ಇಂದಿನಿಂದ ಚುನಾವಣಾ ಬಜೆಟ್ ಕಸರತ್ತು
Team Udayavani, Feb 13, 2018, 8:15 AM IST
ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ರಾಜ್ಯ ಪ್ರವಾಸಕ್ಕೆ ಜತೆಗೂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಗಳವಾರದಿಂದ ರಾಜ್ಯ ಬಜೆಟ್ -2018-19 ಗೆ ಅಂತಿಮ ಸ್ಪರ್ಶ ನೀಡುವ ಕಾರ್ಯದಲ್ಲಿ ತೊಡಗಲಿದ್ದಾರೆ.
ಈಗಾಗಲೇ ಎಲ್ಲ ಇಲಾಖೆಗಳು ಹಾಗೂ ವಾಣಿಜ್ಯೋದ್ಯಮ, ಚಿತ್ರೋದ್ಯಮ, ರೈತಪರ ಸಂಘಟನೆಗಳ ಜತೆ ಬಜೆಟ್ ಪೂರ್ವಬಾವಿ ಸಭೆ
ಮುಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಗಳವಾರದಿಂದ ಮೂರು ದಿನಗಳ ಕಾಲ ಬಜೆಟ್ ಅಂತಿಮಗೊಳಿಸಲಿದ್ದಾರೆ. ಈಗಾಗಲೇ ಬಜೆಟ್ ಕರಡು ಸಿದ್ಧವಾಗಿದ್ದು, ಹಣಕಾಸು, ವಾಣಿಜ್ಯ ತೆರಿಗೆ, ಅಬಕಾರಿ, ಮುದ್ರಾಂಕ -ನೋಂದಣಿ, ಸಾರಿಗೆ ಇಲಾಖೆಗಳ ಜತೆ ಮತ್ತೂಂದು ಸುತ್ತಿನ ಚರ್ಚೆ ನಡೆಸಿ “ಅಂತಿಮ ಸ್ಪರ್ಶ’ ನೀಡಿದ್ದಾರೆ.
ರಾಹುಲ್ಗಾಂಧಿ ಅವರೊಂದಿಗೆ ಹೈದರಾಬಾದ್ -ಕರ್ನಾಟಕ ಭಾಗದಲ್ಲಿ ಪ್ರವಾಸದಲ್ಲಿದ್ದ ಸಿಎಂ ಸಿದ್ದರಾಮಯ್ಯ ಸೋಮವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಮಂಗಳವಾರದಿಂದ ಬಜೆಟ್ ಸಿದ್ಧತಾ ಕಾರ್ಯದಲ್ಲಿ ತೊಡಗಲಿದ್ದು ಇದಕ್ಕಾಗಿ ಪ್ರಮುಖ ಅಧಿಕಾರಿಗಳ ತಂಡವೂ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಾರಿಯದು ಚುನಾವಣೆ ಬಜೆಟ್ ಎಂದೇ ವ್ಯಾಖ್ಯಾನಿಸಲಾಗುತ್ತಿದ್ದು, ಅಹಿಂದ ವರ್ಗದ ಮತಬ್ಯಾಂಕ್ ಮೇಲೆ ಕಣ್ಣಿಟ್ಟು ಹೊಸ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಯಿದ್ದು, ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲದ ಪೈಕಿ ಇಂತಿಷ್ಟು ಮೊತ್ತ ಮನ್ನಾ ಮಾಡುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಸಹ ತಮ್ಮ ಪ್ರವಾಸದ ಸಂದರ್ಭದಲ್ಲಿ ಬಜೆಟ್ನಲ್ಲಿ ಜನಪರ ಯೋಜನೆ ಸೇರ್ಪಡೆ ಮಾಡುವ ಬಗ್ಗೆ ಹಾಗೂ ಬಡವರ್ಗ, ರೈತಾಪಿ ವರ್ಗದ ನೆರವಿಗೆ ಧಾವಿಸಲು ಕೆಲವೊಂದು ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಿದ್ದಾರೆ ಎಂದೂ ಹೇಳಲಾಗಿದೆ.