ಹೊಸ ವರ್ಷದ ಆ ಮೊದಲ ದಿನ


Team Udayavani, Jan 3, 2020, 5:15 AM IST

14

ಜನವರಿ 1ನೆಯ ತಾರೀಕು ಯಥಾಪ್ರಕಾರ ಅವಳ ಪಾಲಿಗೆ ಬೆಳಗಾಗಿದೆ. ಕಳೆದ ವರ್ಷದಂತೆಯೇ ಈ ವರ್ಷವೂ ಐದು ಗಂಟೆಗೆ ಎದ್ದಿದ್ದಾಳೆ. ಅನ್ನಕ್ಕೆ ನೀರು ಇಟ್ಟಿದ್ದಾಳೆ. ಏನು ಸಾಂಬಾರು ಮಾಡೋಣ ಎಂದು ಯೋಚಿಸುತ್ತಿದ್ದಾಳೆ. ಕೊತ್ತಂಬರಿ ಡಬ್ಬಿ ಬರಿದಾಗಿರುವುದನ್ನು ನೋಡಿ, “ಛೆ! ಮರೆತೆ, ಇವತ್ತು ಅಂಗಡಿಗೆ ಹೋಗಿ ತರಬೇಕು’ ಎಂದು ತನ್ನಲ್ಲಿಯೇ ಗೊಣಗಿದ್ದಾಳೆ. ನಿನ್ನೆ ರಾತ್ರಿ ನೆನೆ ಹಾಕಿದ ಅಕ್ಕಿಯನ್ನು ಮಿಕ್ಸಿಗೆ ಹಾಕಿದ್ದಾಳೆ. ಮಿಕ್ಸಿಯ “ಗರ್ರ’ ಎಂಬ ಸದ್ದಿಗೆ ಗಂಡ ಮತ್ತು ಮಕ್ಕಳು “ಎಂಥ ಕಿರಿಕಿರಿ’ ಎಂದು ಗೊಣಗಿದ್ದನ್ನು ಕೇಳಿಸಿ ಕೊಂಡಿದ್ದಾಳೆ. ಮುಸುಕು ಹೊದ್ದು ಮಲಗಿರುವ ಮಕ್ಕಳನ್ನು ಗದರಿಸಿ, “ಏಳಿ, ಶಾಲೆಗೆ ತಡವಾಗುತ್ತದೆ’ ಎಂದಿದ್ದಾಳೆ. ಅಷ್ಟರಲ್ಲಿ ಗಂಡ ಎದ್ದು ಮುಖ ಪ್ರಕ್ಷಾಳನ ಮುಗಿಸಿ ವಾಕಿಂಗ್‌ಗೆ ಹೊರಟು ನಿಂತಿ ದ್ದಾನೆ. “ವಾಪಸು ಬರು ವಾಗ ಅರ್ಧ ಲೀಟರ್‌ ಹಾಲು ತನ್ನಿ’ ಎಂದು ಹೇಳುವುದನ್ನು ಮರೆತಿದ್ದಾಳೆ.

2020ರ ಮೊದಲ ದಿನ ಹೊಸ ವರ್ಷವನ್ನು ಜಗತ್ತಿನ ಎಲ್ಲೆಲ್ಲಿ ಆಚರಿಸಬಹುದು ಎಂದು ಕುರಿತು ಮಾಹಿತಿಯನ್ನು ಅಂತರ್ಜಾಲದಲ್ಲಿ ಹುಡುಕಾಡಿದಾಗ ಒಂದೆಡೆ 29 ಸ್ಥಳಗಳ ಪಟ್ಟಿ ಸಿಕ್ಕಿತ್ತು. ಅದರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಿದೆ, ಥೈಲ್ಯಾಂಡ್‌ನ‌ ಬ್ಯಾಂಕಾಕ್‌ ಇದೆ, ಸ್ಪೈನ್‌ನ ಮ್ಯಾಡ್ರಿಡ್‌ ಇದೆ. ಆದರೆ, ಭಾರತದ ಯಾವ ಸ್ಥಳವೂ ಇದ್ದ ಹಾಗೆ ಇಲ್ಲ. ಇದ್ದರೆ, ಗೋವಾ, ಊಟಿ ಮೊದಲಾದ ಸ್ಥಳಗಳಿರುತ್ತಿದ್ದವು. ಹಾಗೆಂದು, ಅದೊಂದು ಕೇವಲ ಪ್ರವಾಸಿ ವೆಬ್‌ಸೈಟ್‌ ಒಂದರ ಮೂಲಕ ಮಾಡುವ ಪ್ರಚಾರ ಮಾಹಿತಿ ಇರಬೇಕು, ಇರಲಿ ಬಿಡಿ. ಹೊಸ ವರ್ಷವನ್ನು ಬಹುತೇಕ ಜಗತ್ತಿನ ಎಲ್ಲರೂ ಆಚರಿಸುತ್ತಾರೆ. ಹೊಸ ವರ್ಷದ ಆಚರಣೆಗೆ ದೂರದ ಊರುಗಳಿಗೆ ತೆರಳುತ್ತಾರೆ. ಆದರೆ, ಪುರುಷರು ಸಂಭ್ರಮಿಸುವ ಬಗೆಯಲ್ಲಿ ಮಹಿಳೆಯರಿಗೆ ಅವಕಾಶ ಇರುವುದಿಲ್ಲ ಎಂಬುದು ಅಷ್ಟೇ ಸತ್ಯ. ಅದರಲ್ಲೂ ಭಾರತದಂಥ ಸಂಪ್ರದಾಯ ಪ್ರಧಾನವಾದ ದೇಶದಲ್ಲಿ ಹೊಸ ವರ್ಷದ ಆಚರಣೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯೇ.

ಹಳೆಯ ವರ್ಷ ಹೋಯಿತು, ಹೊಸವರ್ಷ ಬಂತು ಎಂದು ರಾತ್ರಿ ಹನ್ನೆರಡು ಗಂಟೆಗೆ ಹೊನಲು ಬೆಳಕಿನಲ್ಲಿ ಕುಣಿಯುವವರೆಲ್ಲ ಗಂಡಸರೇ. ಅಲ್ಲಿರುವ ಗೋಷ್ಠಿ ವೈವಿಧ್ಯಗಳು ಕೂಡ ಅವರಿಗೇ ಮೀಸಲು. ಮಹಿಳೆಯರು ಅದರ ಬಳಿ ಸುಳಿಯುವುದೇ ಇಲ್ಲ. ಸುಳಿದರೂ ಅಲ್ಲಿನ ಸಂತೋಷ ಕೂಟಗಳಲ್ಲಿ ಭಾಗವಹಿಸುವುದಿಲ್ಲ.

ಮನೆಯ ಒಳಗಿನ ಬದುಕು
ಬಹುಶಃ ಅರ್ಧಭಾರತದಲ್ಲಿ ಇವತ್ತಿಗೂ “ಮಹಿಳೆಯರ ಬದುಕು ಮನೆಯ ಒಳಗೆ, ಮನೆಯ ಹೊರಗಿನ ಬದುಕು ಪುರುಷರಿಗೇ ಮೀಸಲು’ ಎಂಬಂಥ ಸ್ಥಿತಿಯಿದೆ. ಸ್ತ್ರೀಸ್ವಾತಂತ್ರ್ಯದ ಬಗ್ಗೆ ಮಾತನಾಡುವಾಗಲೂ ನಮ್ಮ ಹೆಚ್ಚಿನ ಸಮೀಕ್ಷೆಗಳು ನಗರ ಕೇಂದ್ರಿತವೇ ಆಗಿರುತ್ತವೆೆ. ಮುಂಬೈ, ಬೆಂಗಳೂರು, ದೆಹಲಿ, ಕೊಲ್ಕತಾಗಳಲ್ಲಿ ನಗರಗಳಲ್ಲಿ ಸಂಜೆಯ ಬಳಿಕವೂ ಮಹಿಳೆಯರು ಧೈರ್ಯವಾಗಿ ಓಡಾಡುವುದನ್ನು ನೋಡಿಯೇ “ಮಹಿಳಾ ಸ್ವಾತಂತ್ರ್ಯ’ದ ಫ‌ಲಿತಾಂಶದ ಮಟ್ಟವನ್ನು ನಿರ್ಧರಿಸುತ್ತೇವೆ. ಆದರೆ, ನಗರಗಳಾಚೆಗೆಯೂ ಒಂದು ಜಗತ್ತಿದೆ, ಅಲ್ಲಿ ಮಹಿಳೆಯರೂ ಇದ್ದಾರೆ ಎಂಬುದು ಆಧುನಿಕ ಚಿಂತಕರ ಗಮನಕ್ಕೆ ಬರುವುದಿಲ್ಲ.

ಹಳ್ಳಿಯ ಎಷ್ಟೋ ಮಂದಿ ಮಹಿಳೆಯರು ಇವತ್ತಿಗೂ ಮನೆಯೊಳಗಿನ ಬದುಕನ್ನೇ ಇಷ್ಟಪಡುತ್ತಾರೆ. ದೆಹಲಿ, ಹೈದರಾಬಾದ್‌ಗಳಲ್ಲಿಯೇ ಹಾಗಾಗಿರುವಾಗ ಉಳಿದ ನಗರ-ಹಳ್ಳಿಗಳ ಪಾಡೇನು! “ಹುಡುಗಿಯರು ಆರು ಗಂಟೆಗೆ ಮನೆ ಸೇರಬೇಕು’ ಎಂಬ ನಿಯಮ ಇವತ್ತಿಗೂ ಹೆಚ್ಚಿನ ಕಡೆಗಳಲ್ಲಿ ಇದೆ. “ಸೇಫಾಗಿ ಹೋಗಬಹುದಾ?’ ಎಂದು ನೂರು ಬಾರಿ ಹೆಣ್ಣುಮಕ್ಕಳು ಯೋಚಿಸಬೇಕಾದ ಸ್ಥಿತಿಯಲ್ಲಿ ಮಧ್ಯರಾತ್ರಿ ಪ್ರವೇಶಿಸುವ ಹೊಸವರ್ಷವನ್ನು ಸಂಭ್ರಮಿಸುವುದಾದರೂ ಹೇಗೆ?

ಮೊನ್ನೆ ಜನವರಿ ಒಂದನೆಯ ತಾರೀಕು…
ಜನವರಿ 1ನೆಯ ತಾರೀಕು ಯಥಾಪ್ರಕಾರ ಅವಳ ಪಾಲಿಗೆ ಬೆಳಗಾಗಿದೆ. ಕಳೆದ ವರ್ಷದಂತೆಯೇ ಈ ವರ್ಷವೂ ಐದು ಗಂಟೆಗೆ ಎದ್ದಿದ್ದಾಳೆ. ಅನ್ನಕ್ಕೆ ನೀರು ಇಟ್ಟಿದ್ದಾಳೆ. ಏನು ಸಾಂಬಾರು ಮಾಡೋಣ ಎಂದು ಯೋಚಿಸುತ್ತಿದ್ದಾಳೆ. ಕೊತ್ತಂಬರಿ ಡಬ್ಬಿ ಬರಿದಾಗಿರುವುದನ್ನು ನೋಡಿ, “ಛೆ! ಮರೆತೆ, ಇವತ್ತು ಅಂಗಡಿಗೆ ಹೋಗಿ ತರಬೇಕು’ ಎಂದು ತನ್ನಲ್ಲಿಯೇ ಗೊಣಗಿದ್ದಾಳೆ. ನಿನ್ನೆ ರಾತ್ರಿ ನೆನೆ ಹಾಕಿದ ಅಕ್ಕಿಯನ್ನು ಮಿಕ್ಸಿಗೆ ಹಾಕಿದ್ದಾಳೆ. ಮಿಕ್ಸಿಯ “ಗರ್ರ’ ಎಂಬ ಸದ್ದಿಗೆ ಗಂಡ ಮತ್ತು ಮಕ್ಕಳು “ಎಂಥ ಕಿರಿಕಿರಿ’ ಎಂದು ಗೊಣಗಿದ್ದನ್ನು ಕೇಳಿಸಿಕೊಂಡಿದ್ದಾಳೆ. ಮುಸುಕು ಹೊದ್ದು ಮಲಗಿರುವ ಮಕ್ಕಳನ್ನು ಗದರಿಸಿ, “ಏಳಿ, ಶಾಲೆಗೆ ತಡವಾಗುತ್ತದೆ’ ಎಂದಿದ್ದಾಳೆ. ಅಷ್ಟರಲ್ಲಿ ಗಂಡ ಎದ್ದು ಮುಖ ಪ್ರಕ್ಷಾಳನ ಮುಗಿಸಿ ವಾಕಿಂಗ್‌ಗೆ ಹೊರಟು ನಿಂತಿದ್ದಾನೆ. “ವಾಪಸು ಬರುವಾಗ ಅರ್ಧ ಲೀಟರ್‌ ಹಾಲು ತನ್ನಿ’ ಎಂದು ಹೇಳುವುದನ್ನು ಮರೆತಿದ್ದಾಳೆ. ಮಗನನ್ನು ಪುಸಲಾಯಿಸಿ, “ಹೋಗೊ, ಅರ್ಧ ಲೀಟರ್‌ ಹಾಲು ತಾ’ ಎಂದು ಹೊರಡಿಸಿದ್ದಾಳೆ. ಆತ ಉದಾಸೀನದಲ್ಲಿ ಮೈಮುರಿದುಕೊಳ್ಳುತ್ತ ಅಂಗಡಿಗೆ ಹೊರಟಿದ್ದಾನೆ. “ಚೀಲ ಒಯ್ಯಲು ಮರೆಯಬೇಡ, ಬರುವಾಗ ರಸ್ತೆಯ ಮೇಲೆ ಹಾಲಿನ ಪ್ಯಾಕೆಟ್‌ ಬೀಳಿಸಬೇಡ’ ಎಂದು ಒಳಗಿನಿಂದಲೇ ಕೂಗಿ ಹೇಳಿದ್ದಾಳೆ. ಗಂಡ ಬೆಳಗಿನ ವಿಹಾರ ಮುಗಿಸಿ ವಾಪಸು ಬಂದು ಹಲ್ಲುಜ್ಜಿ, ಸ್ನಾನ, ಪೂಜೆ ಎಲ್ಲವನ್ನೂ ಮುಗಿಸಿ ಸಿದ್ಧನಾಗಿ, “ಛೆ! ಇನ್ನೂ ಆಗಿಲ್ಲವೆ?’ ಎಂದು ಮುಖ ಸಿಂಡರಿಸಿದ್ದಾನೆ. ಗಂಡನ, ಮಕ್ಕಳ ಬುತ್ತಿಗೆ ಬೇಗ ಬೇಗನೆ ಅನ್ನ, ಪದಾರ್ಥ ತುಂಬಿಸಿ ಕಟ್ಟಿಟ್ಟು ದೋಸೆ ಹೊಯ್ಯಲು ಆರಂಭಿಸಿದ್ದಾಳೆ. ಅಷ್ಟರಲ್ಲಿ ಮಗಳು, “ಪುನಃ ಇವತ್ತೂ ನೀರುದೋಸೆಯಾ? ನನಗೆ ಬೇಡ’ ಎಂದು ಮುಖ ತಿರುಗಿಸಿದ್ದಾಳೆೆ. “ತಿನ್ನು, ನಿಮಗೆ ಯಾವಾಗಲೂ ನೂಡಲ್ಸೇ ಆಗಬೇಕು. ಅದು ವಿಷ! ದೋಸೆ ತಿನ್ನಲೇನು ಸಂಕಟ?’ ಎಂದು ಗದರಿದ್ದಾಳೆ. ಗಂಡ ನಾಲ್ಕೈದು ದೋಸೆ ತಿಂದು, ಕೈತೊಳೆದು, ಕಚೇರಿಗೆ ಹೊರಡಲು ಸಿದ್ಧನಾಗಿದ್ದಾನೆೆ. “ನನ್ನ ಬ್ಲ್ಯಾಕ್‌ಕಲರ್‌ ಪ್ಯಾಂಟ್‌ ಎಲ್ಲಿ?’ ಎಂದು ಕೂಗಿ ಕೇಳಿದ್ದಾನೆ. ಮನೆಯ ಬಾಲ್ಕನಿಗೆ ಓಡಿಹೋಗಿ ಕಪ್ಪು ಕಲರ್‌ನ ಪ್ಯಾಂಟನ್ನು ತಂದೊಪ್ಪಿಸಿದ್ದಾಳೆ. ಮಗನಿಗೆ ಅಂಗಿಗೆ ಇಸ್ತ್ರಿ ಹಾಕಿ, ಮಗಳಿಗೆ ಎರಡು ಜಡೆ ಕಟ್ಟಿ ಹೊರಡಿಸುವಷ್ಟರಲ್ಲಿ ಸ್ಟವ್‌ನಲ್ಲಿ ಇಟ್ಟಿರುವ ದೋಸೆ ಕರಟಿಹೋಗಿರುತ್ತದೆ. ಅದನ್ನು ತೆಗೆದು ಸ್ಟವ್‌ ಆಫ್ ಮಾಡಿ (ಕೆಲಸಕ್ಕೆ ಹೋಗುವವಳಾದರೆ) ಕಚೇರಿಗೆ ಹೊರಡಲು ಸಿದ್ಧಳಾಗುತ್ತಾಳೆ.

ಅದರ ಮಧ್ಯದಲ್ಲೊಮ್ಮೆ ಐದು ನಿಮಿಷ ಪುರುಸೊತ್ತು ಮಾಡಿಕೊಂಡು ಚಹಾದ ಲೋಟವನ್ನು ಕೈಯಲ್ಲಿ ಹಿಡಿದು ಕುರ್ಚಿಗೆ ಒರಗಿ ಕುಳಿತುಕೊಂಡಿದ್ದಾಳೆ. ಅದು ಮಾತ್ರ ಅವಳದೇ ಸಮಯ! ಆಗ ಗಂಡ, “ನನ್ನ ಸಾಕ್ಸ್‌ ಎಲ್ಲಿದೆ?’ ಎಂದು ಕೇಳುತ್ತ ಹಾರಾಡಿದರೂ, ಮಕ್ಕಳು, “ನನ್ನ ಪೆನ್ಸಿಲ್‌ ಕಾಣಿಸುವುದಿಲ್ಲ’ ಎಂದು ರಂಪಾಟ ಮಾಡಿದರೂ ಅವಳು ಕದಲುವುದಿಲ್ಲ. ಟೀ ಕುಡಿಯುತ್ತ, ಧ್ಯಾನಸ್ಥನಾದ ಝೆನ್‌ ಬುದ್ಧಿಸ್ಟಳಂತೆ ದೃಢವಾಗಿ ಕುಳಿತುಕೊಂಡಿದ್ದಾಳೆ. ಚಹಾದ ಕೊನೆಯ ಸಿಪ್‌ ಸೇವಿಸುತ್ತಿದ್ದಂತೆ “ಲೌಕಿಕ’ಕ್ಕೆ ಬಂದಿದ್ದಾಳೆ. ಬಟ್ಟೆಗಂಟನ್ನು ಹೊತ್ತುಕೊಂಡು ಬಟ್ಟೆಕಲ್ಲಿನತ್ತ ಸಾಗಿದ್ದಾಳೆ. ಹಾಗೇ ಮಧ್ಯಾಹ್ನವಾಗಿದೆ, ದಿನ ಸಂಜೆಯತ್ತ ಉರುಳಿದೆೆ. ಮನೆಯಿಂದ ಹೊರಗೆ ಹೋದವರು ಮತ್ತೆ ಮನೆ ಸೇರಿದ್ದಾರೆೆ.

ಮತ್ತೆ ಅವಳ ಕಾಲುಗಳು ಅಡುಗೆ ಮನೆಯತ್ತ ಚಲಿಸುತ್ತಿವೆ. ರಾತ್ರಿಯ ಅಡುಗೆ ಸಿದ್ಧವಾಗುತ್ತದೆ. ಎಲ್ಲರೂ ಟೇಬಲ್‌ ಸುತ್ತ ನೆರೆಯುತ್ತಾರೆ. ಉಣ್ಣುತ್ತಾರೆ. ಮಲಗುವ ಕೋಣೆಯತ್ತ ಚಲಿಸುತ್ತಾರೆ.

ಮರುದಿನ ಎರಡನೆಯ ತಾರೀಕು. ಮತ್ತೆ ಬೆಳಗಾಗಿದೆ. ಒಂದನೆಯ ತಾರೀಕಿನಂತೆ ಎರಡನೆಯ ತಾರೀಕು ಕೂಡ. ಕ್ಯಾಲೆಂಡರುಗಳ ಪುಟಗಳು ಬದಲಾಗುತ್ತವೆ. ಗೃಹಿಣಿ ಮಾತ್ರ ಅವಳಷ್ಟಕ್ಕೆ ಕೆಲಸ ಮಾಡುತ್ತಾಳೆ.

ಭಾರತದ ಎಲ್ಲ ಮಹಿಳೆಯರ ಸ್ಥಿತಿ ಹೀಗಿದೆ ಎಂದು ಕೇಳಿದರೆ “ಇಲ್ಲ’ ಎಂಬುದು ಸಾಮಾನ್ಯ ಉತ್ತರ. ಎಷ್ಟೋ ಮನೆಗಳಲ್ಲಿ ಗಂಡಸರು ಮನೆಗೆಲಸದಲ್ಲಿ ಸಹಾಯ ಮಾಡುತ್ತಾರೆ. ಉದ್ಯೋಗಕ್ಕೆ ಹೋಗುವ ಹೆಂಡತಿಗೆ ಅನುಕೂಲವಾಗಲೆಂದು ತಾವು ಕೆಲಸ ಬಿಟ್ಟು ಅಥವಾ ಸಣ್ಣ ಕೆಲಸ ಮಾಡಿಕೊಂಡು ಸಹಕರಿಸುವ ಗಂಡಸರೂ ಇದ್ದಾರೆ. ಇದು ಕೆಲವು ಕುಟುಂಬಗಳಲ್ಲಿ ಮಾತ್ರ. ಹೆಚ್ಚಿನ ಕಡೆ, ಮಹಿಳೆಯ ಸ್ಥಿತಿ ಅದೇ ರೀತಿಯಲ್ಲಿ ಮುಂದುವರಿದಿರುತ್ತದೆ. 2020 ಬಂದರೂ ಅವಳು ಬದಲಾಗುವುದಿಲ್ಲ, ಅವಳ ಕೆಲಸ ಬದಲಾಗುವುದಿಲ್ಲ. ಎಲ್ಲರಿಗೂ ತಿಳಿದಿದೆ, ಮದುವೆ ಎನ್ನುವುದಂತೂ ಒಂದು ಬಗೆಯ ಒಪ್ಪಂದ. ಆ ಒಪ್ಪಂದದಲ್ಲಿ ಒಬ್ಬರು ಇನ್ನೊಬ್ಬರನ್ನು ದೂಷಿಸದೆ, ಪರಸ್ಪರ ಪೂರಕರಾಗಿ ಸಮಾಜದ ಮುಂದೆ ಕಾಣಿಸಿಕೊಳ್ಳಬೇಕೆಂಬ ನಿರ್ಣಯವೂ ಅದೃಶ್ಯವಾಗಿ ಅಡಕವಾಗಿರುತ್ತದೆ. ಹಾಗಾಗಿಯೇ ಎಷ್ಟೋ ಹೆಣ್ಣುಮಕ್ಕಳು ತಮ್ಮ ಕಷ್ಟಗಳನ್ನು ತೋಡಿಕೊಳ್ಳದೆ, ತಮ್ಮೊಳಗೆಯೇ ನುಂಗಿಕೊಳ್ಳುತ್ತಾರೆ. ಹಾಗೆ ಮಾಡದೆ ಬೇರೆ ಉಪಾಯವೂ ಇಲ್ಲ !

ನಮ್ಮಲ್ಲಿ ಸ್ತ್ರೀ ಸ್ವಾಭಿಮಾನ, ಸ್ತ್ರೀ ಸ್ವಾವಲಂಬನೆ ಎಂಬ ಪದಗಳು ನಿಬಿಡವಾಗಿ ಬಳಕೆಯಲ್ಲಿದೆಯಾದರೂ ಎಲ್ಲರ ಸ್ವಾಭಿಮಾನ, ಸ್ವಾವಲಂಬನೆಗಳು ಒಂದೆಯೊ ಎಂಬ ಪ್ರಶ್ನೆಗೆ ಉತ್ತರ ಇವತ್ತಿಗೂ ಕಷ್ಟವೇ. ಕೂಲಿ ಮಹಿಳೆಯೊಬ್ಬಳ, ಬ್ಯಾಂಕ್‌ ಉದ್ಯೋಗಿಯೊಬ್ಬಳ, ವೈದ್ಯೆಯೊಬ್ಬಳ- ಹೀಗೆ ಬೇರೆ ಬೇರೆ ಮಂದಿಗಳ ಸ್ಥಿತಿಗಳು ಬೇರೆ ಬೇರೆ.

ಹಾಗಾಗಿ, ಹೊಸವರ್ಷವೂ ಎಲ್ಲರಿಗೆ ಒಂದೇ ಅಲ್ಲ. ಅವರವರ ಆಚರಣೆ ಅವರವರಿಗೆ. ಅವರವರ ಸಂಭ್ರಮ ಅವರವರಿಗೆ. ಅವರವರ ದುಃಖ ಅವರವರಿಗೆ.

ಮನೋಹರಿ ಕೆ.

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.