ಹಲಸಿನ ಹಣ್ಣಿನ  ಅಂಟಿದ ನಂಟು


Team Udayavani, Aug 10, 2018, 6:00 AM IST

x-24.jpg

ನಿನ್ನೆ ಮಧ್ಯಾಹ್ನ ಅಡುಗೆ ಕೆಲಸದಲ್ಲಿ ನಿರತಳಾಗಿದ್ದೆ. ಆಗ ಒಂದು ಫೋನ್‌ ಬಂತು. ಪರಿಚಿತ ನಂಬರ್‌ ಅಲ್ಲ. ಕರೆ ಸ್ವೀಕರಿಸಿದೆ. ಪರಿಚಿತ ಧ್ವನಿಯೂ ಅಲ್ಲ. ಅವರೇ ತಾವು ಯಾರು ಎಂದು ಹೇಳಿಕೊಂಡರು. ಅವರು ನಾಡಿನ ಒಬ್ಬ ಖ್ಯಾತ ಹಿರಿಯ ಬರಹಗಾರ್ತಿಯಾಗಿದ್ದರು. ಎಲ್ಲೋ ಒಂದೆರಡು ಕಡೆ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮಾತಾಡಿದ್ದು ಬಿಟ್ಟರೆ ಅವರ ಜೊತೆ ನನಗೆ ಒಡನಾಟ ಇರಲಿಲ್ಲ. ಇರಲಿ. ಅವರು ಫೋನ್‌ ಮಾಡಿದ ವಿಷಯಕ್ಕೆ ಬರುತ್ತೇನೆ. 

ಅವರು ನಾನು “ಹಲೋ’ ಎಂದ ತಕ್ಷಣ “ಹೇಗಿದ್ದೀರಿ? ಚೆನ್ನಾಗಿದ್ದೀರಾ?’ ಎಂದು ಸ್ವಲ್ಪ   ಗಾಬರಿ, ಸ್ವಲ್ಪ ಭಯ, ಸ್ವಲ್ಪ ಕುತೂಹಲ ಮಿಶ್ರಿತ ಧ್ವನಿಯಿಂದ ಕೇಳಿದರು. “ಚೆನ್ನಾಗೇ ಇದ್ದೇನೆ. ಯಾಕೆ ನೀವು ಉದ್ವೇಗಗೊಂಡಿದ್ದೀರಿ?’ ಎಂದು ಕೇಳಿದೆ. “ಅಬ್ಟಾ ! ಈಗ ನಿರಾಳವಾಯಿತು’ ಎಂದರು. “ಅಂತಹದ್ದು ಏನಾಗಿದೆ? ಬಿಡಿಸಿ ಹೇಳಿ’ ಎಂದೆ. “ಏನೂ ಇಲ್ಲ. ಪೇಪರ್‌ ಓದುತ್ತಿದ್ದೆ. ಮೊನ್ನೆ ನಿಮಗೆ ಹಲಸಿನ ಹಬ್ಬದಲ್ಲಿ ನಡೆದ ಹಲಸಿನ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಬಹುಮಾನ ಬಂದಿದೆಯಂತೆ. ಓದಿ ಚಿಂತೆಯಾಯಿತು. ನಿಮ್ಮ ಆರೋಗ್ಯಕ್ಕೇನಾದರೂ ಹೆಚ್ಚುಕಡಿಮೆ ಆಯಿತಾ ಅಂತ. ಯಾತಕ್ಕಾದರೂ ಅಂತಹ ಸ್ಪರ್ಧೆ ಇಡುತ್ತಾರೋ! ಹಲಸಿನಹಣ್ಣು ತಿಂದರೆ ಹೊಟ್ಟೆ ಉಬ್ಬರಿಸುತ್ತದೆ ಅಲ್ವಾ? ಎಷ್ಟು ಹಣ್ಣು ತಿಂದಿದ್ದೀರಿ?’ ಕೇಳಿದರು. 

ನನಗೆ ನಗು ತಡೆಯಲಾಗಲಿಲ್ಲ. ಸ್ಪರ್ಧೆಯ ನಿಯಮಗಳನ್ನು ಅವರಿಗೆ ವಿವರಿಸಿದೆ. “ತುಂಬ ತಿನ್ನಲು ಇಲ್ಲ. ಕವರಿನಲ್ಲಿ ಬೀಜ ಸಮೇತ ಹಲಸಿನ ಹಣ್ಣಿನ ತೊಳೆಗಳನ್ನು ಅರ್ಧ ಕೇಜಿಯಂತೆ ಇಟ್ಟಿರುತ್ತಾರೆ. ನಾವು ಬೀಜ ಬೇರ್ಪಡಿಸಿ ತಿನ್ನಬೇಕು. ಎರಡು ನಿಮಿಷದ ಒಳಗೆ ಯಾರು ಹೆಚ್ಚು ತೊಳೆಗಳನ್ನು ತಿನ್ನುತ್ತಾರೋ ಅವರಿಗೆ ಬಹುಮಾನ. ಒಟ್ಟು 12 ತೊಳೆ ಇದ್ದಿರಬಹುದಷ್ಟೆ. ಅದಕ್ಕಿಂತ ಜಾಸ್ತಿ ತೊಳೆಗಳನ್ನು ನಾನು ಮನೆಯಲ್ಲಿ ತಿನ್ನುತ್ತೇನೆ’ ಎಂದು ನಾನು ಹೇಳಿದ ಮೇಲೆಯೇ ಅವರಿಗೆ ಸಮಾಧಾನವಾದದ್ದು. ಹಲಸಿನ ಹಣ್ಣು ಅಲಕ್ಷಿತ ಹಣ್ಣು. ಯಾವುದೇ ಹಣ್ಣು ಅಥವಾ ತರಕಾರಿಯಿಂದ ಮಾಡುವುದಕ್ಕಿಂತ ಹೆಚ್ಚು ಅಡುಗೆಯನ್ನು ಅದೂ ರುಚಿಕರವಾಗಿ ಈ ಹಣ್ಣಿನಿಂದ ತಯಾರಿಸಬಹುದು. ಇದು ಪೌಷ್ಟಿಕಾಂಶಗಳನ್ನು ಒಳಗೊಂಡಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಕರು ಹಲಸಿನ ಹಬ್ಬವೆಂದು ಮಾಡಿ ಅದರಲ್ಲಿ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಇಟ್ಟಿದ್ದರು ಎಂದು ಅವರಿಗೆ ಮನದಟ್ಟು ಮಾಡಿದೆ. 

    ಯಾಕೆ ಎಂದು ಗೊತ್ತಿಲ್ಲ ಜನಸಾಮಾನ್ಯರಲ್ಲಿ ಹಲಸಿನ ಹಣ್ಣೆಂದರೆ ತಾತ್ಸಾರ. ಬಹುಶಃ ಅದು ಖರ್ಚಿಲ್ಲದೆ ಸುಲಭದಲ್ಲಿ ಬೆಳೆಯುವ ಹಣ್ಣು ಎಂಬ ಕಾರಣದಿಂದಲೋ ಏನೋ! ನನಗೆ ಮಾತ್ರ ಹಲಸಿನ ಹಣ್ಣು ಎಂದರೆ ಪ್ರಾಣ. ಹಲಸಿನ ಸೀಸನ್‌ನಲ್ಲಿ ನಮ್ಮ ಮನೆಯಲ್ಲಿ ನಿತ್ಯ ಅದರ ಒಂದಿಲ್ಲೊಂದು ಖಾದ್ಯ ಇದ್ದೇ ಇರುತ್ತದೆ. ನನ್ನ ಅಮ್ಮನಂತೂ ಹಲಸಿನ ಅಡುಗೆ ತಯಾರಿಸುವುದರಲ್ಲಿ ಎತ್ತಿದ ಕೈ. ಅವಳು ಹಲಸಿನಕಾಯಿಯನ್ನು ಅಕ್ಕಿ ಜೊತೆ ಸೇರಿಸಿ ನುಣ್ಣಗೆ ರುಬ್ಬಿ ಕೈಯಿಂದಲೇ ಕಾವಲಿಯಲ್ಲಿ ತೆಳ್ಳಗೆ ಹಿಟ್ಟು ಸವರಿ ದೋಸೆ ಹಾಕಿದಳೆಂದರೆ ಯಾವ ಸ್ಟಾರ್‌ ಹೊಟೇಲಿನ ಮಸಾಲೆ ದೋಸೆಯೂ ಸೋಲಬೇಕು ಅಂಥ ಸ್ವಾದ! ಆದರೆ, ನಮ್ಮ ಕರಾವಳಿಯಲ್ಲಿ ಹಲಸಿನ ಅಡುಗೆ ಮಾಡುವಷ್ಟು ಉತ್ತರ ಕರ್ನಾಟಕದಲ್ಲಿ ಮಾಡುವುದಿಲ್ಲ. ಅವರಿಗೆ ಹಣ್ಣು ಮಾತ್ರ ತಿಂದು ಗೊತ್ತು! ಪಾಕಶಾಸ್ತ್ರಜ್ಞೆ ಹಾಗೂ ಲೇಖಕಿ ಸವಿತಾ ಅಡ್ವಾಯಿ ಅವರು ಎಳೆಗುಜ್ಜೆಯಿಂದ ಹಿಡಿದು ಬೀಜದ ತನಕ ಹಲಸಿನಿಂದ ತಯಾರಿಸಬಹುದಾದ ಮುನ್ನೂರಕ್ಕೂ ಅಧಿಕ ಅಡುಗೆ ಇರುವ  ಹಲಸಿನ ಸವಿ ಎಂಬ ದೊಡ್ಡ ಪುಸ್ತಕವನ್ನೇ ಬರೆದಿದ್ದಾರೆ.

    ಹಲಸು ಎಲ್ಲ ಹಣ್ಣಿನಂತಲ್ಲ. ಅದಕ್ಕೆ ಒಂದು ವಿಶೇಷ ಶಕ್ತಿಯಿದೆ. ಅದೆಂದರೆ ಸಂಬಂಧಗಳನ್ನು ಕೂಡಿಸುವಂಥದ್ದು. ಹಲಸು ಬೆಳೆಯಲು ಶುರುವಾದ ಕೂಡಲೇ ಅಮ್ಮ ನನಗೆ ಫೋನ್‌ ಮಾಡುತ್ತಾಳೆ. “ಹಲಸಿನ ಕಾಯಿ ಬೆಳೆದಿದೆ. ಹಪ್ಪಳ ಮಾಡಲು ಯಾವಾಗ ಬರುತ್ತಿ?’ ಅಪಾರ್ಟ್‌ ಮೆಂಟಿನಲ್ಲಿ ವಾಸಿಸುವ ಚಿಕ್ಕಮ್ಮನೂ ಕರೆ ಮಾಡಿ “ನಾವು ಜೊತೆಯಲ್ಲಿ ನಿನ್ನ ತವರಿಗೆ ಹೋಗೋಣವಾ? ಹಲಸಿನ ಚಿಪ್ಸ್‌ ಮಾಡೋಣ’ ಎನ್ನುತ್ತಾರೆ. ಕೆಲವೊಮ್ಮೆ ದೂರದ ಅಮೆರಿಕದಲ್ಲಿರುವ ತಂಗಿಯೂ ಜೊತೆಗೂಡುತ್ತಾಳೆ. ಹಪ್ಪಳ, ಚಿಪ್ಸ್‌ ಮಾಡುವ ನೆವದಲ್ಲಿ ನಾವು ಒಟ್ಟು ಸೇರುತ್ತೇವೆ. ಇದು ಬೇಸಿಗೆಯ ಮಾತಾಯಿತು. ಮಳೆಗಾಲದಲ್ಲಿ ಅಮ್ಮ ಉಪ್ಪು$ನೀರಲ್ಲಿ ಶೇಖರಿಸಿಟ್ಟ ಸೊಳೆಯಿಂದ ಉಂಡಲಕಾಳು ಎಂಬ ಗೋಲಿಯಾಕಾರದ ಅದ್ಭುತ ರುಚಿಯ ತಿಂಡಿ ಮಾಡುತ್ತಾಳೆ. ಉಂಡಲಕಾಳಿಗೆ ಉಂಡೆ ಮಾಡಲೆಂದೇ ಅಜ್ಜನಮನೆಯಿಂದ ಅಜ್ಜಿ ಬರುತ್ತಾಳೆ. ಅದನ್ನು ಡಬ್ಬಿಯಲ್ಲಿ ಗಾಳಿಯಾಡದಂತೆ ಇಟ್ಟರೆ ಮೂರು ತಿಂಗಳವರೆಗೂ ತಾಜಾ ಆಗಿಯೇ ಇರುತ್ತದೆ. ಸುಮ್ಮ ಸುಮ್ಮನೆ ನಮ್ಮ ಮನೆಗೆ ಬಾರದ ಅಪ್ಪಉಂಡಲಕಾಳು ಮಾಡಿದ ಸಮಯದಲ್ಲಿ ಅದನ್ನು ಮೊಮ್ಮಕ್ಕಳಿಗೆ ಕೊಡಲು ಮನೆಗೆ ಬರುತ್ತಾರೆ. ಹೀಗೆ ಅಕ್ಕ, ತಂಗಿ, ಚಿಕ್ಕಮ್ಮ, ಅಮ್ಮ, ಅಪ್ಪ, ಅಜ್ಜಿ ಎಲ್ಲರನ್ನೂ ಬೆಸೆಯುವ ಹಲಸಿನ ಹಣ್ಣಿನ ತಾಕತ್ತು ಬೇರೆ ಯಾವ ಹಣ್ಣಿಗಿದೆ ಹೇಳಿ?      

    ಹಲಸಿನ ಹಣ್ಣು ಎಂದಾಗ ನನಗೆ ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ನೆನಪಾಗುತ್ತದೆ. ಒಮ್ಮೆ ನಾನು ಧಾರವಾಡದ ಸಾಹಿತ್ಯ ಸಂಭ್ರಮಕ್ಕೆ ಹೋಗಿದ್ದಾಗ ಅವರ ಮನೆಯಲ್ಲಿ ಉಳಕೊಂಡಿದ್ದೆ. ಅವರು ತಮ್ಮ ಮನೆಯಂಗಳದಲ್ಲಿ ಇರುವ ಹಲಸಿನ ಮರದಲ್ಲಿ ತೂಗುತ್ತಿದ್ದ ಎಳೆ‌ಕಾಯಿಗಳನ್ನು ತೋರಿಸುತ್ತ, “ಇನ್ನೇನು ಕೆಲವೇ ತಿಂಗಳಲ್ಲಿ ಇವು ಹಣ್ಣಾಗುತ್ತವೆ. ಆಗ ನೀನು ಬಾ. ತಿನ್ನುವೆಯಂತೆ’ ಎಂದರು. “ಹಲಸಿನ ಹಣ್ಣು ತಿನ್ನಲು ಇಲ್ಲಿಗೆ ಬರಬೇಕಾ? ಮಲೆನಾಡಿನ ನಮ್ಮ ತೋಟದಲ್ಲಿ ಹಣ್ಣು ತಿನ್ನುವವರಿಲ್ಲದೆ ಮರದಡಿಯಲ್ಲಿ ಬಿದ್ದು ಕೊಳೆಯುತ್ತಿರುತ್ತದೆ’ ಎಂದು ಹೇಳಿದೆ. ಆಗ ಅವರು, “ನಿಮ್ಮ ಮನೆಯಲ್ಲಿ ಹಲಸಿನ ಹಣ್ಣು ಎಷ್ಟೂ ಇರಬಹುದು. ಆದರೆ, ಧಾರವಾಡದ ಹಣ್ಣಿಗೆ ಸಿಹಿ ಜಾಸ್ತಿ’ ಎಂದು ನಕ್ಕರು. “ನಿಜವಾ?’ ಎಂದು ಅಲ್ಲೇ ಇದ್ದ ಹೇಮಾ ಪಟ್ಟಣಶೆಟ್ಟಿ ಅವರಲ್ಲಿ ಕೇಳಿದೆ. ಅವರು “ಹೌದು, ಹೌದು’ ಎನ್ನುತ್ತ ಇನ್ನೂ ಜೋರಾಗಿ ನಕ್ಕರು.

     ನನ್ನ ತೋಟದ ಕೆಲಸಕ್ಕೆ ಬರುವ ಎಪ್ಪತ್ತು ವರ್ಷದ ತುಕ್ರಜ್ಜ ಹೇಳುತ್ತಾರೆ, “ಹಿಂದೆಯೆಲ್ಲ ನಮಗೆ ಎಷ್ಟು ಬಡತನವಿತ್ತು ಎಂಬುದನ್ನು ಈಗ ಕಲ್ಪಿಸಲೂ ಸಾಧ್ಯ ಇಲ್ಲ. ಆಗ ಒಂದು ಹೊತ್ತಿನ ಊಟಕ್ಕೂ ಗತಿಯಿರಲಿಲ್ಲ. ಮನೆ ತುಂಬ ಮಕ್ಕಳು. ಈಗಿನಂತೆ ಸರ್ಕಾರದಿಂದ ಧರ್ಮಕ್ಕೆ ಅಥವಾ ರಿಯಾಯಿತಿ ದರದಲ್ಲಿ ಅಕ್ಕಿ ಸಿಗುತ್ತಿರಲಿಲ್ಲ. ನಾವು ಹಲಸಿನ ಹಣ್ಣಿನ ಸಮಯದಲ್ಲಿ ಅದನ್ನು ತಿಂದೇ ಬದುಕುತ್ತಿದ್ದೆವು. ಈಗ ನನ್ನ ಮೊಮ್ಮಕ್ಕಳಿಗೆ ಅದನ್ನು ಹೇಳಿದರೆ ಅವರು ಅಜ್ಜ ಸುಳ್ಳು ಹೇಳುತ್ತಿದ್ದಾರೆ ಎಂದು ಅಂದುಕೊಳ್ಳುತ್ತಾರೆ. ಕಾಲ ಎಲ್ಲಿಂದ ಎಲ್ಲಿಗೆ ಹೋಯಿತು?’

    ಹಲಸಿನಿಂದ ಬದುಕು ಕಟ್ಟಿಕೊಂಡವರೆಷ್ಟು ಜನ! ಗ್ರಾಮೀಣ ಮಹಿಳೆಯರ ಕೈಯಲ್ಲಿ ನಾಲ್ಕು ಕಾಸು ಓಡಾಡುತ್ತಿದ್ದರೆ ಅದಕ್ಕೆ ಈ ಹಣ್ಣೂ ಒಂದು ಕಾರಣ. ಹಲಸಿನ ಚಿಪ್ಸ್‌, ಹಪ್ಪಳ, ಮಾಂಬಳ, ಉಂಡಲಕಾಳು, ವಡೆ, ಹಲ್ವ ಮಾರಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಅಮ್ಮಂದಿರ ಲೆಕ್ಕ ಇಟ್ಟವರಾರು? 
ಗ್ರಾಮೀಣ ಜೀವನ ಮತ್ತು ಹಲಸು ಒಂದನ್ನು ಬಿಟ್ಟು ಒಂದು ಇಲ್ಲ. ಹಲಸಿನ ಹಣ್ಣಿಗೂ ನಮಗೂ ಅಂಟಿದ ನಂಟಿಗೆ ಕೊನೆ ಇದೆಯೇ?

ಸಹನಾ ಕಾಂತಬೈಲು

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.