ಹೆಣ್ಣಿನ ಏಕತಾರಿ


Team Udayavani, Jan 4, 2019, 12:30 AM IST

x-78.jpg

ಇಂದು ಮಹಿಳೆಗೆ ಆವರಿಸಿರುವಂಥ ಇಂಥ ಭಯಗಳಿಗೆ ಇಡೀ ಸಮಾಜದ ಹೊಣೆಯಿದೆ. “ಒಂಟಿ ಮಹಿಳೆಯ ಭಯ’ವನ್ನು ಕೊಂಚ ಉತ್ಪ್ರೇಕ್ಷಿಸಿ ಹೇಳಲಾಗುತ್ತಿದೆಯೆಂದು ಕೆಲವರಿಗೆ ಅನ್ನಿಸಬಹುದು. ಇಂದಿರಾ ಗಾಂಧಿ ದೇಶದ ಪ್ರಧಾನಿಯಾಗಲಿಲ್ಲವೇ, ಕಿರಣ್‌ ಬೇಡಿ ಪೊಲೀಸ್‌ ಅಧಿಕಾರಿಣಿಯಾಗಲಿಲ್ಲವೇ, ಎಷ್ಟೋ ಮಂದಿ ಜಿಲ್ಲಾಧಿಕಾರಿಯವರಿಲ್ಲವೆ ಅಂಥ ಅವರು ವಾದಿಸಬಹುದು. ಹಾಗಾದರೆ, ನಮ್ಮಲ್ಲಿ ಅಪ್ರಾಪ್ತ ವಯಸ್ಸಿನವರೂ ಸೇರಿದಂತೆ ಅನೇಕ ಬಾಲಕಿಯರ ಮೇಲಿನ ಅತ್ಯಾಚಾರಗಳೂ ನಡೆಯುತ್ತದೆಯಲ್ಲ, ಅದಕ್ಕೆ ಯಾರು ಕಾರಣರು ಎಂಬ ಪ್ರಶ್ನೆಗೆ ಉತ್ತರವಿಲ್ಲ. 

ಒಂಟಿತನ’ದ ಸಮಸ್ಯೆ ಎಲ್ಲರಿಗೂ ಇದ್ದದ್ದೇ. ಕೆಲವರು ಎಲ್ಲರಿದ್ದೂ ಒಂಟಿಗಳು. ಸುತ್ತಮುತ್ತಲಿನ ಸಮಾಜದೊಂದಿಗೆ “ಸಂವಹನ ಅಂತರ’ (Communication gap) ಉಂಟಾದರೆ ಸಹಜವಾಗಿಯೇ ಏಕಾಕಿತನ ಕಾಡುತ್ತದೆ. ನೀವು ಕೊಲ್ಕತಾದ ಯಾವುದೋ ಬೀದಿಯಲ್ಲಿ ನಡೆಯುತ್ತಿದ್ದೀರೆಂದು ಕಲ್ಪಿಸಿಕೊಳ್ಳಿ. ಸುತ್ತಮುತ್ತಲೂ ಜನರ ಗುಂಪೇ ಇದ್ದರೂ ಅವರ್ಯಾರೂ ನಿಮಗೆ ಪರಿಚಿತರಲ್ಲ. ಪೇಟೆಯ ನಡುವೆ, ಜನರ ಮಧ್ಯೆ ಇದ್ದರೂ ಅಲ್ಲೂ ಒಂದು ರೀತಿಯ “ದ್ವೀಪಭಾವ’! ಇನ್ನು ಕೆಲವರಿಗೆ ಬದುಕಿನಲ್ಲಿ ತಮ್ಮವರೆಂಬವರು ಯಾರೂ ಇರುವುದಿಲ್ಲ. ತಂದೆತಾಯಿಗಳು ಬಾಲ್ಯದಲ್ಲೇ ಅಳಿದಿರುತ್ತಾರೆ. ಬಂಧುಗಳು ಹತ್ತಿರ ಸುಳಿಯುವುದಿಲ್ಲ. ಆಗ ಸಹಜವಾಗಿಯೇ ಒಂದು ರೀತಿಯ ಏಕತಾನತೆ ಕಾಡುತ್ತದೆ. ಒಂಟಿತನ ಎಂಬುದು ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಕಾರಣಗಳಿಗಾಗಿ ಉಂಟಾಗುತ್ತದೆ.

ಆದರೆ ಒಂಟಿಯಾಗಿರುವವರು ಪುರುಷನೋ ಸ್ತ್ರೀಯರೋ ಎಂಬುದರ ಮೇಲೆ ಅದಕ್ಕೆ ಬೇರೊಂದು ಆವರಣ ಹುಟ್ಟಿಕೊಳ್ಳುತ್ತದೆ. ಒಬ್ಬನೇ ಪುರುಷನಾದರೆ ಮಾನಸಿಕವಾದ ಒಂಟಿತನ ಕಾಡಬಹುದೇ ಹೊರತು ಅಷ್ಟೊಂದು “ಭೀತಿ’ ಇರುವುದಿಲ್ಲ. ಆದರೆ, ಮಹಿಳೆ ಒಬ್ಬಂಟಿಯಾದರೆ ಅದರ ಜೊತೆಗೆ “ಭಯ’ವೂ ಆವರಿಸಿಕೊಳ್ಳುತ್ತದೆ. ಪುರುಷ-ಮಹಿಳೆಯರ ಇರುವಿಕೆಯಲ್ಲಿ ಇಂಥ ಭಾವನಾತ್ಮಕ ವ್ಯತ್ಯಾಸವೇಕೆ ಎಂಬುದು ಚಿಂತನಾರ್ಹ ಸಂಗತಿ.

ಪುಟ್ಟ ಹುಡುಗಿಯಾದರೆ ಅವಳೊಬ್ಬಳನ್ನೇ ಮನೆಯಲ್ಲಿ  ಬಿಟ್ಟು ಹೋಗುವುದಕ್ಕೂ ಭಯ. ಹೈಸ್ಕೂಲು ಹುಡುಗಿಯೊಬ್ಬಳು ಬೀದಿಯಲ್ಲಿ ಒಬ್ಬಳೇ ನಡೆದು ಹೋಗುತ್ತಿದ್ದರೆ ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೋ ಎಂಬಂತೆ ಅವಳು ತಲ್ಲಣಗೊಳ್ಳುತ್ತಾಳೆ. ಪಿಯುಸಿ ಮೆಟ್ಟಿಲೇರಿದ ಹುಡುಗಿಗೆ ತನ್ನ ಗೆಳತಿಯರ್ಯಾರಾದರೂ ಸನಿಹ ಇಲ್ಲದಿದ್ದರೆ ಕಸಿವಿಸಿಯಾಗುತ್ತದೆ. “ಹೊಸ ಜಿಂಕೆಮರಿ ಕಣಾ’ ಎಂದು ಸೀನಿಯರ್‌ ತರಗತಿಯ ಹುಡುಗರು ದೂರದಲ್ಲಿ ಗೊಣಗುತ್ತಿರುವುದು ಕೇಳಿಸುತ್ತದೆ.

ಕಾಲೇಜು ದಾಟಿ ಉದ್ಯೋಗಕ್ಕೆ ಸೇರಿದಾಗಲೂ ಕಚೇರಿಯಲ್ಲಿ ಯಾರೂ ಮಹಿಳೆಯರಿಲ್ಲದಿದ್ದರೆ ಒಬ್ಬಳೇ ಇರುವುದಕ್ಕೆ ಭಯ. ಬಾಸ್‌ನ ಕಚೇರಿಗೆ ಒಬ್ಬಳೇ ಪ್ರವೇಶಿಸುವುದಕ್ಕೂ ಮುಜುಗರ. ಒಬ್ಬಳೇ ಇದ್ದರೆ ಸುತ್ತಮುತ್ತಲಿನವರ ಮಾತಿನ ಧಾಟಿಯಲ್ಲಿಯೂ ಬದಲಾಗುತ್ತದೆ. ಎಂದೂ ಮಾತನಾಡದ ಸೌಮ್ಯ ಸ್ವಭಾವದ ಎಟೆಂಡರ್‌ ಕೂಡ ಅವಳಿಗೆ ಒಂದು ಅಶ್ಲೀಲ ನಗೆಹನಿಯ ಎಸ್‌ಎಂಎಸ್‌ ಕಳುಹಿಸಿ ಅವಳ ಗಮನಸೆಳೆಯಲು ಪ್ರಯತ್ನಿಸುತ್ತಾನೆ. ಪತ್ರಿಕೆಗಳ ಸಿನೆಮಾ ಪುಟದಲ್ಲಿ ಬರುವ ಅರೆನಗ್ನ ಹುಡುಗಿಯರ ಪುಟಗಳನ್ನು ಅವಳಿಗೆ ಕಾಣಿಸುವಂತೆ ಓದಲಾರಂಭಿಸುತ್ತಾನೆ. ತನ್ನ ಓಲೈಕೆಗೆ ಆಕೆ ಧನಾತ್ಮಕವಾಗಿ ಸ್ಪಂದಿಸದಿದ್ದರೆ ಅವನ ಕೆಲಸದಲ್ಲಿ ಸಣ್ಣದೊಂದು “ಅಸಹಕಾರ’ದ ಛಾಯೆ ಕಾಣಿಸಿಕೊಳ್ಳುತ್ತದೆ. “ನನ್ನ ತುಟಿಯ ಮೇಲೆ ಅದೇನೋ ಕಪ್ಪು ಕಲೆ ಕಾಣಿಸುತ್ತ?’ ಎಂದು ಬಾಸ್‌ ಕೇಳಿದಾಗ ಅವಳೇನಾದರೂ ದುರುಗುಟ್ಟಿ  ನೋಡಿದರೆ ಅಂದಿನಿಂದ ಬಾಸ್‌ ಅವಳಿಗೆ ಅಧಿಕ ಜವಾಬ್ದಾರಿ ಕೊಟ್ಟು , ಸಂಜೆ ತಡವಾಗಿ ಮನೆಗೆ ತೆರಳುವಂತೆ ಮಾಡಿ ಸತಾಯಿಸುತ್ತಾನೆ. ಆಗ ಎಂಥವಳಿಗೂ ನಾನು ಒಂಟಿಯಾಗಿ ಹೋದೆ. ನನಗ್ಯಾರೂ ಜೊತೆಗಾತಿಯರಿಲ್ಲವಲ್ಲ’ ಎಂಬ ಕೊರಗು ಕಾಡುತ್ತದೆ. ಆದರೆ ಎಲ್ಲ ಮಹಿಳೆಯರೇ ಇರುವ ಕಚೇರಿಯಲ್ಲಿ ಪುರುಷನೊಬ್ಬನೇ ನಿರ್ಭಯವಾಗಿ ಇರಬಲ್ಲ. ಅವನಿಗೇಕೆ ಅಲ್ಲಿ ಒಂಟಿತನದ ಭಯ ಕಾಡುವುದಿಲ್ಲ?

ಉದ್ಯೋಗಿಯಾಗಿದ್ದರೆ ಈ ಪಾಡಾದರೆ, ಗೃಹಿಣಿಯಾಗಿದ್ದರೂ ಬೇರೊಂದು ಸಮಸ್ಯೆ. ಗಂಡ ಕೆಲಸಕ್ಕೆ ಹೋಗಿದ್ದಾನೆ. ಮಕ್ಕಳು ಶಾಲೆಗೆ ಹೋಗಿದ್ದಾರೆ. ಮನೆಯೆಂದರೆ ಸುರಕ್ಷಿತ ಜಾಗವೆಂದು ಎಲ್ಲರ ನಂಬಿಕೆ. ಆದರೆ ಒಂಟಿ ಮಹಿಳೆಗೆ ಮಾತ್ರ ಈ ಮಾತು ಅರ್ಧ ಸತ್ಯ. ಗ್ಯಾಸ್‌ ಸಿಲಿಂಡರ್‌ ಚೆಕ್‌ ಮಾಡುವವ ಬಂದರೂ ಒಂದು ರೀತಿಯ ಆತಂಕ. ಕೆಇಬಿಯ ಮೀಟರ್‌ ರೀಡರ್‌ ಕೂಡ ಮನೆಯಲ್ಲಿ ಮಹಿಳೆ ಒಬ್ಬಳೇ ಎಂಬ ಕಾರಣಕ್ಕೆ ಸ್ವಲ್ಪ ಸಲುಗೆಯಿಂದ ನೋಡುತ್ತಾನೆ. ಅಂದ ಮಾತ್ರಕ್ಕೆ ಎಲ್ಲರೂ ಹೀಗೆಯೇ ಇರುತ್ತಾರೆಂದು ಅರ್ಥವಲ್ಲ. ಅದೇ ಪುರುಷ ಮನೆಯಲ್ಲಿ ಒಂಟಿಯಾಗಿದ್ದರೂ ಮಹಿಳೆಗಿರುವಂಥ ಭಯವಿಲ್ಲ.

ಇಂದು ಮಹಿಳೆಗೆ ಆವರಿಸಿರುವಂಥ ಇಂಥ ಭಯಗಳಿಗೆ ಇಡೀ ಸಮಾಜದ ಹೊಣೆಯಿದೆ. “ಒಂಟಿ ಮಹಿಳೆಯ ಭಯ’ವನ್ನು ಕೊಂಚ ಉತ್ಪ್ರೇಕ್ಷಿಸಿ ಹೇಳಲಾಗುತ್ತಿದೆಯೆಂದು ಕೆಲವರಿಗೆ ಅನ್ನಿಸಬಹುದು. ಇಂದಿರಾ ಗಾಂಧಿ ದೇಶದ ಪ್ರಧಾನಿಯಾಗಲಿಲ್ಲವೇ, ಕಿರಣ್‌ ಬೇಡಿ ಪೊಲೀಸ್‌ ಅಧಿಕಾರಿಣಿಯಾಗಲಿಲ್ಲವೇ, ಎಷ್ಟೋ ಮಂದಿ ಜಿಲ್ಲಾಧಿಕಾರಿಯವರಿಲ್ಲವೆ ಅಂಥ ಅವರು ವಾದಿಸಬಹುದು. ಹಾಗಾದರೆ, ನಮ್ಮಲ್ಲಿ ಅಪ್ರಾಪ್ತ ವಯಸ್ಸಿನವರೂ ಸೇರಿದಂತೆ ಅನೇಕ ಬಾಲಕಿಯರ ಮೇಲಿನ ಅತ್ಯಾಚಾರಗಳೂ ನಡೆಯುತ್ತದೆಯಲ್ಲ, ಅದಕ್ಕೆ ಯಾರು ಕಾರಣರು ಎಂಬ ಪ್ರಶ್ನೆಗೆ ಉತ್ತರವಿಲ್ಲ. ರಕ್ಷಕನ ಸ್ಥಾನದಲ್ಲಿರಬೇಕಾದ ಮಂತ್ರಿಗಳೇ (ಜಮ್ಮು ಕಾಶ್ಮೀರದಲ್ಲಿ, ಕೇರಳದಲ್ಲಿ) ಅಪ್ರಾಪ್ತ ವಯಸ್ಸಿನ ಬಾಲಕಿಯರ ಅತ್ಯಾಚಾರದ ಪ್ರಕರಣದ ಆರೋಪಿಗಳಾಗಿರುವರಲ್ಲ ! ಕೆಲವು ವರ್ಷಗಳ ಹಿಂದೊಮ್ಮೆ ಕರಾವಳಿಯಲ್ಲಿ ಒಂಟಿ ಮಹಿಳೆಯರ ಸಾಲು-ಸಾಲು ಕೊಲೆ ಪ್ರಕರಣಗಳು ಸಂಭವಿಸಿದವು. ನಿರ್ಜನ ಹಾದಿಯಲ್ಲಿ ನಡೆಯುತ್ತಿದ್ದ ಕಾಲೇಜು, ಹುಡುಗಿಯರ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣಗಳು ದಾಖಲಾದವು. ಇದಕ್ಕೆಲ್ಲ ಯಾರು ಜವಾಬ್ದಾರರು ಎಂದರೆ ಯಾರಲ್ಲೂ ಉತ್ತರವಿರುವುದಿಲ್ಲ. ಬದಲಾಗಿ ನಿರ್ಜನ ಹಾದಿಯನ್ನು ಕ್ರಮಿಸಿ ಕಾಲೇಜಿಗೆ ಹೋಗಲೇಬೇಕಿದ್ದ ಕೆಲವು ತರುಣಿಯರನ್ನು ಮನೆಯವರು ಭಯದಿಂದ ಮನೆಯಲ್ಲಿಯೇ ಕೂರಿಸುತ್ತಾರೆ. ಆದರೆ, ನಿರ್ಜನ ಹಾದಿಯಾದರೂ ಹುಡುಗನಿಗೆ ಇಂಥ ಭಯವಿಲ್ಲವಲ್ಲ ! ಅದೇಕೆ?

ವಾಹನ ಚಾಲಕನು ಕಾಲ್‌ಸೆಂಟರ್‌ನ ಒಂಟಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದದ್ದು ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಭಾರೀ ಸುದ್ದಿಯಾಗಿತ್ತು. ಇದರಿಂದಾಗಿ ಎಷ್ಟೋ ಮಂದಿ ಮಹಿಳೆಯರು  ಕಾಲ್‌ಸೆಂಟರ್‌ ಉದ್ಯೋಗಕ್ಕೆ ಹೋಗುವುದನ್ನು ನಿಲ್ಲಿಸುವಂಥ ಪರಿಸ್ಥಿತಿ ಬಂತು. ಆ ವಾಹನದಲ್ಲಿದ್ದ ಪುರುಷನೂ ಒಂಟಿಯೇ, ಮಹಿಳೆಯೂ ಒಂಟಿಯೇ. ಆದರೆ ಕಷ್ಟ ಅನುಭವಿಸಬೇಕಾಗಿ ಬಂದದ್ದು , ಕೊಲೆಗೀಡಾದದ್ದು ಮಹಿಳೆ ಮಾತ್ರ! ನಿಜವಾದ ತಪ್ಪು ಕೊಲೆ ಮಾಡಿರುವವನಾದರೂ ಅದರ ಪ್ರಚೋದನೆಯನ್ನು ಸ್ವತಃ ಕೊಲೆಯಾದವಳ ಮೇಲೆ ಹೇರುವ ಪ್ರಯತ್ನವೂ ನಡೆಯಿತು. ರಾತ್ರಿ ಹೊತ್ತು ಮಾದಕ ಉಡುಪಿನಲ್ಲಿ ಕಾಣಿಸಿಕೊಳ್ಳುವ ಹುಡುಗಿಯರು ಹುಡುಗರ ಮನಸ್ಸನ್ನು ಕೆರಳಿಸುತ್ತಾರೆ ಎಂದು ಆರೋಪಿಸಲಾಯಿತು. ಮಾದಕ ಉಡುಪಿನ ಹುಡುಗಿಯನ್ನು ನೋಡಿದ ಮಾತ್ರಕ್ಕೆ ಪ್ರಪಂಚದ ಎಲ್ಲ ಗಂಡಸರು ಅತಿರೇಕದಿಂದ ವರ್ತಿಸುವರೆ? ಕೆರಳುವಿಕೆಯಾಗಲಿ, ಅರಳುವಿಕೆಯಾಗಲಿ ನೋಟಕನ ಮನಸ್ಸಿನಲ್ಲಿರುವುದೇ ಹೊರತು ನೋಡುವ ವಸ್ತುವಿನಲ್ಲಲ್ಲ. ಬೆರಳೆಣಿಕೆಯ ಗಂಡಸರು ಮಾತ್ರ ತಮ್ಮ ಮನದ ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತಾರೆ. ಹಾಗಾದರೆ ಅದು ಆಯಾಯ ಗಂಡಸರ ತಪ್ಪೇ ಹೊರತು ಆ ಬಗ್ಗೆ ಹುಡುಗಿಯರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಎಲ್ಲಿಯವರೆಗೆ ಸ್ತ್ರೀಯರು ಆತ್ಮರಕ್ಷಣೆ ಕಲೆಯನ್ನು ಕಲಿಯುವುದಿಲ್ಲವೋ ಅಲ್ಲಿಯವರೆಗೆ ಇಂಥ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ ಎಂದೇನೋ ಹೇಳಬಹುದು. ಅಲ್ಲೂ ರಕ್ಷಣೆಯ ಜವಾಬ್ದಾರಿಯನ್ನು ಹೊರಿಸುವುದು ಮಹಿಳೆಯರ ಮೇಲೆಯೇ ಹೊರತು, ಸಮಾಜದ ಮೇಲಲ್ಲ ! ಸಮಾಜವೂ ಆರೋಗ್ಯಕರ ದೃಷ್ಟಿಯನ್ನು ಬೆಳೆಸಿಕೊಳ್ಳುವುದು ಕೂಡ ಅತೀ ಅಗತ್ಯ ಎಂಬುದನ್ನು ಕೂಡ ಜೊತೆಜೊತೆಗೆಯೇ ಹೇಳಬೇಕಾಗಿದೆ.

ಮನೆಯಲ್ಲಿ ಒಂಟಿಯಾಗಿರುವಾಗ ಯಾರಾದರೂ ಬಂದರೆ ಬಾಗಿಲು ತೆರೆಯಬೇಡಿ, ನಿರ್ಜನ ಹಾದಿಯಲ್ಲಿ ಒಬ್ಬಳೇ ನಡೆದುಕೊಂಡು ಹೋಗಬೇಡಿ, ಒಬ್ಬಳೇ ಆಟೋರಿಕ್ಷಾ ಹತ್ತಬೇಡಿ ಎಂದೆಲ್ಲ ಮಹಿಳೆಯರಿಗೆ ಉಪದೇಶಿಸುವುದು ಸುಲಭ ಮತ್ತು ಹಾಗೆ ಉಪದೇಶಿಸುವುದರಿಂದ ಮಹಿಳೆಯರನ್ನು ಇನ್ನಷ್ಟು ಕುಬjರನ್ನಾಗಿಸುತ್ತೇವೆ. ಒಂಟಿ ಮಹಿಳೆಯಾಗಿರುವಾಗ ಬಾಗಿಲು ತೆರೆಯಬೇಡಿ ಎಂದರೆ, ಒಂಟಿಯಾಗಿರುವ  ತನಕವೂ ಅವಳನ್ನು ಸುತ್ತಮುತ್ತಲಿನ ಸಮಾಜದಿಂದ ಬೇರ್ಪಡಿಸಬೇಕಾಗುತ್ತದೆ. ಮನೆಯ ಬಾಗಿಲು ತೆರೆಯಬೇಕಾದರೆ ಗಂಡನೇ ಬರಬೇಕಾಗುತ್ತದೆ. ಆ ಮೂಲಕ ಮಹಿಳೆಯನ್ನು ಸ್ವಾವಲಂಬನೆಯಿಂದ, ಸ್ವಾಭಿಮಾನದಿಂದ ವಂಚಿತಳನ್ನಾಗಿಸಿದ ಹಾಗೆ ಆಗುತ್ತದೆ. ಅದಕ್ಕಿಂತ ಹೆಚ್ಚಾಗಿ ಒಂಟಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಬೇಡಿ ಎಂಬ ಉಪದೇಶ ಹೆಚ್ಚು ಪರಿಣಾಮಕಾರಿಯಾಗಿ ಪ್ರಸಾರವಾಗಬೇಕಾಗಿದೆ.

ಅಸಹಜವಾದ ಲೈಂಗಿಕಾಸಕ್ತಿ ಅತ್ಯಾಚಾರಕ್ಕೆ ಮೂಲ ಕಾರಣ. ಇದಿರಿನವಳು ಒಡಂಬಡದಿದ್ದರೂ ರಾಕ್ಷಸೀ ಪ್ರವೃತ್ತಿಯಲ್ಲಿ ಅವಳನ್ನು ಅನುಭವಿಸುವುದು ಮತ್ತು ಅವಳು ಯಾರಿಗಾದರೂ ಹೇಳಿ ಅಪಾಯವಾಗಬಹುದೆಂದು ಭಾವಿಸಿ ಅವಳನ್ನು ಕೊಲೆ ಮಾಡುವುದು ಪೇಟೆ ಪಟ್ಟಣಗಳಲ್ಲಿ ಹೆಚ್ಚಾಗುತ್ತಿದ್ದರೂ “ಮಹಿಳೆಯರು ಕೂಡ ಪುರುಷರ ಮೇಲೆ ದೌರ್ಜನ್ಯ ನಡೆಸುವುದಿಲ್ಲವೆ?’ ಎಂದು ತರ್ಕ ಮಂಡಿಸುವವರಿದ್ದಾರೆ. ತಾನು ಬಯಸಿದ ಪುರುಷನ ಮುಂದೆ ಒತ್ತಾಯದಿಂದ ಸುಖಾಪೇಕ್ಷೆಯನ್ನು ಮಂಡಿಸಿ ಒಲಿಸಿಕೊಳ್ಳುವ ಮಹಿಳೆಯರೂ ಇಲ್ಲದಿಲ್ಲ. ಆದರೆ, ಸ್ತ್ರೀಯರ ಮೇಲಿನ ದೌರ್ಜನ್ಯ ಪ್ರಕರಣಗಳು ನೂರು, ಸಾವಿರದ ಲೆಕ್ಕದಲ್ಲಿದ್ದರೆ ಸ್ತ್ರೀಯೇ ಪುರುಷನನ್ನು ಓಲೈಸಿದ ಪ್ರಕರಣಗಳು ಬೆರಳೆಣಿಕೆಯದ್ದಾಗಿರಬಹುದು. ಅಲ್ಲೂ ಪುರುಷನ ದೌರ್ಬಲ್ಯವೇ ಕಾರಣ ಹೊರತು ಆತ ಮಾನಸಿಕವಾಗಿ ದೃಢತೆಯಿಂದ ಇದ್ದರೆ ಯಾವುದೇ ಸ್ತ್ರೀಯ ವಶವಾಗುವುದು ಅಸಾಧ್ಯ. ಆದರೆ ಸ್ತ್ರೀಯರ ಮೇಲಿನ ಅತ್ಯಾಚಾರ ಪ್ರಕರಣಗಳು ಅಕ್ಷರಶಃ ಬಲಾತ್ಕಾರವೇ ಆಗಿದೆ. “ಅತ್ಯಾಚಾರ’ವೆಂದು ಸುಳ್ಳು ಹೇಳಿ ಪುರುಷನ ಮೇಲೆ ದೂರು ದಾಖಲಿಸುವ ಪ್ರಕರಣಗಳು ನಡೆಯದು ಎಂದಲ್ಲ, ಆದರದು ಸಾವಿರಕ್ಕೆ ಒಂದು-ಎರಡು ಮಾತ್ರವಾಗಿರಬಹುದು.

ಕರಾಟೆಯಂಥ ಕಲೆ ಮಹಿಳೆಗೆ ಹೆಚ್ಚು ಆತ್ಮವಿಶ್ವಾಸವನ್ನು ಮೂಡಿಸುತ್ತದೇನೋ ನಿಜ, ಅದರ ಜೊತೆಗೆ ಒಂಟಿ ಮಹಿಳೆಗೆ ನಿರ್ಭಯ ವಾತಾವರಣವನ್ನು ಕಲ್ಪಿಸುವ ಹೊಣೆಗಾರಿಕೆ ಸಮಾಜದ ಮೇಲಿದೆ. ಅದು ಬಿಟ್ಟು , ನೀನು ಹೆಣ್ಣು , ನಿನಗೆ ರಿಸ್ಕಿನ ಉದ್ಯೋಗ ಬೇಡ, ನೀನು ಒಂಟಿಯಾಗಿರಬೇಡ ಎಂದೆಲ್ಲ ಬೋಧಿಸಿದರೆ ಸಮಾಜವನ್ನು ಶತಮಾನದಷ್ಟು ಹಿಂದಕ್ಕೆ ಒಯ್ದ ಹಾಗೆ ಆಗುತ್ತದೆ.

ಸುಮನಸಾ ರಾವ್‌

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.