ಹೊಳೆಯೆಂಬ ಹೆಣ್ಣು
Team Udayavani, May 11, 2018, 7:20 AM IST
ನಿಜಕ್ಕೂ ಆ ಪುಟ್ಟ ಊರನ್ನು ದೂರದಿಂದ ದಿಟ್ಟಿಸಿ ನೋಡಿದರೆ ಹಸಿರು ಪತ್ತಲವುಟ್ಟ ಭೂಮಿಯೆಂಬ ತಾಯಿ ಹೊದೆದ ಸೆರಗಿನಂತೆ ಭಾಸವಾಗುತ್ತಿತ್ತು. ಇಡಿಯ ಊರನ್ನು ಎರಡಾಗಿಸಿ ಹರಿವ ಹೊಳೆ ಗಾಳಿಗೆ ತೊನೆಯುವ ಸೆರಗಿನ ಜರಿಯಂತೆ ಹೊಳೆಯುತ್ತಿತ್ತು. ಹೊಳೆಯ ಇಕ್ಕೆಲಗಳಲ್ಲಿ ಸೊಕ್ಕಿ ಬೆಳೆದ ಹೊಳಸಾಲ ಮರಗಳಲ್ಲಿ ಅರಳಿರುವ ಬಣ್ಣಬಣ್ಣದ ಹೂವುಗಳು ಕುಶಲಿಯಾದ ನೇಕಾರನೊಬ್ಬ ಸೆರಗಿನ ಅಂದ ಹೆಚ್ಚಿಸಲು ಅಚ್ಚವಾಗಿ ನೇಯ್ದ ಕುಸುರಿಯಂತೆ ಕಾಣುತ್ತಿತ್ತು. ಸುತ್ತ ಹರಡಿರುವ ಭತ್ತದ ಗದ್ದೆಗಳ ನಡುವೆ ಸುಖಾಸುಮ್ಮನೆ ವೈಯ್ನಾರದಿಂದ ಕುಂಟು ಹೆಜ್ಜೆಯಿಡುವ ಬೆಳ್ಳಕ್ಕಿಗಳಿಂದಾಗಿ ಹಸಿರು ಸೆರಗಿಗೊಂದು ಅನಿಯಮಿತ ಚಿತ್ತಾರ ಪ್ರತಿಕ್ಷಣವೂ ಸೇರ್ಪಡೆಯಾಗುತ್ತಿತ್ತು. ಊರಿನ ಎರಡೂ ಬದಿಯಿಂದ ಧುತ್ತನೆ ಎದ್ದುನಿಂತ ಪರ್ವತಗಳ ಸಾಲುಗಳು ಊರಿನ ಪಾತ್ರವನ್ನು ಕಿರಿದುಗೊಳಿಸುತ್ತ, ಕಣಿವೆಯಾಗಿಸಲು ಹವಣಿಸುವ ತಂತ್ರದಲ್ಲಿ ನಿರಂತರ ಶ್ರಮಿಸುವಂತೆ ಕಾಣುತ್ತಿತ್ತು. ಪರ್ವತದ ಮೇಲೇರಿದಂತೆಲ್ಲ ದಟ್ಟವಾಗುತ್ತ ಸಾಗುವ ಕಾಡು ಆ ಊರಿಗೊಂದು ದುರ್ಗಮತೆಯನ್ನು ಒದಗಿಸಿ, ನಿಗೂಢಗಳ ಖಣಿಯಾಗಿಸಿ ಹೊಸ ಹೊಸ ಕಥೆಗಳನ್ನು ಹೊಸೆಯುತ್ತಿತ್ತು.
ನಡುರಾತ್ರಿಯಲ್ಲಿ ಕೆಲವೊಮ್ಮೆ ಇದ್ದಕ್ಕಿದ್ದಂತೆ ತೇಲಿ ಬರುವ ಹುಲಿಯ ಗರ್ಜನೆಗೆ ಇಡಿಯ ಊರೆಲ್ಲ ಸಣ್ಣಗೆ ನಡುಗಿ ಎಚ್ಚರಗೊಳ್ಳುತ್ತಿತ್ತು. ಆ ಕೂಗು ಊರಿನ ಆ ಬದಿಯ ಕಾಡಿನಿಂದ ಬಂತೋ, ಈ ಬದಿಯ ಕಾಡಿಂದ ಬಂತೋ ಎಂಬುದನ್ನು ನಿರ್ಧರಿಸುವ ಗೊಂದಲದಲ್ಲೇ ಇರುಳು ಹರಿದು ಬೆಳಕಾಗುತ್ತಿತ್ತು. ಮರುದಿನ ಅದರ ಬಗೆಗೊಂದು ಚರ್ಚೆ ನಡೆದು, ಯಾವುದೂ ತೀರ್ಮಾನವಾಗದ ಗೊಂದಲದ ಸನ್ನಿವೇಶದಲ್ಲಿ ಊರ ಹಿರಿಯ ನಾಗಪ್ಪಜ್ಜ ಹುಲಿಯ ಕೂಗು ಇಲ್ಲಿಂದಲೇ ಬಂದದ್ದು ಎಂದು ಕೈತೋರಿಸಿ ಹೇಳುತ್ತಿದ್ದ. ವಿಚಿತ್ರವೆಂದರೆ, ನಾಲ್ಕಾರು ದಿನಗಳಲ್ಲಿಯೇ ಅವನು ಹೇಳಿದ ವಿರುದ್ಧ ದಿಕ್ಕಿನ ಕಾಡಿನಂಚಿನಲ್ಲಿ ದನವೊಂದು ನಾಪತ್ತೆಯಾಗಿ ಹುಲಿಯ ಬಾಯಿ ಸೇರಿದ್ದನ್ನು ಅರ್ಧ ಮೆಂದ ದನದ ದೇಹವೇ ಹೇಳುತ್ತಿತ್ತು. ಆಗೆಲ್ಲ ನಾಗಪ್ಪಜ್ಜ ಹುಲಿ ಆ ಕಾಡಿನಿಂದ ಈ ಕಾಡಿಗೆ ಊರ ಗದ್ದೆಯ ನಡುವಿನಿಂದಲೇ ಹಾದುಹೋದ ದಾರಿಯನ್ನು ಹುಲಿಯ ಹೆಜ್ಜೆಗುರುತುಗಳ ಮೂಲಕವೇ ತೋರಿಸುತ್ತಿದ್ದ. ಹೆಚ್ಚಾಗಿ ಅಮಾವಾಸ್ಯೆಯ ಹತ್ತಿರದ ರಾತ್ರಿಗಳಲ್ಲಿ ಹುಲಿಗಳು ಹೀಗೆ ಆಹಾರವನ್ನು ಹುಡುಕುತ್ತಾ ಊರ ನಡುವೆಯೇ ಹಾದುಹೋಗುತ್ತಿದ್ದವು. ರಾತ್ರಿಯ ನಿರ್ಜನ ಗಳಿಗೆಗಳಲ್ಲಿ ನಡೆಯುವ ಈ ವಿಚಿತ್ರ ವಿದ್ಯಮಾನ ಆ ಕ್ಷಣದಲ್ಲಿ ಎಲ್ಲರಲ್ಲಿಯೂ ಭಯ ಮೂಡಿಸಿದರೂ, ಬೆಳಿಗಿನ ಕರೆಗೆ ಹೊಳೆಯೇ ಮೂಲವಾಗಿ ಮತ್ತೆ ಒಂದೆರಡು ದಿನಗಳಲ್ಲಿಯೇ ಎಲ್ಲ ಲೋಕ ವ್ಯವಹಾರಗಳು ಮಾಮೂಲಿನಂತೆ ನಡೆದುಹೋಗುತ್ತಿದ್ದವು.
ವರ್ಷದ ಎಲ್ಲ ಕಾಲದಲ್ಲೂ ಸಾಮಾನ್ಯವಾಗಿ ಮೈದುಂಬಿಕೊಂಡೇ ಇರುವ ಆ ಹೊಳೆಯ ಕಾರಣದಿಂದಲಾಗಿಯೇ ಆಚೀಚೆಯ ದಡದವರು ಹೊಳೆಯ ದಂಡೆಯಲ್ಲೇ ನಿಂತು ಜುಳು ಜುಳು ಹರಿವ ಹೊಳೆಯ ನೀರಿನ ಸದ್ದನ್ನೂ ಮೀರಿಸುವ ಏರುದನಿಯಲ್ಲಿ ಮಾತನಾಡುತ್ತಾ, ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಇಡಿಯ ಊರಿನವರೆದುರು ತೆರೆದಿಡುತ್ತಿದ್ದರು. ಇನ್ನು ಊರ ಹೆಂಗಸರ ಎಲ್ಲ ಮುಖ್ಯ ಕಾರ್ಯಸ್ಥಾನವೂ ಆ ಹೊಳೆಯೇ ಆಗಿರುವುದರಿಂದ ಅವರು ಬೆಳಗಿನ ತಿಂಡಿ ತೀರ್ಥಗಳನ್ನೆಲ್ಲ ಮುಗಿಸಿ ಪಾತ್ರೆ, ಬಟ್ಟೆಯ ಗಂಟಿನೊಂದಿಗೆ ಹೊಳೆಯ ದಂಡೆಗೆ ಬರುತ್ತಿದ್ದರು. ಅವರು ಬರುವ ವೇಳೆಗಾಗಲೇ ಆ ಹೊಳೆ ಅವರ ಮಾತುಗಳಿಗೆ ಕಿವಿಯಾಗಲೋ ಎಂಬಂತೆ ತನ್ನ ದಂಡೆಯ ಮೇಲಿರುವ ಮರಗಳಲ್ಲಿ ಗೂಡು ಕಟ್ಟಿರುವ ಹಕ್ಕಿಗಳನ್ನೆಲ್ಲ ಎಬ್ಬಿಸಿ ಅವರವರ ಕೆಲಸಕ್ಕೆ ಕಳಿಸಿಬಿಡುತ್ತಿತ್ತು. ಹಾಗೆ ಬರುವ ಹೆಂಗಸರು ಪಾತ್ರೆ, ಬಟ್ಟೆಗಳ ಗಂಟಿನೊಂದಿಗೆ ಯಾರಿಗೂ ಕಾಣದಂತೆ ತಮ್ಮ ತಲೆಯ ತುಂಬೆಲ್ಲಾ ಹಿಂದಿನ ದಿನದ ಎಲ್ಲ ಆಗುಹೋಗುಗಳ ಸುದ್ದಿಯ ಮೂಟೆಯನ್ನೂ ಹೊತ್ತು ತರುತ್ತಿದ್ದರು. ವಿಶಾಲವಾಗಿ ಹರಿವ ಹೊಳೆಯ ಪಾತ್ರದಲ್ಲಿ ಮನೆಗೊಂದರಂತೆ ಒಗೆಯುವ ಕಲ್ಲನ್ನು ಇಟ್ಟುಕೊಳ್ಳುವುದು ಅಸಾಧ್ಯವಾದ ಕೆಲಸವೇನೂ ಅಲ್ಲದಿದ್ದರೂ ಇದ್ದ ಎರಡೋ, ಮೂರೋ ಕಲ್ಲಿನಲ್ಲಿಯೇ ಎಲ್ಲವನ್ನೂ ಸುಧಾರಿಸುವುದು ಅಲ್ಲಿನ ಹೆಂಗಳೆಯರ ರೂಢಿಯಾಗಿತ್ತು. ಮೂವರು ಬಟ್ಟೆ ತೊಳೆಯುವಾಗ ಉಳಿದವರೆಲ್ಲ ಸರದಿಗೆ ಕಾಯುವ ನೆವದಲ್ಲಿ ಕುಳಿತು ಸುದ್ದಿ ಹೇಳಲೆಂದು ಈ ಏರ್ಪಾಡು ಎಂಬುದು ಅವರೆಲ್ಲರ ಹಿರಿಯರಿಗೆ ತಿಳಿಯದ ಗುಟ್ಟೇನೂ ಆಗಿರಲಿಲ್ಲ. ಅವರೂ ಅವರ ಯೌವ್ವನದ ಕಾಲದಲ್ಲಿ ಮಾಡಿದ್ದು ಇದನ್ನೇ ಆದ್ದರಿಂದ ಅವರೇನೂ ಹೇಳುವಂತಿರಲಿಲ್ಲ. ಆದರೆ, ಹೊಳೆ ಮಾತ್ರ ಕೆಲವೊಮ್ಮೆ ಅವರ ಈ ಹುಚ್ಚಾಟಗಳಿಗೆ ತುಟಿತೆರೆಯದೇ ಒಳಗೊಳಗೇ ಗುಳಗುಳನೆ ನಗುತ್ತಿತ್ತು. ಆಗೆಲ್ಲ ಅದರ ನಗೆ ಹರಿವ ನೀರಿನೊಳಗೊಂದು ಸುಳಿಯುಂಟುಮಾಡಿ ತಿರುತಿರುಗಿ ಸಾಗುತ್ತಿತ್ತು. ಹರಿವ ನೀರಿನ ಶ್ರುತಿಗೆ ತಮ್ಮ ಸ್ವರವನ್ನು ಸೇರಿಸುದಯದ ಆ ಹೆಂಗಳೆಯರು ತಮ್ಮದೇ ಜಗತ್ತಿನ ವಿಸ್ಮಯಗಳನ್ನು ತೆರೆದುಕೊಳ್ಳುತ್ತಿದ್ದರೆ ಆ ಮಾಯಾವಿ ಹೊಳೆ ತನಗೆ ಏನೂ ಕೇಳಲಿಲ್ಲವೆಂಬ ಸೋಗಿನಿಂದ ಸುಯ್ಯನೆ ಹರಿಯುತ್ತಿತ್ತು. ನಿನ್ನೆ ಕುಡಿದು ಬಂದು ತನ್ನನ್ನು ಚಚ್ಚಿದ ಗಂಡನ ಸುದ್ದಿ ಹೇಳುವಾಗ ನಾಗಿಗೆ ಅದೆಂತಹ ಆವೇಶವೋ ತಿಳಿಯದು, ಕೈಯಲ್ಲಿನ ಚಾದರವನ್ನು ಕಲ್ಲಿಗೆ “ಡಬ್ ಡಬ್’ ಎಂದು ಬಡಿದು “ಶ್ ಶ್’ ಎಂಬ ಶಬ್ದದೊಂದಿಗೆ ಕೈಯಲ್ಲಿ ಅವನೇ ಸಿಕ್ಕಿರುವನೇನೋ ಎಂಬಂತೆ ಜಾಡಿಸುತ್ತಿದ್ದಳು.
ಮೊನ್ನೆಯಷ್ಟೇ ಮದುವೆಯಾದ ಹೊಸ ಮದುವಣಗಿತ್ತಿ ಕೆಂಪಿ, “”ನಮ್ಮನಿಯೋರದ್ದು ಅದೊಂದಿಲ್ಲ” ಎಂದು ತನ್ನವನ ಕಲ್ಯಾಣಗುಣವನ್ನು ಹೇಳಿ ಹಿಗ್ಗುವಾಗ ಉಳಿದವರೆಲ್ಲ ಹುಬ್ಬುಹಾರಿಸಿ ಗುಟ್ಟು ಮಾತಾಡಿದ್ದು ಗಂಡನ ನೆನಪಲ್ಲಿ ಕರಗಿಹೋದ ಅವಳಿಗೆ ಕಾಣಲಿಲ್ಲ. ಅಷ್ಟರಲ್ಲಿ ಹೊಳೆಯ ನಡುವೆ ಎಲ್ಲಿಂದಲೋ ತೇಲಿಬಂದ ತೆಂಗಿನಕಾಯಿಯೊಂದನ್ನು ಕಂಡು ಚೆಂಗನೆ ಜಿಗಿದ ಕಲ್ಯಾಣಿ ಅದನ್ನು ಹೆಕ್ಕಿ ತಂದು, “”ಪದಾರ್ಥಕ್ಕೆ ಕಾಯಿಲ್ಲ. ವಡಿದೀರ ಮನಿಗೆ ಹೋಗಿ ತರ್ಬೇಕು ಅಂತ ಚಿಂತೆ ಮಾಡ್ತಿದ್ದೆ. ದೇವ್ರು ಇಲ್ಲೇ ತಂದುಕೊಟ್ಟ ಕಾಣು” ಎಂದು ಕಾಣದ ದೇವರಿಗೆ ಕೈ ಮುಗಿದಳು. “”ನೀನು ಕೇಳಿದ್ರೆ ವಡಿದೀರು ಇಲ್ಲಾ ಅಂತಿದ್ರೆ? ಒಂದು ಕೇಳಿದ್ರೆ ಎರಡು ಕೊಡ್ತೀರು” ಎಂದು ನಾಗವೇಣಿ ರಾಗ ಎಳೆದಾಗ ಮುಂಗೋಪದ ಕಲ್ಯಾಣಿ, “”ಹಾಂ, ಕೊಡು, ಅವ್ರು ನನ್ನ ಬಗಲಲ್ಲವರೆ” ಎಂದು ಜಗಳಕ್ಕೆ ನಿಲ್ಲುವವಳೆ. “”ಅಮ್ಮೆಣ್ಣು, ತಡೀರೆ ಮಾರಾಯ್ತಿರಾ. ನೀವೆಂತಕ್ಕೆ ಜಗಳ ಶುರುಮಾಡದ್ದು?” ಎಂದು ಬಿಸಿರಕ್ತದ ಇಬ್ಬರನ್ನೂ ಸುಮ್ಮನಿರಿಸುತ್ತಾಳೆ. ಒಡೆದೀರ ಸುದ್ದಿ ಬಂದದ್ದೇ ಸುಮ್ಮನಿರಲಾರದ ಯಂಕಿ, “”ಒಂದು ಹೊಸಾ ಸುದ್ದಿ ಕಾಣಿ. ಮತ್ತೆ ನಾ ಹೇಳಿದ್ದೆ ಹೇಳಬೇಡಿ. ಅದೇ ಆ ಮೇಲಿನ ಮನೆ ನಾಗಿ ಮತ್ತೆ ಇವರು ಒಟ್ಟಿಗೆ ಸೊಪ್ಪು ತರೂಕು ಹೋತ್ರು ಅಂತ ಸುದ್ದಿ” ಎಂದು ಹೊಸ ಕಥೆಯೊಂದಕ್ಕೆ ಮುನ್ನುಡಿ ಬರೆದಾಗ ಎಲ್ಲರೂ “”ಟಾಚೂ…” ಎಂಬ ಮಕ್ಕಳಾಟದ ಗೊಂಬೆಗಳಂತೆ ಹಾಗೇ ಸ್ತಬ್ಧರಾಗಿಬಿಟ್ಟರು!
ಸುಧಾ ಆಡುಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?