ನಿಷ್ಠೆ ಅಂದರೆ ಇದು !
Team Udayavani, Nov 12, 2019, 5:45 AM IST
ಅವರ ಜೊತೆಗಾರ ರಾಜಕಾರಣಿಗಳ ಬಳಿ ಎರಡು ಮೂರು ಕಾರುಗಳಿದ್ದವು. ಆದರೆ ಗೃಹಸಚಿವ ಅನ್ನಿಸಿಕೊಂಡ ನಂತರವೂ ಇವರು ಸ್ವಂತದ ಕಾರು ಖರೀದಿಸಲಿಲ್ಲ. ಆಗ ಕೂಡ ಮಕ್ಕಳನ್ನು ಮಧ್ಯಮ ವರ್ಗದ ಮಕ್ಕಳು ಹೋಗುತ್ತಿದ್ದ ಕುದುರೆ ಬಂಡಿಯಲ್ಲೇ ಶಾಲೆಗೆ ಕಳಿಸುತ್ತಿದ್ದರು.
ಕೇಂದ್ರ ಸಚಿವ ಎಂದು ಕರೆಸಿಕೊಂಡ ಮೇಲಾದರೂ ಓಡಾಡಲು ಒಂದು ಕಾರು ಬೇಡವೆ ಎಂಬುದು ಹೆಂಡತಿ ಹಾಗೂ ಮಕ್ಕಳ ವಾದವಾಗಿತ್ತು. ಈಗ ಓಡಾಡಲು ಸರಕಾರದ ಕಾರು ಇದೆ. ಇನ್ನೊಂದು ಕಾರಿನ ಅಗತ್ಯವಾದರೂ ಏನು ಎಂದು ಪ್ರಶ್ನಿಸಿ ಎಲ್ಲರ ಬಾಯಿ ಮುಚ್ಚಿಸಿದ್ದರು. ಆದರೆ, ವರ್ಷಗಳ ನಂತರ ಪ್ರಧಾನಿ ಪಟ್ಟಕ್ಕೇ ಬಂದು ಕೂತರಲ್ಲ? ಆಗ ಅವರ ಮಕ್ಕಳೆಲ್ಲ ಒಟ್ಟಾಗಿ ಹೋಗಿ ಸ್ವಂತ ಕಾರು ತಗೋಬೇಕು ಎಂಬ ಆಸೆಯನ್ನು ಈಗಲಾದರೂ ಈಡೇರಿಸಿ’ ಎಂದರು.
ಅದಕ್ಕೆ ಒಪ್ಪಿದ ಪ್ರಧಾನಿಗಳು, ಅವತ್ತೇ ಸಂಜೆ ತಮ್ಮ ಆಪ್ತ ಕಾರ್ಯದರ್ಶಿಯನ್ನು ಕರೆದು ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಹಾಗೂ ಒಂದು ಹೊಸ ಕಾರಿನ ಬೆಲೆ ಎಷ್ಟಾಗುತ್ತದೆ ಎಂದು ವಿಚಾರಿಸಿ ತಿಳಿಸುವಂತೆ ಆದೇಶಿಸಿದರು. ಮರುದಿನ ಬೆಳಗ್ಗೆ ಸಂಕೋಚದಿಂದಲೇ ಅವರ ಮುಂದೆ ನಿಂತ ಆಪ್ತಕಾರ್ಯದರ್ಶಿ ಸಾರ್, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ನಾಲ್ಕು ಸಾವಿರ ರೂ.ಗಳಿದೆ ಹಾಗೂ ಹೊಸ ಕಾರಿನ ಬೆಲೆ ಹನ್ನೆರಡು ಸಾವಿರ ರೂ. ಆಗುತ್ತದೆ’ ಎಂದರು!
ಇದನ್ನು ತಿಳಿದ ಅವರ ಮಕ್ಕಳಿಗೆಲ್ಲ ಶಾಕ್ ಆಯಿತು. ಆದರೆ, ಪ್ರಧಾನಿಗಳಿಗೆ ಅದೇನೂ ದೊಡ್ಡ ಸಂಗತಿಯಲ್ಲ ಎಂಬಂತೆ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ವಿವರ ಪಡೆದ ನಂತರವೂ ಹಸನ್ಮುಖೀಯಾಗಿಯೇ ಇದ್ದರು. ನಂತರ ಸರಕಾರದಿಂದ ಸಾಲ ಪಡೆದು ಹೊಸ ಕಾರು ಖರೀದಿಸಿ, ಮಕ್ಕಳ ಬಯಕೆಯನ್ನು ಪೂರೈಸಿದರು. ಅವರ ಹೆಸರು ಲಾಲ್ ಬಹುದ್ದೂರ್ ಶಾಸ್ತ್ರಿ!