ಬದುಕು ಅರಳಿಸಿದ ಚೆಂಡು ಹೂವು
Team Udayavani, Dec 14, 2020, 8:13 PM IST
ಕೃಷಿ ಎಂದರೆ ಮೂಗು ಮುರಿಯುವ ಈ ದಿನಗಳಲ್ಲಿ ಚೆಂಡು ಹೂಗಳ “ಪುಷ್ಪಕೃಷಿ’ ಮಾಡಿರುವ ಯುವಕನೊಬ್ಬ ಅದರಿಂದ ಲಕ್ಷ ಲಕ್ಷ ಆದಾಯ ಗಳಿಸಿ ಮಾದರಿಯಾಗಿದ್ದಾನೆ. ಗಡಿ ಜಿಲ್ಲೆ ಬೀದರ್ನ ಆ ಯುವ ರೈತ ಅಮರ್ ಸಿಂಧೆಯ ಯಶೋಗಾಥೆ ಇದು.
ಬೀದರ್ ಜಿಲ್ಲೆಯಲ್ಲಿ ಹೂವಿನಕೃಷಿ ವಿರಳ. ಅಲ್ಲಿ ಏನಿದ್ದರೂ ತೊಗರಿ ಬೆಳೆಗೆ ಹೆಚ್ಚಿನ ಪ್ರಾಶಸ್ತ್ಯ ತೊಗರಿಯ ಜೊತೆಗೆ ಉದ್ದು, ಹೆಸರು, ಹತ್ತಿ, ಜೋಳ,ಕಡಲೆ, ಸೋಯಾಬಿನ್ ಬೆಳೆಗಳನ್ನೂ ಸಾಮಾನ್ಯವಾಗಿ ಬೆಳೆಯುತ್ತಾರೆ. ಇಂಥ ಪ್ರದೇಶದಲ್ಲಿ ಕಳೆದ 3 ವರ್ಷಗಳಿಂದ ಅಲ್ಪಾವಧಿ ಪುಷ್ಪಕೃಷಿಗೆ ತೊಡಗಿರುವ ಅಮರ್ ಸಿಂಧೆ, ಅದರಿಂದ ಹೆಚ್ಚು ಆದಾಯ ಗಳಿಸುವ
ಮೂಲಕ ಸುತ್ತಮುತ್ತಲ ರೈತರ ಗಮನ ಸೆಳೆದಿದ್ದಾರೆ. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಅಮ್ದಾಬಾದ್ ಗ್ರಾಮದ ಅಮರ್, ಐಟಿಐವರೆಗೆ ಓದಿದ್ದಾರೆ.ಕುಟುಂಬದ ಸಮಸ್ಯೆಯಿಂದ ಈತನಿಗೆ ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ, “ಚಿಕ್ಕಂದಿನಿಂದಲೂ ನನಗೆ ಕೃಷಿಯಲ್ಲಿ ಹೆಚ್ಚು ಆಸಕ್ತಿ ಇತ್ತು. ಕಾಲೇಜು ಮುಗಿದ ನಂತರ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದೆ. ಕೊಳವೆ ಬಾವಿ ಕೊರೆಸಿದ ಮೇಲೆ ನೀರಾವರಿ ವ್ಯವಸ್ಥೆ ಆಯ್ತು. ಈವೇಳೆಗೆ ನನಗೂ ಓದಿನಲ್ಲಿ ಹೆಚ್ಚಿನ ಆಸಕ್ತಿ ಉಳಿಯಲಿಲ್ಲ.ಕೃಷಿ ಕ್ಷೇತ್ರದಲ್ಲಿಯೇ ಏನಾದರೂ ಸಾಧಿಸಬೇಕು. ತೊ ರಿಯ ಜೊತೆಗೆ ಬೇರೆ ಏನಾದರೂ ಹೊಸ ಬೆಳೆ ತೆಗೆದು ಲಾಭ ಮಾಡಬೇಕು ಅನ್ನಿಸಿತು’ ಎನ್ನುತ್ತಾರೆ ಸಿಂಧೆ.
ಪುಷ್ಪಕೃಷಿ ಹೇಗೆ? :
ಅಮರ್, ಮೊದಲು ತಮಗಿದ್ದ1.5 ಎಕರೆ ವಿಸ್ತೀರ್ಣದ ಗದ್ದೆಯನ್ನು ಟ್ರ್ಯಾಕ್ಟರ್ನಿಂದ ಉಳುಮೆ ಮಾಡಿ ಹದಗೊಳಿಸಿಕೊಂಡರು. ಔರಾದ್ನಿಂದ ಚೆಂಡು ಹೂವಿನ ಸಸಿ ಖರೀದಿಸಿ ತಂದರು. ಆಗಸ್ಟ್ ಮೊದಲನೇ ವಾರ ಪಟ್ಟೆಸಾಲು ನಿರ್ಮಿಸಿ, ಗಿಡ ನಾಟಿ ಮಾಡಿದರು. ಒಟ್ಟು8 ಸಾವಿರ ಸಸಿಗಳ ನಾಟಿಮಾಡಿದರು.15 ದಿನದ ನಂತರ ಗೊಬ್ಬರಹಾಕಿದರು.ಕೊಳವೆ ಬಾವಿಗೆ ಅಳವಡಿಸಿದ್ದ ಮೋಟಾರು ಬಳಸಿ,2- 3 ದಿನಕ್ಕೊಮ್ಮೆ ನೀರುಹಾಯಿಸಿದರು. ಪರಿಣಾಮವಾಗಿ, ದಸರಾ ಹಬ್ಬದ ವೇಳೆಗೆ ಹೂವಿನ ಫಸಲು ಕಟಾವಿಗೆ ಸಿದ್ಧವಾಗಿತ್ತು.
ಲಾಭದ ಲೆಕ್ಕಾಚಾರ :
ಎರಡು ದಿನಕ್ಕೆ ಒಂದು ಬಾರಿಯಂತೆ ಹೂವಿನ ಫಸಲುಕಿತ್ತು ಮಾರಿದ್ದಾರೆ. ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಲಾ 50 ಕ್ವಿಂಟಾಲ್ ಹೂವು ಮಾರಾಟವಾಗಿದೆ. ಪ್ರತಿ ಕೆ.ಜಿ.ಗೆ50,60 ರೂಪಾಯಿ ದರ ಸಿಕ್ಕಿದೆ. ನೂರು ಕ್ವಿಂಟಾಲ್ ಹೂವಿನ ಮಾರಾಟದಿಂದ ಈವರೆಗೆ ಇವರಿಗೆ ಸರಾಸರಿ ರೂ.5 ಲಕ್ಷ ಆದಾಯ ಬಂದಿದೆ. ಇನ್ನೂ ಒಂದು ತಿಂಗಳು ಚೆಂಡು ಹೂವಿನ ಫಸಲು ದೊರೆಯಲಿದ್ದು,20ರಿಂದ30ಕ್ವಿಂಟಾಲ್ ಹೂವು ಮಾರಾಟವಾಗಲಿದೆ. ಒಟ್ಟು ಲೆಕ್ಕ ಹಾಕಿದರೆ ಎಲ್ಲಾ ಖರ್ಚು ಕಳೆದು 4 ಲಕ್ಷ ರೂ. ಆದಾಯವಾಗುತ್ತದೆ. ಹೊಲ ಹದಗೊಳಿಸಿದ್ದು, ಸಸಿ ಖರೀದಿ, ನೀರಾವರಿ, ಗೊಬ್ಬರ,ಕೃಷಿ ಕೂಲಿ, ಸಾರಿಗೆ ವೆಚ್ಚ ಇತ್ಯಾದಿ ಎಲ್ಲ ಬಗೆಯ ಖರ್ಚುಗಳನ್ನು ಲೆಕ್ಕ ಹಾಕಿದರೂ 1ಲಕ್ಷ ರೂ. ಹೂಡಿಕೆಯಾಗಿದೆ.
ಹೈದರಾಬಾದ್ ಮಾರುಕಟ್ಟೆ : ಚೆಂಡು ಹೂವಿಗೆ ಮುಂಬಯಿ ಮತ್ತು ಹೈದ್ರಾಬಾದ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದರೆ ಭಾಲ್ಕಿಯಿಂದ ಮುಂಬೈ ತುಂಬಾ ದೂರ ಇದೆ. ಹೀಗಾಗಿ 150ಕಿ.ಮೀ ದೂರದಹೈದರಾಬಾದ್ ಮಾರುಕಟ್ಟೆಗೆ, ಬಾಡಿಗೆ ವಾಹನದಲ್ಲಿ ಹೂವುಗಳನ್ನುಕಳಿಸುತ್ತೇವೆ ಎನ್ನುತ್ತಾರೆ ಅಮರ್ಸಿಂಧೆ.
ಬಾಲಾಜಿ ಕುಂಬಾರ, ಚಟ್ನಾಳ