ನಿನ್ನ ಪಾಲಿಗೆ ನಾನು ರಾಧೆಯೋ, ರುಕ್ಮಿಣಿಯೋ?
Team Udayavani, Nov 6, 2018, 4:00 AM IST
ನಿನ್ನ ಹುಚ್ಚು ಕೋಪ ತುಂಬಾ ಸಲ ನನಗೆ ಬೇಜಾರು ಮಾಡಿದೆ. ಆದ್ರೂ, ನಿನ್ನನ್ನು ಪ್ರತಿದಿನ ಹೊಸದಾಗಿ ಪ್ರೀತಿಸ್ತೀನಿ. ಅದೇ ಕಾರಣಕ್ಕಾಗಿಯೇ ನಿನ್ನನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡಲ್ಲ.
ನಾವಿಬ್ಬರೂ ಒಳ್ಳೆಯ ಗೆಳೆಯರಾಗಿದ್ದೀವಿ. ಆಗಲೂ, ಈಗಲೂ. ಮುಂದೆಯೂ ಹೀಗೇ ಇರಿ¤àವಿ ಅನ್ನೋದೂ ನಿಜವೇ. ಆದರೂ, ಒಂದೂವರೆ ವರ್ಷದಿಂದ, ಒಂದು ಪ್ರಶ್ನೆಯನ್ನು ನನ್ನೊಳಗೆ ನಾನೇ ಕೇಳಿಕೊಳ್ಳುತ್ತಾ ಇದ್ದೇನೆ. ನನಗೆ ನೀನು ಏನಾಗಬೇಕು? ನನ್ನ ಪ್ರತಿಯೊಂದು ಪ್ರಶ್ನೆಗೂ ಉತ್ತರ ಕೊಡೋ ನೀನು, ಈ ವಿಷಯದಲ್ಲಿ ಮಾತ್ರ ಮೌನವಾಗಿದ್ದೀಯ.
“ಲೋ, ನೀನಂದ್ರೆ ಇಷ್ಟ ಕಣೋ. ಅಷ್ಟೆ’ ಅಂತ ಹೇಳಿಬಿಡಲಾ? ಅಂಥ ಭಾವನೆ ನನ್ನೊಳಗೆ ಹುಟ್ಟಿರುವುದು ನಿಜವಾ? ನನಗೆ ಅರ್ಥ ಆಗ್ತಾ ಇಲ್ಲ. ಪದೇ ಪದೆ ನಿನ್ನನ್ನು ನೋಡಬೇಕು, ಮಾತಾಡಬೇಕು ಅನ್ನಿಸುತ್ತದೆ ಅಂದಾಗ, “ಇಷ್ಟ್ ದಿನ ಬೇಕಾಯ್ತಾ ಇದನ್ನ ಹೇಳ್ಳೋದಕ್ಕೆ?’ ಅಂದುಬಿಟ್ಟೆ ನೀನು. ಆಮೇಲೆ ಮುಂದೇನು ಅಂತ ಕೂಡ ಹೇಳಬೇಕು ತಾನೆ? ಆದರೆ, ಏನೂ ಹೇಳದೆ ನೀನು ಸುಮ್ಮನಾಗಿಬಿಟ್ಟೆ. ನಿನ್ನ ಮಾತಿನ ಅರ್ಥ ಏನಂತ ನನಗೆ ಈಗಲೂ ತಿಳಿಯುತ್ತಿಲ್ಲ.
ನೀನು ಸುಳ್ಳು ಆಶ್ವಾಸನೆ ಕೊಟ್ಟಿಲ್ಲ, ನನ್ನನ್ನು ಹೊಗಳಿ ಅಟ್ಟಕ್ಕೇರಿಸಲಿಲ್ಲ. ಆದರೆ, ಹೇಗೆ ಬದುಕಬೇಕೆಂದು ಕಲಿಸಿದವನು ನೀನೇ. ಅಮ್ಮ ಇಲ್ಲ ಅನ್ನೋ ಕೊರಗನ್ನು ನೀಗಿಸಿ, “ಕೈತುತ್ತು ತಿನ್ನಬೇಕು, ನಿನ್ನ ತೊಡೆ ಮೇಲೆ ಮಲಗಿ ನಿದ್ದೆ ಮಾಡಬೇಕು’ ಅಂತೆಲ್ಲ ಹೇಳಿದಾಗ, “ಅಯ್ಯಯ್ಯೋ, ಇದನ್ನೆಲ್ಲ ಮೊದಲೇ ಹೇಳಬಾರದೇನೇ’ ಅಂದವನು ನೀನು. ನಿನ್ನನ್ನು ಬಿಟ್ಟು ಬದುಕೋಕೆ ಹೇಗೆ ಸಾಧ್ಯ ಹೇಳು?
ನಾನಂದ್ರೆ ನಿನಗೂ ಇಷ್ಟ ತಾನೇ? ಆದರೂ ಯಾಕೆ ಹೇಳದೆ ಸತಾಯಿಸ್ತಾ ಇದ್ದೀಯ? ಹಾಗೊಮ್ಮೆ ಗೆಳೆಯನಾಗಿ, ಹೀಗೊಮ್ಮೆ ಇನಿಯನಾಗಿ ವರ್ತಿಸುವ ನಿನ್ನ ನಡೆಯನ್ನು ಹೇಗೆ ಅರ್ಥೈಸಲಿ? ನಿನ್ನ ಹುಚ್ಚು ಕೋಪ ತುಂಬಾ ಸಲ ನನಗೆ ಬೇಜಾರು ಮಾಡಿದೆ. ಆದ್ರೂ, ನಿನ್ನನ್ನು ಪ್ರತಿದಿನ ಹೊಸದಾಗಿ ಪ್ರೀತಿಸ್ತೀನಿ. ಅದೇ ಕಾರಣಕ್ಕಾಗಿಯೇ ನಿನ್ನನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡಲ್ಲ. ನಂಗೆ ಏನೇ ದುಃಖ, ಅಸಮಾಧಾನ, ನೋವಾದ್ರೂ ಅದನ್ನೆಲ್ಲ ಮರೆಸುವ ಶಕ್ತಿ ನಿನ್ನ ಒಂದು ನೋಟ, ಒಂದು ಕಿರುನಗೆಗಿದೆ. ಹೇಗೆ ಬಿಟ್ಟು ಕೊಡಲಿ ನಾನು ನಿನ್ನನ್ನು?
ನೀನೇನು ಶ್ರೀರಾಮಚಂದ್ರನಲ್ಲ. ಕೃಷ್ಣನಂಥ ನಿನ್ನ ಪಾಲಿಗೆ ನಾನು ರಾಧೆಯೋ ಇಲ್ಲ, ರುಕ್ಮಿಣಿಯೋ ಹೇಳು ಅಂತ ಕೇಳ್ತಾ ಇದ್ದೀನಿ. ಸದ್ಯಕ್ಕೆ, ನಿನಗೆ ನನ್ನ ಪ್ರೀತಿಗಿಂತ ಮೀರಿದ ಜವಾಬ್ದಾರಿಗಳಿವೆ ಅನ್ನೋ ಕಾರಣಕ್ಕೆ ಸುಮ್ನೆ ಬಿಟ್ಟಿದ್ದೀನಿ. ನಾನು ಅರ್ಥ ಮಾಡಿಕೊಂಡ ಹಾಗೆ, ನಿನ್ನ ಜೊತೆ ಇರಬೇಕಂದ್ರೆ ಪುಣ್ಯ ಮಾಡಿರಬೇಕು, ಅದೃಷ್ಟಾನೂ ಜೊತೆಗಿರಬೇಕು. ಅಷ್ಟು ಅದೃಷ್ಟ ನನಗೆ ಇದೆಯಾ, ಇಲ್ವಾ ಅಂತ ಬೇಗ ಉತ್ತರ ಕೊಡ್ತೀಯ ಅಲ್ವೇನೋ?..
* ಜಿ.ಕೆ. ನೆಟ್ಪಾರ್ಕ್ ಗೋವಿಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.