನ್ ನೌಕುಡಕರ್ ವಿಶ್ವಾಸದಿಂದ ಹೇಳುತ್ತಾರೆ.
“ಸೈನಿಕರ ಶ್ರಮದಿಂದ ಈ ಜಾಗ ಶುಚಿಯಾಗಿದೆ. ಇದಕ್ಕೆ ಜನ ಕೂಡ ನಮ್ಮೊಂದಿಗೆ ಕೈ ಜೋಡಿಸಿದ್ದರಿಂದ ಖುಷಿ ಮತ್ತು ಹೆಮ್ಮೆ ಇದೆ ‘ ಅವರು ಸಂಭ್ರಮದಿಂದ ಹೇಳುತ್ತಾರೆ.
ಸ್ವರೂಪಾನಂದ ಎಂ. ಕೊಟ್ಟೂರು