ಸ್ಪರ್ಧೆಯ ನಾಟಕಗಳ ಅವಲೋಕನ


Team Udayavani, Dec 15, 2017, 3:08 PM IST

15-31.jpg

ನಾಟಕ 8 ಅಣ್ಣಾವಾಲಿ 
ರಾಮಾಯಣದ ವಾಲಿ-ಸುಗ್ರೀವರ ಕಥಾನಕವನ್ನು ಹೊಸ ದೃಷ್ಟಿಕೋನದಿಂದ ಗುರುರಾಜ್‌ ಮಾರ್ಪಳ್ಳಿಯವರು ಚಿತ್ರಿಸಿರುವ “ಅಣ್ಣಾವಾಲಿ’ ನಾಟಕವನ್ನು ಪ್ರಸ್ತುತಪಡಿಸಿದ್ದು ಮೈಸೂರಿನ ಜೆಪಿಐಇಆರ್‌ ತಂಡ, ನಿರ್ದೇಶನ ಮೈಮ್‌ ರಮೇಶ್‌. ಈ ನಾಟಕದ ಕಟ್ಟೋಣವನ್ನು ಸಡಿಲುಗೊಳಿಸಿದ ಎರಡು ಸಂಗತಿಗಳೆಂದರೆ ಶಿಥಿಲ ಸಂಭಾಷಣೆ ಮತ್ತು ನಾಟಕದ ಓಟಕ್ಕೆ ಸಹಕಾರಿಯಾಗದ ಹಿನ್ನೆಲೆ ಸಂಗೀತ. ಮುಖ್ಯ ಪಾತ್ರಧಾರಿಗಳೇ ಸಂಭಾಷಣೆಯನ್ನು ಪಾಠದಂತೆ ಒಪ್ಪಿಸಿದಾಗ ಭಾವಾಭಿನಯಕ್ಕೆ ಪೂರಕವಾಗಬಲ್ಲ ನಾಟಕೀಯ ಸೊಗಸು ಕಾಣೆಯಾಗುತ್ತದೆ. ಹಿಮ್ಮೇಳ/ ಸಂಗೀತ ಸ್ಪರ್ಧೆಯ ಮಟ್ಟದಲ್ಲಿ ಇರಲಿಲ್ಲ. ಆದರೂ, ತಾರೆಯಾಗಿ ಅಪೂರ್ವ, ವಾಲಿಯಾಗಿ ಚೇತನ್‌ ರಾವ್‌, ಸುಗ್ರೀವನಾಗಿ ಎಚ್‌. ಎಂ. ಶಿವು ಮತ್ತು ಕಪಿಗಳಾಗಿ ಅನಿಲ್‌, ಸಂತೋಷ್‌, ಸುನಿಲ್, ಪ್ರಕಾಶ್‌, ಜನಾರ್ದನ್‌ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರೆ. ವಿಭಿನ್ನ ಸಂದರ್ಭಗಳಲ್ಲಿ ಐದು ಕಪಿಗಳ ಗುಂಪನ್ನು ನಿರ್ದೇಶಕರು ಬಳಸಿಕೊಂಡ ರೀತಿ ಸೃಜನಶೀಲವಾದದ್ದು. 

ನಾಟಕ 9 ಸಂದೇಹ ಸಾಮ್ರಾಜ್ಯ
“ಕೆ.ವಿ. ಸುಬ್ಬಣ್ಣ ರಂಗಸಮೂಹ’ ಪ್ರಸ್ತುತಪಡಿಸಿದ, ಮಂಜುನಾಥ ಎಲ್‌. ಬಡಿಗೇರ್‌ ನಿರ್ದೇಶಿಸಿದ ನಾಟಕ “ಸಂದೇಹ ಸಾಮ್ರಾಜ್ಯ’ವು 1944 ರಷ್ಟು ಹಿಂದೆ ವೈ.ವಿ. ಸವಣೂರು ವಾಮನರಾವ್‌ ಮಾಸ್ತರ್‌ ರಚಿಸಿದ್ದು. ಒಂದು ನಾಟಕವು 73 ವರ್ಷಗಳ ಅನಂತರವೂ ಪ್ರಸ್ತುತ ಆಗಿರುವುದರಲ್ಲಿ ಆ ನಾಟಕದ ವಸ್ತು ವಿನಷ್ಟೇ, ರಚನೆ, ನಿರ್ದೇಶನ, ಪಾತ್ರಧಾರಿಗಳ ನಿರ್ವಹಣೆ ಮತ್ತು ಸಮಾಜದ ವ್ಯವಸ್ಥೆಯ ಕೊಡುಗೆ ಇದ್ದೇ ಇರುತ್ತದೆ. 

ಹೆಸರೇ ಸೂಚಿಸುವಂತೆ ಈ ನಾಟಕ ಎರಡು ಜೋಡಿಗಳ ನಡುವೆ ಹುಟ್ಟಿಕೊಳ್ಳುವ ಅಪನಂಬಿಕೆ ಸಂಬಂಧವನ್ನೇ ಕೆಡಿಸುವ ಸ್ಥಿತಿಗೆ ಬೆಳೆವ ಕಥೆ. ಹಳೆಯ ಕಥೆ. ಸನ್ನಿವೇಶಗಳೂ ಹಳೆಯ ಕಾಲದ್ದೇ. ಬಳಸಿಕೊಂಡ ಚಲನಚಿತ್ರ ಗೀತೆಗಳೂ ಹಳೆಯವೇ. ಚುರುಕಾದ ಸಂಭಾಷಣೆ, ಸಂಭಾಷಣೆಯಲ್ಲಿನ ನಿರಂತರತೆ, ಮಾತು ಒಪ್ಪಿಸುವುದರಲ್ಲಿ ಪಾತ್ರಧಾರಿಗಳ ತನ್ಮಯತೆ, ಬೆಳಕು ಮತ್ತು ಸಂಗೀತದ ಆಹ್ಲಾದಕರ ಬಳಕೆ. ಸಂಪೂರ್ಣ ಪ್ರೇಕ್ಷಕಗಣವೇ ನಾಟಕದ ಹಾಸ್ಯದಲ್ಲಿ ತೇಲಿಹೋಯಿತೆಂದರೆ ತಪ್ಪಾಗದು. ಇದೊಂದು ತರಹ ಸಂಘಟಿತ ಸಾರ್ಥಕತೆ. ದೃಶ್ಯಗಳ ನಡುವೆ ರಂಗಪರಿಕರಗಳ ಬದಲಾವಣೆಗೆ ಮೇಳವನ್ನು ಬಳಸಿಕೊಂಡದ್ದು ಒಳ್ಳೆಯ ಪ್ರಯೋಗ. 

ಅತ್ಯಂತ ಸಾಮಾನ್ಯ ಎನ್ನಿಸುವ ಕಥೆಯನ್ನು ಉತ್ತಮ ನಾಟಕವನ್ನಾಗಿಸು ವಲ್ಲಿ ನಿರ್ದೇಶಕ ಮಂಜುನಾಥ್‌ ಎಲ್‌. ಬಡಿಗೇರ್‌ ಸಾರ್ಥಕ ಕೆಲಸವನ್ನು ಮಾಡಿದ್ದಾರೆ. ಎರಡು ಜೋಡಿಗಳಾಗಿ ಶತತಾರಾ (ಪದ್ಮಶ್ರೀ), ಆನಂದ ರಾಯರು (ಪ್ರಸನ್ನ ಎಚ್‌.ಎಸ್‌.), ವಿಜಯ ರಾಯರು (ಯೇಸು ಪ್ರಕಾಶ್‌) ಮತ್ತು ಪೂರ್ಣಿಮಾ ದೇವಿ (ಶೈಲಜಾ ಪ್ರಕಾಶ್‌) ಲೀಲಾಜಾಲವಾಗಿ ನಟಿಸಿದ್ದಾರೆ. ಇವರಷ್ಟೇ ಸಮರ್ಥವಾದ ಸಹಭಾಗಿಗಳು ಸಾಧು (ಗಣಪತಿ ಹೆಗಡೆ), ವೃಶ್ಚಿಕ (ಗುರುಮೂರ್ತಿ), ನಂದನರಾಯರು (ಶ್ರೀಪಾದ ಭಾಗವತ್‌) ಮತ್ತು ಪ್ರತಿಪದೆ (ಭಾಗೀರಥಿ).

ನಾಟಕ 10 ಮಲಾಲಾ ಅಲ್ಲಾ
ಬೊಳುವಾರು ಮಹಮದ್‌ ಕುಂಞಿ ಅವರ ನಾಟಕ “ಮಲಾಲಾ ಅಲ್ಲಾ’ವನ್ನು ನಿರ್ದೇಶಿಸಿದ್ದು ಬಾಸುಮ ಕೊಡಗು ಮತ್ತು ಪ್ರಸ್ತುತಪಡಿಸಿದ್ದು ಕಟಪಾಡಿಯ “ವನಸುಮ ವೇದಿಕೆ’. ನಾಟಕದ ಎಲ್ಲ ಸನ್ನಿವೇಶಗಳು ಒಂದೇ ರಂಗಸಜ್ಜಿಕೆಯಲ್ಲಿ ನಡೆಯುವುದರಿಂದ, ನಾಟಕದ ಕಥೆಯನ್ನೆಲ್ಲ ಮಾತು ಗಳೇ ಹೇಳಬೇಕಾಗುತ್ತವೆ. ಹಾಗೆ ಸ್ವಲ್ಪ ಮಾತು ಜಾಸ್ತಿಯಾಯಿತು ಎನ್ನಿಸಲೂ ಬಹುದು. ಬೊಳುವಾರು ಸಹಜವಾದ ಹಾಸ್ಯ ಮತ್ತು ವ್ಯಂಗ್ಯಭರಿತ ಮಾತಿನಿಂದಲೇ ಕಟ್ಟಿದ ಕಥೆಯಿದು. ನಾಟಕದ ಮುಖ್ಯಪಾತ್ರಗಳಲ್ಲಿ ಹರಿಪ್ರಸಾದ್‌, ರಮ್ಯಾ ಕಾಮತ್‌ ಮತ್ತು ಪೃಥ್ವಿ ನಂದನ್‌ ಚೆನ್ನಾಗಿಯೇ ನಟಿಸಿದ್ದಾರೆ. ನಿರರ್ಗಳವಾದ ಮಾತುಗಾರಿಕೆ. ಎಲ್ಲೋ ಸ್ವಲ್ಪಭಾಗ ಏರಿಳಿತವಿಲ್ಲದ ಮಾತುಗಾರಿಕೆ, ಒಂದು ಭಾಗದಲ್ಲಿ ಸ್ವಲ್ಪ ಕೊಂಡಿ ತಪ್ಪಿದಂತೆ ಅನ್ನಿಸಿತು. ಪ್ರಭಾತ್‌, ಜಯಸ್‌, ಸುರೇಶ್‌ ಮತ್ತು ಭಾಸ್ಕರ್‌ ತಾಲಿಬಾನ್‌, ಸೇನೆ, ಜಾಮುಪಂಗಳ ಸದಸ್ಯರಾಗಿ ಲೀಲಾಜಾಲವಾಗಿ ನಟಿಸಿದ್ದಾರೆ. ನಿರ್ದೇಶಕರಾಗಿ ಬಾಸುಮ ಕೆಲಸ ಅಚ್ಚುಕಟ್ಟು.

ನಾಟಕ 11 ರಥ ಯಾತ್ರೆ
ಒಂದು ಅದ್ಭುತವಾದ ಕಥೆ ವಾಚಾಳಿತನದಿಂದಾಗಿ ಒಂದು ಸಾಮಾನ್ಯ ನಾಟಕವಾಗಿಬಿಡುವ ದುರಂತವಿದು. ಗುಂಪುಗಳು ರಂಗದ ಮೇಲೆ ಸಂತೆಯಂತೆ ವ್ಯವಹರಿಸುವುದು ರಂಗ ಶಿಸ್ತಿಗೆ ತಕ್ಕುದಾದ ನಡವಳಿಕೆಯಲ್ಲ. ರಂಗದಲ್ಲಿ ಚಲನೆ ಕೂಡ ಒಂದು ರೀತಿಯ ಚದುರಂಗದ ಆಟದ ಹಾಗೆ. ಹೇಗೆ ಚಲಿಸಿದರೂ ಒಂದು ವ್ಯವಸ್ಥೆ ಮತ್ತು ಶಿಸ್ತು ಇರಲೇಬೇಕು. ಹಾಗೆಯೇ ರಂಗದ ಮೇಲೆ ಗುಂಪಿನ ಕುಣಿತ ಕೂಡ ಬಾಲಿಶವಾಗಿತ್ತು. ಒಂದು ನಾಟಕದಲ್ಲಿ ಇಷ್ಟೊಂದು ಭಜನೆಯ ಅಗತ್ಯವಿದ್ದಿರಲಿಕ್ಕಿಲ್ಲ. 

ನಿರೂಪಕನಾಗಿ ರಾಜಗೋಪಾಲ್‌ ಶೇಟ್‌ ಅವರದು ಗಮನಾರ್ಹ ನಿರ್ವಹಣೆ. ಅಷ್ಟೊಂದು ಸಂಭಾಷಣೆಯನ್ನು ನೆನಪಿರಿಸಿಕೊಂಡು, ಕೊಂಡಿ ತಪ್ಪದ ಹಾಗೆ ನಿರ್ವಹಣೆ ಕಷ್ಟವೇ. ಅದನ್ನವರು ಚೆನ್ನಾಗಿ ನಿಭಾಯಿಸಿದ್ದಾರೆ. ಆದರೆ ಈ ಮಾತುಗಳಲ್ಲಿ ಅರ್ಧಾಂಶ ತೆಗೆದುಹಾಕಿದ್ದರೂ ನಾಟಕ ಓಟಕ್ಕೆ ಯಾವುದೇ ನಷ್ಟವಾಗುತ್ತಿರಲಿಲ್ಲ. ಉಳಿದ ಪಾತ್ರಗಳಲ್ಲಿ ಬಂಗಾರ ಸೆಟ್ಟಿ (ಯೋಗೀಶ್‌ ಕೊಳಲಗಿರಿ), ಮಂತ್ರಿ (ಅಕ್ಷತ್‌ ಅಮೀನ್‌), ದಲಿತ ನಾಯಕ (ಚಂದ್ರಕಾಂತ ಕುಂದರ್‌), ಕವಿ (ನೂತನ್‌ ಕುಮಾರ್‌), ಬ್ರಾಹ್ಮಣ (ಪ್ರವೀಣ್‌ ಚಂದ್ರ ತೋನ್ಸೆ) ತೃಪ್ತಿಕರ ನಿರ್ವಹಣೆ. 

ನಾಟಕ 12 ಗಾಂಧಿಗೆ ಸಾವಿಲ್ಲ
ಗಾಂಧೀಜಿಯವರ ಸಿದ್ಧಾಂತಗಳಿಗೆ ಸಾವಿಲ್ಲ ವೆಂಬ ಸಂದೇಶದ “ಗಾಂಧಿಗೆ ಸಾವಿಲ್ಲ’ ಎಂಬ ಹೆಸರಿನ ಈ ನಾಟಕದ ಕತೃì ಅಸ್ಕರ್‌ ವಜಾಹತ್‌. ಕನ್ನಡಕ್ಕೆ ಅನುವಾದಿಸಿದವರು ಹಸನ್‌ ನಯೀಂ ಸುರಕೋಡ; “ಲಾವಣ್ಯ ಬೈಂದೂರು’ ಪ್ರಸ್ತುತಪಡಿ ಸಿದ ನಾಟಕದ ನಿರ್ದೇಶನ ಗಿರೀಶ್‌ ಬೈಂದೂರು.

ನಾಥೂರಾಮ್‌ ಗೋಡ್ಸೆಯ ಪ್ರಯತ್ನಕ್ಕೆ ಹೊರತಾಗಿಯೂ ಗಾಂಧೀಜಿ ಬದುಕುಳಿದಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆಗೆ ಉತ್ತರ ಕಟ್ಟುವ ಕಲ್ಪನೆ ಇಲ್ಲಿದೆ. ಲೇಖಕನ ಯಶಸ್ಸಿನ ಕೇಂದ್ರದಂತಿ ರುವ ಗಾಂಧಿ-ಗೋಡ್ಸೆ ನಡುವಣ ಸಂವಾದವನ್ನು ರಂಗದ ಮೇಲೆ ಅಷ್ಟೇ ಪರಿಣಾಮಕಾರಿಯಾಗಿ ತರುವುದು ಸುಲಭವಲ್ಲ. ಅಲ್ಲಿ ಅತ್ಯಂತ ಸೂಕ್ಷ್ಮ ವಾದ ಕೆಲವು ಸಂಗತಿಗಳಂತೂ ನಿರ್ದೇಶಕರಿಗೂ ನಟರಿಗೂ ಅಗ್ನಿಪರೀಕ್ಷೆಯಾಗಿಬಿಡುತ್ತವೆ. ನಿರ್ದೇಶಕರೂ ಪಾತ್ರಧಾರಿಗಳೂ ನಾಟಕದ ನಿರ್ವಹಣೆಯನ್ನು ಗಂಭೀರವಾಗಿ ಸ್ವೀಕರಿಸಿದ ಬಹಳ ಅಪರೂಪದ ಪ್ರಯೋಗವಿದು.

ಗಾಂಧೀಜಿಯಾಗಿ ಗಣೇಶ್‌ ಕಾರಂತ್‌ ಮತ್ತು ಗೋಡ್ಸೆಯಾಗಿ ಜಿ. ಸುಬ್ರಹ್ಮಣ್ಯ ಇಬ್ಬರದ್ದೂ ಒಳ್ಳೆಯ ಅಭಿನಯ. ಭಾವೋದ್ವೇಗವಿಲ್ಲದ ಸಂಯಮಭರಿತ ಪಾತ್ರ ಗಾಂಧಿಯದಾದರೆ, ಭಾವೋದ್ವೇಗದ, ಆವೇಶದ ಪಾತ್ರ ಗೋಡ್ಸೆಯದು. ಗಾಂಧೀಜಿಯವರ ವ್ಯಕ್ತಿತ್ವದ ಅಪರಿಚಿತ ಆಯಾಮ ಗಳನ್ನು ಬಿಚ್ಚಿಡುತ್ತಾ ಹೋಗುವ ಪ್ಯಾರೇಲಾಲ್‌ (ಗಣೇಶ್‌ ಪರಮಾನಂದ್‌), ಭಾವನ್‌ ದಾಸ್‌ (ಗಣೇಶ್‌ ಟೈಲರ್‌), ನಿರ್ಮಲಾ ದೇವಿ (ಚೈತ್ರಾ), ಸುಷ್ಮಾ (ಕಾವ್ಯಾ ಮಯ್ಯ) ಮೊದಲಾದವರ ನಟನೆಯೂ ಗಮನಾರ್ಹವಾಗಿತ್ತು. ಗಾಂಧಿಗೆ ಸಂಬಂಧಿಸಿದ ಎಲ್ಲ ಪಾತ್ರಗಳು ಖಾದಿಯನ್ನೇ ಧರಿಸಿದ್ದು ಉದ್ದೇಶಪೂರ್ವಕವಾಗಿದ್ದರೆ, ಅಭಿನಂದನೀಯ. 

ನಾಟಕ 13 ಬೋನಿಗೆ ಬಿದ್ದವರು
“ಅನುಕರಣ ಮೈಸೂರು’ ಪ್ರಸ್ತುತಪಡಿಸಿದ “ಬೋನಿಗೆ ಬಿದ್ದವರು’ ನಾಟಕದ ನಿರ್ದೇಶಕರು ಜೀವನ್‌ ಕುಮಾರ್‌ ಹೆಗ್ಗೊàಡು. ವ್ಯವಸ್ಥೆಯನ್ನು ಲೇವಡಿ ಮಾಡುವ ಇದೊಂದು ಸಾಂಕೇತಿಕ ನಾಟಕ. ಯತೀಶ್‌ ಕೊಳ್ಳೇಗಾಲ ರಚಿಸಿದ್ದೆಂದು ಹೇಳಲಾದ ಈ ನಾಟಕ ವಾಸ್ತವವಾಗಿ ಟಿ. ಕೆ. ದಯಾನಂದರ ಇದೇ ಹೆಸರಿನ ಸಣ್ಣ ಕಥೆಯನ್ನು ಆಧರಿಸಿದ್ದು. ಆದರೆ ಯಾರೊಬ್ಬರೂ ದಯಾನಂದರ ಹೆಸರು ಹೇಳಲಿಲ್ಲ. ನಾಟಕದ ಕಥೆ ಶಕ್ತವಾದದ್ದು. ಆದರೆ ವ್ಯಂಗ್ಯದ ಮೂರ್ತರೂಪದಂತಿದ್ದ ಮಾಂಕಾಳಿ ಮತ್ತು ಪುಗಳೆಂದಿ ಪಾತ್ರಪೋಷಣೆ ಕಥೆಯಲ್ಲಿದ್ದಂತೆ ಸಾಗಲಿಲ್ಲ. ಆದರೂ ಈ ಮಿತಿಯೊಳಗೆ ಮಾಂಕಾಳಿ (ಸಂತೋಷ್‌), ಪುಗಳೆಂದಿ (ರೇಣುಕಾ ಪ್ರಸಾದ್‌), ಇಲಿಬ್ರಾಂಡ್‌ ರಾಜಶೇಖರಯ್ಯ (ನಾಗೇಂದ್ರ) ಮತ್ತು ಟಿವಿ ರಿಪೋರ್ಟರ್‌ಗಳಾದ ಬಿಂದು, ರವಿ, ಮಾದೇಶ್‌ ಲವಲವಿಕೆಯಿಂದ ನಟಿಸಿ¨ªಾರೆ. ಜೀವನ್‌ ಕುಮಾರ್‌ ನಿರ್ದೇಶನ ಚೆನ್ನಾಗಿತ್ತಾದರೂ ಅವರು ಮೂಲಕಥೆಯನ್ನು ಓದಿಕೊಳ್ಳುವ ಅಗತ್ಯವಿದೆ. ನಿರ್ದೇಶಕರು ಎರಡು ವಿಷಯಗಳನ್ನು ಗಮನಿಸಲೇಬೇಕು: ಒಂದು, ವೇದಿಕೆಯ ಮೇಲೆ ತರುವ ಗುಂಪುಗಳು ಅಶಿಸ್ತಿನ ಮಾನಸಿಕ ವ್ಯವಸ್ಥೆಯವರಾದರೂ, ವೇದಿಕೆಯಲ್ಲಿ ರಂಗ ಶಿಸ್ತು ಅನಿವಾರ್ಯ. ಎರಡು, ನಾಟಕ ಸ್ಪರ್ಧೆಯಲ್ಲಿ ಒಂದು ನಿರ್ದಿಷ್ಟ ಅವಧಿಯೂ ಮಾನದಂಡ ವಾಗಿರುವಾಗ, ಕನಿಷ್ಠ ಸಮಯಕ್ಕಿಂತ ಮೊದಲೇ ನಾಟಕ ಮುಗಿಸಿದ್ದು ತಪ್ಪು. 

ನಾಟಕ 14 ವೃತ್ತದ ವೃತ್ತಾಂತ
“ಭೂಮಿಕಾ ಹಾರಾಡಿ’ ಪ್ರಸ್ತುತ ಪಡಿಸಿದ ಈ ನಾಟಕದ ರಚನೆ ಎಚ್‌. ಎಸ್‌. ವೆಂಕಟೇಶ್‌ ಮೂರ್ತಿ, ನಿರ್ದೇಶನ ಬಿ. ಎಸ್‌. ರಾಮ್‌ ಶೆಟ್ಟಿ.  ಬೆಳಕು ಮತ್ತು ರಂಗಸಂಚಲನೆಯ ಉತ್ಕೃಷ್ಟ ಮಾದರಿಯಂತಿದ್ದ ಈ ನಾಟಕ ಅಕ್ಷರಶಃ ಒಂದು ದೃಶ್ಯಕಾವ್ಯವೇ ಆಗಿತ್ತು.

ಕಥೆ ಮತ್ತು ನಾಟಕದ ಮೊದಲರ್ಧ ಒಂದು ಶಾಲಾಮಕ್ಕಳ ಮಟ್ಟದ ನಾಟಕ ಆಗಿತ್ತಷ್ಟೇ. ಥಟ್ಟನೆ ಪ್ರವೇಶಿಸುವ ನ್ಯಾಯಾಧೀಶ (ರವಿ ಪೇತ್ರಿ) ನಾಟಕವನ್ನು ಅನೂಹ್ಯ ಎತ್ತರಕ್ಕೆ ಏರಿಸಿಬಿಡುತ್ತಾರೆ. ಅದೂ ಅವರ ಕಾಲಿಗೆ ತೊಡರುವ ಕೋಲು, ಅಲ್ಲಿಂದ ಮುಂದೆ ಹಿನ್ನೆಲೆಯಲ್ಲಿ “ವೈಷ್ಣವ ಜನತೋ…’ ವಾದನ, ವಿಕ್ಷಿಪ್ತ ನಟನೆ ಇವೆಲ್ಲ ನಾಟಕದ ಕುರಿತ ಒಟ್ಟು ದೃಷ್ಟಿಕೋನವನ್ನೇ ಬದಲಿಸಿಬಿಡುತ್ತವೆ. ವಲ್ಲಿಯಾಗಿ ಶ್ವೇತಾ ಮಣಿಪಾಲ, ಸೇನಾಧಿಪತಿಯಾಗಿ ಸುಕೇಶ್‌ ಶೆಟ್ಟಿ, ಮಲ್ಲನಾಗಿ ವಿಕ್ರಮ್‌ ಹಾರಾಡಿ ಮತ್ತು  ರಾಣಿಯಾಗಿ ಶರಣ್ಯಾ ಇವರದೆಲ್ಲ ಚೊಕ್ಕವಾದ ಪಾತ್ರ ನಿರ್ವಹಣೆ. ಮೇಳ ಮತ್ತು ಸೈನಿಕರ ನಿರ್ವಹಣೆ ಈ ನಾಟಕ ಸ್ಪರ್ಧೆಯಲ್ಲೇ ಶಿಸ್ತಿನ ಪ್ರಯೋಗ. ಪುಟ್ಟ ಮಗು ದೃಶ್ಯಾಳದ್ದೂ ಲವಲವಿಕೆಯ ಉಪಸ್ಥಿತಿ. ಸಂಕೇತಗಳು ಅರ್ಥ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ವಿಕ್ಷಿಪ್ತ ಮುದುಕನನ್ನು ನಿಜ ಅರ್ಥದ ನ್ಯಾಯಾಧೀಶನಾಗಿಸುವ ಗಾಂಧೀಜಿಯ ಕೋಲಂತೂ ಒಂದು ಮೈನವಿರೇಳಿಸುವ ಪ್ರತಿಮೆ. ಈ ನಾಟಕದ ಕೊನೆಯಲ್ಲಿ ನೆನಪಿಸಿಕೊಳ್ಳಬಹುದಾದ ಇತರ ಧನಾತ್ಮಕ ಸಂಗತಿಗಳೆಂದರೆ, ಸಂಗೀತ, ಪಾತ್ರಗಳ ವಸ್ತ್ರಾಲಂಕಾರ, ರಂಗ ಪರಿಕರ ಮತ್ತು ರಾಮ ಶೆಟ್ಟರ ನಿರ್ದೇಶನ.  

ಕೊನೆಯ ಮಾತು
ನಾಟಕ ಪ್ರದರ್ಶನಗಳ ಅವಲೋಕನ ನೀಡಿದ ಒಂದು ಸಮಾಧಾನ ಕರ ಅಭಿಪ್ರಾಯವೆಂದರೆ, ಈ ತಂಡಗಳು ರಂಗ ಪ್ರಯೋಗವೊಂದು ರಂಜನೆಯ ಆಚೆಗೆ, ಮಾತುಗಾರಿಕೆಯ ಆಚೆಗೆ ಮತ್ತೇನನ್ನೋ ಹೇಳಲೇ ಬೇಕಾಗುತ್ತದೆ ಎನ್ನುವುದನ್ನು ತಿಳಿದಿದ್ದವು. ಅಸಂಗತ ನಾಟಕಗಳನ್ನು ನಿರ್ವಹಿ ಸು ವಾಗ ರಂಗದ ಮೇಲಿನ ಶಿಸ್ತು, ಕರಾರುವಕ್ಕಾದ ಸಂಭಾಷಣೆ ಮತ್ತು ನೆರಳು-ಬೆಳಕಿನ ವಿನ್ಯಾಸಗಳ ಅಗತ್ಯವನ್ನೂ ಅರಿತಿದ್ದವು. ಆದರೆ ಶಬ್ದಗತಿ, ಭಂಗಿ, ಮುದ್ರೆ, ದೃಶ್ಯಬಂಧಗಳನ್ನು ಸಂಗೀತಬಂಧದ ಮೂಲಕ ನಿಯಂತ್ರಿ ಸುವ ಸಾಧ್ಯತೆಯನ್ನು ಬಹಳ ಕಡಿಮೆ ನಿರ್ದೇಶಕರು ಪ್ರಯತ್ನಿಸಿದರು.

ಅದೇನೇ ಇರಲಿ, 37 ವರ್ಷಗಳಿಂದ ಆದರ್ಶಪ್ರಾಯವಾದ ಮಾರ್ಗವೊಂದರಲ್ಲಿ ನಡೆದು ಬಂದ ರಂಗಭೂಮಿಯ ಪರಂಪರೆಯ ಕಿರೀಟಕ್ಕೆ ಮೂವತ್ತೆಂಟನೆಯ ಗರಿ ಎನ್ನುವಂತಹದು ಐತಿಹಾಸಿಕ ಮಹತ್ವದ್ದು ಮಾತ್ರವಲ್ಲ, ಸದಭಿರುಚಿಯ ನಿರಂತರತೆಯ ಸೂಚನೆಯೂ ಹೌದು. ಆರೋಗ್ಯಕಾರೀ ಭರವಸೆಯಿಂದ ಮುಂದಿನ ವರ್ಷಗಳನ್ನು ನಿರೀಕ್ಷಿಸಬಹುದೆನ್ನುವುದರ ಸಂಕೇತವೂ ಹೌದು.

ಬೆಳಗೋಡು ರಮೇಶ ಭಟ್‌

ಟಾಪ್ ನ್ಯೂಸ್

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.