ಹಳೆಯ ದಿನಗಳೆಂಬ ಚೌಚೌ ಬಾತ್…
Team Udayavani, Jan 22, 2019, 2:58 AM IST
ಒಂದು ದಿನ ರಾತ್ರಿ ಕೇರಂ ಆಟ ತಾರಕ ಸ್ಥಿತಿಯಲ್ಲಿದ್ದಾಗ ಹೊರಗಿನಿಂದ ನಾನು ವಾರ್ಡನ್ ಡೈಲಾಗ್ ಹೊಡೆದೆ. ಎಲ್ಲರೂ ಲೈಟ್ ಆರಿಸಿ ಗಪ್ ಚುಪ್ ಆಗಿ ಮಲಗಿಬಿಟ್ಟರು!
ಅದು ಗೋಧೂಳಿ ಸಮಯ. ಸೌಮ್ಯ ಕೇಶವ ಗುಡಿಯ ಆವರಣದಲ್ಲಿ ಕೆಂಬಣ್ಣದ ಬಿಸಿಲು ನರ್ತಿಸುತ್ತಿತ್ತು. ಹುಡುಗರಾಡುವ ಆಟಕ್ಕೆ ಅಂಗಳದಲ್ಲಿ ಮೇಲೆದ್ದ ಧೂಳು ಢಾಳಾದ ಬಿಸಿಲಿನಲ್ಲಿ ಕಲೆತು ಈಸ್ಟ್ಮನ್ ಕಲರ್ ಸಿನಿಮಾದ ದೃಶ್ಯವೊಂದು ಅಲ್ಲಿ ಸೃಷ್ಟಿಯಾಗಿತ್ತು.
ಇಪ್ಪತ್ತು ವರ್ಷಗಳ ಹಿಂದಿನ ಕಥನ ಬಿಚ್ಚಿಕೊಳ್ಳುವುದೇ ಹೀಗೆ ನೋಡಿ.
ಈ ದೃಶ್ಯ ಪ್ರತಿದಿನ ಸಂಜೆ ನಮಗೆ ದೊರೆಯುತ್ತಿತ್ತು. ನಾವಲ್ಲಿ ಮನದಣಿಯೆ ಕಾಲ ಕಳೆಯುತ್ತಿದ್ದೆವು. ಆಗ ನಮಗೆ ಜಗದ ಅಸಂಖ್ಯ ಜಂಜಡಗಳ ಗೊಡವೆ ಇರಲಿಲ್ಲ. ಕಾಲೇಜು ಕಲಿಯಲೆಂದು ದೂರ ದೂರದ ಊರುಗಳಿಂದ ನಾವೆಲ್ಲಾ ಬಂದು ಅಲ್ಲಿ ಜಮಾವಣೆಗೊಂಡಿದ್ದೆವು. ಪೂರ್ತಾ ಎರಡೂವರೆ ವರ್ಷ ಜೊತೆಗಿರುವ ಸ್ವತ್ಛಂದ ಅನಿವಾರ್ಯ ಅಲ್ಲಿತ್ತು. ನಾನು, ರಾಮು, ರಾಮಣ್ಣ, ಕೆ.ಕೆ., ದತ್ತಿ, ನದೀಮ್, ಪ್ರಸ್ಸಿ, ಜೆಸ್ಸಿ, ಶಾರು, ಸಿದ್ದೇಗೌಡ, ಬಾಲು, ರಾಘು, ಮೋನಿ, ಉಮಿ, ಸಂತು, ಫೈರೂಜ್, ಮಂಜಪ್ಪ ಹೀಗೆ ಗೆಳೆಯರ ಪಟ್ಟಿ ದೊಡ್ಡದಿದೆ. ನೆನಪಾದವರನ್ನು ನೆನಪಾದಂತೆ ಹೆಸರಿಸಿದ್ದೇನೆ. ಹುಡ್ಗಿàರ ಹೆಸರು ಬರೆದರೆ ಈಗ ಹೆಂಡತಿ ಸೌಟಿನಲ್ಲಿ ಕುಟ್ಟುತ್ತಾಳೆ. ಪೂರ್ವ ಜನ್ಮದ ಪಾಪಕ್ಕೆ ಈ ಜನ್ಮದಲ್ಲಿ ಶಿಕ್ಷೆ ಯಾಕೆ?
ನಾವು ಗೆಳೆಯರು ಇದ್ದಿದ್ದೇ ಹಾಗೆ. ಸಕಲೆಂಟು ಭೇದ ಭಾವಗಳನ್ನು ಮರೆತು ನಾವು ಕಳೆದ ದಿನಗಳು ಸುವರ್ಣ ಯುಗದ್ದು. ಆಮೇಲಿನದ್ದೆಲ್ಲಾ ಕಬ್ಬಿಣಯುಗ ಅಂದ್ರೂ ಬೇಸರವಿಲ್ಲ. ಓದು ಮುಗಿದ ಮೇಲೆ ನೌಕರಿ, ಮದುವೆ, ಮಕ್ಕಳು, ಸಂಸಾರ ಒಂದಾ ಎರಡಾ… ಚಕ್ರವ್ಯೂಹದಲ್ಲಿ ಸಿಕ್ಕಿದ ಅಭಿಮನ್ಯುವಿನ ಪರಿಸ್ಥಿತಿ ನಮ್ಮದು.
ಗಸಗಸೆ ಮರದ ಕೆಳಗೆ ರಾಮು ಯಾವುದೋ ಸುಡುಗಾಡು ರಾಗದಲ್ಲಿ “ಚಂದಕಿಂತ ಚಂದ ನೀನೇ ಸುಂದರ. . .’ ಎಂದು ಹಾಡುತ್ತಿದ್ದರೆ ಜೂನಿಯರ್ ಎಲ್ಲರೂ ಫಿದಾ ಆಗಿ ನಮಗೆ ಹೊಟ್ಟೆ ಕಿಚ್ಚಾಗುತ್ತಿತ್ತು. ಅವನ ಹಾಡು ಎಂದರೆ ನನಗೆ ಪ್ರಾಣ. ರಾಮಣ್ಣ “ಒಂಬತ್ತು ತಿಂಗಳ ಹೆತ್ತು ಸಾಕಿದ ತಾಯ ಮರೆಯ ಬೇಡ. . .’ ಎಂದು ತಾರಕ ದನಿಯಲ್ಲಿ ಹಾಡಿದನೆಂದರೆ ಕಣ್ಣಾಲಿಗಳು ತೇವ ತೇವ. ರಮ್ಯ ಎಂಬ ಆ ಕಾಲದ ನಮ್ಮ ಕಾಲೇಜಿನ ಪುರಾತನ ಗಾಯಕಿ “ಕೃಷ್ಣಾ ಎನಬಾರದೇ. . .’ ಎಂದು ಸ್ವರವೆತ್ತಿ ಹಾಡಿದಳೆಂದರೆ ಭಕ್ತಿ ರಸ ಉಕ್ಕಿ ಹರಿಯುತ್ತಿತ್ತು. ಹೀಗೆ ಹಾಡುವವರ ದೊಡ್ಡ ಹಿಂಡೇ ನಮ್ಮೊಡನಿತ್ತು. ಗೆಳೆಯ ಮುರುಳಿ ಶೃಂಗೇರಿ, ಕಾಲೇಜಿನಲ್ಲಿ “ದಿಂಡಿ’ ನಾಟಕ ಮಾಡಿಸುವಾಗ, ಕೆನ್ನೆಗೆ ಹೊಡೆಯುವ ಸನ್ನಿವೇಶದ ರಿಹರÕಲ್ನಲ್ಲಿ ಮಂಜಪ್ಪನ ಕೆನ್ನೆಗೆ ನಾನು ಸರಿಯಾಗಿ ಬಾರಿಸಿದ್ದೆ. ಇಪ್ಪತ್ತು ವರ್ಷ ಕಳೆದರೂ ಇಂದಿಗೂ ಆ ಬಾಸುಂಡೆ ಮಾಸಿಲ್ಲ. ಮೆಚ್ಚಿಕೊಂಡ ಹುಡುಗಿ ಅವನ ಕೆನ್ನೆಗೆ ಮುತ್ತು ಕೊಡುವಾಗ, ಕೇಳಿದ್ದಕ್ಕೆ ಕಬಡ್ಡಿ ಆಡುವಾಗ ಬಿದ್ದಿದ್ದು ಎಂದನಂತೆ.
ಅಂದಿನ ದೊಡ್ಡ ರಹಸ್ಯವೊಂದನ್ನು ಹೇಳುತ್ತೇನೆ ಕೇಳಿ. ಸಾಮಾನ್ಯವಾಗಿ ಹುಡುಗ-ಹುಡುಗಿಯರ ನಡುವೆ ಮಧ್ಯೆ “ಏನೋ’ ಇದೆ ಎಂಬ ಗುಮಾನಿ ನೋಡುಗರ ಕಣ್ಣಿನಲ್ಲಿರುತ್ತದೆ. ಗುಮಾನಿಗಳಿಗೆ ಆಹಾರವಾಗುವ ಅಪಾಯದಿಂದ ತಪ್ಪಿಸಿಕೊಳ್ಳಲು ಕೆಲವು ಹುಡುಗ ಹುಡುಗಿಯರು ಅಣ್ಣ ತಂಗಿ ಸೆಂಟಿಮೆಂಟ್ ಕ್ರಿಯೇಟ್ ಮಾಡಿಬಿಡುತ್ತಿದ್ದರು. ಜೊತೆಗಿದ್ದವರು ಇಂಥ ಘನಘೋರ ಕೃತ್ಯ ಮಾಡಿದ್ದಾರೆ ಎಂದು ನನಗೆ ತಿಳಿದದ್ದು ಅವರ “ಮದುವೆಯ ಮಮತೆಯ ಕರೆಯೋಲೆ’ಯನ್ನು ಕೈಗಿತ್ತಾಗಲೆ! ಕೆಲವರಂತೂ “ಅಣ್ಣಾ’ ಎಂಬ ಬಾಂಧವ್ಯಕ್ಕೆ ಸೋತು ಇಂದಿಗೂ ಕೊರಗುತ್ತಿದ್ದಾರೆ.
ಹಾಸ್ಟಲ್ನಲ್ಲಿ ನಡೆದ ಸಂಗತಿಯೊಂದು ನೆನೆದರೆ ನಗುನ ಕಾರಂಜಿ ಚಿಮ್ಮುತ್ತದೆ. ಸಹಜವಾಗಿ ನಾನು ಕೆಲವು ಸಿನಿಮಾ ನಟರ ಮತ್ತು ಪರಿಚಿತರ ದನಿಗಳನ್ನು ಅನುಕರಿಸುತ್ತಿದ್ದೆ. ನಮ್ಮ ಹಾಸ್ಟೆಲ್ ವಾರ್ಡನ್ ರ ದನಿಯನ್ನು ಅನುಕರಿಸುವುದು ನನಗೆ ಕರಗತವಾಗಿತ್ತು. ಅವರು ಮಂಗಳೂರಿನವರು. ಸದಾ ಹೇಳುತ್ತಿದ್ದದ್ದು ಒಂದೇ ಡೈಲಾಗ್ “ಹೇ, ಯಾಕೆ ಹೊರಗೆ ನಿಂತದು,ª ಒಳಗೆ ಕೂತು ಓದ್ಲಿಕ್ ಆಗಲ್ವಾ?’ ಎಂದು. ವಾರ್ಡನ್ ಇಲ್ಲದ ದಿನ ಹಾಸ್ಟೆಲ್ನಲ್ಲಿ, ಹೊನಲು ಬೆಳಕಿನ ಕೇರಂ ಪಂದ್ಯ ನಡೆಯುತ್ತಿತ್ತು. ಬೆಟ್ಟಿಂಗ್ ಕೂಡ ಪುಡಿಗಾಸಿನಲ್ಲಿ ಭರ್ಜರಿಯಾಗಿ ನಡೆಯುತ್ತಿತ್ತು. ಒಂದು ದಿನ ರಾತ್ರಿ ಕೇರಂ ಆಟ ತಾರಕ ಸ್ಥಿತಿಯಲ್ಲಿದ್ದಾಗ ಹೊರಗಿನಿಂದ ನಾನು ವಾರ್ಡನ್ ಡೈಲಾಗ್ ಹೊಡೆದೆ. ಎಲ್ಲರೂ ಲೈಟ್ ಆರಿಸಿ ಗಪ್ ಚುಪ್ ಆಗಿ ಮಲಗಿಬಿಟ್ಟರು! ಆದರೆ, ಎಷ್ಟು ಹೊತ್ತಾದರೂ ವಾರ್ಡ್ನ್ ಸುಳಿವಿಲ್ಲ. ಎಷ್ಟೋ ದಿನಗಳ ನಂತರ ಈ ವಿಷಯ ಬಹಿರಂಗವಾದಾಗ ನನಗೆ ಎಲ್ಲರೂ ಕಣ್ಣಿನಲ್ಲೇ ಗುಮ್ಮಿದರು.
ಈ ಎಲ್ಲಾ ಸಂತಸಗಳ ನಡುವೆ ಕೆಲವರ ಮನೆಯಲ್ಲಿನ ಸಾವುಗಳು ನಮ್ಮನ್ನು ವಿಹ್ವಲಗೊಳಿಸುತ್ತಿದ್ದವು. ಕೋರ್ಸ್ ಮುಗಿಸಿದ ಕೆಲ ವರ್ಷಗಳ ನಂತರ ನಮ್ಮ ಪ್ರೀತಿಯ ಜೆ.ಎನ್. ಸರ್, ಶ್ವಾಸಕೋಶದ ಕ್ಯಾನ್ಸರ್ನಿಂದ ಸತ್ತ ಸುದ್ದಿ ಕೇಳಿ ಇದ್ದಲ್ಲೇ ಕರಗಿದೆವು, ಮರುಗಿದೆವು. ಹಲವು ಸುಖ ಮತ್ತು ಸಂಕಷ್ಟಗಳ ಆ ಕಾಲೇಜ್ ಲೈಫ್, ಇಂದು ಹೆಂಡತಿ ಮಾಡಿಟ್ಟ ರುಚಿ ರುಚಿ ಚೌಚೌ ಬಾತ್ ತಿನ್ನುವಾಗ ಗುದ್ದಿಗೊಂಡು ಬಂದು ನೆನಪಾಯಿತು.
-ಕಂಡಕ್ಟರ್ ಸೋಮು, ಎಡೆಯೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ