ಹಾಡು ಹಾಡಿ ಹುಡುಗನ್ನ ಗೆದ್ದೆ…
Team Udayavani, Mar 23, 2020, 7:13 PM IST
ತಾನು ಹಾಕಿದ ಗೆರೆ ದಾಟದ ಮಗ ಪ್ರೀತಿಸಿ ಮದುವೆಯಾದ ಅಂದರೆ, ಸರೀಕರಲ್ಲಿ ತಮ್ಮ ಗೌರವ ಏನಾದೀತೋ ಅಂತ ಹುಡುಗನ ಅಮ್ಮನಿಗೆ ಇರಿಸುಮುರುಸು. ಹಾಗಾಗಿ ಹೆಣ್ಣು ನೋಡಲು ಬರುವ ಶಾಸ್ತ್ರ ಏರ್ಪಾಡಾಯ್ತು. “ನಂದೊಂದೆರಡು ಪರೀಕ್ಷೆಯಲ್ಲಿ ಅವಳು ಪಾಸಾದ ಮೇಲೆಯೇ ನಾವು ಒಪ್ಪಿಗೆ ಕೊಡೋದು…’ ಎಂದರು ಅಮ್ಮ.
ಬರೋಬ್ಬರಿ 46 ವರ್ಷಗಳ ಹಿಂದಿನ ಮಾತು. ಒಂದೇ ಊರಿನವರಾದರೂ, ಪರಿಚಯದ ಮನೆಯೇ ಆದರೂ, ಆ “ಹುಡುಗ’ನನ್ನು ನಾನು ಮೊದಲ ಬಾರಿಗೆ ನೋಡಿದ್ದು ಕಾಲೇಜಿನಲ್ಲಿದ್ದಾಗಲೇ. ನನ್ನ ನೆರೆಯ ಮನೆಯವನು ಆ ಹುಡುಗನ ಆಪ್ತ ಮಿತ್ರ. ಅವನ ಮದುವೆಗೆ ಹಾಜರಾಗಲು ಈ ಹುಡುಗ ಹುಟ್ಟೂರಿಗೆ ಬಂದ.
ಮದುವೆಯ ಹಿಂದಿನ ಸಂಜೆ, ಊರಿನಿಂದ ಬಂದಿದ್ದ ನನ್ನಕ್ಕನನ್ನು ಮಾತನಾಡಿಸಲು ನಮ್ಮ ಮನೆಗೆ ಬಂದಿದ್ದ. ಅದೇ ಸಮಯಕ್ಕೆ ಬೇರೆ ಊರಿನಲ್ಲಿ ಕಾಲೇಜು ಓದುತ್ತಿದ್ದ ನಾನೂ ರಜೆಯೆಂದು ಮನೆಗೆ ಬಂದಿದ್ದೆ. ಅಕ್ಕ ಹುಡುಗನನ್ನು ಪರಿಚಯಿಸಿದಳು. ನಾನು “ನಮಸ್ಕಾರ’ ಎಂದೆ. ಅವನು ಒಂಚೂರು ಮಾತನಾಡಿಸಿದ. “ಮನೆಗೆ ಬಂದ ಊರಿನ ಪರಿಚಯಸ್ಥ, ಭಾವನಿಗೆ ನೆಂಟ ಕೂಡ, ಹಾಗೇ ಕಳಿಸಲಾಗಲ್ಲ’ ಅಂತ ಅಮ್ಮ ಒತ್ತಾಯ ಮಾಡಿ ಕಾಫಿ ಮಾಡಿಕೊಟ್ಟಳು. ಅವನ ಮುಂದೆ ಲೋಟ ಹಿಡಿದೆ. ಕುಡಿದುಬಿಟ್ಟ. ಮುಂದೆ ಗೊತ್ತಾಗಿದ್ದು ಹುಡುಗನಿಗೆ ಕಾಫಿ ಕುಡಿವ ಅಭ್ಯಾಸವಿಲ್ಲ. ಆದರೆ, ಕಾಫಿ ಕೊಟ್ಟವಳು ಮೊದಲ ನೋಟಕ್ಕೇ ಮನಸ್ಸಿಗಿಳಿದಿರುವಾಗ, ಕಾಫಿ ಕುಡಿಯಲ್ಲ ಅಂತ ಹೇಳಲೂ ಆಗಿರಲಿಲ್ಲ.
ನಾನೇನು ಆ ಹುಡುಗನ ಮುಂದೆ ಕೂದಲು ಹಾರಾಡಿಸಿಕೊಂಡು ಸುಳಿಯದಿದ್ದರೂ, ಅಂವ ಮೊದಲ ನೋಟಕ್ಕೇ ನನ್ನ ಪ್ರೀತಿಸಿಬಿಟ್ಟ. ನನ್ನನ್ನೂ ತನ್ನ ಪರಿಧಿಗೆ ಬೀಳಿಸಿಕೊಂಡ. ಅದು ಮೊದಲ ಅಧ್ಯಾಯವಾಗಿತ್ತು!
ನಂತರ, ಪ್ರೇಮಪತ್ರಗಳು ಅಲ್ಲಿಂದಿಲ್ಲಿ ಓಡಾಡಿ ನಮ್ಮ ಸಂಬಂಧ ಮದುವೆಯ ಹಂತಕ್ಕೆ ತಲುಪಿತು. ಇಬ್ಬರದ್ದೂ ಸುಸಂಸ್ಕೃತ ಕುಟುಂಬವಾದ್ದರಿಂದ ಮದುವೆಗೆ ಅಡ್ಡಿ ಎನ್ನುವಂಥದ್ದೇನೂ ಇರಲಿಲ್ಲ. ಆಗ ಒಂದು ತಳಮಳ ಹತ್ತಿದ್ದು ಹುಡುಗನ ತಾಯಿಗೆ. ಆ ಕಾಲದಲ್ಲಿ, ತಾನು ಹಾಕಿದ ಗೆರೆ ದಾಟದ ಮಗ ಪ್ರೀತಿಸಿ ಮದುವೆಯಾದ ಅಂದರೆ, ಸರೀಕರಲ್ಲಿ ತಮ್ಮ ಗೌರವ ಏನಾದೀತೋ ಅಂತ ಅವರಿಗೆ ಚೂರು ಇರಿಸುಮುರುಸು ಶುರುವಾಯ್ತು. ಹಾಗಾಗಿ ಹೆಣ್ಣು ನೋಡಲು ಬರುವ ಶಾಸ್ತ್ರ ಏರ್ಪಾಡಾಯ್ತು. ಮಗನಿಗೆ ಲಕ್ಷ್ಮಣರೇಖೆಯೊಂದನ್ನು ಬರೆದರು ಅಮ್ಮ.
“ನೋಡೋ, ಹುಡುಗಿ ನಮ್ಮೂರು, ನಮ್ಮ ಜನ, ಎಲ್ಲಾ ಸರಿ. ಆದ್ರೆ, ನಂದೊಂದೆರಡು ಪರೀಕ್ಷೆ ನಾ ಮಾಡಿಯೇ ಮಾಡ್ತೀನಿ. ಅವಳು ಅದ್ರಲ್ಲಿ ಪಾಸಾದ ಮೇಲೆಯೇ ನಾವು ಒಪ್ಪಿಗೆ ಕೊಡೋದು…’ ಎಂದರು ಅಮ್ಮ. ಹುಡುಗನಿಂದ ಹೀಗೊಂದು ಪತ್ರ ಬಂದಿತು ನನಗೆ- “ನೀನು ಇಂತಿಂಥ ಪರೀಕ್ಷೆಗಳಲ್ಲಿ ಪಾಸಾಗಲೇಬೇಕು, ಪ್ಲೀಸ್ ತಯಾರಾಗು…’ ಆಗಿನ ಮಕ್ಕಳು ಹೆತ್ತವರು ಮಾತನ್ನು ಮೀರುತ್ತಿರಲಿಲ್ಲವಾದ್ದರಿಂದ ಹುಡುಗನಿಗೆ ಭಯ. ಕೊನೆಗೆ ಅಮ್ಮ ಈ ಹುಡುಗಿ ಬೇಡ ಅಂದಿºಟ್ರೆ ಅಂತ.
ಅಮ್ಮ ನಡೆಸಿದ ಪರೀಕ್ಷೆಗಳು ಎರಡು – ಹುಡುಗಿ ಹಾಡು ಹೇಳಲೇಬೇಕು, ಸಣ್ಣ ಸೂಜಿಯಲ್ಲೂ ದಾರ ಪೋಣಿಸಬೇಕು…ಇವೆರಡೇ! ವಧುಪರೀಕ್ಷೆಗೆ ಒಂದು ವಾರವಿದ್ದಾಗ, ದಿನದಲ್ಲಿ ಹತ್ತಾರು ಬಾರಿ ಹಿತ್ತಲಂಗಳಕ್ಕೆ ಓಡಲಾರಂಭಿಸಿದೆ. ಎರಡು ಹಾಡುಗಳನ್ನು ಕಂಠಪಾಠ ಮಾಡಲು. ಅಪ್ಪನಿಗೆ ಗಾಬರಿ, ಪದೇಪದೆ ನಾನು ಹಿತ್ತಲಿಗೋಡುವುದ ಕಂಡು. ಸರಾಗವಾಗಿ ಪೋಣಿಸುವಷ್ಟು ಕಣ್ಣು ಪರ್ಫೆಕ್ಟ್ ಇತ್ತಾದರೂ ಹಾಳು ಆತಂಕ. ಮೂರೊತ್ತೂ ಕೈಯ್ಯಲ್ಲಿ ಸೂಜಿದಾರ, ಪೋಣಿಸೋದು ತೆಗ್ಯೋದು…ಇವೆಲ್ಲ ಗೊತ್ತಿಲ್ಲದ ಅಪ್ಪ-ಅಮ್ಮಂಗೆ ಆತಂಕ, “ಏನಾಗಿದೆ ಇವ್ಳಿಗೆ’ ಅಂತ! ವಧುಪರೀಕ್ಷೆ, ಎರಡು ಹಾಡಿನ ಪರೀಕ್ಷೆಯೊಂದಿಗೆ ಸಂಪನ್ನವಾಯ್ತು. ಗಾಬರಿಗೆ ಸಾಲುಗಳೆಲ್ಲಾ ಕೈಕೊಟ್ಟು. ಕಣ್ಣಿನ ಪರೀಕ್ಷೆಯೇನೂ ನಡೀಲಿಲ್ಲ, ಅವ್ರಿಗೂ ಗೊತ್ತಿತ್ತು; ಆ ವಯಸ್ಸಲ್ಲಿ ಕಣ್ಣೂ ಚೆನ್ನಾಗಿರುತ್ತೆ ಅಂತ. ಮುಂದೆ ಎಲ್ಲವೂ ಸುಖಾಂತವೇ!
(ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ, ಮನೆಮಂದಿಗೆಲ್ಲಾ ಖುಷಿ, ಗಡಿಬಿಡಿ, ಆತಂಕ, ನಿರೀಕ್ಷೆಗಳೆಲ್ಲವೂ ಒಟ್ಟೊಟ್ಟಿಗೇ ಆಗುವ ಸಂದರ್ಭ. ಭಾಮೆಯನ್ನು ನೋಡಲು ಬಂದಾಗ ಮನೆಯಲ್ಲಿ ಏನೇನಾಗಿತ್ತು ಅಂತ 250 ಪದಗಳಲ್ಲಿ [email protected]ಗೆ ಬರೆದು ಕಳಿಸಿ.)
-ಎಸ್.ಪಿ.ವಿಜಯಲಕ್ಷ್ಮೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!