ಸ್ನೇಹವನ್ನೇ ಪ್ರೀತಿಯೆಂದು ತಿಳಿದಿದ್ದೆ, ಸಾರಿ!
Team Udayavani, Jul 10, 2018, 6:00 AM IST
ಸ್ನೇಹಿತೆಯಾಗಿ ಪರಿಚಯವಾದ ನೀನು ಕೇವಲ ಸ್ನೇಹಿತೆಯಾಗಿರದೆ ನನ್ನೆಲ್ಲಾ ಕಷ್ಟ-ನೋವು, ನಲಿವುಗಳಿಗೆ ಪಾಲುದಾರಳಾಗಿದ್ದೆ. ಪ್ರೀತಿಗೆ ಕಥಾ ನಾಯಕಿ ಸಿಕ್ಕಳು ಅಂತ ಬಹಳ ಖುಷಿಯಾಗಿದ್ದೆ. ಆದರೆ ಆ ಖುಷಿ ಸ್ವಲ್ಪದಿನಕ್ಕೆ ಮಾತ್ರ ಸೀಮಿತವಾಗಿತ್ತು.
ಹೃದಯದೊಡತಿಯೇ….
ಇಂದು ವೈದ್ಯರ ಬಳಿ ಹೋಗಿದ್ದೆ. ಕಾರಣ ಇಷ್ಟೇ, ದೇಹ ಯಾಕೋ ಮುನಿದುಕೊಂಡಿತ್ತು. ಮನಸ್ಸಿಗೆ ಮಂಕು ಕವಿದಿತ್ತು. ದೇಹಕ್ಕೇನೋ ಔಷಧ ನೀಡಿ ಗುಣಪಡಿಸಿದೆ. ಆದರೆ ಈ ಹಾಳು ಮನಸ್ಸು, ನೀನೇ ಬೇಕೆಂದು ಹಠ ಹಿಡಿದಿದೆ. ಎಷ್ಟು ಪರಿಪರಿಯಾಗಿ ಬೇಡಿಕೊಂಡರೂ ಈ ಹುಚ್ಚು ಮನಸ್ಸು ಕೇಳುತ್ತಿಲ್ಲ. ಅದಕ್ಕೆ ನೀನೇ ಬೇಕಂತೆ. ಏನು ಮಾಡಲಿ? ನೀ ಬಂದು ಮದ್ದು ನೀಡಿ, ಮುದ್ದು ಮಾಡಿ ಮತ್ತೆ ಚೈತನ್ಯದಿಂದಿರುವಂತೆ ಸಹಕರಿಸುವೆಯಾ.. ಎಂದು ಯೋಚಿಸುತ್ತಾ ಮಲಗಿರುವಾಗ ಕಂಡ ಸುಂದರ ಕನಸಿದು.
“ಯಾರೇ ನಿ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗಬೇಕು ಕಾಣೆ
ಹೇಗೆ ತಿಳಿಯಲಿ ನಾ’
ಎಂಬ ಸಿನಿಮಾ ಹಾಡಿನಂತಾಗಿದೆ ನನ್ನ ಕಥೆ. ಪಿಯುವರೆಗೂ ಪ್ರೀತಿ, ಪ್ರೇಮ ಅಂದರೆ ಏನು ಅಂತಲೇ ಗೊತ್ತಿರಲಿಲ್ಲ. ಪದವಿಯ ಮೊದಲ ವರ್ಷದಲ್ಲಿಯೇ ಅದರ ಅನುಭವ ಆಗಿದ್ದು. ಸ್ನೇಹಿತೆಯಾಗಿ ಪರಿಚಯವಾದ ನೀನು ಕೇವಲ ಸ್ನೇಹಿತೆಯಾಗಿರದೆ ನನ್ನೆಲ್ಲಾ ಕಷ್ಟ-ನೋವು, ನಲಿವುಗಳಿಗೆ ಪಾಲುದಾರಳಾಗಿದ್ದೆ. ಪ್ರೀತಿಗೆ ಕಥಾ ನಾಯಕಿ ಸಿಕ್ಕಳು ಅಂತ ಬಹಳ ಖುಷಿಯಾಗಿದ್ದೆ. ಆದರೆ ಆ ಖುಷಿ ಸ್ವಲ್ಪದಿನಕ್ಕೆ ಮಾತ್ರ ಸೀಮಿತವಾಗಿತ್ತು.
ಎಷ್ಟೋ ಸಾರಿ ಮನಸ್ಸಿನ ಮಾತುಗಳನ್ನು ನಿನಗೆ ಹೇಳಿ ಬಿಡಬೇಕೆಂದು ಅಂದೊRಳ್ತೀನಿ. ಅದಕ್ಕೆಂದೇ, 2-3 ಬಾರಿ ರಿಹರ್ಸಲ್ ಮಾಡಿಕೊಂಡೇ ಆಚೆ ಬರ್ತೀನಿ. ಆದರೆ, ನೀನು ಎದುರಿಗೆ ಬಂದರೆ ಸಾಕು; ಮೂಕವಿಸ್ಮಿತನಾಗಿ ಎಲ್ಲವನ್ನೂ ಮರೆತು ಬಿಡುತ್ತೇನೆ. ನಿನ್ನ ಮೇಲೆ ಹುಟ್ಟಿದ ಪ್ರೀತಿಯನ್ನು ಅಂದೇ ಹೇಳಿದ್ದರೆ, ನಾನು ಎರಡು ವರ್ಷ ಪ್ರೀತಿಯ ದಾಸನಾಗುತ್ತಿರಲಿಲ್ಲ. ನಿನ್ನ ಗೆಳೆತನದ ಗಡಿ ದಾಟಿ, ಒಲವಿನ ಮೆಟ್ಟಿಲೇರಲು ತವಕಿಸುತ್ತಿರುವ ಹುಡುಗನಾಗೇ ಉಳಿದಿದ್ದೇನೆ. ನೀನು ಪ್ರತಿ ಬಾರಿ ಮೆಸೇಜ್, ಕಾಲ್ ಮಾಡಾªಗ, ನಿನ್ನ ಮನಸ್ಸಿನಿಂದ ಬಂದ ಮಾತು ಸ್ನೇಹದ ಪರವಾಗಿ ಮೂಡಿ ಬಂದಿದ್ದು ಅಂತಾ ನನಗೆ ಅರ್ಥವಾಗದೇ ಹೋಯ್ತಲ್ಲಾ!
ಅದೆಷ್ಟು ಬಾರಿ ನಿನ್ನ ಜೊತೆ ಜಗಳ ಮಾಡಿದ್ದೀನೋ ಲೆಕ್ಕವೇ ಇಲ್ಲ. ಜಗಳ ಜಾಸ್ತಿ ಇದ್ದಲ್ಲಿ ಪ್ರೀತಿಯೂ ಜಾಸ್ತಿ ಇರುತ್ತೆ ಅಂತೆ. ಅದೊಂದೇ ಕಾರಣದಿಂದ ನಾನು ಜಗಳ ಮಾಡುತ್ತಿದ್ದೆ. ಆದರೆ, ಕೊನೆಗೆ ಆ ಜಗಳವೇ ನನಗೆ ಮೋಸ ಮಾಡಿತಲ್ಲ. ಇಷ್ಟೆಲ್ಲಾ ನೋವು, ಸಂಕಟ ಒಳಗಿದ್ದರೂ, ಹೇಳಿಕೊಳ್ಳಲಾಗದ ಪರಿಸ್ಥಿತಿ ನನ್ನದು. ಕೊನೆಗೊ ಅರ್ಥವಾಯಿತು.. ನಾನು ನನಗೇ ಗೊತ್ತಿಲ್ಲದಂತೆ ನಿನ್ನನ್ನು ಹೆಚ್ಚಾಗಿ ಪ್ರೀತ್ಸೋಕೆ ಶುರು ಮಾಡಿದ್ದೇನೆ. ಆದರೆ, ನೀನು ನನ್ನನ್ನು ಉತ್ತಮ ಸ್ನೇಹಿತನಂತೆ ಭಾವಿಸಿದ್ದೀಯ. ಏನು ಮಾಡೋದು? ಸ್ನೇಹವನ್ನು ಪ್ರೀತಿಯೆಂದು ಭಾವಿಸಿದ ನನ್ನನ್ನು ಕ್ಷಮಿಸು. ನಿನ್ನಿಂದ ದೂರಾಗುವುದೊಂದೇ ಉಳಿದಿರುವ ಮಾರ್ಗ. ಎಲ್ಲಾದರೂ ಇರು, ಖುಷಿಯಾಗಿರು.
ವೀರೇಶ ಪಿ. ಅರ್ಕಸಾಲಿ, ಹಾವೇರಿ